ಮೀನಾ ತುಟಿಗೆ ಬಾಲಯ್ಯ ತುಟಿ.. ಕಿಟಾರನೇ ಕಿರುಚಿದ ಚೆಲುವೆ: ಪಕ್ಕದಲ್ಲೇ ಇದ್ದ ರಜನಿಕಾಂತ್ ಶಾಕ್!
ಲಿಪ್ ಲಾಕ್ ಅನ್ನೋದು ಈಗ ಚಿತ್ರರಂಗದಲ್ಲಿ ಕಾಮನ್ ಆಗಿಬಿಟ್ಟಿದೆ. ಆದರೆ ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ನಾಯಕ ನಾಯಕಿ ಗಟ್ಟಿಯಾಗಿ ತಬ್ಬಿಕೊಂಡರೂ ಅದು ಹಾಟ್ ಸೀನ್ ಎನ್ನುವಂತಿತ್ತು. ತೆಲುಗು ನಟ ಬಾಲಕೃಷ್ಣ ಅಚಾನಕ್ ಆಗಿ ನಟಿ ಮೀನಾ ತುಟಿಗೆ ತುಟಿ ಒತ್ತಿಬಿಡುತ್ತಿದ್ದ ಸನ್ನಿವೇಶವನ್ನು ನೆನಪಿಸಿಕೊಂಡಿದ್ದಾರೆ.
ಸೂಪರ್ ಹಿಟ್ ಸಿನಿಮಾಗಳಿಂದ ಸದ್ದು ಮಾಡುತ್ತಿರುವ ತೆಲುಗು ನಟ ಬಾಲಕೃಷ್ಣ, ಓಟಿಟಿ ಫ್ಲಾಟ್ಫಾರ್ಮ್ನಲ್ಲೂ ಕಮಾಲ್ ಮಾಡ್ತಿದ್ದಾರೆ. ಅಹಾ ಡಿಜಿಟಲ್ ಫ್ಲಾಟ್ಫಾರ್ಮ್ಗಾಗಿ 'ಅನ್ಸ್ಟಾಪಬಲ್- 2' ಎನ್ನುವ ಚಾಟ್ ಶೋ ನಡೆಸಿ ಕೊಡುತ್ತಿದ್ದಾರೆ. ಕಳೆದ ವಾರ ಶೋಗೆ ಯುವನಟರಾದ ಶರ್ವಾನಂದ್ ಹಾಗೂ ಅಡಿವಿ ಶೇಷ್ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಬಾಲಯ್ಯ ಯುವನಟರನ್ನು ಕಿಸ್ಸಿಂಗ್ ಸೀನ್ಗಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅವರಿಬ್ಬರು ಇದೇ ಪ್ರಶ್ನೆಯನ್ನು ಬಾಲಯ್ಯಗೆ ಕೇಳಿದ್ದಾರೆ. ಆಗ ಬಾಲಯ್ಯ 'ಬೊಬ್ಬಿಲಿ ಸಿಂಹಂ' ಚಿತ್ರದ ಮುಹೂರ್ತದ ದಿನವನ್ನು ನೆನಪಿಸಿಕೊಂಡಿದ್ದಾರೆ.
ದಶಕಗಳ ಹಿಂದೆ ಸಿನಿಮಾಗಳಲ್ಲಿ ಲಿಪ್ಲಾಕ್ ಕಾನ್ಸೆಪ್ಟ್ ಇರಲಿಲ್ಲ. ನಾಯಕ ನಾಯಕಿ ಕೆನ್ನೆಗೆ ಮುತ್ತು ಕೊಡುವುದೇ ದೊಡ್ಡ ವಿಷಯ ಎನ್ನುವಂತಿತ್ತು. ಇವತ್ತು ಕಥೆಗೆ ಬೇಕೋ ಬೇಡವೋ ಇಂತಹ ಸನ್ನಿವೇಶಗಳು ಚಿತ್ರದಲ್ಲಿ ಇರುತ್ತದೆ. ಅದಕ್ಕೆ ನಾಯಕಿಯರು ಕೂಡ ಸೈ ಎನ್ನುತ್ತಿದ್ದಾರೆ.

ಬಾಲಯ್ಯ ಕೆನ್ನೆಗೆ ಮೀನಾ ಮುತ್ತು!
'ಅನ್ಸ್ಟಾಪಬಲ್- 2' ಶೋನಲ್ಲಿ ಅಂದು ನಡೆದ ಘಟನೆಯನ್ನು ನಟ ಬಾಲಕೃಷ್ಣ ನೆನಪಿಸಿಕೊಂಡಿದ್ದಾರೆ. "ಅಂದು 'ಬೊಬ್ಬಿಲಿ ಸಿಂಹಂ' ಚಿತ್ರದ ಮುಹೂರ್ತ. ರಜನಿಕಾಂತ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ವೇಮುರಿನಲ್ಲಿ ಚಿತ್ರೀಕರಣ ನಡೀತಿತ್ತು. ಮೊದಲ ದೃಶ್ಯಕ್ಕೆ ರಜನಿಕಾಂತ್ ಕ್ಲಾಪ್ ಮಾಡಿದ್ದರು. ರಜನಿ ಕ್ಲಾಪ್ ಮಾಡುತ್ತಿದ್ದಂತೆ ಬಾಲಕೃಷ್ಣ ಸೀರಿಯಸ್ ಆಗಿ ಡೈಲಾಗ್ ಹೇಳಬೇಕು. ನಡುವೆ ಔಟ್ ಫೀಲ್ಡ್ನಿಂದ ನಟಿ ಮೀನಾ ಓಡಿ ಬಂದು ಬಾಲಯ್ಯ ಕೆನ್ನೆಗೆ ಮುತ್ತು ಕೊಡುವಂತೆ ನಿರ್ದೇಶಕರು ಶಾಟ್ ಡಿಸೈನ್ ಮಾಡಿದ್ದರಂತೆ.

ಕಿಟಾರನೇ ಕಿರುಚಿದ ಮೀನಾ
ರಜನಿಕಾಂತ್ ಕ್ಲಾಪ್ ಮಾಡಿ ಪಕ್ಕ ಬರುತ್ತಿದ್ದಂತೆ ಬಾಲಕೃಷ್ಣ ಡೈಲಾಗ್ ಹೇಳಲು ಆರಂಭಿಸಿದರಂತೆ. ಆದರೆ ಮೀನಾ ಬರುವುದು ಕೊಂಚ ತಡವಾಗಿ ಬಾಲಯ್ಯ ಡೈಲಾಗ್ ಹೇಳುತ್ತಾ ಪಕ್ಕಕ್ಕೆ ತಿರುಗಿದ್ದಾರೆ. ಇದರಿಂದ ಮೀನಾ, ಬಾಲಯ್ಯ ಕೆನ್ನೆ ಬದಲು ತುಟಿಗೆ ತುಟಿ ಒತ್ತಲು ಹೋಗಿಬಿಟ್ಟಿದ್ದರಂತೆ. ಇಬ್ಬರ ತುಟಿ ಹತ್ತಿರ ಬರುತ್ತಿದ್ದಂತೆ ಮೀನಾ ಕಿಟಾರನೇ ಕಿರುಚಿಬಿಟ್ಟಿದ್ದರಂತೆ. ಅಲ್ಲೇ ಪಕ್ಕದಲ್ಲಿ ನಿಂತಿದ್ದ ರಜನಿಕಾಂತ್ ಇದನ್ನು ನೋಡಿ ಅವಕ್ಕಾಗಿದ್ದರಂತೆ. ಈ ಸನ್ನಿವೇಶವನ್ನು ನೆನೆದು ಬಾಲಯ್ಯ ಬಿದ್ದು ಬಿದ್ದು ನಕ್ಕಿದ್ದಾರೆ.

'ಬೊಬ್ಬಿಲಿ ಸಿಂಹಂ' ಸೂಪರ್ ಹಿಟ್
ಕೋದಂಡರಾಮಿ ರೆಡ್ಡಿ ನಿರ್ದೇಶನದ ಆಕ್ಷನ್ ಎಂಟರ್ಟೈನರ್ 'ಬೊಬ್ಬಿಲಿ ಸಿಂಹಂ' ಸೂಪರ್ ಹಿಟ್ ಆಗಿತ್ತು. 1994ರಲ್ಲಿ ತೆರೆಕಂಡಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಮೀನಾ ಜೊತೆಗೆ ಮತ್ತೊಬ್ಬ ನಾಯಕಿಯಾಗಿ ರೋಜಾ ಮಿಂಚಿದ್ದರು. ಎಸ್. ಎಸ್ ರಾಜಮೌಳಿ ತಂದೆ ವಿ. ವಿಜಯೇಂದ್ರ ಪ್ರಸಾದ್ ಈ ಚಿತ್ರಕ್ಕೆ ಕಥೆ ಬರೆದಿದ್ದರು. ಘಟಾನುಘಟಿ ಕಲಾವಿದರು ಚಿತ್ರದ ತಾರಾಗಣದಲ್ಲಿದ್ದರು.

ಸುಗ್ಗಿ ಹಬ್ಬಕ್ಕೆ ಬಾಲಯ್ಯ 107ನೇ ಚಿತ್ರ
ಸದ್ಯ ಗೋಪಿಚಂದ್ ಮಲಿನೇನಿ ನಿರ್ದೇಶನದ 'ವೀರಸಿಂಹ ರೆಡ್ಡಿ' ಚಿತ್ರದಲ್ಲಿ ಬಾಲಕೃಷ್ಣ ನಟಿಸುತ್ತಿದ್ದಾರೆ. ಚಿತ್ರದ ಮುಖ್ಯ ಪಾತ್ರದಲ್ಲಿ ಕನ್ನಡ ನಟ ದುನಿಯಾ ವಿಜಯ್ ನಟಿಸುತ್ತಿರುವುದು ವಿಶೇಷ. ಇದು ಬಾಲಯ್ಯ ನಟನೆಯ 107ನೇ ಸಿನಿಮಾ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ 'ವೀರಸಿಂಹ ರೆಡ್ಡಿ' ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೀತಿದೆ.


Click it and Unblock the Notifications











