ಯೋಗರಾಜ್ ಭಟ್, ಸೂರಿ, ಗುರುಪ್ರಸಾದ್ ಸಿನಿಮಾ

ಈ ಕುರಿತು ಒನ್ ಇಂಡಿಯಾ ಕನ್ನಡಕ್ಕೆ ಉತ್ತರಿಸಿರುವ ಯೋಗರಾಜ್ ಭಟ್, "ನಾವು ಮೂವರೂ ಸೇರಿ ಒಂದು ಪ್ರಾಜೆಕ್ಟ್ ಮಾಡಲಿರುವುದು ಹೌದು. ಆದರೆ, ಅದಿನ್ನೂ ಫೈನಲ್ ಆಗಿಲ್ಲ. ಇನ್ನೂ ಒಂದು ತಿಂಗಳ ನಂತರ ಈ ಚಿತ್ರದ ಬಗ್ಗೆ ಪಕ್ಕಾ ಮಾಹಿತಿಯನ್ನು ಬಹಿರಂಗಪಡಿಸಲಿದ್ದೇನೆ. ಮೂವರೂ ಸೇರಿ ಮಾಡಲಿರುವ ಈ ಚಿತ್ರವನ್ನು ನಮ್ಮಲ್ಲಿ ಯಾರಾದರೊಬ್ಬರು ನಿರ್ದೇಶಿಸಲಿದ್ದೇವೆ" ಎಂದಿದ್ದಾರೆ.
ಅಷ್ಟನ್ನು ಮಾತ್ರ ಹೇಳಿರುವ ಯೋಗರಾಜ್ ಭಟ್ ಅವರು ಮುಂದಿನ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಕಾರಣವಿಷ್ಟೇ, ಅದಿನ್ನೂ ಯೋಜನೆಯ ಹಂತದಲ್ಲಿದೆ. ಸೂರಿ ಹಾಗೂ ಯೋಗರಾಜ್ ಭಟ್ ತಾವಿಬ್ಬರು ಮಾಡುವ ಎಲ್ಲಾ ಸಿನಿಮಾಗಳಲ್ಲೂ ಜೊತೆಯಾಗಿಯೇ ಕೆಲಸ ಮಾಡುತ್ತಾರೆಂಬುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಅವರಿಗೆ ಗುರುಪ್ರಸಾದ್ ಜೊತೆಯಾಗಿದ್ದಾರೆ.
ಸದ್ಯಕ್ಕೆ ಯೋಗರಾಜ್ ಭಟ್, ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿಯ 'ಡ್ರಾಮಾ' ಚಿತ್ರದ ಅಂತಿಮ ಹಂತದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ಅಂಬರೀಶ್, ತಮಿಳಿನ ಖ್ಯಾತ ನಟ ಸಂಪತ್ ಕೂಡ ಅಭಿನಯಿಸುತ್ತಿರುವುದು ವಿಶೇಷ. ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಮುಗಿಯಲಿದೆ.
ಇನ್ನು ನಿರ್ದೇಶಕ ದುನಿಯಾ ಸೂರಿ, ಸದ್ಯದಲ್ಲೇ ಶಿವರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಜೋಡಿಯ 'ಕಡ್ಡಿಪುಡಿ' ಚಿತ್ರವನ್ನು ಪ್ರಾರಂಭಿಸಲಿದ್ದಾರೆ. ಗುರುಪ್ರಸಾದ್ ತಮ್ಮ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಮೂವರೂ ವೇಳೆ ಮಾಡಿಕೊಂಡು ಈ ಹೊಸ ಚಿತ್ರವನ್ನು ಪ್ರಾರಂಭಿಸಲಿರುವ ಸಾಧ್ಯತೆ ದಟ್ಟವಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











