ಪುನೀತ್-ಯೋಗೇಶ್ ಚಿತ್ರ 'ಯಾರೇ ಕೂಗಾಡಲಿ' ಶುರು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಲೂಸ್ ಮಾದ ಯೋಗೇಶ್ ಸಂಗಮದ 'ಯಾರೇ ಕೂಗಾಡಲಿ' ಚಿತ್ರ ನಿನ್ನೆ (13 ಜೂನ್ 2012) ಮುಹೂರ್ತ ಆಚರಿಸಿಕೊಂಡಿದೆ. ಈ ಮೊದಲು ಪುನೀತ್ ಹಾಗೂ ಯೋಗೇಶ್ ಜೋಡಿಯ 'ಹುಡುಗರು' ಚಿತ್ರ ಸೂಪರ್ ಹಿಟ್ ದಾಖಲಿಸಿತ್ತು. ಅದರಲ್ಲಿ ಶ್ರೀನಗರ ಕಿಟ್ಟಿ ಕೂಡ ಪುನೀತ್ ಗೆ ಜೊತೆಯಾಗಿದ್ದರು.
ತಮಿಳಿನ ನಾಡೋಡಿಗಳ್ ಚಿತ್ರವನ್ನು ಕನ್ನಡದಲ್ಲಿ 'ಹುಡುಗರು' ಎಂಬ ಹೆಸರಿನಿಂದ ಮಾಡಿದ್ದ ವಜ್ರೇಶ್ವರಿ ಸಂಸ್ಥೆ, ಇದೀಗ ತಮಿಳಿನ 'ಪೊರಾಲಿ' ಚಿತ್ರವನ್ನು 'ಯಾರೇ ಕೂಗಾಡಲಿ' ಎಂಬ ಹೆಸರಿಟ್ಟು ಕನ್ನಡಕ್ಕೆ ತರಲಿದೆ. ಹುಡುಗರು ಹಿಟ್ ಆದ ಹಿನ್ನೆಲೆಯಲ್ಲಿ ಹಾಗೂ ಅದರ ಯಶಸ್ಸಿನಲ್ಲಿ ಯೋಗೇಶ್ ಪಾಲು ಬಹಳಷ್ಟು ಇದ್ದುದರಿಂದ ಈ ಚಿತ್ರದಲ್ಲೂ ಯೋಗೇಶ್ ಇದ್ದಾರೆ.
ಮೂಲ ಚಿತ್ರದಲ್ಲಿ ತಮಿಳು ನಟ ಶಶಿಕುಮಾರ್ ನಿರ್ವಹಿಸಿದ್ದ ಪಾತ್ರವನ್ನು ಇಲ್ಲಿ ಪುನೀತ್ ಹಾಗೂ ಅಲ್ಲರಿ ನರೇಶ್ ಪಾತ್ರವನ್ನು ಯೋಗೇಶ್ ಮಾಡಲಿದ್ದಾರೆ. ಮೂಲ ಚಿತ್ರವನ್ನು ನಿರ್ದೇಶಿಸಿದ್ದ 'ಸಮುದ್ರಕನಿ' ಕನ್ನಡದ 'ಯಾರೇ ಕೂಗಾಡಲಿ' ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇಲ್ಲಿಯ ನೆಟಿವಿಟಿಗೆ ಕೆಲವೊಂದು ಬದಲಾವಣೆ ಆಗಲಿದೆ.
ಮುಹೂರ್ತಕ್ಕೆ ಬಂದು ಕ್ಲಾಪ್ ಮಾಡಿದ್ದು ಕ್ರೇಜಿಸ್ಟಾರ್ ರವಿಚಂದ್ರನ್. ರಾಜ್ ಕುಟುಂಬ, ಯೋಗೇಶ್ ಹಾಗೂ ಕೆಲವೇ ಆಪ್ತರ ಸಮ್ಮುಖದಲ್ಲಿ ಮುಹೂರ್ತ ನೆರವೇರಿದೆ. ಈ ತಿಂಗಳು 25 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ. ಸದ್ಯದಲ್ಲೇ ನಾಯಕಿ ಹಾಗೂ ಉಳಿದ ತಾರಾಬಳಗದ ಆಯ್ಕೆ ನಡೆಯಲಿದೆ ಎಂದು ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ.
ಇದೀಗ ಕರ್ನಾಟಕ ರಾಜ್ಯದಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಪುನೀತ್ ಅಭಿನಯದ 'ಅಣ್ಣಾಬಾಂಡ್' ಚಿತ್ರ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದರೂ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಸಾಕಷ್ಟು ಲಾಭ ತಂದುಕೊಟ್ಟಿದೆ. ಮುಂದಿನ ಚಿತ್ರವಾಗಿ ಯಾರೇ ಕೂಗಾಡಲಿ ಪ್ರಾರಂಭವಾಗಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











