ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದ ಕನ್ನಡ ನಟರ ಹೆಸರು ಹೇಳಿದ ಸಂಜನಾ
ಚಂದನವನದ ಕೆಲವರಿಗೆ ಮಾದಕ ವಸ್ತು ನಂಟಿಕೆ ಎಂಬ ಆರೋಪದ ಮೇಲೆ ತನಿಖೆ ಸಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನಟಿ ರಾಗಿಣಿ ಸೇರಿದಂತೆ ಇನ್ನೂ ಕೆಲವರನ್ನು ಬಂಧಿಸಿದೆ.
Recommended Video
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ಅನ್ನು ಸಹ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದು, ಸಂಜನಾ ಹೆಸರು ಪರೋಕ್ಷವಾಗಿ ಥಳುಕು ಹಾಕಿಕೊಂಡಿದೆ. ಆದರೆ ಸಂಜನಾ ಗೆ ಸಿಸಿಬಿ ಯಿಂದ ಯಾವುದೇ ಸಮನ್ಸ್ ಅಥವಾ ನೋಟೀಸ್ ಈ ವರೆಗೆ ಹೋಗಿಲ್ಲ.
ಆದರೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ, ನಟಿ ಸಂಜನಾ ಮೇಲೆ ಪುಂಖಾನುಪುಂಖವಾಗಿ ಆರೋಪಗಳನ್ನು ಮಾಡುತ್ತಿದ್ದು, ಶ್ರೀಲಂಕಾದ ಕ್ಯಾಸಿನೋ ಒಂದಕ್ಕೆ ಸಂಜನಾ ಹೋಗಿದ್ದರು, ಅಲ್ಲಿ ಪಾರ್ಟಿಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಶಾಂತ್ ಸಂಬರ್ಗಿ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಂಜನಾ, ನಾನು ಮಾತ್ರ ಅಲ್ಲ ಕ್ಯಾಸಿನೋಗೆ ಕನ್ನಡದ ಇತರ ಸ್ಟಾರ್ ನಟರೂ ಹೋಗಿದ್ದಾರೆ ಎಂದು ಕೆಲವು ಹೆಸರುಗಳನ್ನು ಹೇಳಿದ್ದಾರೆ.

ವಿವೇಕ್ ಒಬೆರಾಯ್, ಆದಿತ್ಯಾರಾಯ್ ಕಪೂರ್ ಸಹ ಇದ್ದರು: ಸಂಜನಾ
ಶ್ರೀಲಂಕಾದ ಕ್ಯಾಸಿನೋದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಜೊತೆಗೆ ನಾನು ವೇದಿಕೆ ಹಂಚಿಕೊಂಡಿದ್ದೆ. ಅದೇ ವೇದಿಕೆಯಲ್ಲಿ ಆಶಿಕಿ 2 ಸಿನಿಮಾ ಹೀರೋ ಆದಿತ್ಯರಾಯ್ ಕಪೂರ್ ಸಹ ಇದ್ದರು. ಇನ್ನೂ ಹಲವು ಸ್ಟಾರ್ ನಟರು ಆ ಕಾರ್ಯಕ್ರಮದಲ್ಲಿದ್ದರು ಎಂದಿದ್ದಾರೆ ಸಂಜನಾ.

ತಿಂಗಳಿಗೊಮ್ಮೆ ಕಾರ್ಯಕ್ರಮಗಳನ್ನು ಮಾಡುತ್ತಾರೆ: ಸಂಜನಾ
ಶ್ರೀಲಂಕಾದ ಆ ಕ್ಯಾಸಿನೋ ತಿಂಗಳಿಗೊಮ್ಮೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತದೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಬಾಲಿವುಡ್ಗಳಿಂದಲೂ ಹಲವಾರು ಸ್ಟಾರ್ ನಟ-ನಟಿಯರನ್ನು ಕಾರ್ಯಕ್ರಮಕ್ಕೆ ಅತಿಥಿಗಳನ್ನಾಗಿ ಆಹ್ವಾನ ಮಾಡಲಾಗುತ್ತದೆ ಎಂದು ಮಾಹಿತಿ ಕೊಟ್ಟಿದ್ದಾರೆ ಸಂಜನಾ.

ನಟ ಯಶ್, ಉಪೇಂದ್ರ ಸಹ ಹೋಗಿದ್ದಾರೆ: ಸಂಜನಾ
ಕನ್ನಡದ ಕೆಲವು ಸ್ಟಾರ್ ನಟರೂ ಸಹ ಆ ಕ್ಯಾಸಿನೋದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನಟ ಉಪೇಂದ್ರ, ಯಶ್ ಹಾಗೂ ಇನ್ನೂ ಕೆಲವು ನಟರು ಆ ಕ್ಯಾಸಿನೋದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನಾನು ಮಾತ್ರ ಆ ಕಾರ್ಯಕ್ರಮಕ್ಕೆ ಹೋಗಿಲ್ಲ ಎಂದಿದ್ದಾರೆ ಸಂಜನಾ.

ರಾಜಕೀಯ ಲಾಭ ಪಡೆದುಕೊಳ್ಳಲು ಸಂಬರ್ಗಿ ಆರೋಪ: ಸಂಜನಾ
ಕ್ಯಾಸಿನೋದಿಂದ ಆಹ್ವಾನ ಇರುವ ಕಾರಣ, ಎಲ್ಲಾ ಊಟ, ವಸತಿ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಾರೆ, ಅದರಲ್ಲಿ ವಿಶೇಷವೇನೂ ಇಲ್ಲ ಎಂದಿರುವ ಸಂಜನಾ, ಆ ಕಾರ್ಯಕ್ರಮಕ್ಕೆ ನಾನು ಹೋದಾಗ ಜಮೀರ್ ಅಹ್ಮದ್ ಅವರ ಬಗ್ಗೆ ನನಗೆ ಗೊತ್ತಿರಲೇ ಇಲ್ಲ. ಆದರೆ ಈಗ ಪ್ರಶಾಂತ್ ಸಂಬರ್ಗಿ ರಾಜಕೀಯ ಲಾಭ ಪಡೆದುಕೊಳ್ಳಲು ಜಮೀರ್ ಅಹ್ಮದ್ ಹಾಗೂ ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.


Click it and Unblock the Notifications











