ಭೀಮಾತೀರದಲ್ಲಿ ಸಚಿವ ರೇಣುಕಾಚಾರ್ಯ ಮಾಡಿದ್ದೇನು?

ಬಿಜೆಪಿ ಆಗುಹೋಗುಗಳ ಬಗ್ಗೆ ಆವೇಶಭರಿತ ಹೇಳಿಕೆ ನೀಡಿ ತಮ್ಮವರಿಂದಲೇ ಮುಜುಗರಕ್ಕೆ ಒಳಗಾಗುವುದು ಅವರಿಗೆ ಹ್ಯಾಬಿಟ್. ಅದೇನೇ ಇರಲಿ, ನಮ್ಮ ಅಬಕಾರಿ ಸಚಿವರು 'ಭೀಮಾತೀರದಲ್ಲಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ಚಿತ್ರದಲ್ಲಿ ಮೂರು ದೃಶ್ಯಗಳಲ್ಲಿ ಸಚಿವ ರೇಣುಕಾಚಾರ್ಯ ಕಾಣಿಸಿಕೊಳ್ಳುತ್ತಾರೆ. ಡಿಸಿಪಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಚಿವರ ನಟನೆ ಬಗ್ಗೆ ಹೇಳುವುದಾದರೆ ರಾಜಕೀಯದಲ್ಲಿ ಆಶ್ವಾಸನೆ ನೀಡುವುದೇ ಬೇರೆ ಚಿತ್ರರಂಗದಲ್ಲಿ ಬಣ್ಣ ಹಚ್ಚುವುದೇ ಬೇರೆ ಎನ್ನುವುದು ವೇದ್ಯವಾಗುತ್ತದೆ..
ಚಿತ್ರ ಗಂಭೀರವಾಗಿ ಸಾಗುತ್ತಿರ ಬೇಕಾದರೆ ಒಂದು ಸನ್ನಿವೇಶವಿದೆ. ಶರತ್ ಲೋಹಿತಾಶ್ವ ಅವರ ತಂದೆಯ (ತಂದೆಯಾಗಿ ಹಿರಿಯ ನಟ ಲೋಕನಾಥ್ ನಟಿಸಿದ್ದಾರೆ) ಅಸ್ಥಿ ವಿಸರ್ಜಿಸಿ ಬರುತ್ತಿರುವಾಗ ರೇಣುಕಾಚಾರ್ಯ ಅಲ್ಲಿ ಕಾಣಿಸಿಕೊಳ್ಳುತ್ತಾರೆ.
'ಇನ್ನೊಂದು ವಾರದಲ್ಲಿ ಚಂದಪ್ಪನನ್ನು ಅರೆಸ್ಟ್ ಮಾಡುತ್ತೇವೆ' ಎಂದು ರೇಣುಕಾಚಾರ್ಯ ಹೇಳುವ ಎನ್ನುವ ಸನ್ನಿವೇಶವಿದೆ. ಆ ಸನ್ನಿವೇಶಕ್ಕೆ ನಗುವುದೋ ಅಳುವುದೋ ಯಾವ ರೀತಿ ನಟಿಸಬೇಕೆಂದು ತಿಳಿಯದೆ ಸಚಿವ ರೇಣು ಅವರ ನಟನೆ ನೋಡಿ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಮಾತ್ರ ತುಂಬಿ ತುಳುಕುತ್ತಿದ್ದ ಜನಸ್ತೋಮ ಮುಸಿ ಮುಸಿ ನಗುತ್ತಿತ್ತು.
ಒಟ್ಟಿನಲ್ಲಿ ಸಚಿವರ ಈ ಚಿತ್ರದಲ್ಲಿನ ನಟನೆಯ ಬಗ್ಗೆ ಪ್ರೇಕ್ಷಕರು, ವಿಮರ್ಶಕರು ಮಾರ್ಕ್ಸ್ ನೀಡುವುದಾದರೆ 'you are not promoted' ಎನ್ನಬಹುದು. ಆದರೂ ಸಚಿವರದ್ದು ಇದು ಮೊದಲ ಪ್ರಯತ್ನ ಎಂದು ಎಲ್ಲಿಂದಲೋ ಒತ್ತಡ ಬಂದರೆ 'you are just pass' ಎಂದು ಹುರಿದುಂಬಿಸಿದರೆ ಮುಂದೆ ಒಂದು ದಿನ ಅವರು ನಮ್ಮ ಕನ್ನಡ ಚಿತ್ರರಂಗಕ್ಕೆ ಆಸ್ತಿಯಾದರೂ ಆಗಬಹುದು. ಹಹಾ.


Click it and Unblock the Notifications











