ಪರಮ ವಿರೋಧಿಗಳು ಒಟ್ಟಿಗೆ ಸಿನಿಮಾ! ನಿರ್ಮಾಪಕ ಯಾರು?
ತೆಲುಗು ಚಿತ್ರರಂಗ ಒಂದು ರೀತಿ ಫ್ಯಾಮಿಲಿ ಬ್ಯುಸಿನೆಸ್ ರೀತಿಯದ್ದು. ಇಡೀ ಚಿತ್ರರಂಗದ ಮೇಲೆ ಕೆಲವು ಫ್ಯಾಮಿಲಿಗಳು ಬಹಳ ದೊಡ್ಡ ಹಿಡಿತ ಹೊಂದಿವೆ. ಮೆಗಾಸ್ಟಾರ್ ಕುಟುಂಬ, ನಂದಮೂರಿ ಕುಟುಂಬ, ಅಕ್ಕಿನೇನು ಕುಟುಂಬ, ದಗ್ಗುಬಾಟಿ ಕುಟುಂಬ ಇದರಲ್ಲಿ ಪ್ರಮುಖವಾದುದು.
ಆದರೆ ಈ ಕುಟುಂಬಗಳಲ್ಲಿ ನಂದಮೂರಿ ಹಾಗೂ ಮೆಗಾಸ್ಟಾರ್ ಕುಟುಂಬದ ನಡುವೆ ಬಾಕ್ಸ್ ಆಫೀಸ್ನಲ್ಲಿ ಸದಾ ಕಾದಾಟ ಇದ್ದದ್ದೆ. ಚಿರಂಜೀವಿ ನಟನಾಗಿ ಪ್ರವರ್ಧಮಾನಕ್ಕೆ ಬಂದಾಗಿನಿಂದಲೂ ನಂದಮೂರಿ ಕುಟುಂಬ ಹಾಗೂ ಮೆಗಾಸ್ಟಾರ್ ಕುಟುಂಬದ ನಡುವೆ ತಿಕ್ಕಾಟ ನಡೆಯುತ್ತಲೇ ಬಂದಿದೆ.
ಎರಡೂ ಕುಟುಂಬದ ಅಭಿಮಾನಿಗಳು ಸಹ ಆಗಾಗ್ಗೆ ಪರಸ್ಪರರ ನಡುವೆ ಕಿತ್ತಾಡಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಆದರೆ ಆ ಕುಟುಂಬದ ಎರಡು ಹಿರಿತಲೆಗಳು ಅಂದರೆ ನಂದಮೂರಿ ಬಾಲಕೃಷ್ಣ ಹಾಗೂ ಮೆಗಾಸ್ಟಾರ್ ಚಿರಂಜೀವಿ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಇದಕ್ಕೆ ಕಾರಣವಾಗಿರುವುದು ಬಾಲಕೃಷ್ಣ ನಡೆಸಿಕೊಡುವ ಟಾಕ್ ಶೋ.

ಅನ್ಸ್ಟಾಪೆಬಲ್ ಬಾಲಯ್ಯ
ನಟ ಬಾಲಕೃಷ್ಣ, ಆಹಾ ತೆಲುಗು ಒಟಿಟಿಯಲ್ಲಿ 'ಅನ್ಸ್ಟಾಪೆಬಲ್' ಹೆಸರಿನ ಟಾಕ್ ಶೋ ನಡೆಸಿಕೊಡುತ್ತಾರೆ. ತೆಲುಗು ಚಿತ್ರರಂಗದ ದಿಗ್ಗಜರುಗಳನ್ನು ಶೋಗೆ ಆಹ್ವಾನಿಸುತ್ತಾರೆ. ಅದೇ ರೀತಿ ಈ ವಾರ ತೆಲುಗಿನ ದಿಗ್ಗಜ ಸಿನಿಮಾ ನಿರ್ಮಾಪಕರಾದ ಅಲ್ಲು ಅರವಿಂದ್ ಹಾಗೂ ಡಿ ಸುರೇಶ್ ಬಾಬು ಅವರನ್ನು ಅತಿಥಿಯಾಗಿ ಕರೆಸಿದ್ದರು. ಜೊತೆಗೆ ಜನಪ್ರಿಯ ಸಿನಿಮಾ ನಿರ್ದೇಶಕ ರಾಘವೇಂದ್ರ ರಾವ್ ಸಹ ಇದ್ದರು. ಈ ಸಮಯದಲ್ಲಿ ಬಾಲಕೃಷ್ಣ ಹಾಗೂ ಚಿರಂಜೀವಿ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಆಸಕ್ತಿಕರ ಮಾತುಕತೆ ಆಗಿದೆ.

ಕಾರ್ಯಕ್ರಮದ ಪ್ರೋಮೊ ಬಿಡುಗಡೆ
ಕಾರ್ಯಕ್ರಮದ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು, ಕಾರ್ಯಕ್ರಮದಲ್ಲಿ ನಿರ್ಮಾಪಕ ಅಲ್ಲು ಅರವಿಂದ್ (ಚಿರಂಜೀವಿಯ ಭಾವ, ಅಲ್ಲು ಅರ್ಜುನ್ರ ತಂದೆ ಸಹ) ಕುರಿತು, ನಾನು ಸುರೇಶ್ ಬಾಬು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇವೆ. ಇಬ್ಬರ ನಡುವೆ ಆಪ್ತವಾದ ಅನುಬಂಧ ಇದೆ. ಆದರೆ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಸಿನಿಮಾ ಬಂದಿಲ್ಲ ಎಂದಿದ್ದಾರೆ ನಟ ಬಾಲಕೃಷ್ಣ.

ಚಿರಂಜೀವಿ-ಬಾಲಕೃಷ್ಣ ಒಟ್ಟಿಗೆ ಸಿನಿಮಾ!
ಆಗ ನಿರ್ಮಾಪಕ ಅಲ್ಲು ಅರವಿಂದ್, ''ನಿಮ್ಮನ್ನು ಹಾಗೂ ಚಿರಂಜೀವಿಯನ್ನು ಒಟ್ಟಿಗೆ ಹಾಕಿಕೊಂಡು ಸಿನಿಮಾ ಮಾಡೋಣ ಎಂದುಕೊಂಡಿದ್ದೇನೆ'' ಎನ್ನುತ್ತಾರೆ. ಇದಕ್ಕೆ ಸಕಾರಾತ್ಮಕವಾಗಿಯೇ ಸ್ಪಂದಿಸಿದ ನಟ ಬಾಲಕೃಷ್ಣ, ''ಹಾಗಿದ್ದರೆ ಆ ಸಿನಿಮಾ ಪ್ಯಾನ್ ವರ್ಲ್ಡ್ ಆಗಿಬಿಡುತ್ತದೆ'' ಎಂದಿದ್ದಾರೆ. ಇವರಿಬ್ಬರ ಈ ಮಾತುಕತೆಯಿಂದಾಗಿ ಬಾಲಕೃಷ್ಣ ಹಾಗೂ ಚಿರಂಜೀವಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿದ್ದು, ನಿಜಕ್ಕೂ ಬಾಲಕೃಷ್ಣ ಹಾಗೂ ಚಿರಂಜೀವಿ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಾರಾ ಎಂಬ ನಿರೀಕ್ಷೆ ಮೂಡಿದೆ.

ಆಪಲ್ ಎಸೆಯುವುದು ಕಲಿಸಿದ ರಾಘವೇಂದ್ರ ರಾವ್!
ಇದೇ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಘವೇಂದ್ರ ರಾವ್ ಆಡಿರುವ ಮಾತುಗಳು ಆಸಕ್ತಿಕರವಾಗಿವೆ. ರಾಘವೇಂದ್ರ ರಾವ್ ತಮ್ಮ ಸಿನಿಮಾಗಳಲ್ಲಿ ನಾಯಕಿಯರನ್ನು ಹೆಚ್ಚು ಗ್ಲಾಮರೈಸ್ಡ್ ಆಗಿ ತೋರಿಸುವುದರಲ್ಲಿ ನಿಸ್ಸೀಮರು. ಕರ್ನಾಟಕದಲ್ಲಿ ರವಿಚಂದ್ರನ್ ಮಾದರಿಯಲ್ಲಿಯೇ ತೆಲುಗಿನಲ್ಲಿ ಹಾಡುಗಳಲ್ಲಿ ಗ್ಲಾಮರ್ ತಂದವರು. ನಾಯಕಿಯರ ನಡುವಿನ ಮೇಲೆ ಹೂವು, ಹಣ್ಣು ಎಸೆದವರು ರಾಘವೇಂದ್ರ ರಾವ್. ಈ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೆಂದ್ರ ರಾವ್, ''ನ್ಯೂಟನ್ ತಲೆಯ ಮೇಲೆ ಆಪಲ್ ಬಿದ್ದಿದ್ದಕ್ಕೆ ಗುರುತ್ವಾಕರ್ಷಣ ಶಕ್ತಿ ಇದೆಯೆಂದು ಕಂಡು ಹಿಡಿದ. ಆದರೆ ಆ ಆಪಲ್ ಎನ್ನು ಎಲ್ಲಿಗೆ ಸರಿಯಾಗಿ ಬೀಳಿಸಬೇಕು ಎಂದು ಕಂಡು ಹಿಡಿದಿದ್ದು ನಾನು'' ಎಂದು ತಮಾಷೆ ಮಾಡಿದ್ದಾರೆ ರಾಘವೇಂದ್ರ ರಾವ್.


Click it and Unblock the Notifications











