ಕಲಾವಿದರ ಮೇಲೆ ಅಭಿಮಾನ ಇರಲಿ, ಹೆತ್ತವರಿಗಾಗಿ ಬದುಕಿ ಎಂದ ನಟ ಜಗ್ಗೇಶ್.!
ಜನವರಿ 8.. ಅಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಜನ್ಮದಿನದಂದು ನೆಚ್ಚಿನ ನಟನನ್ನು ನೋಡಿ, ವಿಶ್ ಮಾಡಲು ಅವಕಾಶ ಸಿಗಲಿಲ್ಲ ಎಂದು ರವಿ ಎಂಬ ಅಭಿಮಾನಿ ಆತ್ಮಹತ್ಯೆಗೆ ಯತ್ನಿಸಿದರು.
ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ರವಿ ದುರಾದೃಷ್ಟವಶಾತ್ ಕೊನೆಯುಸಿರೆಳೆದರು. ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ರವಿ, ತೀವ್ರವಾಗಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ಈ ದುರ್ಘಟನೆಯಿಂದ ಯಶ್ ಮನಸ್ಸಿಗೆ ನೋವಾಗಿದೆ. ಹಾಗೇ, ನವರಸ ನಾಯಕ ಜಗ್ಗೇಶ್ ಕೂಡ ಮನನೊಂದಿದ್ದಾರೆ. ''ಕಲಾವಿದರ ಮೇಲೆ ಅಭಿಮಾನ ಇರಲಿ, ಹೆತ್ತವರಿಗಾಗಿ ಬದುಕಿ ಬಾಳಿ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿರಿ...

ಬೇಸರಗೊಂಡಿದ್ದ ಯಶ್
''ಇದನ್ನು ಅಭಿಮಾನ ಅಂತ ನಾನು ಹೇಳಲ್ಲ. ಇದೇ ಕೊನೆ. ನನ್ನ ಅಭಿಮಾನಿಗಳು ಹೀಗೆ ಮಾಡಿಕೊಂಡರೆ ನಾನು ಮತ್ತೆ ಬರಲ್ಲ. ಸಿನಿಮಾ ನೋಡಿ ನಮ್ಮಿಂದ ಏನಾದರೂ ಒಳ್ಳೆಯದನ್ನು ಕಲಿತುಕೊಳ್ಳಿ'' ಎಂದು ನಟ ಯಶ್ ಈ ದುರ್ಘಟನೆ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದರು.
ನಟ ಜಗ್ಗೇಶ್ ಟ್ವೀಟ್
''ನಲ್ಮೆಯ ಕಲಾಬಂಧುಗಳೇ.. ನಾವು ಕಲಾವಿದರು ನಿಮ್ಮನ್ನು ರಂಜಿಸಲು ಮಾತ್ರ ಸಮರ್ಥರು. ನಾವು ದೇವರಲ್ಲ. ನಿಮ್ಮಂತೆ ಸಾಮಾನ್ಯ ಮನುಷ್ಯರು. ಪರದೆ ಮೇಲೆ ಮಾತ್ರ ಕಥೆಗೆ ಪಾತ್ರಧಾರಿಗಳು. ನಿಮ್ಮ ತಂದೆ-ತಾಯಿ ಬಂಧುಗಳ ಪ್ರೀತಿ ಸ್ಥಾನ ತುಂಬುವ ಶಕ್ತಿ ಕಲೆಗಿಲ್ಲ. ದಯಮಾಡಿ ಹೆತ್ತರಿಗಾಗಿ ಬದುಕಿ ಬಾಳಿ. ಕಲಾವಿದರ ಮೇಲೆ ಅಭಿಮಾನ ಇರಲಿ. ಆತ್ಮಹತ್ಯೆಯಂಥ ಬಾಲಿಶ ನಡೆ ಯಾಕೆ.?'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಜಗ್ಗೇಶ್ ನೀಡಿರುವ ಹಿತವಚನ
''ಪ್ರತಿ ಮನುಜರ ಹೆತ್ತೊಡಲು ನಮ್ಮ ಮಕ್ಕಳು ಬೆಳೆದು ದೊಡ್ಡವರಾಗಿ ವಯಸ್ಸಾದಾಗ ಊರುಗೋಲಾಗುತ್ತಾರೆ ಎಂದು ಕನಸು ಕಂಡಿರುತ್ತಾರೆ. ಅವರ ಆಸೆ ನೆರವೇರಿಸುವ ಮಕ್ಕಳಾದರೆ ಜನ್ಮ ಸಾರ್ಥಕ. ಅದು ಬಿಟ್ಟು ಮಾಯಾಲೋಕದ ದೂರದ ಬೆಟ್ಟದ ಆಸೆಗೆ ಜೀವನ ಹಾಳಾಗುವುದು ಬೇಡ. ನಮಗೆ ಚಪ್ಪಾಳೆ ಇರಲಿ. ತಂದೆ-ತಾಯಿ ವಂಶಕ್ಕೆ ನಿಮ್ಮ ಕಾಳಜಿ ಕರ್ತವ್ಯ ಇರಲಿ. ತಂದೆ-ತಾತನಾಗಿ ಸಣ್ಣ ಹಿತವಚನ'' - ನಟ ಜಗ್ಗೇಶ್
ಶ್ರೇಷ್ಠ ಜನ್ಮ
''ಮನು ಜನ್ಮ ಶ್ರೇಷ್ಠ ಜನ್ಮ. ವಿಶ್ವಕ್ಕೆ ಬುದ್ಧಿ ಹೇಳುವ ಶಕ್ತಿ ಸಂಪಾದಿಸುವ ಜ್ಞಾನ ದೇವರು ನಮಗೆ ನೀಡಿದ್ದಾನೆ. ನಾವು ಚೆನ್ನಾಗಿದ್ದರೆ, ದುನಿಯಾ. ನಮ್ಮ ಬಳಿ ಹಣವಿದ್ದರೆ ನೆಂಟರು. ನಾವು ಸಾಧಿಸಿದರೆ ಹೂಮಾಲೆ. ನಾವು ಸತ್ತರೆ ಮೂರು ದಿನಕ್ಕೆ ಮರೆಯುತ್ತೆ ಸಮಾಜ. ನಿಮಗಾಗಿ ಬಾಳಿ. ನಿಮ್ಮ ಸಂತೋಷಕ್ಕಾಗಿ ಜೀವಿಸಿ. ಸಮಾಜ ನಿಮ್ಮ ನೆನೆಯುವಂತೆ ಮುದ್ರೆ ಒತ್ತಿ'' - ನಟ ಜಗ್ಗೇಶ್


Click it and Unblock the Notifications











