ಮೈಸೂರಿನಲ್ಲಿ ಯಶ್ ಹವಾ! ಭಾರತದ ರಾಕಿಂಗ್ ಸ್ಟಾರ್ ಎಂದ ಸಿಎಂ ಬೊಮ್ಮಾಯಿ
ಮೈಸೂರು ನಗರದ ಮಹಾರಾಜ ಕಾಲೇಜಿನ ಮೈದಾನದಲ್ಲಿ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಯುವಜನ ಮಹೋತ್ಸವದಲ್ಲಿ ರಾಕಿಂಗ್ ಸ್ಟಾರ್ ಯಶ್ ಎಲ್ಲರ ಆಕರ್ಷಣೆ ಕೇಂದ್ರಬಿಂದುವಾಗಿದ್ದರು.
ನಟ ಯಶ್ ವೇದಿಕೆ ಏರುತ್ತಿದ್ದಂತೆ ವಿದ್ಯಾರ್ಥಿ ಸಮೂಹ ಶಿಳ್ಳೆ, ಚಪ್ಪಾಳೆ ತಟ್ಟಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಯಾರೇ ಅತಿಥಿ ಭಾಷಣಕ್ಕೆ ನಿಂತರೂ ರಾಕಿ-ರಾಕಿ ಎಂಬ ಘೋಷಣೆ ಕೂಗುತ್ತಿದ್ದರು. ವಿದ್ಯಾರ್ಥಿಗಳ ಉತ್ಸಾಹದಿಂದ ಪ್ರೇರೇಪಿತರಾದ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ತಮ್ಮ ಭಾಷಣದ ಮೇಲೆ ಯಶ್ ಅವರನ್ನು ಹೊಗಳಿದರು.
ಯಶ್ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಮಾತ್ರವಲ್ಲ. ಅವರು ಯುವಕರ ಐಕಾನ್. ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗ ಅವರ ಕಡೆ ತಿರುಗಿ ನೋಡಿದೆ. ಅವರು ಭಾರತದ ರಾಕಿಂಗ್ ಸ್ಟಾರ್ ಕೆಜಿಎಫ್ 1, ಕೆಜಿಎಫ್ 2 ಚಿತ್ರಗಳ ಯಶಸ್ಸಿನ ಮೂಲಕ ಇಡೀ ದೇಶಕ್ಕೆ ಅವರು ರಾಕಿಂಗ್ ಸ್ಟಾರ್ ಆಗಿದ್ದಾರೆ. ಕನ್ನಡ, ಕನ್ನಡತನವನ್ನು ಇಡೀ ದೇಶದಾದ್ಯಂತ ಯಶ್ ಪಸರಿಸಿದ್ದಾರೆ. ಅವರಂತೆ ನೀವು ಆಗಬೇಕು. ಆತ್ಮವಿಶ್ವಾಸ ಇದ್ದರೆ ಯಾರು ಏನು ಬೇಕಾದರೂ ಆಗಬಹುದು ಎಂದರು.

ಮೈಸೂರಿನೊಂದಿಗಿನ ನಂಟಿನ ಬಗ್ಗೆ ಯಶ್ ಮಾತು
ನಂತರ ಮಾತನಾಡಿದ ಯಶ್, ''ಮೈಸೂರು ನಮ್ಮೂರು. ಇಲ್ಲಿನ ಪಡುವಾರಹಳ್ಳಿ, ಕಾಳಿದಾಸ ರಸ್ತೆ ಹಾಗೂ ಗಂಗೋತ್ರಿಯಲ್ಲಿ ಓಡಾಡಿದ್ದೇನೆ. ನಮ್ಮೂರಿನಲ್ಲಿ ದೇಶದ ಹೆಮ್ಮೆಯ ಧ್ವಜ ಹಿಡಿಯುವ ಕಾರ್ಯಕ್ರಮ ಆಯೋಜಿಸಿರುವುದರಿಂದ ಬಹಳ ಹೆಮ್ಮೆಯಿಂದ ಬಂದಿದ್ದೇನೆ. ವಿದ್ಯಾರ್ಥಿ ದಿಸೆಯಲ್ಲಿ ನಾನು ತಂದೆ ತಾಯಿ ಖುಷಿಯಾಗುವಂತೆ ಇರಲಿಲ್ಲ. ಒಂದು ಸಣ್ಣ ಬದಲಾವಣೆ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ.
ನಾನೇನು ಹೆಚ್ಚು ಬದಲಾಗಿಲ್ಲ. ಮೊದಲು ಹೇಗಿದ್ದೆನೋ ಈಗಲೂ ಅದೇ ರೀತಿ ಇದ್ದೇನೆ ಎಂದರು.

ಸಲಹೆ ನೀಡಿದ ಯಶ್
''ನಾವೀಗ ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸದುಪಯೋಗ ಮಾಡಿಕೊಳ್ಳಬೇಕು. ಎಲ್ಲವನ್ನು ಜನರ ಮನೆ ಮುಂದೆ ತರಲು ಸರಕಾರಕ್ಕೂ ಕಷ್ಟಸಾಧ್ಯ. ಪ್ರತಿಯೊಬ್ಬರೂ ಜೀವನದಲ್ಲಿ ತಮಾಷೆ ಮಾಡ್ತಾ ಇರಿ, ಮಜಾ ಮಾಡ್ಕೊಂಡಿರಿ, ನಗು ನಗುತ್ತಾ ಇರಿ. ಸಂತಸದ ಯಾವುದೇ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು ಯಶ್.

ಸಿಎಂ ಜೊತೆ ಮೈಸೂರಿಗೆ ಬಂದ ಯಶ್
ಇದಕ್ಕೂ ಮುನ್ನ ಯಶ್ ಬೆಂಗಳೂರಿನಿಂದ ಸಿಎಂ ಜೊತೆ ಒಟ್ಟಿಗೆ ಹೆಲಿಕ್ಟಾರ್ನಲ್ಲಿ ಒಟ್ಟಿಗೆ ಮೈಸೂರಿಗೆ ಬಂದರು. ವಿಮಾನ ನಿಲ್ದಾಣದಲ್ಲೂ ಸಿಎಂ ಜೊತೆಗೆ ಮಹಾರಾಜ ಮೈದಾನಕ್ಕೆ ಆಗಮಿಸಿದರು. ಅವರೊಟ್ಟಿಗೆ ಸಚಿವ ಅಶ್ವತ್ಥ್ ನಾರಾಯಣ್ ಸಹ ಇದ್ದರು. ಕಾರ್ಯಕ್ರಮದ ಆರಂಭದಿಂದಲೂ ಯಶ್ ಕೇಂದ್ರಬಿಂದುವಾಗಿದ್ದರು. ಯಶ್ ವೇದಿಕೆಗೆ ಆಗಮಿಸಿದಾಗಿನಿಂದಲೂ 'ರಾಕಿ-ರಾಕಿ' ಎಂದು ಪ್ರೇಕ್ಷಕರು ಕಿರುಚುತ್ತಿದ್ದರು. ಯಶ್ ಸುಮ್ಮನಿರಿ ಎಂದು ಸನ್ನೆ ಮಾಡಿ ಮನವಿ ಮಾಡಿದರೂ ಕಿರುಚಾಟ ಇನ್ನೂ ಜೋರಾಯಿತು.

ಟ್ವೀಟ್ ಮಾಡಿದ್ದ ಯಶ್
75ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ 'ಹರ್ ಘರ್ ಮೆ ತಿರಂಗ' ಎನ್ನುವ ಅಭಿಮಾನಿಯನ್ನು ಹಮ್ಮಿಕೊಂಡಿದೆ. ಈ ಅಭಿಮಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಕೂಡ ಸಾಥ್ ನೀಡಿದ್ದು, ತಮ್ಮ ಅಭಿಮಾನಿಗಳಿಗೆ ಹಾಗೂ ಜನರಿಗೆ ರಾಷ್ಟ್ರ ಧ್ವಜವನ್ನು ಹಾರಿಸುವಂತೆ ಮನವಿ ಮಾಡಿ ಟ್ವೀಟ್ ಮಾಡಿದ್ದಾರೆ. "ವೈವಿಧ್ಯತೆಯಲ್ಲೂ ಭರವಸೆಯ, ಆಕಾಂಕ್ಷೆ ಮತ್ತು ಏಕತೆಯ ಸಂಕೇತ. ಇದುವೇ ನಮ್ಮ ತಿರಂಗ. ಭಾರತೀಯರ ಹೆಮ್ಮೆ. ಸ್ವಾತಂತ್ರ್ಯದ 75 ವರ್ಷಗಳ ಈ ಸಂದರ್ಭದಲ್ಲಿ, ನಮ್ಮ ರಾಷ್ಟ್ರದ ಗುರುತನ್ನು, ಭಾರತೀಯ ರಾಷ್ಟ್ರಧ್ವಜವನ್ನು ನಮ್ಮ ಮನೆಯ ಮೇಲೆ 13 ರಿಂದ 15 ಆಗಸ್ಟ್ 2022 ರವರೆಗೆ ಹಾರಿಸೋಣ" ಎಂದು ಯಶ್ ಟ್ವೀಟ್ ಮಾಡಿದ್ದರು.


Click it and Unblock the Notifications











