'ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ'
'ಕೆಂಡಸಂಪಿಗೆ' ಚಿತ್ರದಲ್ಲಿ ನವಿರಾದ ಪ್ರೇಮ ಕಥೆ ಇದೆ. ಹಾಗಂತ ಕಡ್ಡಾಯವಾಗಿ ಡ್ಯುಯೆಟ್ ಸಾಂಗ್ ಇಟ್ಟಿಲ್ಲ. ಪ್ರೇಮಿಗಳು ಪ್ರಣಯ ಗೀತೆ ಹಾಡೋಲ್ಲ. ಪ್ರೇಕ್ಷಕರನ್ನ ಸೆಳೆಯುವುದಕ್ಕೆ ಐಟಂ ಸಾಂಗ್ ತುರುಕಿಲ್ಲ. ಕಚಗುಳಿ ಇಡುವ ಕಾಮಿಡಿ ಇಲ್ವೇ ಇಲ್ಲ.
ಸ್ಟಂಟ್-ಆಕ್ಷನ್ ಸನ್ನಿವೇಶಗಳಂತೂ ಸಿನಿಮಾದಲ್ಲಿ ಎಲ್ಲೂ ಇಲ್ಲ. ಕಣ್ಣು ಕೋರೈಸುವ ಫಾರಿನ್ ಲೋಕೇಷನ್ಸ್ ಎಕ್ಸ್ ಪೆಕ್ಟ್ ಮಾಡುವ ಹಾಗೇ ಇಲ್ಲ. ಈ ಎಲ್ಲಾ 'ಇಲ್ಲ'ಗಳ ನಡುವೆ 'ಕೆಂಡಸಂಪಿಗೆ' ಘಮ ಪ್ರೇಕ್ಷಕರಿಗೆ ಇಷ್ಟವಾಗುತ್ತೆ. ಅದೇ 'ಕೆಂಡಸಂಪಿಗೆ' ಸ್ಪೆಷಾಲಿಟಿ.
'ಕೆಂಡಸಂಪಿಗೆ' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......
ಕಥಾಹಂದರ
ರವೀಂದ್ರ (ವಿಕ್ಕಿ) ಅನ್ನುವ ಬಡ ಅನಾಥ ಹುಡುಗ ಮತ್ತು ಗೌರಿ (ಮಾನ್ವಿತ ಹರೀಶ್) ಅನ್ನುವ ಶ್ರೀಮಂತ ಹುಡುಗಿ ನಡುವಿನ ಪ್ರೇಮ ಕಹಾನಿ, ಡ್ರಗ್ ಮಾಫಿಯಾ ಮತ್ತು ಒಂದು ಕೊಲೆ ಕೇಸ್ ಸುತ್ತ ಹೆಣೆದಿರುವ 7 ದಿನಗಳ ಜರ್ನಿ 'ಕೆಂಡಸಂಪಿಗೆ'.
'ಕೆಂಡಸಂಪಿಗೆ'ಯಲ್ಲೇನಿದೆ?
ಗೌರಿ ತಾಯಿಗೆ (ಚಂದ್ರಿಕ) ಮಗಳು ಬಡ ಹುಡುಗನನ್ನ ಪ್ರೀತಿಸುತ್ತಿರುವುದು ಇಷ್ಟವಿರುವುದಿಲ್ಲ. ಹೀಗಾಗಿ, ಇಬ್ಬರ ಪ್ರೀತಿಗೆ ಫುಲ್ ಸ್ಟಾಪ್ ಇಡುವ ಜವಾಬ್ದಾರಿಯನ್ನ ಪೊಲೀಸರಿಗೆ ವಹಿಸುತ್ತಾರೆ. ಸುಖಾಸುಮ್ಮನೆ ಡ್ರಗ್ ಕೇಸ್ ನಲ್ಲಿ ಅಂದರ್ ಆಗುವ ರವಿ ಒಂದು ಕೊಲೆ ಕೇಸ್ ನಲ್ಲೂ ತಗ್ಲಾಕೊಳ್ಳುತ್ತಾನೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ರವಿ-ಗೌರಿ ಎಸ್ಕೇಪ್ ಆಗುತ್ತಾರೆ. ಪೊಲೀಸರ ಹುಡುಕಾಟ ಮತ್ತು ರವಿ-ಗೌರಿಯ ಹಾವು-ಏಣಿ ಆಟ, ಪರದಾಟ, ಗೋಳಾಟದ ಕಥೆ 'ಕೆಂಡಸಂಪಿಗೆ'.
ಎಲ್ಲರ ನಟನೆ ಹೇಗಿದೆ?
ಹೊಸಬರೇ ಆದರೂ ವಿಕ್ಕಿ ಮತ್ತು ಮಾನ್ವಿತ ಅಭಿನಯ ಚೆನ್ನಾಗಿದೆ. ಮುಗ್ಧ ಹುಡುಗನಾಗಿ ವಿಕ್ಕಿ ನಟನೆ ನೈಜವಾಗಿದೆ. ಚಂದ್ರಿಕ ಎಂದಿನಂತೆ ಗ್ಲಾಮರಸ್ ಆಗಿ ಮಿಂಚಿದ್ದಾರೆ. ಮಾನವೀಯ ಪೊಲೀಸ್ ಆಫೀಸರ್ ಆಗಿ ರಾಜೇಶ್ ನಟರಂಗ ನಟನೆಗೆ ಫುಲ್ ಮಾರ್ಕ್ಸ್ ನೀಡಲೇಬೇಕು. ಪ್ರಕಾಶ್ ಬೆಳವಾಡಿ ನಟನೆ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ.
ದುನಿಯಾ ಸೂರಿ ಪಾಸ್
'ಕೆಂಡಸಂಪಿಗೆ' ಚಿತ್ರದ ಕಥೆ ತುಂಬಾ ಸಿಂಪಲ್. ಆದರೂ, ಕಡೆವರೆಗೂ ಪ್ರೇಕ್ಷಕರಿಗೆ ಎಲ್ಲೂ ಬೋರಾಗದ ಹಾಗೆ ದುನಿಯಾ ಸೂರಿ ಅಚ್ಚುಕಟ್ಟಾಗಿ ನಿರ್ದೇಶನ ಮಾಡಿದ್ದಾರೆ. ಸತ್ಯ ಹೆಗಡೆ ಕ್ಯಾಮರಾ ಕೈಚಳಕ 'ಕೆಂಡಸಂಪಿಗೆ' ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್. ವಿ.ಹರಿಕೃಷ್ಣ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.
ಒಮ್ಮೆ ನೋಡೋಕೆ ನೋ ಪ್ರಾಬ್ಲಂ.!
ಮಾಸ್ ಮಸಾಲಾ ಚಿತ್ರಗಳ ನಡುವೆ ಕೊಂಚ ವಿಭಿನ್ನವಾಗಿ ನಿಲ್ಲುವ 'ಕೆಂಡಸಂಪಿಗೆ' ಸಿನಿಮಾ ಖಂಡಿತವಾಗಿಯೂ ದುನಿಯಾ ಸೂರಿಯವರ ಉತ್ತಮ ಪ್ರಯತ್ನ. ಚಿಕ್ಕದಾಗಿ ಚೊಕ್ಕವಾಗಿ ಇರುವ 'ಕೆಂಡಸಂಪಿಗೆ' ಒಮ್ಮೆ ನೋಡುವುದಕ್ಕಂತೂ ಖಂಡಿತ ಅಡ್ಡಿ ಇಲ್ಲ.


Click it and Unblock the Notifications











