ಕಾಂತಾರ 300 ಕೋಟಿ ಕಲೆಕ್ಷನ್ ಮಾಡಿದೆ ಎಂಬುದು ಸುಳ್ಳಾ? ತುಟಿ ಬಿಚ್ಚಿಟ್ಟ ರಿಷಬ್ ಶೆಟ್ಟಿ!

ಕಾಂತಾರ ಸದ್ಯ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವಂತಹ ಕನ್ನಡದ ಪ್ಯಾನ್ ಇಂಡಿಯಾ ಚಿತ್ರ. ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಂಡು ಪ್ರೇಕ್ಷಕರಿಂದ ತೀವ್ರ ಪ್ರಶಂಸೆ ಪಡೆದುಕೊಂಡ ಕಾಂತಾರ ಪ್ಯಾನ್ ಇಂಡಿಯಾ ಚಿತ್ರವಾಗಿ ಬದಲಾಯಿತು. ಕನ್ನಡದಲ್ಲಿ ಬಿಡುಗಡೆಯಾಗಿ ಮೊದಲನೇ ದಿನ ಒಂದೂವರೆ ಕೋಟಿ ಗಳಿಕೆ ಮಾಡುವಲ್ಲಿ ಮಾತ್ರ ಯಶಸ್ವಿಯಾಗಿದ್ದ ಕಾಂತಾರ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾದ ನಂತರದ ದಿನಗಳಲ್ಲಿ ದಿನವೊಂದಕ್ಕೆ ಹತ್ತು ಕೋಟಿಗೂ ಹೆಚ್ಚು ರೂಪಾಯಿಗಳನ್ನು ಗಳಿಸಲು ಆರಂಭಿಸಿತು.
ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಕಾಂತಾರ ಚಿತ್ರವನ್ನು ಹೆಚ್ಚಾಗಿ ಸಿನಿಪ್ರೇಕ್ಷಕರು ಒಪ್ಪಿಕೊಂಡರು. ಪರಿಣಾಮ ಕಾಂತಾರ ಚಿತ್ರ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಚಿತ್ರದ ಹಲವು ದಾಖಲೆಗಳನ್ನು ಅಳಿಸಿ ಹಾಕಿ ಇದೀಗ ಮುನ್ನೂರು ಕೋಟಿ ಕ್ಲಬ್ ಸೇರಿದೆ. ಆದರೆ ಈ ಕುರಿತು ಚಿತ್ರದ ನಿರ್ಮಾಪಕರಾಗಲಿ ಅಥವಾ ವಿತರಕರಾಗಲಿ ನಿಖರವಾದ ಮಾಹಿತಿಯನ್ನು ಬಿಚ್ಚಿಟ್ಟಿರಲಿಲ್ಲ. ಹೀಗೆ ಹೊಂಬಾಳೆ ಫಿಲ್ಮ್ಸ್ ಕಲೆಕ್ಷನ್ ಸಂಖ್ಯೆಯನ್ನು ಮುಚ್ಚಿಟ್ಟರೂ ಸಹ ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಚಿತ್ರ ಎಷ್ಟು ಗಳಿಕೆ ಮಾಡಿದೆ ಎಂಬುದನ್ನು ಪ್ರತಿದಿನವೂ ಬಿಚ್ಚಿಡತೊಡಗಿದರು.
ಇನ್ನು ಚಿತ್ರ ಬಿಡುಗಡೆಯಾಗಿ ತಿಂಗಳು ಕಳೆದ ಬಳಿಕ ಮುನ್ನೂರು ಕೋಟಿ ಕ್ಲಬ್ ಸೇರಿದೆ ಎಂದು ಬಾಕ್ಸಾಫೀಸ್ ಟ್ರ್ಯಾಕರ್ಸ್ ಹೇಳಿದಾಗ ಕೆಲವೊಂದಿಷ್ಟು ಮಂದಿ ಇದು ಫೇಕ್ ಎಂದಿದ್ದರು. ಇದೀಗ ಧರ್ಮಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ ಕಲೆಕ್ಷನ್ ವಿಚಾರವಾಗಿ ತುಟಿ ಬಿಚ್ಚಿ ಮಾತನಾಡಿದ್ದು ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಪ್ರವಾಸದಲ್ಲಿ ಬ್ಯುಸಿ ಇದ್ದ ಕಾರಣದಿಂದಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿರಲಿಲ್ಲ
ಚಿತ್ರ ಆರಂಭವಾಗುವುದಕ್ಕೂ ಮುನ್ನ ಹಾಗೂ ಟ್ರೇಲರ್ ಬಿಡುಗಡೆಯಾದಾಗ ಧರ್ಮಸ್ಥಳಕ್ಕೆ ಬಂದು ಆಶೀರ್ವಾದ ಪಡೆದಿದ್ದೆ ಆದರೆ ಚಿತ್ರ ಬಿಡುಗಡೆಯಾದ ನಂತರ ಧರ್ಮಸ್ಥಳಕ್ಕೆ ಭೇಟಿ ನೀಡಲು ಆಗಿರಲಿಲ್ಲ ಎಂದು ಮಾತನ್ನು ಆರಂಭಿಸಿದ ರಿಷಬ್ ಶೆಟ್ಟಿ ಚಿತ್ರ ತಾನಾಗಿಯೇ ಪ್ಯಾನ್ ಇಂಡಿಯಾ ಆಗಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ ಎಂದರು ಹಾಗೂ ಹೀಗಾಗಿ ತಾನೂ ಕೂಡ ಬ್ಯುಸಿ ಇದ್ದೆ ಎಂದು ರಿಷಬ್ ಶೆಟ್ಟಿ ತಿಳಿಸಿದರು. ಇತ್ತೀಚಿಗಷ್ಟೆ ವೀರೇಂದ್ರ ಹೆಗ್ಡೆ ಅವರು ಸಹ ಕಾಂತಾರ ಚಿತ್ರವನ್ನು ವೀಕ್ಷಿಸಿದರು ಆದರೆ ಆ ಸಂದರ್ಭದಲ್ಲಿಯೂ ನನಗೆ ಧರ್ಮಸ್ಥಳಕ್ಕೆ ಭೇಟಿ ನೀಡಲು ಆಗಿರಲಿಲ್ಲ ಸದ್ಯ ಈಗ ಕಾಲ ಕೂಡಿಬಂದಿದೆ ಎಂದು ರಿಷಬ್ ಶೆಟ್ಟಿ ತಿಳಿಸಿದರು.

ಎಲ್ಲಾ ರೆಕಾರ್ಡ್ ಬ್ರೇಕ್ ಆಗಿದೆ
ಇನ್ನು ಇದೇ ಸಂದರ್ಭದಲ್ಲಿ ಚಿತ್ರ ತುಳು ಭಾಷೆಗೆ ಡಬ್ ಆಗಿ ಬಿಡುಗಡೆಯಾಗಲಿದೆಯಾ ಎಂಬ ಪ್ರಶ್ನೆಯನ್ನು ಪತ್ರಕರ್ತರೋರ್ವರು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ರಿಷಬ್ ಶೆಟ್ಟಿ 'ಆ ಕೆಲಸಗಳು ಸಹ ನಡೆಯುತ್ತಿದೆ ಎಲ್ಲವೂ ಒಳ್ಳೆಯ ರೀತಿ ಆಗುತ್ತಿದೆ. ಚಿತ್ರ ಮೂವತ್ತು ದಿನಗಳನ್ನು ಪೂರೈಸಿದ್ದು ಎಲ್ಲಾ ರೆಕಾರ್ಡ್ ಬ್ರೇಕ್ ಮಾಡಿದೆ. ಸದ್ಯ ನೀವೇನು ಕೇಳ್ತಾ ಇದ್ದೀರೋ ಅದೆಲ್ಲವೂ ನಿಜ. ಇನ್ನು ತುಳುವಿನಲ್ಲಿ ಬಿಡುಗಡೆ ಯಾವಾಗ ಮಾಡಬೇಕು ಎಂಬುದನ್ನು ನಿರ್ಮಾಪಕರು ತಿಳಿಸಲಿದ್ದಾರೆ. ಆಗ ಚಿತ್ರ ತುಳುವಿನಲ್ಲಿ ಬಿಡುಗಡೆಯಾಗಲಿದೆ' ಎಂದೂ ಸಹ ರಿಷಬ್ ಶೆಟ್ಟಿ ತಿಳಿಸಿದರು.

ಮತ್ತೊಂದು ತಿಂಗಳು ಟೆಂಪಲ್ ರನ್
ದೇವರ ಮೇಲೆ ಅಪಾರವಾದ ಗೌರವ ಹಾಗೂ ಪ್ರೀತಿಯನ್ನು ಹೊಂದಿರುವ ರಿಷಬ್ ಶೆಟ್ಟಿ ಚಿತ್ರ ವೀಕ್ಷಿಸಿದ ನೆರೆ ರಾಜ್ಯದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುವ ಸಲುವಾಗಿ ಕಳೆದ ಹಲವಾರು ದಿನಗಳಲ್ಲಿ ಅನ್ಯ ರಾಜ್ಯದ ನಗರಗಳಿಗೆ ಭೇಟಿ ನೀಡಿದ್ದರು. ಹೀಗೆ ಪ್ರೇಕ್ಷಕ ಮಹಾಪ್ರಭುಗೆ ಧನ್ಯವಾದ ಅರ್ಪಿಸಿದ ನಂತರ ರಿಷಬ್ ಶೆಟ್ಟಿ ಟೆಂಪಲ್ ರನ್ ಮಾಡಲಿದ್ದಾರೆ. ಈ ವಿಷಯವನ್ನು ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಅವರು ಧರ್ಮಸ್ಥಳದಲ್ಲಿ ಮಾತನಾಡಿ ತಿಳಿಸಿದರು. ರಿಷಬ್ ಶೆಟ್ಟಿ ಇನ್ನೂ ಸಹ ಹಲವಾರು ದೇವಾಲಯಗಳಿಗೆ ಭೇಟಿ ನೀಡುವುದು ಬಾಕಿಯಿದೆ, ಅದೇ ಸುಮಾರು ಒಂದು ತಿಂಗಳ ಕೆಲಸವಾಗಿದೆ ಹಾಗೂ ನಂತರ ರಿಷಬ್ ವಿಶ್ರಾಂತಿ ಪಡೆಯಬೇಕಿದೆ ಎಂದು ತಿಳಿಸಿದರು.


Click it and Unblock the Notifications











