ತಮಿಳು ನಿರ್ದೇಶಕನಿಗೆ ಕನ್ನಡ ಪಾಠ ಕಲಿಸಿದ ಪುನೀತ್
ಬಾಕ್ಸಾಫೀಸ್ ಕಿಂಗ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ 'ಯಾರೇ ಕೂಗಾಡಲಿ' ಚಿತ್ರದ ಎರಡನೇ ಹಂತದ ಚಿತ್ರೀಕರಣ ಆಗಸ್ಟ್ 21ರಿಂದ ಆರಂಭವಾಗುತ್ತಿದೆ. ತಮಿಳು ಚಿತ್ರ 'ಪೊರಾಲಿ' ರೀಮೇಕ್ ಆಗಿರುವ ಈ ಚಿತ್ರವನ್ನು ಮೂಲ ಚಿತ್ರದ ನಿರ್ದೇಶಕ ಸಮುತ್ತಿರಕನಿ ಕನ್ನಡದಲ್ಲೂ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ.
ಒಟ್ಟು 45 ದಿನಗಳ ಸತತ ಚಿತ್ರೀಕರಣದಲ್ಲಿ ಪಾಲ್ಗೊಂಡ ಅವರಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆಯಂತೆ. ಹಾಗೆಯೇ ಅಲ್ಪಸ್ವಲ್ಪ ಕನ್ನಡವನ್ನೂ ಕಲಿತಿದ್ದೇನೆ ಎನ್ನುತ್ತಾರೆ ಅವರು. ಚಿತ್ರದಲ್ಲಿರುವ ಬಹುತೇಕ ತಂತ್ರಜ್ಞರು, ಕಲಾವಿದರು ಕನ್ನಡದವರೇ ಆಗಿರುವ ಕಾರಣ ತಾವು ಕನ್ನಡ ಕಲಿಯಲು ಸುಲಭಸಾಧ್ಯವಾಯಿತು ಎನ್ನುತ್ತಾರೆ ಸಮುತ್ತಿರಕನಿ.
ಇತ್ತ ಕನ್ನಡ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾ ಅತ್ತ ತಮಿಳು ತೆಲುಗಿನ ದ್ವಿಭಾಷಾ ಚಿತ್ರವೊಂದರಲ್ಲೂ ಸಮುತ್ತಿರಕನಿ ಬಿಜಿಯಾಗಿದ್ದಾರೆ. ಪುನೀತ್ ಜೊತೆ ಯೋಗೇಶ್, ಭಾವನಾ ಹಾಗೂ ಸಿಂಧು ಲೋಕನಾಥ್ ಮುಖ್ಯಪಾತ್ರದಲ್ಲಿರುವ ಚಿತ್ರ ಇದಾಗಿದೆ.
ರಾಕೇಶ್ ಅಡಿಗ ಅವರು ಚಿತ್ರದಲ್ಲಿ ಖಳನಟನ ಪಾತ್ರವನ್ನು ಪೋಷಿಸುತ್ತಿದ್ದಾರೆ. ಪುನೀತ್ ಸೇರಿದಂತೆ ಎಲ್ಲರೊಂದಿಗೂ ಕನ್ನಡಲ್ಲೇ ಮಾತನಾಡಲು ಪ್ರಯತ್ನಿಸುತ್ತಿದ್ದೇನೆ. ಈಗೀಗ ಭಾಷೆ ಹಿಡಿತಕ್ಕೆ ಸಿಗುತ್ತಿದೆಯಂತೆ. "ನನಗೆ ಸ್ವಲ್ಪ ಸ್ವಲ್ಪ ಕನ್ನಡ ಗೊತ್ತು" ಎನ್ನುವಷ್ಟರ ಮಟ್ಟಿಗೆ ಅವರ ಭಾಷೆ ಸುಧಾರಿಸಿದೆ.
'ಅಣ್ಣಾಬಾಂಡ್' ನಂತರ ಪುನೀತ್ ನಟಿಸುತ್ತಿರುವ 'ಯಾರೇ ಕೂಗಾಡಲಿ' ಚಿತ್ರದ ಸ್ಯಾಟಲೈಟ್ ಹಕ್ಕುಗಳು ಭರ್ಜರಿ ಬೆಲೆಗೆ ಮಾರಟವಾಗಿವೆ. ಪುನೀತ್ ಹಾಗೂ ಲೂಸ್ ಮಾದ ಯೋಗೇಶ್ ನಟನೆಯ ಯಾರೇ ಕೂಗಾಡಲಿ ಚಿತ್ರದ ಪ್ರಸಾರದ ಹಕ್ಕನ್ನು ರು. 4.5 ಕೋಟಿಗೆ ಖಾಸಗಿ ಚಾನೆಲ್ಲೊಂದು ಖರೀದಿಸಿ ಗೊತ್ತೇ ಇದೆ.
ಪೂರ್ಣಿಮಾ ಎಂಟರ್ಪ್ರೈಸಸ್ ಲಾಂಛನದಡಿಯಲ್ಲಿ ಡಾ.ರಾಜ್ಕುಮಾರ್ ಅರ್ಪಿಸಿ ಪಾರ್ವತಮ್ಮ ರಾಜ್ಕುಮಾರ್ ನಿರ್ಮಿಸುತ್ತಿರುವ ಅದ್ದೂರಿ ಚಿತ್ರ ಯಾರೇ ಕೂಗಾಡಲಿ. ಚಿತ್ರಕ್ಕೆ ಗುರುಪ್ರಸಾದ್ ಸಂಭಾಷಣೆ, ಹರಿಕೃಷ್ಣ ಸಂಗೀತ, ಸುಕುಮಾರ್ (ತಮಿಳು ಮೈನಾ ಖ್ಯಾತಿ) ಛಾಯಾಗ್ರಹಣ, ಜಾಕ್ಸನ್ (ಫರುತ್ತಿ ವೀರನ್ ಖ್ಯಾತಿ) ಕಲೆ, ದೀಪು.ಎಸ್. ಕುಮಾರ್ ಸಂಕಲನ, ರವಿವರ್ಮ ಸಾಹಸ, ರುದ್ರೇಶ್ ಎಂ.ಗೌಡ ನಿರ್ದೇಶನ ಸಹಕಾರ, ಚೆನ್ನ ನಿರ್ಮಾಣ ಮೇಲ್ವಿಚಾರಣೆ, ಮಲ್ಲಿಕಾರ್ಜುನ್ ನಿರ್ಮಾಣ-ನಿರ್ವಹಣೆ ಇದೆ. (ಏಜೆನ್ಸೀಸ್)


Click it and Unblock the Notifications











