ಸಂಭಾವನೆ ಕಿರಿಕ್: ಕೋರ್ಟ್ ಮೆಟ್ಟಿಲೇರಿದ ನಿರ್ದೇಶಕ ಯೋಗರಾಜ್ ಭಟ್
'ದನ ಕಾಯೋನು' ಚಿತ್ರ ಬಿಡುಗಡೆ ಆಗಿ ಒಂದು ವರ್ಷ ಕಳೆದರೂ, ಸಿನಿಮಾದ ಸುತ್ತ ಹುಟ್ಟಿಕೊಂಡಿದ್ದ ವಿವಾದಗಳು ಇನ್ನೂ ಬಗೆಹರಿದಿಲ್ಲ.
ನಿರ್ದೇಶಕ ಯೋಗರಾಜ್ ಭಟ್, ಕ್ಯಾಮರಾಮ್ಯಾನ್ ಜ್ಞಾನಮೂರ್ತಿ, ನಟ ದುನಿಯಾ ವಿಜಯ್ ರವರನ್ನ ನಿರ್ಮಾಪಕ ಕನಕಪುರ ಶ್ರೀನಿವಾಸ್ ನಿಂದಿಸಿದ ಕಾರಣಕ್ಕೆ ಚಿತ್ರ ಬಿಡುಗಡೆ ಮಾಡುವ ಸಮಯದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಆಕ್ರೋಶಗೊಂಡಿದ್ದರು.
ಇದೀಗ ಮತ್ತೊಮ್ಮೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಮೇಲೆ ನಿರ್ಮಾಪಕ ಯೋಗರಾಜ್ ಭಟ್ ಮುನಿಸಿಕೊಂಡು ಕೋರ್ಟ್ ಮೆಟ್ಟಿಲೇರಿದ್ದಾರೆ. ಅದು ಸಂಭಾವನೆ ವಿಚಾರಕ್ಕೆ...

ಸಂಭಾವನೆ ಕಿರಿಕ್
'ದನ ಕಾಯೋನು' ಚಿತ್ರಕ್ಕಾಗಿ ತಮಗೆ ಬರಬೇಕಿದ್ದ ಸಂಭಾವನೆಯನ್ನ ನಿರ್ಮಾಪಕ ಕನಕಪುರ ಶ್ರೀನಿವಾಸ್ ಇನ್ನೂ ನೀಡದ ಕಾರಣ ನಿರ್ದೇಶಕ ಯೋಗರಾಜ್ ಭಟ್ ಕೋರ್ಟ್ ಮೆಟ್ಟಿಲೇರಿದ್ದಾರೆ.

ಚೆಕ್ ಬೌನ್ಸ್ ಆಗಿದೆ
ನಿರ್ದೇಶಕ ಯೋಗರಾಜ್ ಭಟ್ ರವರಿಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ನೀಡಿದ್ದ ಎರಡು ಚೆಕ್ ಗಳು ಬೌನ್ಸ್ ಆಗಿರುವ ಕಾರಣ ಕಾನೂನು ಮೊರೆ ಹೋಗಿದ್ದಾರೆ ನಿರ್ದೇಶಕ ಯೋಗರಾಜ್ ಭಟ್.

ವಾಣಿಜ್ಯ ಮಂಡಳಿಗೆ ದೂರು
ಸಂಭಾವನೆ ವಿಚಾರದಲ್ಲಿ ಅದಾಗಲೇ ಎರಡು ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿರ್ದೇಶಕ ಯೋಗರಾಜ್ ಭಟ್ ದೂರು ನೀಡಿದ್ದರು. ವಾಣಿಜ್ಯ ಮಂಡಳಿ ನೀಡಿದ್ದ ಸೂಚನೆ ಮೇರೆಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಎರಡು ಬಾರಿ ಚೆಕ್ ನೀಡಿದ್ದರು. ಇದೀಗ ಆ ಎರಡೂ ಚೆಕ್ ಬೌನ್ಸ್ ಆಗಿರುವುದರಿಂದ ಕೇಸ್ ಹಾಕಿದ್ದಾರೆ ಭಟ್ರು.

ಕನಕಪುರ ಶ್ರೀನಿವಾಸ್ ಚಿತ್ರಗಳಿಗೆ ತಡೆಯಾಜ್ಞೆ ನೀಡುವ ಸಾಧ್ಯತೆ
ಸಂಭಾವನೆ ವಿಚಾರ ಇದೀಗ ಕೋರ್ಟ್ ಗೆ ಹೋಗಿರುವ ಕಾರಣ, ಕನಕಪುರ ಶ್ರೀನಿವಾಸ್ ನಿರ್ಮಾಣದ ಚಿತ್ರಗಳ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ ನೀಡುವ ಸಾಧ್ಯತೆ ಇದೆ.

ಶುಕ್ರವಾರ 'ಭರ್ಜರಿ' ಬಿಡುಗಡೆಗೆ ತಡೆಯಾಜ್ಞೆ.?
ಕನಕಪುರ ಶ್ರೀನಿವಾಸ್ ನಿರ್ಮಾಣದ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ಸೆಪ್ಟೆಂಬರ್ 15 ರಂದು ಬಿಡುಗಡೆ ಆಗಲಿದೆ. ಒಂದು ವೇಳೆ ಸಂಭಾವನೆ ವಿಚಾರ ಇತ್ಯರ್ಥ ಆಗದೇ ಇದ್ದರೆ, 'ಭರ್ಜರಿ' ಸಿನಿಮಾ ಈ ಶುಕ್ರವಾರ ಬಿಡುಗಡೆ ಆಗುವುದು ಅನುಮಾನ.

ನಿರ್ದೇಶಕ ಯೋಗರಾಜ್ ಭಟ್ ಹೇಳುವುದಿಷ್ಟು...
''ಯಾವುದೇ ಚಿತ್ರಕ್ಕೆ ತಡೆಯಾಜ್ಞೆ ಬರುವುದು ಒಬ್ಬ ಕನ್ನಡ ತಂತ್ರಜ್ಞ ಆಗಿ ನನಗೂ ಬೇಜಾರು ಹಾಗೂ ದುಃಖದ ವಿಷಯ. ಆದರೆ ನಾನೂ ಕೂಡ ಅಸಹಾಯಕನಾಗಿದ್ದೇನೆ. ಈಗ ಬಿಟ್ಟರೆ ನನ್ನ ದುಡಿಮೆ ಪೂರ್ತಿ ಹೊರಟು ಹೋಗುತ್ತೆ. ನಾನು ಯಾವತ್ತೂ ಕೋರ್ಟು-ಕಛೇರಿ ಅಲೆದವನಲ್ಲ. ಬಲವಾದ ವಸೂಲಿ ಇರಲಿ ಅಂತ ವಸೂಲಿ ಕಾರ್ಯಾಚರಣೆಗೆ ಇಳಿದಿದ್ದೇನೆ. ನನಗೆ ಯಾರ ಮೇಲೆಯೂ ವೈಯುಕ್ತಿಕ ದ್ವೇಷ, ಭಿನ್ನಾಭಿಪ್ರಾಯ ಇಲ್ಲ'' ಎನ್ನುತ್ತಾರೆ ನಿರ್ದೇಶಕ ಯೋಗರಾಜ್ ಭಟ್.


Click it and Unblock the Notifications