ನಾ ನೋಡಿದ ಸಿನಿಮಾ : 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ವಿಮರ್ಶೆ
ಹಿಮದ ರಾಶಿಯ ಮಧ್ಯೆ ಮಕ್ಕಳು ಕ್ರಿಕೆಟ್ ಆಡಿಕೊಂಡಿರುತ್ತಾರೆ, ಅದನ್ನು ಕೆಲವು ಯುವಕರು ನೋಡುತ್ತಿರುತ್ತಾರೆ. 'ಹಿಯರ್ ಕಮ್ಸ್ ಇಮ್ರಾನ್ ಖಾನ್, ರೈಟ್ ಆರ್ಮ್ ಓವರ್ ದಿ ವಿಕೆಟ್ ಟು ತೆಂಡೂಲ್ಕರ್, ಆಂಡ್ ಇಟ್ ಈಸ್ ಎ ಸಿಕ್ಸ್' ಎನ್ನುವ ಕಾಮೆಂಟ್ರಿ ರೆಡಿಯೋದಲ್ಲಿ ಬರುತ್ತಿರುತ್ತದೆ. ತೆಂಡೂಲ್ಕರ್ ತೆಂಡೂಲ್ಕರ್ ಎಂದು ಹುಡುಗ ಕೂಗಿದ್ದಕ್ಕಾಗಿ, ಅಲ್ಲೇ ಇದ್ದ ಪ್ರತ್ಯೇಕತಾವಾದಿ ಯುವಕನೊಬ್ಬ ಆ ಹುಡಗನಿಗೆ ಹೊಡೆಯಲು ಆರಂಭಿಸುತ್ತಾನೆ.
Recommended Video

ಇನ್ನೋರ್ವ ಹುಡುಗನ ಸಹಾಯದೊಂದಿಗೆ ಅವರಿಬ್ಬರು ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ. ಅಲ್ಲಿಂದ ಸಿನಿಮಾ ಆರಂಭವಾಗುತ್ತದೆ. ಕಾಶ್ಮೀರ ಪಂಡಿತರ ಮೇಲೆ ಕ್ರೌರ್ಯ, ಎಸೆಯಲಾದ ದೌರ್ಜನ್ಯ, ಪಂಡಿತರು ಕಾಶ್ಮೀರ ತೊರೆದದ್ದು ಎನ್ನುವ ಸುದ್ದಿ ಹಿಂದೆಯಿಂದಲೂ ಇತ್ತು. ಆ ಸುದ್ದಿಗಳಿಗೆ ಸಾಕ್ಷಿಯಂತೆ ಚಿತ್ರದ ಪ್ರತೀ ಫ್ರೇಂ ಅನ್ನು ನಿರ್ದೇಶಕ ವಿವೇಕ್ ರಂಜನ್ಅಗ್ನಿಹೋತ್ರಿ ಹಣೆದಿದ್ದಾರೆ.
ಅಂದಿನ ಘಟನೆಗಳನ್ನು ವಸ್ತುನಿಷ್ಠವಾಗಿ ನಿರ್ದೇಶಕರು ತೆರೆಯ ಮೇಲೆ ತಂದಿದ್ದಾರೋ, ಈ ಚಿತ್ರದಿಂದ ಬಿಜೆಪಿಗೆ ಅನುಕೂಲವಾಗುತ್ತೋ, ಹಿಂದೂಗಳ ಮತ ಕ್ರೋಢೀಕರಣಗೊಳ್ಳುತ್ತೋ ಎನ್ನುವ ಎಲ್ಲಾ ಚರ್ಚೆಗಳನ್ನು ಬದಿಗೊತ್ತಿ ಇದೊಂದು ಸಿನಿಮಾ ಎಂದು ನೋಡಿದರೆ, ದಿ ಕಾಶ್ಮೀರ್ ಫೈಲ್ ಎ ಮಸ್ಟ್ ವಾಚ್ ಸಿನಿಮಾ..
1990ರಲ್ಲಿ ಕಾಶ್ಮೀರಿ ಪಂಡಿತರ ವಲಸೆಯ ಸುತ್ತಲಿನ ಪರಿಸ್ಥಿತಿಯನ್ನು ಆಧಾರವಾಗಿ ಇಟ್ಟುಕೊಂಡು ಚಿತ್ರಕಥೆಯನ್ನು ಹಣೆಯಲಾಗಿದೆ. ತಮ್ಮ ತಂದೆ ತಾಯಿ ಅಪಘಾತದಲ್ಲಿ ಮೃತ ಪಟ್ಟರು ಎಂದು ತಾತ ಪುಷ್ಕರ್ ನಾಥ್ ಹೇಳಿದ ನಂತರ, ಜೆಎನ್ಯು ವಿದ್ಯಾರ್ಥಿ ಕೃಷ್ಣ ಪಂಡಿತ್ ಕಾಶ್ಮೀರಕ್ಕೆ ಪ್ರಯಾಣಿಸುತ್ತಾನೆ. ಅಲ್ಲಿ ಜೆಎನ್ಯು ಉಪನ್ಯಾಸಕಿ ರಾಧಿಕಾ ಮೆನನ್ ಪ್ರಭಾವಕ್ಕೆ ಒಳಗಾಗುವ ನಾಯಕನಿಗೆ, ತನ್ನ ತಂದೆ ತಾಯಿಯ ಸಾವಿಗೆ ನಿಜವಾದ ಕಾರಣ ತಿಳಿಯುತ್ತದೆ.
ಭಯೋತ್ಪಾದಕರ ಹಿಂಸೆಗೆ ನಲುಗಿ ಪ್ರಾಣ ಕಳೆದುಕೊಂಡ ಒಂದು ಕುಟುಂಬದ ಕಥೆ
1990ರ ಸಮಯದಲ್ಲಿ ಕಾಶ್ಮೀರದಲ್ಲಿನ ಭಯೋತ್ಪಾದಕರ ಹಿಂಸೆಗೆ ನಲುಗಿ ಪ್ರಾಣ ಕಳೆದುಕೊಂಡ ಒಂದು ಕುಟುಂಬದ ಕಥೆಯನ್ನು ಜನರ ಮುಂದೆ ಇಡಲಾಗಿದೆ. ಕಾಶ್ಮೀರಿ ಪಂಡಿತರ ಮೇಲೆ ಅಲ್ಲಿನ ಮುಸ್ಲಿಮರಿಗೆ ದ್ವೇಷ ಯಾಕೆ? ಅಂತಿಮವಾಗಿ ಹಿಂದೂ ಕುಟುಂಬಗಳ ಪರಿಸ್ಥಿತಿ ಏನಾಯಿತು? ಅಂದಿನ ಸರ್ಕಾರ ಎಡವಿದ್ದು ಎಲ್ಲಿ.. ಮುಂತಾದ ಪ್ರಶ್ನೆಗಳಿಗೆ ಉತ್ತರ ದೊರಕಿಸಲು ನಿರ್ದೇಶಕರು ವಸ್ತುನಿಷ್ಠ ಪ್ರಯತ್ನವನ್ನು ಮಾಡಿದ್ದಾರೆ.
ಮುಸಲ್ಮಾನ್ ಬನ್ ಜಾವೋ, ನಹಿತೋ ಬಾಗ್ ಜಾವೋ
ಹಿಂದೂಸ್ಥಾನ್ ಮುರ್ದಾಬಾದ್, ಗೋ ಬ್ಯಾಕ್ ಇಂಡಿಯನ್ ಡಾಗ್ಸ್, ಪಾಕಿಸ್ತಾನ್ ಜಿಂದಾಬಾದ್ ಮುಂತಾದ ಗೋಡೆಬರಹಗಳು, ದೇಶ ವಿರೋಧಿ ಘೋಷಣೆಗಳು, ಮುಸಲ್ಮಾನ್ ಬನ್ ಜಾವೋ, ನಹಿತೋ ಬಾಗ್ ಜಾವೋ ಮುಂತಾದ ಡೈಲಾಗಗಳು, ಮಕ್ಕಳು ಮತ್ತು ಹೆಂಗಸರ ಮೇಲೆ ದೌರ್ಜನ್ಯ ಚಿತ್ರದುದ್ದಕ್ಕೂ ಇರುವುದು ಚಿತ್ರಕಥೆಗೆ ಪೂರಕವಾಗಿರಬಹುದು. ಆರ್ಟಿಕಲ್ 370 ತೆಗೆದು ಹಾಕಲು ಪುಷ್ಕರ್ ನಾಥ್ ಪಂಡಿತ್ ನಡೆಸುವ ಹೋರಾಟಗಳು ಇಡೀ ಸಿನಿಮಾಗೆ ಹೊಸ ಆಯಾಮವನ್ನು ನೀಡುತ್ತದೆ.
ಕಾಶ್ಮೀರಿ ಪಂಡಿತರ ಹತ್ಯೆ, ವಲಸೆ ಕುರಿತ ಘಟನೆಗಳ ಸುತ್ತ ನಿರ್ದೇಶ ಅಗ್ನಿಹೋತ್ರಿ ಚಿತ್ರಕಥೆ
ಡ್ಯಾನ್ಸ್, ಫೈಟ್ ಮುಂತಾದ ಮನರಂಜನೆಯ ಅಂಶಗಳನ್ನು ಬದಿಗಿಟ್ಟು ಚಿತ್ರಕಥೆಗೆ ಬೇಕಾಗಿರುವ ಅಂಶಗಳು, ಕಾಶ್ಮೀರಿ ಪಂಡಿತರ ಹತ್ಯೆ, ವಲಸೆ ಕುರಿತ ಘಟನೆಗಳ ಸುತ್ತ ನಿರ್ದೇಶ ಅಗ್ನಿಹೋತ್ರಿ ಚಿತ್ರಕಥೆ ಹಣೆದಿದ್ದಾರೆ. ಕಾಶ್ಮೀರದ ಕುರಿತಾದ ವಿಭಿನ್ನ ಆಯಾಮಗಳನ್ನೂ ಚಿತ್ರದಲ್ಲಿ ತೋರಿಸಲಾಗಿರುವುದರಿಂದ, ಈ ಸಿನಿಮಾ ಇಂದು ಈ ಮಟ್ಟಕ್ಕೆ ಚರ್ಚೆಯ ಕೇಂದ್ರಬಿಂದುವಾಗಿ ನಿಂತಿದೆ. ಪ್ರತ್ಯೇಕತಾವಾದಿಗಳು ಟೆರರಿಸ್ಟ್, ದೇಶದ್ರೋಹಿಗಳಲ್ಲ ಎನ್ನುವ ಗುಂಪಿನ ನಾಯಕರ ಸಮರ್ಥನೆಗಳು, ಕಾಶ್ಮೀರದ ಸಮಸ್ಯೆಯಲ್ಲಿ ರಾಜಕೀಯ ನಾಯಕರುಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ವಿಚಾರವನ್ನೂ ನಿರ್ದೇಶಕರು ಸಮರ್ಥವಾಗಿ ತೆರೆಗೆ ತಂದಿದ್ದಾರೆ.
ತಮ್ಮ ನಿಲುವು ಯಾವುದರ ಪರ ಇದೆ ಎಂಬುದನ್ನು ತೋರಿಸಿದ್ದಾರೆ
ಕಾಶ್ಮೀರದ ಸಮಸ್ಯೆಗೆ ಸಿನಿಮಾದಲ್ಲಿ ಎರಡು ಆಯಾಮದ ನಿರೂಪಣೆಯನ್ನು ನೀಡಿದ್ದರೂ, ಅಂತಿಮವಾಗಿ ನಿರ್ದೇಶಕರು ತಮ್ಮ ನಿಲುವು ಯಾವುದರ ಪರ ಇದೆ ಎಂಬುದನ್ನು ತೋರಿಸಿದ್ದಾರೆ. ಸುದೀರ್ಘ 166 ನಿಮಿಷದ ಸಿನಿಮಾ ಇದಾಗಿದ್ದು, ಅಲ್ಲಲ್ಲಿ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ರೋಹಿತ್ ಶರ್ಮಾ ಅವರ ಹಿನ್ನೆಲೆ ಸಂಗೀತ ಈ ಸಿನಿಮಾದ ಮುಖ್ಯ ಹೈಲೈಟ್ ಆಗಿದೆ. ಉದಯ್ ಸಿಂಗ್ ಮೊಹಿತೇ ಅವರ ಛಾಯಾಗ್ರಹಣ ಚಿತ್ರಕ್ಕಿರುವ ಇನ್ನೊಂದು ಪ್ಲಸ್ ಪಾಯಿಂಟ್.
ಗಟ್ಟಿ ನಿರೂಪಣೆಯಿಂದ ಹೇಳಲು ನಿರ್ದೇಶಕರು ಪ್ರಯತ್ನಿಸಬಹುದಿತ್ತು
ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದೆ. ಮಿಥುನ್ ಚಕ್ರವರ್ತಿ, ಪ್ರಕಾಶ್ ಬೆಳವಾಡಿ, ಪುನೀತ್ ಇಸ್ಸಾರ್, ಪಲ್ಲವಿ ಜೋಶಿ, ದರ್ಶನ್ ಕುಮಾರ್, ಚಿನ್ಮಯ್ ಮಂಡ್ಳೇಕರ್, ಅಮಾನ್ ಇಕ್ಬಾಲ್ ಮುಂತಾದ ಕಲಾವಿದರು ಉತ್ತಮ ಅಭಿನಯವನ್ನು ನೀಡಿದ್ದಾರೆ. ಆದರೆ, ರಾಜಕೀಯ ಹಿನ್ನಲೆ ಏನೇ ಇರಲಿ, ಅನುಪಮ್ ಖೇರ್ ಅವರ ಅಭಿನಯವಂತೂ ಅದ್ಭುತ. ಯುವಜನತೆಗೆ ಹಿಂದೆ ಏನಾಗಿತ್ತು ಎನ್ನುವುದನ್ನು ಇನ್ನಷ್ಟು ಗಟ್ಟಿ ನಿರೂಪಣೆಯಿಂದ ಹೇಳಲು ನಿರ್ದೇಶಕರು ಪ್ರಯತ್ನಿಸಬಹುದಿತ್ತು. ಆದರೂ, ಕಾಶ್ಮೀರದ ಸಮಸ್ಯೆಗಳ ಬಗ್ಗೆ ಅರಿವು ಇರುವವರಿಗೆ ಈ ಸಿನಿಮಾ ಇಷ್ಟವಾಗಬಹುದು, ಇಲ್ಲದಿದ್ದವರಿಗೂ ಇಷ್ಟವಾಗಬಹುದು.


Click it and Unblock the Notifications











