ಕೊರೊನಾ ವೈರಸ್: ಯೋಗರಾಜ್ ಭಟ್ಟರು ಹೇಳಿದ್ದು ಸತ್ಯ ಇರಬಹುದಾ!?
ನಿರ್ದೇಶಕ ಯೋಗರಾಜ್ ಭಟ್ಟರ ಕಲ್ಪನೆಗೆ ಮಿತಿಯೇ ಇಲ್ಲ. ಚಂದ್ರನಿಗೆ ಚಡ್ಡಿ ತೊಡಿಸಿದ ತುಂಟ ಅವರು. ಕರಡಿಗೆ ಜಾಮೂನು ಕೊಟ್ಟವರೂ ಅವರೇ. ಇಂತಿಪ್ಪ ಯೋಗರಾಜ್ ಭಟ್ಟರು ಕೊರೊನಾ ವೈರಸ್ ಬಗ್ಗೆ ಹೊಸದೇ ಒಂದು ಕಲ್ಪನೆಯನ್ನು ಜನರ ಮುಂದೆ ಇಟ್ಟಿದ್ದಾರೆ.
Recommended Video
ಕೊರೊನಾ ಬಗ್ಗೆ ಭೀತಿ ಹೆಚ್ಚಾಗಿದೆ. ಕೊರೊನಾ ಬಾರದಂತೆ ಎಚ್ಚರವಾಗಿರುವಂತೆ ಹಲವು ಮಾಹಿತಿ ಪೂರ್ಣ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸರ್ಕಾರವು ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಈ ಮಧ್ಯೆ ಕೊರೊನಾ ಬಗ್ಗೆ ತಮ್ಮದೇ ಆದ ಕಲ್ಪನೆಯನ್ನು ಯೋಗರಾಜ್ ಭಟ್ಟರು ಹರಿಬಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದಿರುವ ಯೋಗರಾಜ್ ಭಟ್ಟರು, 'ಅಕಸ್ಮಾತ್, ನರಮನುಷ್ಯರೆಲ್ಲಾ ಭೂಲೋಕಕ್ಕೆ ವೈರಸ್ಗಳಾಗಿದ್ದು, ಈ ಕೊರೊನಾ ಮನುಷ್ಯರನ್ನು ತೆಗೆಯಲು ಪ್ರಕೃತಿ ಸಿಡಿಸಿರುವ ಔಷಧ ಆಗಿದ್ದರೆ ಏನು ಮಾಡುವುದು? ಎಂಬ ಅನುಮಾನದ ಹುಳವೊಂದನ್ನು ಬಿಟ್ಟಿದ್ದಾರೆ.

ನಾನು ಹೇಳಿದ್ದಲ್ಲವೆಂದು ಜಾರಿಕೊಂಡ ಭಟ್ಟರು
ಇಷ್ಟೆಲ್ಲಾ ಹೇಳಿದ್ದಲ್ಲದೆ, ಇದನ್ನು ಯಾರೋ ಹೇಳಿದ್ದು ನಾನಲ್ಲ ಎಂದು ಜಾಣತನದಿಂದ ಜಾರಿಕೊಂಡಿದ್ದಾರೆ ಬೇರೆ. ಆದರೆ ಅವರ ಅಭಿಮಾನಿಗಳಿಗೆ ಗೊತ್ತು, ಇಂತಹಾ ಭಿನ್ನ ಯೋಚನೆಗಳು ಬರುವುದು ಅವರಿಗೇ ಎಂದು.

ಭಟ್ಟರ ಮಾತಿನಲ್ಲಿ ಅಡಕವಾಗಿದೆ ಒಳಾರ್ಥ
ಮೇಲ್ನೋಟಕ್ಕೆ ಭಟ್ಟರ ಮಾತು ಉಢಾಫೆಯ, ತಮಾಷೆಯ ಮಾತಿನಂತೆ ಕಂಡರೂ ಒಳಾರ್ಥ ಬೇರೆಯೇ ಇದೆ. ಮನುಷ್ಯರು ಪ್ರಕೃತಿಯ ಮೇಲೆ ಎಸಗುತ್ತಿರುವ ದೌರ್ಜನ್ಯ ಅಂತ್ಯವಾಗುವುದು ಮಾನವನ ಅಂತ್ಯದೊಂದಿಗೆ, ಅದೂ ಪ್ರಕೃತಿಯೇ ಮಾನವನ ಬಲಿ ಬಡೆಯುತ್ತದೆ ಎಂಬ ಗೂಡಾರ್ಥ ಭಟ್ಟರ ಮಾತಿನಲ್ಲಿದೆ.

ಭಟ್ಟರ ಪೋಸ್ಟ್ಗೆ ಹಲವು ಪ್ರತಿಕ್ರಿಯೆ
ಭಟ್ಟರ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಕೆಲವರು, 'ಕರೋನಾ ವೈರಸ್ ಗಿಂತ ಒಂದು ದೊಡ್ಡ ವೈರಸ್ಸನ್ನು ನೀವು ನಮ್ಮ ತಲೆಗೆ ಈವಾಗ ಹಾಕಿದ್ರಿ'' ಎಂದರೆ, ಇನ್ನು ಕೆಲವರು ಭಟ್ಟರ ಕಲ್ಪನಾ ಶಕ್ತಿಯ ಹೊಗಳಿದ್ದಾರೆ.

ಕೊರೊನಾ ಬಗ್ಗೆ ಹರಿದಾಡುತ್ತಿವೆ ಮೀಮ್-ಜೋಕ್
ಕೊರೊನಾ ಭೀತಿ ಆವರಿಸಿರುವ ಮಧ್ಯದಲ್ಲಿಯೇ ಕೊರೊನಾ ಬಗ್ಗೆ ಹಲವು ಮೀಮ್ಗಳು ಜೋಕ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಆತಂಕದ ಪರಿಸ್ಥಿತಿಯಲ್ಲಿಯೂ ನಕ್ಕು ಹಗುರಾಗಲು ಮೀಮ್, ಜೋಕ್ಗಳು ಸಹಾಯ ಮಾಡುತ್ತಿವೆ.


Click it and Unblock the Notifications











