ಎಲ್ಲಾ ತುಂಡ್ ಹೈಕ್ಳ ಸಾವಾಸ ಸೆಪ್ಟೆಂಬರ್ ನಲ್ಲೇ ಡ್ರಾಮಾ
ಎಲ್ಲಾ ತುಂಡ್ ಹೈಕ್ಳ ಸಾವಾಸ ಎಂಬುದು ಯೋಗರಾಜ್ ಭಟ್ ಅವರ ಹೊಸ ನಾಣ್ನುಡಿ. ಈ ಬಾರಿ ಅವರು ತುಂಬಾ ಜಾಣ್ಮೆಯಿಂದ ತೆರೆಗೆ ತರುತ್ತಿರುವ ಚಿತ್ರ 'ಡ್ರಾಮಾ'. ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರತಿಭಾನ್ವಿತ ತಾರೆ ರಾಧಿಕಾ ಪಂಡಿತ್ ಅಭಿನಯಿಸಿರುವ ಡ್ರಾಮಾ ಚಿತ್ರವನ್ನು ಸೆಪ್ಟೆಂಬರ್ ನಲ್ಲೇ ತೆರೆಗೆ ತರಲು ಭರದ ಸಿದ್ಧತೆಗಳು ನಡೆಯುತ್ತಿವೆ.
ಪ್ರಸ್ತುತ ಚಿತ್ರಕ್ಕೆ ಒಂದೇ ಒಂದು ಹಾಡು ಮಾತ್ರ ಬಾಕಿ ಉಳಿದಿದೆ. ಈ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ. ಅದೂ ಜನನಿಬಿಡ ಸ್ಥಳಗಳನ್ನು ಈ ಹಾಡಿಗೆ ಆಯ್ಕೆ ಮಾಡಿರುವ ಕಾರಣ ಚಿತ್ರೀಕರಣ ರಾತ್ರಿ ಸಮಯದಲ್ಲಿ ನಡೆಯುತ್ತಿದೆ. ಗಾಂಧಿನಗರದ ಹಾಂಕಾಂಗ್ ಬಜಾರ್ ಸೇರಿದಂತೆ ಶಿವಾಜಿನಗರ ಪ್ರದೇಶಗಳಲ್ಲಿ ನಡೆಯುತ್ತಿದೆ.
ವಿ ಹರಿಕೃಷ್ಣ ಸಂಗೀತ ನಿರ್ದೇಶನದ 'ಡ್ರಾಮಾ' ಚಿತ್ರವನ್ನು ಯೋಗರಾಜ್ ಮೂವೀಸ್, ಜಯಣ್ಣ ಕಂಬೈನ್ಸ್ ಬ್ಯಾನರಿನಡಿ ಜಯಣ್ಣ, ಭೋಗೇಂದ್ರ ನಿರ್ಮಿಸಿದ್ದಾರೆ. 'ಡ್ರಾಮಾ' ಚಿತ್ರದ ಒಂದು ಹಾಡನ್ನು ಸೋನು ನಿಗಮ್ ಹಾಡಿದ್ದಾರೆ. ಈ ಹಾಡು ಚಿತ್ರದಲ್ಲಿ ಹೈಲೈಟ್ ಆಗಿ ಉಳಿಯಲಿದೆ ಎನ್ನುತ್ತದೆ ಚಿತ್ರತಂಡ.
ಚಿತ್ರದ ಪಾತ್ರವರ್ಗದಲ್ಲಿ ಸಂಪತ್, ಸತೀಶ್ ನೀನಾಸಂ ಹಾಗೂ ಸಿಂಧು ಲೋಕನಾಥ್ ಇದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಅಭಿನಯಿಸಿದ್ದಾರೆ. ಶೀಘ್ರದಲ್ಲೇ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ.
ಡ್ರಾಮಾ ಚಿತ್ರದಲ್ಲಿ ಒಂದಷ್ಟು ಸೆಂಟಿಮೆಂಟಿ ಇನ್ನೊಂದಿಷ್ಟು ಪೆಪ್ಪರ್ ಮೆಂಟು ಇದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಹೆಣ್ ಮಕ್ಳು ಕಣ್ಣೀರ್ ಹರಿಸಿರೋದನ್ನ ತುಂಬ್ಸಿ ಇಟ್ಟುಕೊಂಡಿದ್ರೆ ಒಂದ್ ಒಳ್ಲೆ ಪಸಲು ತೆಗೀಬೋದಿತ್ತಪ್ಪ...ಎಂದು ಈಗಾಗಲೆ ಜಾಹೀರಾತು ಕೂಡ ನೀಡಲಾಗಿದೆ. (ಒನ್ ಇಂಡಿಯಾ ಕನ್ನಡ ಸಿನಿ ಡೆಸ್ಕ್)


Click it and Unblock the Notifications











