ಒಟಿಟಿಯಲ್ಲಿ ಸಿನಿಮಾ ಬಿಡುಗಡೆ: ಸುದೀಪ್ ಹೇಳಿದ್ದು ಹೀಗೆ
'ಒಟಿಟಿ v/s ಚಿತ್ರಮಂದಿರ' ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಕೆಲವರು ಒಟಿಟಿಗಳ ಪರ ವಾದ ಮಂಡಿಸಿದರೆ, ಹಲವರು ಚಿತ್ರಮಂದಿರಗಳ ಪರವಾಗಿ ನಿಂತಿದ್ದಾರೆ.
ದರ್ಶನ್ ಸೇರಿ ಹಲವು ಸ್ಟಾರ್ ನಾಯಕ ನಟರು ತಾವು ಕಡ್ಡಾಯವಾಗಿ ಚಿತ್ರಮಂದಿರಗಳಲ್ಲಿಯೇ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಆ ಮೂಲಕ ತಾವು ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವವರ ಪರ ಇಲ್ಲವೆಂಬ ಸಂದೇಶ ರವಾನಿಸಿದ್ದಾರೆ.
ಇದೀಗ ನಟ ಸುದೀಪ್ ಅವರಿಗೂ ಸುದ್ದಿಗೋಷ್ಠಿಯೊಂದರಲ್ಲಿ ಇದೇ ಪ್ರಶ್ನೆ ಎದುರಾಗಿದೆ. ಸುದೀಪ್ ಅವರು ಒಟಿಟಿ ಗಳ ಬಗ್ಗೆ ಸ್ಪಷ್ಟ ನಿಲವು ಮುಂದಿಟ್ಟಿದ್ದಾರೆ.
'ಒಟಿಟಿ ಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ನಿಮ್ಮ ಅಭಿಪ್ರಾಯವೇನು?' ಎಂಬ ಪ್ರಶ್ನೆ ಖಾಸಗಿ ಬ್ರ್ಯಾಂಡ್ನ ಕಾರ್ಯಕ್ರಮವೊಂದರ ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರಿಗೆ ಎದುರಾಗಿದೆ.

'ಚಿತ್ರಮಂದಿಗಳು ದೇವಸ್ಥಾನ ಎಂದು ಭಾವಿಸಿರುವವನು ನಾನು'
'ಚಿತ್ರಮಂದಿರಗಳನ್ನು ದೇವಸ್ಥಾನವೆಂದು ಭಾವಿಸಿರುವವರು ನಾವು, ಬೇರೆ ವಿಧಿಯಿಲ್ಲ ಎಂಬ ಪಕ್ಷದಲ್ಲಷ್ಟೆ ಮನೆಯಲ್ಲಿ ಕೂತು ಪೂಜೆ ಮಾಡುತ್ತೇವೆ, ಆದರೆ ದೇವಸ್ಥಾನವೇ ನಮಗೆ ಪವಿತ್ರ. ಹಾಗಾಗಿ ನಮ್ಮ ದೇವಸ್ಥಾನಗಳು (ಚಿತ್ರಮಂದಿರಗಳು) ತೆರೆಯುವ ವರೆಗೂ ಕಾಯುತ್ತೇವೆ' ಎಂದಿದ್ದಾರೆ ನಟ ಸುದೀಪ್.

ಕೋಟಿಗೊಬ್ಬ 3 ಚಿತ್ರಮಂದಿರದಲ್ಲೇ ಬಿಡುಗಡೆ
ನಟ ಸುದೀಪ್ ಅವರ ಕೋಟಿಗೊಬ್ಬ 3 ಸಿನಿಮಾ ಸಹ ಬಿಡುಗಡೆಗೆ ತಯಾರಾಗಿದೆ. ಸುದೀಪ್ ಅವರು ಸಹ ಒಟಿಟಿ ಬದಲು ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆ ಮಾಡುವ ನಿರ್ಣಯ ಮಾಡಿದ್ದಾರೆ. ಕೋಟಿಗೊಬ್ಬ 2 ಬಳಿಕ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಸಹ ಬಿಡುಗಡೆ ಆಗಲಿದೆ.

ಗುಮಾನಿ ವ್ಯಕ್ತಪಡಿಸಿದ ನಟ ದರ್ಶನ್
ಕೆಲವು ದಿನಗಳ ಹಿಂದಷ್ಟೆ ಫೇಸ್ಬುಕ್ ಲೈವ್ ಮಾಡಿದ್ದ ನಟ ದರ್ಶನ್ ಸಹ ಒಟಿಟಿಗಳ ವಿರುದ್ಧ ನಿಲವು ಪ್ರಕಟಿಸಿದ್ದರು. ಚಿತ್ರಮಂದಿರಗಳ ಮೇಲೆ ವಿಧಿಸಿರುವ ನಿಯಮ ತೆಗೆಯದೇ ಇರುವುದರ ಹಿಂದೆ ಅಂಬಾನಿ ಹಾಗೂ ಒಟಿಟಿ ಲಾಭಿ ಇರಬಹುದು ಎಂಬ ಗುಮಾನಿಯನ್ನೂ ಅವರು ವ್ಯಕ್ತಪಡಿಸಿದ್ದರು.

ನಟನೊಬ್ಬ ಸ್ಟಾರ್ ಆಗಲು ಚಿತ್ರಮಂದಿರಗಳು ಬೇಕು
ನಿಜವಾದ ಸಿನಿಮಾ ವೀಕ್ಷಣೆ ಅನುಭವ ದೊರೆಯುವುದು ಚಿತ್ರಮಂದಿರಗಳಲ್ಲಿಯೇ ಎಂಬುದು ಸಿನಿಮಾ ಪ್ರಿಯರ ವಾದ. ನಟನೊಬ್ಬ ಸ್ಟಾರ್ ನಟನಾಗಲು ಚಿತ್ರಮಂದಿರಗಳು ಬೇಕೆ-ಬೇಕು ಎಂಬುದು ಚಿತ್ರಮಂದಿರಗಳ ಪರವಿರುವವರ ವಾದ.


Click it and Unblock the Notifications











