ಯೋಗರಾಜ್ ಭಟ್- ದುನಿಯಾ ಸೂರಿ ನಡುವೆ ಮತ್ತೆ ಫೈಟ್
ಯೋಗರಾಜ ಭಟ್ರು-ದುನಿಯಾ ಸೂರಿ. ಚಿತ್ರರಂಗದ ಎರಡು ದೊಡ್ಡ ನಿರ್ದೇಶಕರು. ಆದ್ರೆ ಭಟ್ರು ಮುಂಗಾರುಮಳೆಯಂತಹ ದಾಖಲೆಯ ಸಿನಿಮಾ ಕೊಟ್ರೂ ಅದೇ ಹೆಸರಿಗೆ ಅಂಟಿಕೊಳ್ಳಲಿಲ್ಲ. ತನ್ನದೇ ತಾಕತ್ತಿನಿಂದ, ವೈಯಕ್ತಿಕವಾಗಿ ಮುಂಗಾರುಮಳೆಯನ್ನೂ ಮೀರಿ ಬೆಳೆದು ನಿಂತ್ರು. ಭಟ್ರು ಅನ್ನಿಸಿಕೊಂಡ್ರು.
ಆದ್ರೆ ಸೂರಿ ಅನ್ನಬೇಕು ಅಂದಾಗ ಮತ್ತೆ ಮತ್ತೆ ದುನಿಯಾ ಹೆಸರೇ ನೆನಪಾಗುತ್ತೆ. ಇದೇ ಬೇಸರಕ್ಕೋ ಏನೋ ಭಟ್ರ ಕ್ಯಾಂಪು ಅಂತ ದುನಿಯಾ ಸೂರಿಯವ್ರನ್ನ ಸೇರಿಸಿದಾಗ ಕೋಪಗೊಂಡು ಕಪ್ಪಲ್ಲೂ ಕೆಂಪಾಗಿದ್ರು ಸೂರಿ. ಈಗ ಮತ್ತೆ ಯುದ್ಧದ ಸಮಯ. [ಸನ್ನಿಗೂ, ಪಾಂಡೆಗೂ ಯೋಗರಾಜ ಭಟ್ರರ ಸವಾಲು!]

ಹಾಗಂತ ಇದು ವೈಯಕ್ತಿಕ ಯುದ್ಧವಲ್ಲ. ಇಬ್ಬರ ಸಿನಿಮಾಗಳ ಯುದ್ಧ. ಬೇಕಿದ್ದರೆ ಪೈಪೋಟಿ ಅಂತಲೂ ಕರೆಯಬಹುದು. ನಾಳೆ ಅಂದರೆ ಸೆಪ್ಟೆಂಬರ್ 11ರ ಶುಕ್ರವಾರದಂದು ಯೋಗರಾಜ್ ಭಟ್ಟರ ವಿತರಣೆಯ ಗೀತಾ ಬ್ಯಾಂಗಲ್ ಸ್ಟೋರ್ಸ್ ರಾಜ್ಯಾದ್ಯಂತ ರಿಲೀಸಾಗ್ತಿದ್ರೆ, ಸೂರಿ ನಿರ್ದೇಶನದ ಕೆಂಡಸಂಪಿಗೆಯೂ ತೆರೆಗೆ ಬರ್ತಿದೆ.[ಕಡೆಗೂ 'ಕೆಂಡಸಂಪಿಗೆ'ಗೆ ಸಿಕ್ತು ಬಿಡುಗಡೆ ಭಾಗ್ಯ]
ಭಟ್ ವಿತರಣೆಯ ಗೀತಾ ಬ್ಯಾಂಗಲ್ ಸ್ಟೋರ್ಸ್ ಚಿತ್ರದಲ್ಲಿ ಪ್ರಮೋದ್, ಸುಶ್ಮಿತಾ, ನೀನಾಸಂ ಅಶ್ವಥ್, ಮಂಡ್ಯ ರಮೇಶ್ ತಾರಾಗಣವಿದೆ. ಸೂರಿ ನಿರ್ದೇಶನದ ಕೆಂಡಸಂಪಿಗೆಯಲ್ಲಿ ವಿಕ್ಕಿ (ಸಂತೋಷ್), ಮಾನ್ವಿತ, ರಾಜೇಶ್ ನಟರಂಗ, ಚಂದ್ರಿಕ ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದಾರೆ.
ಯೋಗರಾಜ್ ಭಟ್ರು ಕೆಂಡಸಂಪಿಗೆ ಪ್ರೋಮೋಷನ್ಗೂ ಸಹಾಯ ಮಾಡಿದ್ರು. ಈಗ ಗೀತಾ ಬ್ಯಾಂಗಲ್ ಸ್ಟೋರ್ಸ್ ಪ್ರೋಮೋಷನ್ಗೂ ಟೊಂಕ ಕಟ್ಟಿ ನಿಂತಿದ್ದಾರೆ. ಗೆಲ್ಲೋರ್ಯಾರು? ಸೋಲೋರ್ಯಾರು? ಸಂತಸದ ಸಂಗತಿಯೆಂದರೆ, ಎರಡೂ ಚಿತ್ರಗಳು ಸಾಕಷ್ಟು ಕುತೂಹಲ ಕೆರಳಿಸಿವೆ. ಇವೆರಡರಲ್ಲಿ ಯಾವುದು ಗೆಲ್ಲಲಿದೆ ಎಂಬುದನ್ನು ಪ್ರೇಕ್ಷಕರೇ ನಿರ್ಧರಿಸಲಿದ್ದಾರೆ. ಪ್ರೇಕ್ಷಕರು ಇಬ್ಬರನ್ನೂ ಗೆಲ್ಲಿಸಲಿ.


Click it and Unblock the Notifications











