ಒಂದ್ವೇಳೆ ಮಂಡ್ಯದಿಂದ ಅಭಿಷೇಕ್ ಚುನಾವಣಾ ಕಣಕ್ಕೆ ಇಳಿದರೆ, ನಿಖಿಲ್ ಪ್ರಚಾರ ಯಾರ ಪರ.?
ಇನ್ನೂ ಮೂರ್ನಾಲ್ಕು ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಯಾರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡಿದರೆ ಗೆಲುವು ಖಚಿತ ಎಂಬುದರ ಬಗ್ಗೆ ರಾಜಕೀಯ ಪಕ್ಷಗಳು ಸ್ಟ್ರಾಟೆಜಿ ಪ್ಲಾನ್ ಮಾಡುವಲ್ಲಿ ತೊಡಗಿದೆ. ಈ ಮಧ್ಯೆ ಸದ್ಯ ಎಲ್ಲರ ಗಮನ ಸೆಳೆಯುತ್ತಿರುವುದು ಮಂಡ್ಯ ಲೋಕಸಭಾ ಕ್ಷೇತ್ರ.
ಮಂಡ್ಯ ಲೋಕಸಭೆ ಕ್ಷೇತ್ರದಿಂದ ಜೆ.ಡಿ.ಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರ್ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಇನ್ನೂ ಅಂಬರೀಶ್ ಪುತ್ರ ಅಭಿಷೇಕ್ ಗೆ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರಂತೆ.
ಅಂದ್ಹಾಗೆ, ನಿಖಿಲ್ ಕುಮಾರ್ ಮತ್ತು ಅಭಿಷೇಕ್ ಕ್ಲೋಸ್ ಫ್ರೆಂಡ್ಸ್. ಸ್ನೇಹಿತರಾಗಿರುವ ಇವರಿಬ್ಬರು ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರಾ.? ಒಂದ್ವೇಳೆ ಮಂಡ್ಯದಿಂದ ಅಭಿಷೇಕ್ ಕಣಕ್ಕೆ ಇಳಿದರೆ, ನಿಖಿಲ್ ಕುಮಾರ್ ಏನು ಮಾಡ್ತಾರೆ.? ಈ ಪ್ರಶ್ನೆಗಳಿಗೆ 'ಯುವರಾಜ' ನಿಖಿಲ್ ಉತ್ತರ ಕೊಟ್ಟಿದ್ದಾರೆ. ಮುಂದೆ ಓದಿರಿ...

ಪಕ್ಷಕ್ಕೆ ನಿಖಿಲ್ ನಿಷ್ಟ.!
''ಒಂದು ವೇಳೆ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಅಂಬರೀಶ್ ಪುತ್ರ ಅಭಿಷೇಕ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದರೆ, ನಾನು ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತೇನೆ'' ಎಂದು ನಿಖಿಲ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.

ಚುನಾವಣೆಯಲ್ಲಿ ಕಣಕ್ಕೆ ಇಳಿಯುತ್ತಾರಾ ನಿಖಿಲ್.?
''ಚುನಾವಣೆಯಲ್ಲಿ ನಿಲ್ಲುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪಕ್ಷದ ಮುಖಂಡರು ಮತ್ತು ಹಿರಿಯರು ಯಾವ ನಿರ್ಧಾರ ತೆಗೆದುಕೊಳ್ತಾರೋ, ಅದಕ್ಕೆ ನಾನು ಬದ್ಧ'' ಎಂದಿದ್ದಾರೆ ನಿಖಿಲ್ ಕುಮಾರ್.

ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ
ಹಾಸನ ಲೋಕಸಭೆ ಕ್ಷೇತ್ರದಿಂದ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಇನ್ನೂ ಮಂಡ್ಯದಿಂದ ನಿಖಿಲ್ ಕುಮಾರ್ ಕಣಕ್ಕೆ ಇಳಿಯುವುದಕ್ಕೆ ಎಚ್.ಡಿ.ದೇವೇಗೌಡ ಗ್ರೀನ್ ಸಿಗ್ನಲ್ ಕೊಡ್ತಾರಾ, ನೋಡಬೇಕು.

ಸೀತಾರಾಮ ಕಲ್ಯಾಣ ರಿಲೀಸ್
ನಾಳೆ (ಜನವರಿ 25) ರಾಜ್ಯಾದ್ಯಂತ ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಅಭಿನಯದ 'ಸೀತಾರಾಮ ಕಲ್ಯಾಣ' ಬಿಡುಗಡೆ ಆಗಲಿದೆ. ಇದು ನಿಖಿಲ್ ಅಭಿನಯದಲ್ಲಿ ಬಿಡುಗಡೆ ಆಗುತ್ತಿರುವ ಎರಡನೇ ಚಿತ್ರ. ಎ.ಹರ್ಷ ನಿರ್ದೇಶನದ 'ಸೀತಾರಾಮ ಕಲ್ಯಾಣ' ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಾ, ನೋಡೋಣ.


Click it and Unblock the Notifications











