ಯೋಗರಾಜ್ ಭಟ್ರ 'ಅನುರಾಗಿ' ಸೆಟ್ಟೇರೋದು ಯಾವಾಗ?
ಖ್ಯಾತ ನಿರ್ದೇಶಕ, ಸಾಹಿತ್ಯ ಬರಹಗಾರ ಯೋಗರಾಜ್ ಭಟ್ ಅವರ 'ದನ ಕಾಯೋನು' ಸಿನಿಮಾ ಯಾವಾಗ ತೆರೆ ಮೇಲೆ ದರ್ಶನ ಕೊಡುತ್ತೋ ಗೊತ್ತಿಲ್ಲ. ಜೊತೆಗೆ ಭಟ್ರು ಕೂಡ ಇವಾಗ ಏನು ಮಾಡುತ್ತಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ.
ಸುಮಾರು 3-4 ತಿಂಗಳುಗಳ ಹಿಂದೆ ಭಟ್ರು ಲವ್ವಲ್ಲಿ ಬಿದ್ದಿದ್ದಾರೆ, 'ಮುಂಗಾರು ಮಳೆ' ಚಿತ್ರದ ನಂತರ ಹೊಸತೊಂದು ಲವ್ ಸ್ಟೋರಿ ಆಧಾರಿತ ಸಿನಿಮಾ ಮಾಡುತ್ತಿದ್ದಾರೆ ಎಂಬುದಾಗಿ ಸುದ್ದಿಯಾಗಿತ್ತು. ತದನಂತರ ಅವರಿಂದ ಹೊಸ ಚಿತ್ರದ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.[ವಿವಾದದಲ್ಲಿ ಸಿಲುಕಿದ ಯೋಗರಾಜ್ ಭಟ್ಟರ 'ದನ ಕಾಯೋನು']

ಇದೀಗ ಭಟ್ರು ಮತ್ತೆ ಸುದ್ದಿಗೆ ಬಂದಿದ್ದು, ಅವರ ಹೊಸ ಲವ್ ಸ್ಟೋರಿ ಆಧಾರಿತ ಸಿನಿಮಾ 'ನನ್ನ ಹೆಸರೇ ಅನುರಾಗಿ' ಚಿತ್ರದ ಕೆಲಸ ಕಾರ್ಯಗಳತ್ತ ಗಮನ ಹರಿಸಿದ್ದಾರೆ.
ಫೆಬ್ರವರಿ ತಿಂಗಳಿನಲ್ಲಿಯೇ ಈ ಚಿತ್ರದ ಕೆಲಸಗಳು ಆರಂಭವಾಗಬೇಕಿತ್ತು, ಆದರೆ ಭಟ್ರು ಯಾಕೋ ಮನಸ್ಸು ಮಾಡಿರಲಿಲ್ಲ. ಇದೀಗ ಕೊನೆಗೂ ಮನಸ್ಸು ಮಾಡಿರುವ ಯೋಗರಾಜ್ ಭಟ್ರು ಜೂನ್ 5ನೇ ತಾರೀಖಿಗೆ 'ನನ್ನ ಹೆಸರೇ ಅನುರಾಗಿ' ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿಸಲು ಎಲ್ಲಾ ತಯಾರಿ ಮಾಡುತ್ತಿದ್ದಾರೆ.['ನನ್ನ ಹೆಸರೇ ಅನುರಾಗಿ' ಅನ್ನುತ್ತಿದ್ದಾರೆ ಯೋಗರಾಜ್ ಭಟ್ರು]

ತಾವೇ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಮೂಲಕ ಭಟ್ರು ಆಕಾಶ್ ನಾಗ್ಪಾಲ್ ಎಂಬ ಹೊಸ ಪ್ರತಿಭೆಯನ್ನು ಸ್ಯಾಂಡಲ್ ವುಡ್ ಗೆ ಪರಿಚಯ ಮಾಡಿಸುತ್ತಿದ್ದು, ನಟನ ತಂದೆ ಸುರೇಶ್ ನಾಗ್ಪಾಲ್ ಅವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ನಟಿ ವೈಶಾಲಿ ದೀಪಕ್, ನಟಿ ಪ್ರಜ್ಞಾ ಮತ್ತು ನಟಿ ನಿಖಿತಾ ನಾರಾಯಣ್ ಎಂಬ ಮೂವರು ನಟಿಯರು ಪ್ರಮುಖವಾಗಿ ಮಿಂಚುತ್ತಿದ್ದು, ನವ ನಟ ಆಕಾಶ್ ನಾಗ್ಪಾಲ್ ಅವರ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

ಆಕಾಶ್ ನಾಗ್ಪಾಲ್ ಅವರು ಅಮೆರಿಕದಲ್ಲಿ ನಟನಾ ತರಬೇತಿ ಪಡೆದಿದ್ದು, ಭಟ್ರ ಸಿನಿಮಾದ ಮೂಲಕ ಮೊಟ್ಟ ಮೊದಲ ಬಾರಿಗೆ ಬೆಳ್ಳಿತೆರೆಗೆ ಪದರ್ಪಾಣೆ ಮಾಡಲು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











