ಗಣೇಶನ ಶೈಲೂ: ಚೆಲುವಿನ ಟ್ರ್ಯಾಜಡಿ ಚಿತ್ತಾರ
ಬಹುಶಃ ಇಂಥದ್ದೊಂದು ಕಥೆಯನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ತಕ್ಕ ನ್ಯಾಯ ಒದಗಿಸಲು ನಾರಾಯಣ್ ಅಂಥವರಿಂದ ಮಾತ್ರ ಸಾಧ್ಯ. ತಮಿಳಿನ ಮೈನಾ ಚಿತ್ರ ಇವತ್ತಿಗೂ ಮೈನವಿರೇಳಿಸುತ್ತದೆ. ಕಥೆಯೇ ಹಾಗಿದೆ. ನೇಟಿವಿಟಿಗೆ ಹತ್ತಿರವಾಗಿದೆ. ಅದನ್ನು ಅದಕ್ಕಿಂತ ಹೆಚ್ಚು ಸುಂದರವಾಗಿಸಿದ್ದಾರೆ ನಾರಾಯಣ್. ಬಹುಶಃ ಗಣೇಶ್ ಬಿಟ್ಟರೆ ಆ ಪಾತ್ರಕ್ಕೆ ಬೇರೆ ಯಾರೂ ಸ್ಯೂಟೇ ಆಗುವುದಿಲ್ಲವೇನೋ ಎನಿಸುವ ಹೊತ್ತಿಗೆ ಸಿನಿಮಾ ಮುಗಿದಿರುತ್ತದೆ!
ಗಣೇಶ್ ಸಹಜ ಅಭಿನಯದ ಹಿಂದೆ ನಾರಾಯಣ್ ನೆರಳಿನ ಛಾಯೆ ಮಾತಾಗುತ್ತದೆ. ರಂಗಾಯಣ ರಘು ಇಡೀ ಚಿತ್ರದಲ್ಲಿ ನಡೆದಾಡುವ ನಗೆಬುಗ್ಗೆ. ಅವರ ಟೈಮಿಂಗ್ ಮಾತ್ರ ನಿಜಕ್ಕೂ ಫರಫೆಕ್ಟ್. ಎಲ್ಲೆಲ್ಲಿ ನಗಿಸಲು ಜಾಗ ಇದೆಯೋ ಅಲ್ಲೆಲ್ಲಾ ರಘು ರಂಗೇರುತ್ತಾರೆ. ಅಲ್ಲಲ್ಲಿ ಬ್ರೇಕ್ ಕೊಟ್ಟು ನಗಿಸುತ್ತಾರೆ. ಸುಚೇಂದ್ರ ಪ್ರಸಾದ್ಗೆ ಪೊಲೀಸ್ ಪಾತ್ರ ಕರೆಕ್ಟ್ ಆಗಿ ಒಪ್ಪುತ್ತದೆ. ಪತ್ರಕರ್ತ ಸುರೇಶ್ಚಂದ್ರ ಅವರಿಗೆ ನಾರಾಯಣ್ ಸವಾಲಿನ ಪಾತ್ರ ಕೊಟ್ಟಿದ್ದಾರೆ. ಇವರು ಅದಕ್ಕೆ ಯೋಗ್ಯ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಇನ್ನು ನಾಯಕಿ ಭಾಮಾ. ಆಕೆಯದ್ದು ಸಹಜ ಮತ್ತು ಸಮೃದ್ಧ ಅಭಿನಯ. ಅತಿಯಾದ ಬಣ್ಣ ಬಳಿದುಕೊಳ್ಳದೇ ಅಚ್ಚುಕಟ್ಟಾಗಿ ಕಾಣುತ್ತಾರೆ.
ಜೆಸ್ಸಿಗಿಫ್ಟ್ ಹಾಡುಗಳಲ್ಲಿ ಎರಡಂತೂ ಮಧುರಮಯ. ಕವಿರಾಜರ ಟೈಟಲ್ ಸಾಂಗ್ ಬರುವ ಹೊತ್ತಿಗೆ ಪ್ರೇಕ್ಷಕನ ಕೈ ಬೆರಳುಗಳು ಬಾಯಿಗೆ ಶಿಫ್ಟ್ ಆಗಿರುತ್ತದೆ. ಸಿಳ್ಳೆಯ ಸುರಿಮಳೆ ಸಂಭ್ರಮಿಸುತ್ತದೆ! ಪುನೀತ್ ಹಾಡಿರುವ ಕನ್ನಡ ಗೀತೆ ಕುಣಿದಿದ್ದು ಎಸ್.ನಾರಾಯಣ್ ಮುಂದುವರಿದ ಭಾಗ ಪಂಕಜ್ ಎನ್ನುವುದು ಸಮಾಧಾನಕರ ಬಹುಮಾನ!
ಶೈಲು ಒಂದು ಸೈಲೆಂಟ್ ಜರ್ನಿ. ಅಲ್ಲಲ್ಲಿ ಕಚಗುಳಿ ಇಡಲು ರಂಗಾಯಣ ರಘು ಇದ್ದಾರೆ. ಪ್ರೀತಿಯ ತೇರು ಎಳೆಯಲು ಗಣೇಶ್-ಭಾಮಾ ಇದ್ದಾರೆ. ದೃಶ್ಯಗಳನ್ನು ಅಚ್ಚುಕಟ್ಟಾಗಿ ತೋರಿಸುವಲ್ಲಿ ನಾರಾಯಣ್ ಸಕ್ಸಸ್ ಆಗಿದ್ದಾರೆ. ಹಸಿರರಾಶಿಯಿಂದ ಕಣ್ಣ ಕಂಗೊಳಿಸುವ ಶೈಲೂ, ಕ್ಲೈಮ್ಯಾಕ್ಸ್ನಲ್ಲಿ ಮತ್ತದೇ ಚೆಲುವಿನ ಟ್ರ್ಯಾಜಡಿ ಚಿತ್ತಾರದಲ್ಲಿ ಎಂಡ್ ಆಯಿತಲ್ಲಾ ಎನ್ನುವುದಷ್ಟೇ ಕಣ್ಣಿರಿನ ಕೊನೇ ಉಸಿರಿನ ಕನವರಿಕೆ.


Click it and Unblock the Notifications











