ಚಿತ್ರವಿಮರ್ಶೆ: ಜೊತೆಯಾಗಿ, ಹಿತವಾಗಿ
ಕೆಲವು ಪ್ರಶ್ನೆಗಳಿಗೆ ಉತ್ತರ ಇರುವುದಿಲ್ಲ. ಅಂದುಕೊಂಡದ್ದು ಆಗದೇ, ಅದು ಇನ್ನೇನೋ ಆಗುತ್ತದೆ. ಬದುಕು ಬರಡಾಗಿ, ಜೀವನ ಸಾಕಾಗಿ ಇನ್ನೇನು ಎಲ್ಲ ಮುಗಿದು ಹೋಯಿತು ಎನ್ನುವ ಹೊತ್ತಿಗೆ ಒಂದು ಆಶಾಕಿರಣ ಕಣ್ಣಮುಂದೆ ಗೋಚರವಾಗುತ್ತದೆ.
ಇನ್ನೇನು ಕತ್ತಲು ಆವರಿಸಿತು ಎನ್ನುವ ಹೊತ್ತಿಗೆ ಆಕೆಯ ಮುಂದೆ ಆತ ಪ್ರತ್ಯಕ್ಷವಾಗುತ್ತಾನೆ. ಆದರೆ, ಆಕೆಗೆ ತನ್ನ ಮಗನೇ ಸರ್ವಸ್ವವಾಗಿರುತ್ತಾನೆ. ತಾಯಿ-ಮಗನ ಸೆಂಟಿಮೆಂಟ್ ಪುಟಗಳ ಮಧ್ಯೆ ಇನ್ನೊಬ್ಬ ವ್ಯಕ್ತಿಯ ಆಗಮನ ಇಬ್ಬರಿಗೂ ಇಷ್ಟವಿರುವುದಿಲ್ಲ...
ಮಗನನ್ನು ಪಕ್ಕದ ಮನೆ ಹುಡುಗಿ ಪ್ರೀತಿಸುತ್ತಿರುತ್ತಾಳೆ. ಅವನಿಗೆ ಅದು ಇಷ್ಟವಿರುವುದಿಲ್ಲ. ಕಾರಣ ತಾಯಿಯ ಪ್ರೀತಿ. ಹೀಗಿರುವಾಗ ಒಂದು ದಿನ ಆ ತಾಯಿಯ ಕೊಲೆಯಾಗುತ್ತದೆ! ಅಲ್ಲಿಂದ ಹೀಗೂ ಉಂಠೇ!! ನಿರ್ದೇಶಕ ಶ್ರೀನಿವಾಸ್ ಕತೆಯನ್ನು ಒಂದು ಹಂತಕ್ಕೆ ಚೆನ್ನಾಗಿಯೇ ಮಾಡಿದ್ದಾರೆ. ಅದರ ಎಳೆ ವಿಶಾಲವಾಗಿದೆ.
ಮಲೆನಾಡ ಮಧ್ಯಭಾಗದಲ್ಲಿ ಚಿತ್ರೀಕರಣ ಮಾಡಿ, ಕಣ್ಣಿಗೆ ಹಬ್ಬದೂಟ ಹಾಕಿಸುತ್ತಾರೆ. ಆದರೆ, ತಾಯಿಯ ಪಾತ್ರ ಮಾಡಿರುವ ತಾರಾ ಅವರನ್ನು ಹೊರತಾಗಿ ಯಾರೊಬ್ಬರೂ ಪಾತ್ರಕ್ಕೆ ನ್ಯಾಯ ಒದಗಿಸಿಲ್ಲ. ಹಾಗೆನ್ನುವ ಬದಲು- ನಾಯಕ-ನಾಯಕಿ- ವಿಲನ್ ಎಲ್ಲರೂ ಹೊಸಬರು.
ನಾಯಕಿ ತೇಜಸ್ವಿನಿ ನಗುವುದನ್ನೇ ನಟನೆ ಎಂದುಕೊಂಡಿದ್ದಾಳೆ. ನಾಯಕ ಥೇಟ್ ವಿಲನ್ ಥರ ಕಾಣುತ್ತಾರೆ. ಸಿಡುಕು ರೋಗದ ವಿಲನ್ ಪೋಷಕ ನಟನಂತೆ ಅಭಿನಯಿಸಿದ್ದಾನೆ! ಇಡೀ ಚಿತ್ರವನ್ನು ನೋಡಿಸಿಕೊಂಡು ಹೋಗುವುದು ತಾಯಿಯ ಪಾತ್ರ. ತಾರಾ ಇಲ್ಲಿ ಅಳತೆ ಮೀರಿ ತೆಳ್ಳಗಾಗಿದ್ದಾರೆ.
ಜೈಜಗದೀಶ್, ನೀನಾಸಂ ಅಶ್ವತ್ಥ್, ರಾಮಕೃಷ್ಣ, ಶಂಕರ್ ಅಶ್ವತ್ಥ್ ನಟನೆಯಲ್ಲಿ ತಪ್ಪು ಹುಡುಕುವುದು ಕಷ್ಟ. ದೇವಾ ಸಂಗೀತದಲ್ಲಿ ಎರಡು ಹಾಡುಗಳು ಮಧುರವಾಗಿದೆ. ಛಾಯಾಗ್ರಹಣ ಹಸಿರ ತೋರಣ.


Click it and Unblock the Notifications











