ಜೈ ಭೀಮ್ -ನಾಗರೀಕ ಸಮಾಜದ ಅನಾಗರೀಕತೆಯ ಅನಾವರಣ
ನಟ ಸೂರ್ಯ ಅಭಿನಯದ ತಮಿಳಿನ ಬಹು ನಿರೀಕ್ಷಿತ "ಜೈ ಭೀಮ್'ಸಿನಿಮಾ ನವೆಂಬರ್ 2ರಂದು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿದೆ. ಜ್ಯೋತಿಕಾ ಮತ್ತು ಸೂರ್ಯ ಅವರ 2ಡಿ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ ಅಡಿಯಲ್ಲಿ ಚಿತ್ರ ತಯಾರಾಗಿದೆ. ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಜೈ ಭೀಮ್. ಈ ಚಿತ್ರ ಕನ್ನಡ, ತೆಲುಗು, ಮಲಯಾಳಂ, ಹಿಂದಿ ಭಾಷೆಗೂ ಡಬ್ ಆಗಿ ರಿಲೀಸ್ ಆಗಿದೆ.
ಜೈ ಭೀಮ್ ಸಿನಿಮಾ ಏನು ಎಂದು ಕೇಳಿದರೆ, ಸೋ ಕಾಲ್ಡ್ ಸಾಮಾಜಿಕ ಆಯಕಟ್ಟಿನಲ್ಲಿ ಬದುಕು ಕಟ್ಟಿಕೊಂಡವರ ಆತ್ಮಾವಲೋಕನಕ್ಕೆ ದಾರಿ ಎಂದು ಹೇಳ ಬಹುದು. ಜೈ ಭೀಮ್ ಸಂದೇಶ ಸಾರೋ ಸಿನಿಮಾ ಮಾತ್ರ ಅಲ್ಲ. ಅಧಿಕಾರದ ನೆಪದಲ್ಲಿ ಮುಖವಾಡ ಧರಿಸಿ ಬದುಕುತ್ತಿರುವ ಅಧಿಕಾರಿಗಳು ಮತ್ತು ವ್ಯವಸ್ಥೆಯನ್ನು ಬಡಿದೆಬ್ಬಿಸುವ ಕಥೆ. ಹೀಗೂ ಉಂಟೆ ಎಂದು ಅಚ್ಚರಿಗೊಳ್ಳುವ ನೈಜ ಘಟನೆ ಇದಾಗಿದೆ. ತಮಿಳಿನ ವಿಸಾರಣೈ ಸಿನಿಮಾದ ಮಾದರಿಯಲ್ಲಿಯೇ ಖಾಕಿ ಕೋಟೆಯ ಒಳಗಿನ ಕತ್ತಲೆ ಜಗತ್ತನ್ನು ಬೆತ್ತಲೆ ಮಾಡುವ ಕಥೆ ಇದು.
ಇಲಿ, ಹಾವು ಹಿಡಿದು ಬದುಕುವ ಇರುಳರು ಎಂಬ ಬುಡಕಟ್ಟು ಜನಾಂಗ ಪೋಲಿಸರ ಕಪಿ ಮುಷ್ಟಿಗೆ ಸಿಲುಕಿ ನರಳಿದನ್ನು ಈ ಚಿತ್ರದಲ್ಲಿ ನಿರ್ದೇಶಕ ಜ್ಞಾನವೇಲ್ ಪರಿಣಾಮಕಾರಿಯಾಗಿ ಕಟ್ಟಿ ಕೊಟ್ಟಿದ್ದಾರೆ. ಈ ಸಿನಿಮಾ ಕೂಡ ಪ್ರೇಕ್ಷರನ್ನು ಗಂಭೀರ ಚಿಂತನೆಗೆ ದೂಡುತ್ತದೆ. ನತದೃಷ್ಟರಿಗೆ ನ್ಯಾಯ ದೊರಕಿಸಿ ಕೊಡುವ ವಕೀಲನ ಪಾತ್ರದಲ್ಲಿ ಅಭಿನಯಿಸಿರುವ ಸೂರ್ಯ ಬಹುಕಾಲ ಮನಸ್ಸಲ್ಲಿ ಉಳಿದು ಬಿಡುತ್ತಾನೆ. ಇದು ಚಿತ್ರದ ಸಿದ್ದ ಸೂತ್ರಗಳನ್ನು ಸಂಪೂರ್ಣವಾಗಿ ಮುರಿದಿರುವ ಸಿನಿಮಾ.

ಮೊದಲನೆಯದಾಗಿ ಚಿತ್ರಕ್ಕೆ ನಾಯಕನ ಜೊತೆಗೆ ಡ್ಯುಯೆಟ್ ಹಾಡಲು ನಾಯಕಿ ಇಲ್ಲ, ನೃತ್ಯ ಭರಿತ ಹಾಡುಗಳಿಲ್ಲ, ಫೈಟ್ ಇಲ್ಲವೇ ಇಲ್ಲ. ಹಾಗಾಗಿ ಇಂಥಹ ಸಿನಿಮಾಗಳನ್ನ ಸ್ಟಾರ್ ನಟರು ಅಭಿನಯಿಸುವುದೇ ಅತಿ ವಿರಳ. ಜೈ ಭೀಮ್ ಮೂಲಕ ಸ್ಟಾರ್ ನಟ ಸೂರ್ಯ, ಧನುಷ್ರಂತೆ ಹೊಸ ಆಯಾಮ ಸೃಷ್ಟಿಸಿದ್ದಾರೆ.
ಬುಡಕಟ್ಟು ಸಮುದಾಯದ ಒಬ್ಬ ವ್ಯಕ್ತಿಯ ಹತ್ಯೆಯ ಪ್ರಕರಣವನ್ನು ವಕೀಲ ಚಂದ್ರು ಎತ್ತಿ ಕೊಂಡು ಸಾಗುವ ಪರಿ ಚಿತ್ರದುದ್ದಕ್ಕೂ ನಿರೀಕ್ಷೆಯೊಂದಿಗೆ ಕರೆದುಕೊಂಡು ಹೋಗುತ್ತದೆ. ಹಾದಿ ತಪ್ಪುತ್ತಿದ್ದ ತನಿಖೆಯನ್ನು ಸರಿ ದಾರಿಗೆ ತರುವ ಮೂಲಕ ಚಂದ್ರು ತನಿಖೆಯನ್ನು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಯೊಬ್ಬರ ಕೈಗೆ ಕೊಡಿಸುವಲ್ಲಿ ಯಶಸ್ವಿಯಾಗುತ್ತಾನೆ. ಆ ಉನ್ನತ ಅಧಿಕಾರಿಯ ಪಾತ್ರ ಕನ್ನಡದ ಪ್ರಕಾಶ್ ರೈ ಮಾಡಿದ್ದಾರೆ. ಖಾಕಿ ಕೋಟೆಯನ್ನ ಅಧಿಕಾರದ ದುರುಪಯೋಗ ಮಾಡುವವರ ಮಧ್ಯೆ ಆತ್ಮಸಾಕ್ಷಿಗಾಗಿ ಬದುಕುವವರೂ ಇದ್ದಾರೆ ಅನ್ನುವುದನ್ನು ತೋರಿಸಲಾಗಿದೆ. ಬುಡಕಟ್ಟು ಅಲೆಮಾರಿ ಜನರಿಗೂ ಸುಂದರವಾದ ಕನಸುಗಳಿರುತ್ತವೆ ಮತ್ತು ಆ ಕನಸುಗಳನ್ನು ನಾಗರಿಕ ವ್ಯವಸ್ಥೆ ಎಷ್ಟು ಕ್ರೂರವಾಗಿ ಹೊಸಕಿ ಹಾಕುತ್ತವೆ ಎಂಬ ವಾಸ್ತವವನ್ನು ತೋರಿಸುವ ಸಿನಿಮಾ ಇದು.

ಸದ್ಯ ಎಲ್ಲೆಲ್ಲೂ ಜೈ ಭೀಮ್ ಸದ್ದು ಮಾಡುತ್ತಿದೆ. ಜೈ ಭೀಮ್ ಬಗ್ಗೆ ಸಾಕಷ್ಟು ಜನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಾರ್ವಜನಿಕವಾಗಿಯೇ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನುಳಿದಂತೆ ಸಿನಿಮಾ ರಂಗದವರೂ ಕೂಡ ಜೈ ಭೀಮ್ ಚಿತ್ರದ ವಿಮರ್ಶೆಗೆ ಇಳಿದು ಬಿಟ್ಟಿದ್ದಾರೆ. ಕನ್ನಡದ ನಿರ್ದೇಶಕ, ಕಥೆಗಾರ ಟಿ.ಕೆ.ದಯಾನಂದ್ ಜೈ ಭೀಮ್ ಬಗ್ಗೆ ಬರೆದುಕೊಂಡಿದ್ದಾರೆ. ಜಗತ್ತಿಗೆ ಇರುಳಿಗರ ಅಸ್ತಿತ್ವದ ಬಗ್ಗೆ ದೊಡ್ಡ ಸಂದೇಶ ತಲುಪಿಯಾಗಿದೆ.
ಜೈ ಭೀಮ್' ಸಿವಿಲೈಸ್ಡ್ ಸೊಸೈಟಿಯ 'ಸಬ್ ಚಂಗಾಸಿ' ಮಾಡೆಲ್ಲಿನ ಕೊರಳಿಗೆ ತಿವಿದ ಭರ್ಜಿಯಂತೆ ನನಗೆ ಕಾಣುತ್ತದೆ, ಇವತ್ತಿಗೂ ಇಲಿ ತಿನ್ನುತ್ತ, ಹಾವಿನ ಕಡಿತಕ್ಕೆ ಔಷಧಿ ಹಚ್ಚುತ್ತ ಬದುಕುತ್ತಿರುವ ನಮ್ಮನ್ನು ದೂರ ಎಸೆದು ಎಂಥ ಮಾನಗೇಡಿ ಸಮಾಜ ಕಟ್ಟಿ ಕೊಂಡಿದ್ದೀರಿ ಎಂಬ ಪ್ರಶ್ನೆಯ ಕುಡುಗೋಲಾಗಿ 'ಜೈ ಭೀಮ್' ಮುಖ್ಯವಾಗುತ್ತದೆ. ಎನ್ನುವ ಸಾಲುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಂತಯೇ ಸಾಕಷ್ಟು ಮಂದಿ ಈ ನೈಜ ಘಟನೆಯ ಬಗ್ಗೆ ಮಾತನಾಡುತ್ತಿದ್ದಾರೆ. ಜೈ ಭೀಮ್ ಮನೋರಂಜನೆ ಮಾಡಿರೋ ಸಿನಿಮಾ ಅಲ್ಲ. ಬದಲಾವಣೆಯನ್ನು ಬಸಿದ ಸಿನಿಮಾ ಎಂದೇ ಹೇಳ ಬಹುದು. ಆ ಬದಲಾವಣೆ ಇಂದು ಈ ಚಿತ್ರದ ಮೂಲಕ ಸಹಸ್ರಾರು ಮನಸ್ಸುಗಳಿಗೆ ಮುಟ್ಟಿದೆ.


Click it and Unblock the Notifications











