ಯಶ್ 'ಕಾಂತಾರ' ಯಶಸ್ಸು ಕಂಡು ವಿಷ್ ಮಾಡದೇ ಸುಮ್ಮನಾದ್ರಾ? ರಿಷಬ್ ಶೆಟ್ಟಿಯೇ ಕೊಟ್ರು ಉತ್ತರ
ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ನಟನೆಯ ಕಾಂತಾರ ಚಿತ್ರ ಸದ್ಯ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಮೊದಲಿಗೆ ಏಕಭಾಷೆಯಲ್ಲಿ ಬಿಡುಗಡೆಗೊಂಡಿದ್ದ ಕಾಂತಾರ ಅಭೂತಪೂರ್ವ ವಿಮರ್ಶೆಗಳನ್ನು ಪಡೆದುಕೊಂಡು ಈಗ ಪ್ಯಾನ್ ಇಂಡಿಯಾ ಸಿನಿಮಾವಾಗಿ ಪರಿವರ್ತನೆಗೊಂಡಿದೆ. ಈಗಾಗಲೇ ಕಾಂತಾರ ನೂರು ಕೋಟಿ ಕ್ಲಬ್ ಸೇರಿದ್ದು ಚಿನ್ನದ ಬೆಳೆ ಬೆಳೆದಿದೆ.
ಕಾಂತಾರ ಚಿತ್ರಕ್ಕೆ ಸಿನಿ ಪ್ರೇಕ್ಷಕರು ಮಾತ್ರವಲ್ಲದೇ ಪರಭಾಷಾ ಸ್ಟಾರ್ಗಳೂ ಸಹ ಫಿದಾ ಆಗಿದ್ದು, ತೆಲುಗು ನಟ ರೆಬೆಲ್ ಸ್ಟಾರ್ ಪ್ರಭಾಸ್ ಎರಡು ಬಾರಿ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮಿಳಿನ ಧನುಷ್, ಕಾರ್ತಿ ಚಿತ್ರ ವೀಕ್ಷಿಸಿ ಪ್ರಶಂಸಿಸಿದ್ದರು. ಅದರಲ್ಲಿಯೂ ಕಾರ್ತಿ ವಿಶೇಷವಾಗಿ ರಿಷಬ್ ಶೆಟ್ಟಿ ಅವರನ್ನು ಭೇಟಿಯಾಗಿ ಎಂಥಹ ಅದ್ಭುತ ಚಿತ್ರ ಕ್ಲೈಮ್ಯಾಕ್ಸ್ ನೋಡಿ ಕೈಕಾಲು ನಡುಗಿದ್ದವು ಎಂದಿದ್ದರು. ಅಷ್ಟೇ ಅಲ್ಲದೇ ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ ಸೇರಿದಂತೆ ಇನ್ನೂ ಮುಂತಾದ ಪರಭಾಷಾ ನಟರು ಚಿತ್ರ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದರು.
ಇನ್ನು ಕನ್ನಡದ ಹಲವಾರು ನಟ - ನಟಿಯರು, ನಿರ್ದೇಶಕರು, ನಿರ್ಮಾಪಕರು ಕಾಂತಾರ ಚಿತ್ರ ವೀಕ್ಷಿಸಿ ಹೊಗಳಿದ್ದರು. ಕಿಚ್ಚ ಸುದೀಪ್ ಚಿತ್ರ ವೀಕ್ಷಿಸಿ ವಿಶೇಷವಾಗಿ ಟ್ವೀಟ್ ಮಾಡುವ ಮೂಲಕ ಕಾಂತಾರ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದರು. ಇದಾದ ಬೆನ್ನಲ್ಲೇ ಕನ್ನಡದ ಉಳಿದ ಸ್ಟಾರ್ ನಟರಾದ ದರ್ಶನ್, ಯಶ್ ಹಾಗೂ ಶಿವಣ್ಣ ಕಾಂತಾರ ಚಿತ್ರದ ಯಶಸ್ಸಿಗೆ ಶುಭ ಕೋರಲಿಲ್ಲ, ಚಿತ್ರದ ಕುರಿತು ಯಾವುದೇ ಟ್ವೀಟ್ ಮಾಡಲಿಲ್ಲ ಎಂಬ ಆರೋಪ ಎದುರಾಗಿತ್ತು. ಅದರಲ್ಲಿಯೂ ಕನ್ನಡ ಚಿತ್ರರಂಗ ಬೆಳೆಯಬೇಕು ಎನ್ನುವ ಯಶ್ ಒಂದೊಳ್ಳೆ ಚಿತ್ರ ಬಂದಾಗ ಸೈಲೆಂಟ್ ಆಗಿದ್ದಾರೆ ಎಂಬ ಆರೋಪ ದೊಡ್ಡ ಮಟ್ಟದಲ್ಲಿ ಕೇಳಿಬಂದಿತ್ತು. ಆದರೆ ಇದೀಗ ಈ ಆರೋಪಕ್ಕೆ ಉತ್ತರ ದೊರೆತಿದ್ದು ಸ್ವತಃ ರಿಷಬ್ ಶೆಟ್ಟಿಯೇ ತುಟಿಬಿಚ್ಚಿದ್ದಾರೆ.

ರಿಷಬ್ ಶೆಟ್ಟಿ ಹೇಳಿದ್ದಿಷ್ಟು
ಇತ್ತೀಚೆಗಷ್ಟೆ ಕನ್ನಡದ ಖಾಸಗಿ ಸುದ್ದಿ ವಾಹಿನಿ ದಿಗ್ವಿಜಯ ರಿಷಬ್ ಶೆಟ್ಟಿಯವರ ಸಂದರ್ಶನವನ್ನು ಮಾಡಿತ್ತು. ಈ ಸಂದರ್ಶನದಲ್ಲಿ ಚಿತ್ರ ಹೇಗಾಯಿತು, ಯಾರೆಲ್ಲಾ ತಮ್ಮ ಬೆನ್ನಿಗೆ ನಿಂತ್ರು, ಚಿತ್ರ ಎಷ್ಟರ ಮಟ್ಟಿಗೆ ಪ್ರಶಂಸೆ ಪಡೆದುಕೊಳ್ಳುತ್ತಿದೆ ಎಂಬುದರ ಕುರಿತು ಮನಬಿಚ್ಚಿ ಮಾತನಾಡಿದರು. ಇದೇ ಸಂದರ್ಶನದಲ್ಲಿ ನಿರೂಪಕರು ಬೇರೆ ಬೇರೆ ಸ್ಟಾರ್ಗಳು ಏನು ಮಾತನಾಡಿದ್ರು ಒಂದು ಝಲಕ್ ಹೇಳಿ ಎಂದು ರಿಷಬ್ ಶೆಟ್ಟಿಗೆ ಪ್ರಶ್ನೆ ಹಾಕಿದ್ರು. ಈ ಪ್ರಶ್ನೆಗೆ ಉತ್ತರಿಸಿದ ರಿಷಬ್ ಶೆಟ್ಟಿ 'ಫಸ್ಟ್ ರಿಲೀಸ್ ದಿನ ಯಶ್ ಅವರು ಫೋನ್ ಮಾಡಿ ವಿಷ್ ಮಾಡಿದ್ರು, ಚೆನ್ನಾಗಾಗುತ್ತೆ ಚಿನ್ನ, ಅವರು ಹಾಗೆ ಮಾತನಾಡಿಸುವುದು. ಸೋ ಡೋಂಟ್ ವರಿ ಚೆನ್ನಾಗಾಗುತ್ತೆ ಒಳ್ಳೆ ರೀಚ್ ಆಗುತ್ತೆ' ಎಂದರು. ಈ ಮೂಲಕ ಯಶ್ ಕಾಂತಾರಕ್ಕೆ ಶುಭಕೋರಿಲ್ಲ ಎಂಬ ಕೊಂಕಿಗೆ ರಿಷಬ್ ಶೆಟ್ಟಿ ಫುಲ್ಸ್ಟಾಪ್ ಇಟ್ಟರು.

ಅಪ್ಪು ಇದ್ದಿದ್ರೆ ಅವರದ್ದೇ ಮೊದಲ ಟ್ವೀಟ್
ಸದ್ಯ ಕನ್ನಡದ ನಟರು ಕಾಂತಾರ ಚಿತ್ರದ ಯಶಸ್ಸಿನ ಕುರಿತು ಟ್ವೀಟ್ ಮಾಡಿಲ್ಲ ಎಂಬ ಟ್ರೋಲ್ಗಳು ಹೆಚ್ಚಾಗಿವೆ. ಆದರೆ ಪುನೀತ್ ರಾಜ್ಕುಮಾರ್ ಇದ್ದಿದ್ದರೆ ಈ ರೀತಿಯ ಟ್ರೋಲ್ ಅವರ ವಿರುದ್ಧ ಇರುತ್ತಿರಲಿಲ್ಲ ಎನ್ನಬಹುದು. ಏಕೆಂದರೆ ಚಿತ್ರ ಬಿಡುಗಡೆ ದಿನ ಬೆಳಗ್ಗೆಯೇ ಅಪ್ಪು ಮುಂಗಡವಾಗಿ ಶುಭಕೋರಿ ಟ್ವೀಟ್ ಮಾಡಿಬಿಡುತ್ತಿದ್ದರು. ಇನ್ನು ಈ ಚಿತ್ರದಲ್ಲಿ ನಟಿಸಬೇಕಿದ್ದ ಅಪ್ಪು ಡೇಟ್ ಕಾರಣದಿಂದಾಗಿ ಚಿತ್ರವನ್ನು ಕೈಬಿಟ್ಟರು ಎಂಬ ವಿಷಯವನ್ನೂ ಸಹ ರಿಷಬ್ ಈ ಹಿಂದೆ ಬಿಚ್ಚಿಟ್ಟಿದ್ದರು.

ಕಾತರತೆ ವ್ಯಕ್ತಪಡಿಸಿದ ಕಂಗನಾ
ಇನ್ನು ಕಾಂತಾರ ಚಿತ್ರದ ಕುರಿತು ಬಾಲಿವುಡ್ ನಟಿ ಕಂಗನಾ ರನೌತ್ ಕೂಡ ಕಾಂತಾರ ಚಿತ್ರದ ಬಗ್ಗೆ ಕಾತರತೆ ವ್ಯಕ್ತಪಡಿಸಿದ್ದಾರೆ. ಕಾಂತಾರ ಚಿತ್ರದ ಟ್ರೈಲರ್ ದೃಶ್ಯಗಳ ಚಿತ್ರಗಳನ್ನು ತನ್ನ ಇನ್ ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಹಂಚಿಕೊಂಡಿರುವ ಕಂಗನಾ ರನೌತ್ 'ಕಾಂತಾರ ಚಿತ್ರದ ಕುರಿತು ಅಸಾಧಾರಣ ಸಂಗತಿಗಳು ಕೇಳಿಬರುತ್ತಿವೆ. ಚಿತ್ರವನ್ನು ವೀಕ್ಷಿಸಲು ಕಾತರಳಾಗಿದ್ದೇನೆ. ಆದಷ್ಟು ಬೇಗ ಚಿತ್ರ ವೀಕ್ಷಿಸುವೆ' ಎಂದು ಬರೆದುಕೊಳ್ಳುವುದರ ಮೂಲಕ ಚಿತ್ರದ ಕುರಿತು ತಮಗಿರುವ ಕಾತರತೆಯನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











