ಇವರಲ್ಲಿ 2017ರ ಕನ್ನಡದ ಬೆಸ್ಟ್ ನಿರ್ದೇಶಕರು ಯಾರು?
Recommended Video

ಇನ್ನೂ ಮೂರು ದಿನಗಳಲ್ಲಿ ಹೊಸ ವರ್ಷ ಬರಲಿದೆ. 2017ಕ್ಕೆ ಬಾಯ್ ಹೇಳುವ ಸಮಯ ಬಂದಿದೆ. ಕನ್ನಡ ಚಿತ್ರರಂಗದಲ್ಲಿ 2017ರಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳು ಬಂದಿದೆ. ಈ ವರ್ಷ ಕನ್ನಡದ ನಿರ್ದೇಶಕರು ತಮ್ಮದೆ ರೀತಿಯ ವಿಭಿನ್ನ ಸಿನಿಮಾಗಳನ್ನು ಮಾಡಿದ್ದಾರೆ.
ಈ ವರ್ಷ ಕನ್ನಡದಲ್ಲಿ ಸಾಕಷ್ಟು ಹೊಸ ನಿರ್ದೇಶಕರು ಪಾದಾರ್ಪಣೆ ಮಾಡಿದ್ದಾರೆ. ಹಳೆಯ ನಿರ್ದೇಶಕರು ಮತ್ತೆ ಸಿನಿಮಾ ಮಾಡಿ ತಮ್ಮ ಹಳೆ ಚಿತ್ರಕ್ಕಿಂತ ಬೇರೆಯ ರೀತಿಯ ಚಿತ್ರ ಮಾಡಲು ಮುಂದಾಗಿದ್ದರು. ಈ ವರ್ಷ ಕನ್ನಡ ನಿರ್ದೇಶಕರು ಎಲ್ಲ ರೀತಿಯ ಚಿತ್ರವನ್ನು ಮಾಡಿದ್ದಾರೆ. ಅದರಲ್ಲಿಯೂ ಸಂತೋಷ್ ಆನಂದ್ ರಾಮ್, ಚೇತನ್ ಕುಮಾರ್, ಸಂತು ಮತ್ತು ಮಿಲನ ಪ್ರಕಾಶ್ ಈ ಬಾರಿ ದೊಡ್ಡ ಯಶಸ್ಸು ಕಂಡ ನಿರ್ದೇಶಕರಾಗಿದ್ದಾರೆ. ಅಂದಹಾಗೆ, 2017ನೇ ಸಾಲಿನ ಕನ್ನಡದ ನಿರ್ದೇಶಕರ ಸಿನಿಮಾಗಳ ಒಂದು ವಿವರ ಮುಂದಿದೆ ಓದಿ...

ಜಯತೀರ್ಥ (ಬ್ಯೂಟಿಫುಲ್ ಮನಸುಗಳು)
ಸದಭಿರುಚಿಯ ಸಿನಿಮಾಗಳ ನಿರ್ದೇಶಕ ಜಯತೀರ್ಥ ಈ ಬಾರಿ 'ಬ್ಯೂಟಿಫುಲ್ ಮನಸುಗಳು' ಎಂಬ ಬ್ಯೂಟಿಫುಲ್ ಸಿನಿಮಾ ಮೂಲಕ ಬಂದಿದ್ದರು. ನೀನಾಸಂ ಸತೀಶ್ ಮತ್ತು ಶೃತಿಹರಿಹರನ್ ನಟನೆಯ ಈ ಚಿತ್ರಕ್ಕೆ ಜನರ ಮನಸು ಗೆಲ್ಲುವುದರ ಜೊತೆಗೆ ಎರಡು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಟಿ.ಎಸ್.ನಾಗಾಭರಣ (ಅಲ್ಲಮ)
ಟಿ.ಎಸ್.ನಾಗಾಭರಣ ನಿರ್ದೇಶನದ 'ಅಲ್ಲಮ' ಸಿನಿಮಾ ಈ ವರ್ಷ ತೆರೆಗೆ ಬಂದಿತ್ತು. ಅಲ್ಲಮ ಪ್ರಭು ರವರ ಈ ಸಿನಿಮಾ ಪ್ರಾರಂಭದಲ್ಲಿ ವಿವಾದ ಸೃಷ್ಟಿಸಿತ್ತು. ಆದರೆ ನಂತರ ಚಿತ್ರ ಬಿಡುಗಡೆಯಾಗಿ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ಚಿತ್ರದಲ್ಲಿ ಧನಂಜಯ್ ಮತ್ತು ಮೇಘನಾ ರಾಜ್ ಅಭಿನಯಿಸಿದ್ದರು.

ಮಂಜು ಸ್ವರಾಜ್ (ಶ್ರೀ ಕಂಠ, ಪಟಾಕಿ )
ಶಿವರಾಜ್ ಕುಮಾರ್ ಅಭಿನಯದ 'ಶ್ರೀ ಕಂಠ' ಮತ್ತು ಗಣೇಶ್ ಅಭಿನಯದ 'ಪಟಾಕಿ' ಚಿತ್ರವನ್ನು ಮಂಜು ಸ್ವರಾಜ್ ನಿರ್ದೇಶನ ಮಾಡಿದ್ದರು. ಆದರೆ ಈ ಎರಡು ಚಿತ್ರಗಳು ದೊಡ್ಡ ಮಟ್ಟದ ಯಶಸ್ಸು ಕಾಣಲಿಲ್ಲ.
2017ರಲ್ಲಿ ಹವಾ ಸೃಷ್ಟಿಸಿದ ಕನ್ನಡ ಚಿತ್ರರಂಗದ ಸ್ಟಾರ್ ನಟರು

ಬಿ.ಎಂ.ಗಿರಿರಾಜ್ (ಅಮರಾವತಿ)
'ಜಟ್ಟ' ಖ್ಯಾತಿಯ ನಿರ್ದೇಶಕ ಗಿರಿರಾಜ್ 'ಅಮರಾವತಿ' ಸಿನಿಮಾವನ್ನು ಈ ವರ್ಷ ಮಾಡಿದ್ದರು. ಪೌರ ಕಾರ್ಮಿಕರ ಬಗ್ಗೆ ಇದ್ದ ಈ ಸಿನಿಮಾದ ಅಭಿನಯಕ್ಕಾಗಿ ಅಚ್ಚುತ್ ಕುಮಾರ್ ರಾಜ್ಯಪ್ರಶಸ್ತಿಯನ್ನು ಪಡೆದಿದ್ದರು.

ಕೃಷ್ಣ (ಹೆಬ್ಬುಲಿ)
ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ 'ಹೆಬ್ಬುಲಿ' ಕೂಡ ಒಂದು. ಈ ಚಿತ್ರವನ್ನು ಕೃಷ್ಣ ನಿರ್ದೇಶನ ಮಾಡಿದ್ದರು. ಪಕ್ಕಾ ಕಮರ್ಶಿಯಲ್ ಅಂಶದ ಸಿನಿಮಾದಲ್ಲಿ ನಟ ಸುದೀಪ್ ಮತ್ತು ರವಿಚಂದ್ರನ್ ಮತ್ತೆ ಒಟ್ಟಿಗೆ ನಟಿಸಿದ್ದರು.

ಗುರುಪ್ರಸಾದ್ (ಎರಡನೇ ಸಲ)
'ಮಠ' ಗುರುಪ್ರಸಾದ್ ಬತ್ತಳಿಕೆಯಿಂದ 'ಎರಡನೇ ಸಲ' ಸಿನಿಮಾ ಈ ವರ್ಷ ಹೊರ ಬಂತು. ಧನಂಜಯ್ ನಟನೆಯ ಈ ಚಿತ್ರ ಒಳ್ಳೆಯ ಮನರಂಜನೆಯ ಸಿನಿಮಾ ಅಂತ ಕರೆಸಿಕೊಂಡಿತು.

ಸಂತೋಷ್ ಆನಂದ್ ರಾಮ್ (ರಾಜಕುಮಾರ)
ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತೆ ಈ ವರ್ಷವೂ ಸಿಕ್ಸಸ್ ಬಾರಿಸಿದರು. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಬಳಿಕ ಮತ್ತೆ 'ರಾಜಕುಮಾರ' ಸಿನಿಮಾ ಮೂಲಕ ಸಂತೋಷ್ ಗೆದ್ದರು. ಪುನೀತ್ ರಾಜ್ ಕುಮಾರ್ ನಟನೆಯ ಈ ಚಿತ್ರ ಸುಮಾರು 70 ಕೋಟಿ ಕಲೆಕ್ಷನ್ ಮಾಡಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ದೊಡ್ಡ ದಾಖಲೆ ಮಾಡಿತು.

ಪಿಸಿ ಶೇಖರ್ (ರಾಗ)
'ರಾಗ' ಚಿತ್ರವನ್ನು ಪಿಸಿ ಶೇಖರ್ ನಿರ್ದೇಶನ ಮಾಡಿದ್ದಾರೆ. ಇಬ್ಬರು ಅಂಧ ಪ್ರೇಮಿಗಳ ಕಥೆ ಇದ್ದ ಈ ಸಿನಿಮಾ ತುಂಬ ಒಳ್ಳೆಯ ಸಿನಿಮಾ ಆಗಿದೆ. ಬಾಕ್ಸ್ ಆಫೀಸ್ ಲೆಕ್ಕಾಚಾರವನ್ನು ಪಕ್ಕಕ್ಕಿಟ್ಟು ನೋಡಿದರೆ 'ರಾಗ' ಒಂದು ಅದ್ಬುತ ಸಿನಿಮಾ. ಚಿತ್ರದಲ್ಲಿ ಕುರುಡು ಪ್ರೇಮಿಗಳಾಗಿ ಮಿತ್ರ ಮತ್ತು ಭಾಮಾ ನಟಿಸಿದ್ದರು.

ನಾಗಶೇಖರ್ (ಮಾಸ್ತಿಗುಡಿ)
ನಾಗಶೇಖರ್ 'ಮಾಸ್ತಿಗುಡಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದರು. ಆದರೆ ಚಿತ್ರದ ಚಿತ್ರೀಕರಣ ವೇಳೆ ಸಂಭವಿಸಿದ ದುರ್ಘಟನೆಯಿಂದ ಅವರಿಗೆ ಕೆಟ್ಟ ಹೆಸರು ಬಂತು. ಸಿನಿಮಾ ಕೂಡ ದೊಡ್ಡ ಮಟ್ಟದ ಹಿಟ್ ಆಗಲಿಲ್ಲ.

ಯೋಗಿ ಜಿ ರಾಮ್ (ಬಂಗಾರ S/O ಬಂಗಾರದ ಮನುಷ್ಯ)
ಯೋಗಿ ಜಿ ರಾಮ್ ಶಿವಣ್ಣನ ಜೊತೆ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರವನ್ನು ಮಾಡಿದರು. ಈ ಚಿತ್ರ ರೈತರ ಬಗ್ಗೆ ಇದ್ದು ಒಳ್ಳೆಯ ಸಂದೇಶ ಚಿತ್ರದಲ್ಲಿ ಇತ್ತು.

ಚೈತನ್ಯ (ಆಕೆ)
ನಿರ್ದೇಶಕ ಚೈತನ್ಯ ಈ ವರ್ಷ 'ಆಕೆ' ಚಿತ್ರವನ್ನು ನಿರ್ದೇಶನ ಮಾಡಿದ್ದರು ಈ ಚಿತ್ರ ತಮಿಳಿನ 'ಮಾಯ' ಚಿತ್ರದ ರಿಮೇಕ್

ಶ್ರೀನಿವಾಸ್ ರಾಜು (2)
ತಮ್ಮ ಪ್ರತಿ ಚಿತ್ರದಲ್ಲಿಯೂ ವಿವಾದ ಸೃಷ್ಟಿಸುವ ನಿರ್ದೇಶಕ ಶ್ರೀನಿವಾಸ್ ರಾಜು ಈ ಬಾರಿಯೂ ಅದನ್ನು ಮುಂದುವರೆಸಿದ್ದಾರೆ. ' 2' (ದಂಡುಪಾಳ್ಯ 2) ಸಿನಿಮಾ ಮಾಡಿದ್ದ ಅವರು ಬೆತ್ತಲೆ ವಿವಾದದ ಮೂಲಕ ದೊಡ್ಡ ಸುದ್ದಿ ಮಾಡಿದರು.

ಸಿಂಪಲ್ ಸುನಿ (ಆಪರೇಷನ್ ಅಲಮೇಲಮ್ಮ)
ಸಿಂಪಲ್ ಸುನಿ 'ಆಪರೇಷನ್ ಅಲಮೇಲಮ್ಮ' ಚಿತ್ರ ಮಾಡಿದರು. ಆದರೆ ಸುನಿ ಮಾಡಿದ ಆಪರೇಷನ್ ಸಕ್ಸಸ್ ಆಗಲಿಲ್ಲ. ಚಿತ್ರದಲ್ಲಿ ರಿಷಿ ಮತ್ತು ಶ್ರದ್ಧಾ ಶ್ರೀನಾಥ್ ನಟಿಸಿದ್ದರು.

ಟಿ.ಎನ್.ಸೀತಾರಾಮ್ (ಕಾಫಿ ತೋಟ)
'ಕಾಫಿ ತೋಟ' ಸಿನಿಮಾದ ಮೂಲಕ ನಿರ್ದೇಶಕ ಟಿ.ಎನ್.ಸೀತಾರಾಮ್ ಕಮ್ ಬ್ಯಾಕ್ ಮಾಡಿದರು. ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದ ಈ ಚಿತ್ರ ನೋಡುಗರ ಮೆಚ್ಚುಗೆ ಗಳಿಸಿತ್ತು. ಚಿತ್ರ ಪಕ್ಕಾ ಸೀತಾರಾಮ್ ಅವರ ಸ್ಟೈಲ್ ನಲ್ಲಿ ಇತ್ತು.

ಯೋಗರಾಜ್ ಭಟ್ (ಮುಗುಳುನಗೆ)
ಗಣೇಶ್ ಮತ್ತು ಯೋಗರಾಜ್ ಭಟ್ ಅವರ ಹ್ಯಾಟ್ರಿಕ್ ಸಿನಿಮಾ 'ಮುಗುಳುನಗೆ' ಈ ವರ್ಷ ತೆರೆಗೆ ಬಂತು. ಹಾಡುಗಳ ಮೂಲಕ ದೊಡ್ಡ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ರಿಲೀಸ್ ಆದ ಬಳಿಕ ನಿರಾಸೆ ಮೂಡಿಸಿತು.

ಚೇತನ್ ಕುಮಾರ್ (ಭರ್ಜರಿ)
'ಬಹದ್ದೂರ್' ಚೇತನ್ ಈಗ 'ಭರ್ಜರಿ' ಚೇತನ್ ಆಗಿದ್ದಾರೆ. ಚೇತನ್ ನಿರ್ದೇಶನ ಮಾಡಿದ್ದ 'ಭರ್ಜರಿ' ಈ ವರ್ಷ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ. ಈ ಮೂಲಕ ಧ್ರುವ ಸರ್ಜಾ ಅವರ ಮೂರು ಸಿನಿಮಾಗಳು ನೂರು ದಿನ ಪೂರೈಸಿದೆ.

ಮಿಲನ ಪ್ರಕಾಶ್ (ತಾರಕ್)
ದರ್ಶನ್ ಅಭಿನಯದ 'ತಾರಕ್' ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡಿದ್ದರು. ಮತ್ತೊಂದು ಫ್ಯಾಮಿಲಿ ಸಿನಿಮಾ ಕೊಟ್ಟ ಪ್ರಕಾಶ್ ಈ ಚಿತ್ರದಲ್ಲಿಯೂ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದರು.

ಸಂತು (ಕಾಲೇಜ್ ಕುಮಾರ್)
'ಡವ್' ಬಳಿಕ ನಿರ್ದೇಶಕ ಸಂತು ಈ ವರ್ಷ 'ಕಾಲೇಜ್ ಕುಮಾರ್' ಸಿನಿಮಾವನ್ನು ನಿರ್ದೇಶನ ಮಾಡಿದರು. ಸಿನಿಮಾ ಹಿಟ್ ಆಗಿ ಒಳ್ಳೆಯ ಮಾತುಗಳು ಇಡೀ ಚಿತ್ರತಂಡಕ್ಕೆ ಬಂತು. ರವಿಶಂಕರ್ ಪಾತ್ರಕ್ಕೆ ದೊಡ್ಡ ಮಟ್ಟದ ರೆಸ್ಪಾನ್ಸ್ ಬಂತು.


Click it and Unblock the Notifications











