Banaras Review: ಝೈದ್ ಖಾನ್ ಮೊದಲ ಚಿತ್ರ ಹೇಗಿದೆ? ಬನಾರಸ್ ಕತೆಯೇನು?
ಕನ್ನಡ ಚಿತ್ರರಂಗದಲ್ಲಿ ಸದಾ ಹೊಸತನ್ನು ಹೊತ್ತು ತರುವಂತ ನಿರ್ದೇಶಕ ಎನಿಸಿಕೊಂಡಿರುವ ಜಯತೀರ್ಥ ಬನಾರಸ್ ಮೂಲಕ ಮತ್ತೊಮ್ಮೆ ಅದನ್ನು ಸಾಬೀತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಬೆಲ್ ಬಾಟಂ ರೀತಿಯ ಥ್ರಿಲ್ಲರ್ ನೀಡಿ ದೊಡ್ಡ ಸಕ್ಸಸ್ ಕಂಡು ತುಸು ದೊಡ್ಡ ಗ್ಯಾಪ್ ತೆಗೆದುಕೊಂಡಿದ್ದ ಜಯತೀರ್ಥಗಿದು ಕಮ್ ಬ್ಯಾಕ್ ಸಿನಿಮಾ ಎಂದರೆ ತಪ್ಪಾಗಲಾರದು.
ಇನ್ನು ಇದು ಜಯತೀರ್ಥ ನಿರ್ದೇಶನದ ಸಿನಿಮಾ ಎನ್ನುವುದರ ಜೊತೆಗೆ ಝೈದ್ ಖಾನ್ ಅಭಿನಯದ ಮೊದಲ ಸಿನಿಮಾ ಎಂಬ ಕಾರಣದಿಂದಲೂ ತುಸು ಚರ್ಚೆಗೆ ಒಳಗಾಗಿದ್ದು ಸುಳ್ಳಲ್ಲ. ಅಂದಹಾಗೆ ಓರ್ವ ನಟನಿಗೆ ತನ್ನ ಮೊದಲ ಸಿನಿಮಾ ಒಂದೊಳ್ಳೆ ಕಥಾಹಂದರವನ್ನು ಹೊಂದಿರಬೇಕು ಎಂಬ ಕನಸು ಇದ್ದೇ ಇರುತ್ತದೆ. ಅದೇ ರೀತಿಯ ಕನಸು ಹೊಂದಿದ್ದ ಝೈದ್ ಖಾನ್ ಪಾಲಿಗೆ ಕನಸು ನನಸಾಗಿದೆ.
ಬೆಂಗಳೂರಿನಲ್ಲಿ ಆರಂಭವಾಗುವ ಕತೆ ಶೀಘ್ರವೇ ಬನಾರಸ್ಗೆ ಶಿಫ್ಟ್ ಆಗುತ್ತೆ. ನಂತರ ಸಂಪೂರ್ಣ ಕತೆ ನಡೆಯುವುದು ಬನಾರಸ್ನಲ್ಲೇ. ಟ್ರೈಲರ್ನಲ್ಲಿ ಹೇಳಿರುವ ಹಾಗೆ ಈ ಚಿತ್ರದಲ್ಲಿ ಟೈಮ್ ಟ್ರಾವೆಲ್ ಬಹುದೊಡ್ಡ ಪಾತ್ರ ನಿರ್ವಹಿಸಿದೆ ಹಾಗೂ ಈ ಅಂಶ ಕನ್ನಡಿಗರಿಗೆ ಹೊಸತೂ ಸಹ ಹೌದು. ಹೀಗೆ ಕೆಲವೊಂದಿಷ್ಟು ಕಾರಣಗಳಿಂದ ಪ್ರೇಕ್ಷಕರ ಗಮನ ಸೆಳೆದಿದ್ದ ಬನಾರಸ್ ಚಿತ್ರ ಹೇಗಿದೆ ಚಿತ್ರದ ಪ್ಲಸ್ ಹಾಗೂ ಮೈನಸ್ ಪಾಯಿಂಟ್ಗಳೇನು ಎಂಬ ವಿವರ ಮುಂದಿದೆ ಓದಿ..
ಬನಾರಸ್ ಕತೆ ಏನು?
ನಾಯಕ ಸಿದ್ಧಾರ್ಥ್ ಸಿಂಹ ( ಝೈದ್ ಖಾನ್ ) ಶ್ರೀಮಂತ ಮಗ, ತಾಯಿಯಿಲ್ಲದ ಈತನಿಗೆ ತಂದೆಯೇ ಪ್ರಪಂಚ. ನಟಿ ದನಿ ( ಸೋನಲ್ ಮೊಂಥೆರೋ ) ತಂದೆ ತಾಯಿಯಿಲ್ಲದೇ ಚಿಕ್ಕಪ್ಪನ ಆಶ್ರಯದಲ್ಲಿದ್ದುಕೊಂಡು ದೊಡ್ಡ ಗಾಯಕಿಯಾಗಬೇಕೆಂಬ ಗುರಿ ಹೊಂದಿರುವ ಹುಡುಗಿ. ಹೀಗೆ ಈ ಇಬ್ಬರೂ ಪರಸ್ಪರ ಎದುರಾಗುವುದೇ ಚಿತ್ರದ ಮೊದಲ ದೃಶ್ಯ. ಇಲ್ಲಿ ಸಾಮಾನ್ಯ ಲವ್ ಸ್ಟೋರಿಯ ಹಾಗೆ ಲವ್ ಅಟ್ ಫಸ್ಟ್ ಸೈಟ್ ಇಲ್ಲ, ಬದಲಾಗಿ ತಾನೊಬ್ಬ ಟೈಮ್ ಟ್ರಾವೆಲರ್ ನಾವಿಬ್ಬರೂ ಮುಂದೆ ಗಂಡ ಹೆಂಡತಿ ಆಗುವವರು ಎಂದು ನಟ ನಟಿಯನ್ನು ನಂಬಿಸಿಬಿಡ್ತಾನೆ. ಬಳಿಕ ಇಬ್ಬರ ಸೆಲ್ಫಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಟ್ರೋಲ್ಗೂ ಒಳಗಾಗುತ್ತೆ. ಬೆಂಗಳೂರಿನಲ್ಲಿದ್ದ ಈ ಇಬ್ಬರಿಗೂ ಆ ಸೆಲ್ಫಿ ಸಂಕಷ್ಟವನ್ನು ತಂದೊಡ್ಡುತ್ತೆ. ನಂತರ ಕತೆ ಬನಾರಸ್ಗೆ ಶಿಫ್ಟ್ ಆಗುತ್ತೆ. ಸಿಲುಕಿ ಹಾಕಿಕೊಂಡಿದ್ದ ಸಂಕಷ್ಟದಿಂದ ಈ ಇಬ್ಬರೂ ಹೇಗೆ ಹೊರಬರುತ್ತಾರೆ? ನಟ ಹೇಳಿದಂತೆ ಟೈಮ್ ಲೂಪ್ ನಿಜವಾ? ತಾನು ಹೇಳಿದ ಟೈಮ್ ಲೂಪ್ನಿಂದ ದ್ವಿತೀಯಾರ್ಧದಲ್ಲಿ ತಾನು ಏನೇನು ಕಷ್ಟಗಳನ್ನು ಎದುರಿಸುತ್ತಾನೆ ಎಂಬುದೇ ಬನಾರಸ್ ಕತೆ. ಲವ್ ಟ್ರ್ಯಾಕ್ನೊಂದಿಗೆ ಆರಂಭಗೊಳ್ಳುವ ಚಿತ್ರ ಕೊನೆಗೆ ಸ್ಕೈಫೈ ಚಿತ್ರವೆನಿಸಿಕೊಳ್ಳಲಿದೆ.
ಪ್ರೇಕ್ಷಕರ ತಲೆಗೆ ಕೆಲಸ ಕೊಡುತ್ತೆ ಸೆಕೆಂಡ್ ಹಾಫ್
ಸೆಲ್ಫಿಯಿಂದ ಉಂಟಾಗುವ ಸಮಸ್ಯೆ ಹಾಗೂ ಲವ್ ಟ್ರ್ಯಾಕ್ ಸುತ್ತ ಮೊದಲಾರ್ಧ ಜರುಗಿದರೆ, ಬೃಹತ್ ಟ್ವಿಸ್ಟ್ನ ಮಧ್ಯಂತರ ಚಿತ್ರಕ್ಕೆ ತಿರುವು ನೀಡುತ್ತದೆ. ಮೊದಲಾರ್ಧ ಸಂಪೂರ್ಣ ಕಮರ್ಷಿಯಲ್ ಎನಿಸಿದರೆ ದ್ವಿತೀಯಾರ್ಧದಲ್ಲಿ ಟೈಮ್ ಲೂಪ್ನ ಅಸಲಿ ಆಟವಿದೆ. ಟೈಮ್ ಲೂಪ್ ಚಿತ್ರಗಳನ್ನು ನೋಡಿ ಅಭ್ಯಾಸವಿರುವವರಿಗೆ ಸೆಕೆಂಡ್ ಹಾಫ್ನ ಟೈಮ್ ಟ್ರಾವೆಲಿಂಗ್ ದೃಶ್ಯಗಳು ಕಿಕ್ ಕೊಡುತ್ತೆ, ಇದರ ಬಗ್ಗೆ ಅರಿವಿಲ್ಲದವರಿಗೆ ಹಾಗೂ ಪಕ್ಕಾ ಕಮರ್ಷಿಯಲ್ ಸಿನಿ ಪ್ರೇಕ್ಷಕರಿಗೆ ಪದೇ ಪದೇ ಬರುವ ದೃಶ್ಯಗಳು ತಾಳ್ಮೆ ಪರೀಕ್ಷೆಯನ್ನೂ ಸಹ ಮಾಡಲಿವೆ. ಹೀಗೆ ಈ ಬಾರಿ ಪ್ರಯೋಗದ ಜತೆಗೆ ಪ್ರೇಕ್ಷಕರ ತಲೆಗೂ ಸಹ ನಿರ್ದೇಶಕ ಜಯತೀರ್ಥ ತಲೆಗೆ ಕೆಲಸ ಕೊಟ್ಟಿದ್ದಾರೆ.
ಪ್ಲಸ್ ಪಾಯಿಂಟ್ಗಳು
ಚಿತ್ರಕ್ಕೆ ಅತಿದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಸಂಗೀತ ಹಾಗೂ ಛಾಯಾಗ್ರಹಣ. ಅಜನೀಶ್ ಲೋಕನಾಥ್ ಕಾಂತಾರ ಹಾಗೂ ಗಂಧದ ಗುಡಿ ಬಳಿಕ ಮತ್ತೊಮ್ಮೆ ಪ್ರೇಕ್ಷಕರ ಮನಗೆದ್ದಿದ್ದಾರೆ. ಚಿತ್ರದ 'ಮಾಯಾಗಂಗೆ' ಹಾಗೂ 'ಹೆಣ್ಣು ಹಡೆಯಲು ಬೇಡ' ಹಾಡುಗಳು ಚಿತ್ರಮಂದಿರದಿಂದ ಹೊರಬಂದ ಪ್ರೇಕ್ಷಕ ಮೊಬೈಲ್ನಲ್ಲಿ ಪ್ಲೇ ಮಾಡಿಕೊಂಡು ಕೇಳುವಷ್ಟು ಚೆನ್ನಾಗಿವೆ. ಚಿತ್ರದುದ್ದಕ್ಕೂ ಅಜನೀಶ್ ಲೋಕನಾಥ್ಗೆ ಪೈಪೋಟಿ ನೀಡುವುದು ಅದ್ವೈತ ಗುರುಮೂರ್ತಿ ಅವರ ಕ್ಯಾಮೆರಾ ವರ್ಕ್. ಸುಂದರ ವಾರಣಾಸಿಯನ್ನು ಈ ಹಿಂದಿನ ಚಿತ್ರಗಳಲ್ಲಿ ತೋರಿಸದಷ್ಟು ವಿಭಿನ್ನವಾಗಿ ತೋರಿಸಿದ್ದಾರೆ.
ಮೈನಸ್ ಪಾಯಿಂಟ್ಗಳು
ಕ್ಲೈಮ್ಯಾಕ್ಸ್ ಟೈಮ್ ಲೂಪ್ ಕತೆಯನ್ನು ಹೊಂದಿರುವ ಈ ಚಿತ್ರಕ್ಕೆ ಅಷ್ಟೇನು ಸೆಟ್ ಆಗಲಿಲ್ಲ ಎನ್ನುವ ಫೀಲ್ ಕೊಡುತ್ತೆ, ದ್ವಿತೀಯಾರ್ಧದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುವ ನಿರ್ದೇಶಕ ಜಯತೀರ್ಥ ಅವರು ನೀಡುವ ಕ್ಲೈಮ್ಯಾಕ್ಸ್ ಟ್ವಿಸ್ಟ್ ಇನ್ನೂ ಸ್ವಲ್ಪ ಗಟ್ಟಿಯಾಗಿರಬಹುದಿತ್ತು. ಇನ್ನು ಚಿತ್ರದಲ್ಲಿ ಬರುವ ಅನೇಕ ಕಾಮಿಡಿ ಡೈಲಾಗ್ಗಳು ಪ್ರೇಕ್ಷಕನ ಮೊಗದಲ್ಲಿ ನಗು ತರುವಲ್ಲಿ ಯಶಸ್ವಿಯಾಗಿಲ್ಲ.
ಝೈದ್ ಖಾನ್ ಭರವಸೆಯ ನಟ
ಝೈದ್ ಖಾನ್ ನಟನೆ ಹಾಗೂ ಡಾನ್ಸ್ ನೋಡಿದರೆ ಇದು ಆತನ ಮೊದಲ ಸಿನಿಮಾನ ಎಂಬ ಪ್ರಶ್ನೆ ಮೂಡದೇ ಇರದು. ಸಿನಿರಸಿಕರ ಮನಗೆಲ್ಲಲು ಏನು ಬೇಕೋ ಅದರ ಮೇಲೆ ಝೈದ್ ಖಾನ್ ಚೆನ್ನಾಗಿಯೇ ಹೋಮ್ವರ್ಕ್ ಮಾಡಿದಂತಿದೆ. ಇನ್ನು ನಟಿ ಸೋನಲ್ ಮೊಂಥರಿಯೋ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ, ಸುಜಯ್ ಶಾಸ್ತ್ರಿ, ದೇವರಾಜ್ ಹಾಗೂ ಇನ್ನಿತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.


Click it and Unblock the Notifications











