ಡಿಸೆಂಬರ್ 31ರ ಉದ್ದೇಶಿತ ಚಿತ್ರರಂಗ ಬಂದ್ ಬಗ್ಗೆ ಯಶ್ ಹೇಳಿದ್ದು ಹೀಗೆ
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಹಾಗೂ ಕೊಲ್ಹಾಪುರದಲ್ಲಿ ಕರ್ನಾಟಕ ಧ್ವಜ ಸುಟ್ಟ ಘಟನೆ ಖಂಡಿಸಿ ಡಿಸೆಂಬರ್ 31ಕ್ಕೆ ಕರ್ನಾಟಕದ ಬಂದ್ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದು, ಚಿತ್ರರಂಗ ಸಹ ಅಂದು ಬಂದ್ ಆಚರಿಸುತ್ತದೆ ಎನ್ನಲಾಗಿತ್ತು. ಆದರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ನಟ ಯಶ್ ಅವರು ಇದೇ ವಿಷಯವಾಗಿ ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ.
ನಟ ಯಶ್ ಇಂದು ತಮ್ಮ ಗೆಳೆಯ ಬಾಡಿಬಿಲ್ಡರ್ ಕಿಟ್ಟಿಯವರ ರೆಸ್ಟೊರೆಂಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಕರ್ನಾಟಕ ಬಂದ್, ಚಿತ್ರರಂಗ ಬಂದ್ ವಿಷಯವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ತಮ್ಮ ಅಭಿಪ್ರಾಯ ತಿಳಿಸಿದರು.
''ಕರ್ನಾಟಕ ಬಂದ್ ಅಥವಾ ಚಿತ್ರರಂಗ ಬಂದ್ ಯಾವುದೇ ಆಗಲಿ ಸಾರ್ವಜನಿಕರಿಗೆ ತೊಂದರೆ ಆಗಬಾರದು ಅಥವಾ ನಮಗೆ ತೊಂದರೆ ಮಾಡಿಕೊಂಡು ಬಂದ್ ಮಾಡುವುದು ಸರಿಯಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ'' ಎಂದರು ಯಶ್.

''ಇದು ಸೂಕ್ಷ್ಮ ವಿಷಯ ನಾನು ಈಗ ಏನೇ ಹೇಳಿದರು ಯಶ್ ಹೀಗೆ ಹೇಳಿದ, ಹಾಗೆ ಹೇಳಿದ ಎಂದು ಅದು ಬದಲಾಗಿ ತಪ್ಪು ಸಂದೇಶ ಹೋಗುವ ಸಾಧ್ಯತೆ ಇದೆ. ಹಾಗಾಗಿ ದೊಡ್ಡವರು ಏನು ತೀರ್ಮಾನ ಮಾಡುತ್ತಾರೊ ಮಾಡಲಿ. ಆದರೆ ಕನ್ನಡದ ವಿಷಯಕ್ಕೆ ಬಂದಾಗ ನಮ್ಮೆಲ್ಲರ (ಚಿತ್ರರಂಗ) ಹಾಗೂ ಇಡೀಯ ಕನ್ನಡಿಗರ ಭಾವನೆ ಒಂದೇ ಆಗಿರುತ್ತದೆ'' ಎಂದು ಸ್ಪಷ್ಟಪಡಿಸಿದರು.
ಧ್ವಜ ಸುಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಯಶ್, ''ಈ ರೀತಿಯ ಘಟನೆಗಳು ನಡೆಯಬಾರದು. ಇಂಥಹಾ ಘಟನೆಗಳು ನಡೆದಾಗ ಕೋಪ ಬರುತ್ತದೆ, ನೋವಾಗುತ್ತದೆ. ಯಾವಾಗ ಇನ್ನೊಂದು ಭಾಷೆ, ಸಂಸ್ಕೃತಿ, ಇನ್ನೊಬ್ಬರ ಭಾವನೆಗಳಿಗೆ ಅಪಮಾನ ಮಾಡುತ್ತಾರೊ ಅವರು ತಮ್ಮ ಭಾಷೆಗೂ ಅಪಮಾನ ಮಾಡಿಕೊಳ್ಳುತ್ತಾರೆ. ನೀವು ಒಬ್ಬರ ಭಾಷೆಗೆ, ಸಂಸ್ಕೃತಿಗೆ ಸಮಸ್ಯೆ ಮಾಡಿದರೆ ಇನ್ನೊಬ್ಬರು ಸುಮ್ಮನೆ ಇರಲಾರರು ಅವರೂ ಸಮಸ್ಯೆ ಮಾಡುತ್ತಾರೆ'' ಎಂದರು ಯಶ್.
''ನಾನು ಕೆರೆ ವಿಷಯವಾಗಿ ಕೆಲಸ ಮಾಡಿದಾಗಲೂ ಹೇಳಿದ್ದೆ. ಕನ್ನಡವನ್ನು, ಕರ್ನಾಟಕವನ್ನು ಕಟ್ಟಲು ಹಲವು ದಾರಿಗಳಿವೆ. ಒಬ್ಬೊಬ್ಬರಿಗೆ ಒಂದೊಂದು ದಾರಿ ಇಷ್ಟವಾಗುತ್ತದೆ. ನಾನು ಮಾಡುವ ಕೆಲಸದಲ್ಲಿ ನನ್ನ ನಾಡು-ನುಡಿಗೆ ಗೌರವ ತರುವ ಕೆಲಸ ಮಾಡಬೇಕು, ನನ್ನ ಭಾಷೆಯನ್ನು ಕಾಯುವ ಕೆಲಸ ಮಾಡಬೇಕು. ಅದನ್ನೇ ನಾವು ಮಾಡುತ್ತಿದ್ದೀವಿ. ಮಹಾರಾಷ್ಟ್ರದ ಘಟನೆ ಬಗ್ಗೆ ಅಭಿಪ್ರಾಯ ಕೇಳಿದರೆ ಅದು ಖಂಡಿತ ತಪ್ಪು ಖಂಡನೀಯ'' ಎಂದರು ಯಶ್.
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಎಂಇಎಸ್ನ ಪುಂಡರು ಕರ್ನಾಟಕ ಧ್ವಜವನ್ನು ಸುಟ್ಟ ವಿಚಾರದಲ್ಲಿ ರಾಜ್ಯದೆಲ್ಲೆಡೆ ಆಕ್ರೋಶ ಹುಟ್ಟುಹಾಕಿದೆ. ಶಿವರಾಜ್ ಕುಮಾರ್ ಆದಿಯಾಗಿ ಚಿತ್ರರಂಗದ ಹಲವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಟ ಯಶ್ ಈ ಬಗ್ಗೆ ಈವರೆಗೆ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ. ಈ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಎತ್ತಿದ್ದರು. ಇದೀಗ ಯಶ್ ಅವರು ಘಟನೆಯನ್ನು ಖಂಡಿಸಿ ತಮ್ಮ ಆಕ್ರೋಶ ದಾಖಲಿಸಿದ್ದಾರೆ.


Click it and Unblock the Notifications











