'ಮುಗುಳುನಗೆ' ಚಿತ್ರಕ್ಕಾಗಿ ಭಟ್ಟರು ಬರೆದರು 'ಮುಗುಳುಗೀತೆ'.!
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಮುಗುಳುನಗೆ' ಚಿತ್ರದ ಚಿತ್ರೀಕರಣ ಶುರುವಾಗಿದೆ. 'ಮುಂಗಾರು ಮಳೆ', 'ಗಾಳಿಪಟ' ಅಂತಹ ಹಿಟ್ ಸಿನಿಮಾ ನೀಡಿದ ಜೋಡಿ ವರ್ಷಗಳ ಬಳಿಕ ಒಂದಾಗಿದ್ದಾರೆ.
ಎಲ್ಲ ಅಂದುಕೊಂಡಂತೆ ಆಗಿದ್ದರೇ, ಗಣಿ ಹಾಗೂ ಭಟ್ ರ ಜುಗಲ್ ಬಂದಿಯಲ್ಲಿ ಇಷ್ಟೋತ್ತಿಗಾಗಲೇ ಸಿನಿಮಾವೊಂದು ಬರಬೇಕಿತ್ತು. ಆದ್ರೆ, ಅದು ಸಾಧ್ಯವಾಗಲಿಲ್ಲ. ಇದೀಗ, 'ಮುಗುಳುನಗೆ' ಚಿತ್ರದಲ್ಲಿ ಇವರಿಬ್ಬರು ಒಂದಾಗಿದ್ದು, ಅಭಿಮಾನಿಗಳ ಮುಖದಲ್ಲೂ 'ಮುಗುಳುನಗು' ಮೂಡಿಸಿದ್ದಾರೆ.[ಗೋಲ್ಡನ್ ಸ್ಟಾರ್ ಗಣೇಶ್, ಭಟ್ ಹ್ಯಾಟ್ರಿಕ್ ಕಾಂಬಿನೇಷನ್ ಚಿತ್ರ]

ಇತ್ತೀಚೆಗಷ್ಟೇ ಅದ್ದೂರಿಯಾಗಿ ಸೆಟ್ಟೇರಿದ 'ಮುಗುಳುನಗೆ' ಅಷ್ಟರಲ್ಲಾಗಲೇ ಸಖತ್ ಸುದ್ದಿ ಮಾಡುತ್ತಿದೆ. ಇದಕ್ಕೆ ಕಾರಣ ಭಟ್ಟರು ಬರೆದಿರುವ ಹೊಸ ಮುಗುಳು ಗೀತೆ. ಹೌದು, ಚಿತ್ರ ಶುರುವಾಗುತಿದ್ದಂತೆ, ನಿರ್ದೇಶಕ ಯೋಗರಾಜ್ ಭಟ್ ಚಿತ್ರದ ಬಗ್ಗೆ ಒಂದು ಕವಿತೆಯನ್ನ ಬರೆದಿದ್ದಾರೆ. ಈ ಕವಿತೆಯನ್ನ ಓದಿದ ಅಭಿಮಾನಿಗಳು ಇದು ಮತ್ತೊಂದು 'ಮುಂಗಾರುಮಳೆ' ಅಂತಿದ್ದಾರೆ.[ಗಣೇಶ್-ಭಟ್ಟರ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್ !]

ಮುಗುಳು ನಗೆಯೇ ನೀ ಏಕೆ ಹೀಗೆ? ನೀ ಏಕೆ ಹೀಗೆ?
ನಗುವ ಮೊದಲೇ ಬರುವೆ, ಅಳುವ ನಡುವೆ ಇರುವೆ
ನೂರು ಮಾತು ಅನುವೆ. ಮಾತೇ ಆಡದೇ ಹೊಳೆವೆ
ಹೇಳದೇನೇ ಬರುವೆ, ಬಾಳಿನುದ್ದಕೂ ಇರುವೆ..
ನಗಬೇಡ ದಯಾಮಾಡಿ ಹೇಳುವೆಯಾ ಒಮ್ಮೆ?
ಮುಗುಳು ನಗೆಯೇ ನೀ ಏಕೆ ಹೀಗೆ? ನೀ ಏಕೆ ಹೀಗೆ?...
ಮೊದಲ ನೆನಪಿಗೂ ನೀನೇ, ಕೊನೆಯ ನೆನಪಿಗೂ ನೀನೇ,
ಮಧುರ ಕನಸಿಗೂ ನೀನೇ, ಕೊನೆಯ ಕನಸಿಗೂ ನೇನೇ,
ನೀನು ಸದ್ದೇ ಇರದ ಸೋನೆಯಂತೆ,
ಬುದ್ಧಿಯಿರದ ಜ್ಞಾನಿಯಂತೆ...
ಹೂವು ಕಂಡರೂ ನಲಿವೆ, ನೂವು ಬಂದರೂ ನಗುವೆ,
ಯಾವುದಕ್ಕೂ ವ್ಯತ್ಯಾಸ ಗೊತ್ತಿಲ್ಲದಂತಿರುವೆ...
ಯಾವುದನೂ ಎಷ್ಟೆಲ್ಲಾ ಬಚ್ಚಿಕೊಂಡಿರುವೆ...
ನಗಬೇಡ ದಯಾಮಾಡಿ ಹೇಳುವೆಯಾ ಒಮ್ಮೆ?
ಮುಗುಳು ನಗೆಯೇ ನೀ ಏಕೆ ಹೀಗೆ? ನೀ ಏಕೆ ಹೀಗೆ?...
ಬಾಳು ಬೆಳಗುವುದು ಬಹಳ ಕೊರಗುವುದು
ಎರಡೂ ಒಂದೇ ಎಂದು ತಿಳಿಸಲು ಬಂದೆಯಾ?
ತೀವ್ರವೆನಿಸುವುದೇ ಜೀವ ಉಳಿಸುವುದು
ಉಳಿಯೋ ಕಂದಾ ಎಂದು ಉಸಿರಲಿ ನಿಂದೆಯಾ?
ನಿನಗೆ ನನ್ನ ತುಟಿಯಂಚೇ ಬೇಕೇ?
ನಿಜ ಹೇಳು ನೀ ಬರುವುಯಾದರೂ ಏಕೆ?
ನಗಬೇಡ ದಯಾಮಾಡಿ ಹೇಳುವೆಯಾ ಒಮ್ಮೆ?
ಮುಗುಳು ನಗೆಯೇ ನೀ ಏಕೆ ಹೀಗೆ? ನೀ ಏಕೆ ಹೀಗೆ?...
-ಯೋಗರಾಜ್ ಭಟ್
ಅಂದ್ಹಾಗೆ, 'ಮುಗುಳುನಗೆ' ಚಿತ್ರವನ್ನ ಗೋಲ್ಡನ್ ಮೂವೀಸ್ ಹಾಗೂ ಯೋಗರಾಜ್ ಮೂವೀಸ್ ಒಟ್ಟಾಗಿ ನಿರ್ಮಾಣ ಮಾಡುತ್ತಿದ್ದು, ಅಮೂಲ್ಯ, ನಿಖಿತಾ ನಾರಾಯಣ್, ಆಶಿತಾ ಚಿತ್ರದ ನಾಯಕಿರಾಗಿದ್ದಾರೆ. ಜಾಕಿ ಭಾವನ ಕೂಡ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಲಿದ್ದು, ಜಯಂತ್ ಕಾಯ್ಕಣಿ, ಹಾಗೂ ಭಟ್ಟರು ಸಾಹಿತ್ಯ ಬರೆಯುತ್ತಿದ್ದಾರೆ.[ಗಣೇಶ್ 'ಮುಗುಳುನಗೆ'ಗೆ ಟಿಕೆಟ್ ಪಡೆದ 4 ನಟಿಯರು ಇವರೆ! ]


Click it and Unblock the Notifications











