ಒಟಿಟಿಯಲ್ಲಿ ದರ್ಶನ್ ಸಿನಿಮಾ ಬಿಡುಗಡೆ ಮಾಡುವುದಿಲ್ಲ: ಇಲ್ಲಿದೆ ಕಾರಣ
ಇಂದು ಫೇಸ್ಬುಕ್ನಲ್ಲಿ ಲೈವ್ ಬಂದಿದ್ದ ನಟ ದರ್ಶನ್ ಗೆ ಹಲವಾರು ರೀತಿಯ ಪ್ರಶ್ನೆಗಳು ಎದುರಾದವು. 8 ನಿಮಿಷಕ್ಕಿಂತ ಕೆಲವು ಸೆಕೆಂಡ್ಗಳು ಹೆಚ್ಚು ಹೊತ್ತಿನ ಈ ಲೈವ್ನಲ್ಲಿ ಹಲವು ಪ್ರಶ್ನೆಗಳಿಗೆ ದರ್ಶನ್ ಉತ್ತರಿಸಿದರು. ಪ್ರಸ್ತುತ ಜಾರಿಯಲ್ಲಿರುವ ಕೆಲ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಹ ಹಂಚಿಕೊಂಡರು.
ರಾಬರ್ಟ್ ಸಿನಿಮಾವನನ್ನು ಒಟಿಟಿಗೆ ಬಿಡುಗಡೆ ಮಾಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಯಾವುದೇ ಕಾರಣಕ್ಕೂ ನಾವು ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದಿಲ್ಲ. ಒಟಿಟಿಗಳು ನಮ್ಮ ಶ್ರಮವನ್ನು ಹಾಳು ಮಾಡುತ್ತವೆ. ನನಗೆ ವೈಯಕ್ತಿಕವಾಗಿ ಒಟಿಟಿಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಇಷ್ಟವಾಗುವುದಿಲ್ಲ ಎಂದರು.
ಒಟಿಟಿಗಳೆಂದರೆ ತಮಗೆ ಏಕೆ ಇಷ್ಟವಿಲ್ಲ, ಅದಕ್ಕೆ ಕಾರಣವೇನು, ಚಿತ್ರಮಂದಿರಗಳಲ್ಲಿಯೇ ಸಿನಿಮಾಗಳು ಬಿಡುಗಡೆ ಆಗಬೇಕು ಏಕೆ ಎಂಬ ಹಲವು ವಿಷಯಗಳ ಬಗ್ಗೆ ದರ್ಶನ್ ಲೈವ್ನಲ್ಲಿ ಮಾತನಾಡಿದರು.

'ಅಪಾಯದ ಆಕ್ಷನ್ ಸೀನ್ಗಳಲ್ಲಿ ನಟಿಸುವುದು ಜನರ ಚಪ್ಪಾಳೆಗಾಗಿ'
ನಿರ್ಮಾಪಕರು ಕೋಟ್ಯಂತರ ಹಣವನ್ನು ಸಿನಿಮಾ ಮೇಲೆ ಹೂಡಿರುತ್ತಾರೆ. ನಾವುಗಳು ಸಹ ನಮ್ಮ ಜೀವ ಒತ್ತೆಯಿಟ್ಟು ಸಿನಿಮಾ ಮಾಡಿರುತ್ತೇವೆ. ಅಪಾಯವಿದ್ದರೂ ಆಕ್ಷನ್ ಸೀನ್ಗಳಲ್ಲಿ ನಟಿಸುತ್ತೇವೆ, ಏಕೆಂದರೆ ಸಿನಿಮಾ ಮಂದಿರಗಳಲ್ಲಿ ಚಪ್ಪಾಳೆ ಬೀಳುತ್ತದೆಂಬ ಆಸೆಗೆ ಅಷ್ಟೋಂದು ಶ್ರಮ ಹಾಕಿರುತ್ತೇವೆ. ಕಷ್ಟದ ದೃಶ್ಯಗಳಲ್ಲಿ ನಟಿಸಬೇಕಾದರೆ ನಮಗೆ ಚಿತ್ರಮಂದಿರದಲ್ಲಿ ಜನ ತಟ್ಟುವ ಚಪ್ಪಾಳೆಯೇ ನೆನಪುಬರುತ್ತಿರುತ್ತದೆ, ಹಾಗಾಗಿ ನಟಿಸುತ್ತೇವೆ ಎಂದರು ದರ್ಶನ್.

'ಮೊಬೈಲ್ ಅಲ್ಲಿ ಸಿನಿಮಾ ನೋಡಿದರೆ ನಮ್ಮ ಶ್ರಮ ವ್ಯರ್ಥವಾದಂತೆ'
ಆದರೆ ಅದೇ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಿ, ಯಾರೊ ಒಬ್ಬ ವ್ಯಕ್ತಿ ಸಣ್ಣ ಮೊಬೈಲ್ ಸ್ಕ್ರೀನ್ನಲ್ಲಿ ಸಿನಿಮಾ ನೋಡಿದರೆ, ಸಿನಿಮಾಕ್ಕೆ ನಾವು ಹಾಕಿದ ಶ್ರಮ ವ್ಯರ್ಥವಾದಂತೆ ಆಗುತ್ತದೆ. ನಿಜವಾದ ಮನರಂಜನೆ ದೊರೆಯುವುದು ಚಿತ್ರಮಂದಿರದಲ್ಲಿ ಎಂದರು ದರ್ಶನ್.

'25% ಪ್ರೇಕ್ಷಕರಿದ್ದರೂ ನಮ್ಮ ಸಿನಿಮಾ ಚಿತ್ರಮಂದಿರದಲ್ಲೇ ಬಿಡುಗಡೆ'
ಈಗ 50% ಪ್ರೇಕ್ಷಕರಿಗೆ ಮಾತ್ರ ಅವಕಾಶ ಇದೆ. ಒಂದೊಮ್ಮೆ 25% ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ಕೊಟ್ಟರೂ ಸಹ ನಾವು ರಾಬರ್ಟ್ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದರು ನಟ ದರ್ಶನ್.

ರಾಬರ್ಟ್ ಸಿನಿಮಾಕ್ಕೆ ದೊಡ್ಡ ಆಫರ್ ಬಂದಿತ್ತು
ಈ ಹಿಂದೆ ರಾಬರ್ಟ್ ಸಿನಿಮಾಕ್ಕೆ ಒಟಿಟಿಯಿಂದ ಭಾರಿ ದೊಡ್ಡ ಆಫರ್ ಅನ್ನು ಕೆಲವು ಒಟಿಟಿಗಳು ನೀಡಿದ್ದವು. ಆದರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ಆಫರ್ ಅನ್ನು ನಿರಾಕರಿಸಿದರು. ದರ್ಶನ್ ಅವರು ತಮ್ಮ ಸಿನಿಮಾವನ್ನು ಒಟಿಟಿಗೆ ನೀಡಲು ಸುತಾರಾಂ ಒಪ್ಪಿರಲಿಲ್ಲ.


Click it and Unblock the Notifications











