ಗೋವಿಂದಾಯ ನಮಃ ಪವನ್ 'ಗೂಗ್ಲಿ'ಗೆ ಯಶ್ ಜೊತೆ ಕೃತಿ
ಗೋವಿಂದಾಯ ನಮಃ ಖ್ಯಾತಿಯ ಪವನ್ ಒಡೆಯರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸಂಗಮದ ಹೊಸ ಚಿತ್ರಕ್ಕೆ ಹೆಸರು ಪಕ್ಕಾ ಆಗಿದೆ. ಈ ಮೊದಲು ಚಿತ್ರದ ಹೆಸರು 'ನಟರಾಜ್ ಸರ್ವೀಸ್' ಎಂದು ಸುದ್ದಿಯಾಗಿತ್ತು. ಆದರೆ ಆ ಹೆಸರನ್ನು ಚಿತ್ರತಂಡ ಅಲ್ಲಗಳೆದಿತ್ತು. ಈಗ ಚಿತ್ರದ ಹೆಸರು ಪಕ್ಕಾ ಆಗಿದ್ದು ಅದು 'ಗೂಗ್ಲಿ- ದ ಲವ್ ಸ್ಪಿನ್'. ಜೊತೆಗೆ ನಾಯಕಿ ಆಯ್ಕೆ ಕೂಡ ಮುಗಿದಿದೆ.
ಈ ವರ್ಷ ಇಲ್ಲಿಯವರೆಗೆ ಬಿಡುಗಡೆಯಾಗಿರುವ ಚಿತ್ರಗಳಲ್ಲಿ ಗೋವಿಂದಾಯ ನಮಃ 'ಸೂಪರ್ ಹಿಟ್' ಚಿತ್ರದ ಸಾಲಿಗೆ ಸೇರಿದೆ. ಯೋಗರಾಜ್ ಭಟ್ ಶಿಷ್ಯರಾಗಿರುವ ಪವನ್ ಒಡೆಯರ್, ತಮ್ಮ ಮೊಟ್ಟಮೊದಲ ಚಿತ್ರದಲ್ಲೇ ಸ್ಯಾಂಡಲ್ ವುಡ್ ಪ್ರೇಕ್ಷಕರ ಪ್ರೀತಿ ಗಳಿಸಿದ್ದಾರೆ. 'ಗೋವಿಂದಾಯ ನಮಃ' ಚಿತ್ರ 100 ದಿನಗಳ ಯಶಸ್ವಿ ಪ್ರದರ್ಶನ ದಾಖಲಿಸಿದ ಚಿತ್ರವಾಗಿ ಹೊರಹೊಮ್ಮಿದೆ.
ಯಶಸ್ವಿ ನಿರ್ದೇಶಕ ಎಂಬ ಹಣೆಪಟ್ಟಿಯೊಂದಿಗೆ ಪವನ್ ಒಡೆಯರ್ ಹೊಸ 'ಗೂಗ್ಲಿ' ಚಿತ್ರವನ್ನು ಪ್ರಾರಂಭಿಸಿದ್ದಾರೆ. ಈ ಚಿತ್ರಕ್ಕೆ ನಾಯಕರಾಗಿ ಯಶ್ ಆಯ್ಕೆಯಾಗಿದ್ದು ಎಲ್ಲರಿಗೂ ಗೊತ್ತಿರುವ ಸಮಾಚಾರ. ಯಶ್ ಜೋಡಿಯಾಗಿ 'ಕೃತಿ ಖರಬಂಧ' ಆಯ್ಕೆಯಾಗಿದ್ದು ಲೇಟೆಸ್ಟ್ ನ್ಯೂಸ್. ಈಗಾಗಲೇ ಕನ್ನಡದ 'ಚಿರು' ಚಿತ್ರದಲ್ಲಿ ಕೃತಿ ಖರಬಂಧ ನಾಯಕಿಯಾಗಿ ನಟಿಸಿದ್ದಾರೆ. ಅವರು ಹೆಚ್ಚು ಕಾಣಿಸಿಕೊಂಡಿದ್ದು ತೆಲುಗು ಚಿತ್ರಗಳಲ್ಲಿ.
ಯಶ್ ನಾಯಕತ್ವದಲ್ಲಿ ಜಯಣ್ಣ ನಿರ್ಮಾಣದ ಜಾನೂ ಹಾಗೂ ಡ್ರಾಮಾ ಚಿತ್ರಗಳ ಪೈಕಿ, ಜಾನೂ ಬಿಡುಗಡೆಯಾಗಿ 50 ದಿನ ಪೂರೈಸಿದೆ. ಆದರೆ ಡ್ರಾಮಾ ಇನ್ನಷ್ಟೇ ಬಿಡುಗಡೆ ಕಾಣಬೇಕಿದೆ. ಡ್ರಾಮಾ ಚಿತ್ರದಲ್ಲಿ ಯಶ್ ಜೋಡಿಯಾಗಿ ರಾಧಿಕಾ ಪಂಡಿತ್ ನಟಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಅದಾಗಲೇ ಜಯಣ್ಣ ಬ್ಯಾನರ್ ನಲ್ಲಿ ಯಶ್ ನಟನೆಯ ಮತ್ತೊಂದು ಚಿತ್ರ 'ಗೂಗ್ಲಿ' ಪ್ರಾರಂಭವಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











