ಮೈಸೂರು ದಸರಾ 2022: 'ಅಪ್ಪು ನಮನ' ಕಾರ್ಯಕ್ರಮದ ನಿರೂಪಕಿ ಹಾಗೂ ಗಾಯಕರ ಪಟ್ಟಿ
ನಾಡಹಬ್ಬ 'ಮೈಸೂರು ದಸರಾ 2022' ಆರಂಭವಾಗಿದ್ದು ದಸರಾದ ಪ್ರಮುಖ ಆಕರ್ಷಣೆಯಾದ ಯುವ ದಸರಾ ಇಂದಿನಿಂದ ( ಸೆಪ್ಟೆಂಬರ್ 28 ) ಆರಂಭಗೊಳ್ಳುತ್ತಿದೆ. ಯುವ ದಸರಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಇಂದು ಸಂಜೆ 6ರಿಂದ 7 ಗಂಟೆಯವರೆಗೆ ನಡೆಯಲಿದ್ದು, ಕಳೆದ ವರ್ಷ ನಮ್ಮನೆಲ್ಲ ಅಗಲಿದ ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ಮೊದಲಿಗೆ 'ಅಪ್ಪು ನಮನ' ವಿಶೇಷ ಕಾರ್ಯಕ್ರಮ ಆಯೋಜನೆಗೊಂಡಿದೆ. ಯುವ ದಸರಾ ಕಾರ್ಯಕ್ರಮದ ಮೊದಲ ದಿನ ಅಪ್ಪು ನಮನ ಕಾರ್ಯಕ್ರಮ ಮಾತ್ರ ನಡೆಯಲಿದೆ.
ಉದ್ಘಾಟನೆ ಮತ್ತು ಅಪ್ಪು ನಮನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಜರಿರಲಿದ್ದಾರೆ. ಅಪ್ಪು ನಮನ ಕಾರ್ಯಕ್ರಮ 7 ಗಂಟೆಗೆ ಆರಂಭಗೊಳ್ಳಲಿದ್ದು, ಅಪ್ಪು ಅವರ ಅಭಿಮಾನಿ, ನಿರೂಪಕಿ ಅನುಶ್ರೀ ನಿರೂಪಣೆ ಮಾಡಲಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಮೂವರು ಪ್ರಮುಖ ಗಾಯಕರು ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಎವರ್ ಗ್ರೀನ್ 'ಬೊಂಬೆ ಹೇಳುತೈತೆ' ಹಾಡು ಹಾಡಿರುವ ವಿಜಯ್ ಪ್ರಕಾಶ್, ಪುನೀತ್ ಅಭಿನಯದ ಆರಂಭದ ಚಿತ್ರಗಳಿಗೆ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿರುವ ಗುರುಕಿರಣ್ ಹಾಗೂ ಖ್ಯಾತ ಗಾಯಕ ಕುನಾಲ್ ಗಾಂಜಾವಾಲಾ ವೇದಿಕೆಯೇರಿ ಹಾಡುಗಳನ್ನು ಹಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಅಪಾರವಾದ ಅಪ್ಪು ಅಭಿಮಾನಿಗಳು ಆಗಮಿಸಲಿದ್ದಾರೆ.

ಇಂದು ಆರಂಭವಾಗಲಿರುವ ಯುವಸಂಭ್ರಮ ಕಾರ್ಯಕ್ರಮ ಅಕ್ಟೋಬರ್ 3ರವರೆಗೂ ನಡೆಯಲಿದ್ದು, ನಾಳೆಯಿಂದ ವಿವಿಧ ತಂಡಗಳಿಂದ ನೃತ್ಯ ಕಾರ್ಯಕ್ರಮ ಜರುಗಲಿವೆ. ಕಾರ್ಯಕ್ರಮದ ಮೂರನೇ ದಿನ ( ಸೆಪ್ಟೆಂಬರ್ 30 ) ಸ್ಯಾಂಡಲ್ ವುಡ್ ನೈಟ್ಸ್ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಕನ್ನಡದ ಹಲವು ಸಿನಿ ಕಲಾವಿದರು ವೇದಿಕೆ ಮೇಲೆ ಹೆಜ್ಜೆ ಹಾಕುವ ನಿರೀಕ್ಷೆಯಿದೆ.


Click it and Unblock the Notifications











