Thalaivii Twitter Review: ಮಿಶ್ರ ಪ್ರತಿಕ್ರಿಯೆ ಪಡೆದ ಕಂಗನಾ 'ತಲೈವಿ'
ಕಂಗನಾ ರಣಾವತ್ ಅಭಿನಯದ 'ತಲೈವಿ' ಸಿನಿಮಾ ಚಿತ್ರಮಂದಿರಗಳಿಗೆ ಎಂಟ್ರಿ ಕೊಟ್ಟಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್ ಎನ್ನುವ ಕಾರಣಕ್ಕೆ ಹೆಚ್ಚು ಕುತೂಹಲ ಮೂಡಿಸಿದ್ದ ತಲೈವಿ ಮೊದಲ ದಿನ ಮೊದಲ ಶೋ ನೋಡಿದ ಪ್ರೇಕ್ಷಕರು ಟ್ವಿಟ್ಟರ್ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಎಲ್ ವಿಜಯ್ ನಿರ್ದೇಶನ ಹಾಗೂ ವಿಷ್ಣುವರ್ಧನ್ ಇಂದುರಿ ನಿರ್ಮಾಣದಲ್ಲಿ ತಯಾರಾಗಿದ್ದ ಈ ಸಿನಿಮಾ ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಿದೆ. ಕಂಗನಾ ಜೊತೆಯಲ್ಲಿ ಅರವಿಂದ್ ಸ್ವಾಮಿ ಅಭಿನಯಿಸಿದ್ದು, ಎಂಜಿಆರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರೀಮಿಯರ್ ಪ್ರದರ್ಶನಗಳಲ್ಲಿ ತಲೈವಿ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ, ಪ್ರೇಕ್ಷಕರ ಪ್ರಭುಗಳು ಸಿನಿಮಾ ನೋಡಿದ್ದು, ಚಿತ್ರದ ಬಗ್ಗೆ ಏನಂದ್ರು? ಮುಂದೆ ಓದಿ...
ಕಂಗನಾ ರಣಾವತ್ ದಿ ಬೆಸ್ಟ್
''ಪ್ರಾಮಾಣಿಕವಾಗಿ ಹೇಳುವುದಾದರೆ ತಲೈವಿ ಸಿನಿಮಾ ಕಂಗನಾ ರಣಾವತ್ ವೃತ್ತಿ ಜೀವನದಲ್ಲಿ ದಿ ಬೆಸ್ಟ್. ಅತ್ಯದ್ಭುತ ನಟನೆ. ತೆರೆಮೇಲೆ ನಿಜವಾದ ಜಯಲಲಿತಾ ಅವರನ್ನೇ ನೋಡಿದಂತೆ ಭಾಸವಾಗುತ್ತದೆ. ನಿಜಕ್ಕೂ ಮಂತ್ರಮುಗ್ದರಾಗುತ್ತೀರಾ. ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ಅತ್ಯುತ್ತಮ ಎನಿಸಿಕೊಂಡಿದ್ದಾರೆ'' ಎಂದು ಆಲ್ವೇಸ್ ಬಾಲಿವುಡ್ ಎಂಬ ಟ್ವಿಟ್ಟರ್ ಖಾತೆ ಪೋಸ್ಟ್ ಮಾಡಿದೆ.
ಅದ್ಭುತವಾದ ಬಯೋಪಿಕ್
''ವಾಹ್, ತಲೈವಿ ಚಿತ್ರದಲ್ಲಿ ಕಂಗನಾ ರಣಾವತ್ ಅವರದ್ದು ಎಂತಹ ಅದ್ಭುತ ಪ್ರದರ್ಶನ. ಜಯಲಲಿತಾ ಅವರ ಜೀವನಚರಿತ್ರೆಯನ್ನು ಸೂಪರ್ ಚಿತ್ರಿಸಲಾಗಿದೆ. ಸೂಪರ್ ಕಾಸ್ಟ್'' ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ನಿರ್ದೇಶಕ ವಿಜಯ್ ಯಶಸ್ವಿಯಾಗಿದ್ದಾರೆ
''ಒಂದು ಬಯೋಪಿಕ್ ಮಾಡುವುದು ಬಹಳ ಕಠಿಣವಾದ ಕೆಲಸ. ಆದರೆ ಜಯಲಲಿತಾ ಅವರ ಹೋರಾಟ ಕಥೆ ಆಯ್ಕೆ ಮಾಡಿಕೊಂಡ ನಿರ್ದೇಶಕ ವಿಜಯ್ ಯಶಸ್ಸು ಸಾಧಿಸಿದ್ದಾರೆ. ಇಡೀ ಚಿತ್ರವನ್ನು ಅರವಿಂದ್ ಸ್ವಾಮಿ ಮತ್ತು ಕಂಗನಾ ರಣಾವತ್ ಹೆಗಲ ಮೇಲೆ ಹೊತ್ತುಕೊಂಡು ಮಾಡಿದ್ದಾರೆ. ಈ ಚಿತ್ರ ಬ್ಲಾಕ್ ಬಸ್ಟರ್ ಆಗಲಿದೆ. ಅದಕ್ಕೆ ಅರವಿಂದ್ ಸ್ವಾಮಿಯ ಶಕ್ತಿ ಇದೆ'' ಎಂದು ಓರ್ವ ನೆಟ್ಟಿಗ ಟ್ವೀಟ್ ಮಾಡಿದ್ದಾರೆ.
ಅತಿ ಕೆಟ್ಟ ಸಿನಿಮಾ
''ಈಗಷ್ಟೇ ತಲೈವಿ ಸಿನಿಮಾ ನೋಡಿದೆ. ಬಾಲಿವುಡ್ನಲ್ಲಿ ತಯಾರಾದ ಅತಿ ಕೆಟ್ಟ ಸಿನಿಮಾ ಇದು ಎನ್ನಬಹುದು. ದಕ್ಷಿಣದ ನಿರ್ದೇಶಕರೊಂದಿಗೆ ಯಾವ ಕಾರಣಕ್ಕೂ ಸಿನಿಮಾ ಮಾಡಬೇಡಿ ಎಂದು ನಾನು ಆಗ್ರಹಿಸುತ್ತೇನೆ'' ಎಂದು Bigreviewer ಟ್ವಿಟ್ಟರ್ ಖಾತೆ ಟ್ವೀಟ್ ಮಾಡಿದೆ.
ಇದು ಸರಾಸರಿ ಸಿನಿಮಾ
''ತಲೈವಿ ಕುರಿತಾದ ಅತಿಯಾದ ನಿರೀಕ್ಷೆಗಳ ನಡುವೆ ಇದೊಂದು ಸರಾಸರಿ ಸಿನಿಮಾ ಆಗಿದೆ. ಭಯಾನಕ ಬರವಣಿಗೆಯಿಂದ ಇದು ಸಾಧಾರಣ ಚಿತ್ರಕ್ಕಿಂತ ಕಳಪೆ ಎನ್ನಬಹುದು. ಕೆಲವು ದೃಶ್ಯಗಳಲ್ಲಿ ಮಾತ್ರ ಕಂಗನಾ ತುಂಬಾ ಪ್ರಭಾವಶಾಲಿಯಾಗಿ ಕಾಣ್ತಾರೆ. ಅರವಿಂದ್ ಸ್ವಾಮಿ ಪಾತ್ರ ಮಾತ್ರವೇ ಚಿತ್ರಕ್ಕೆ ಪ್ಲಸ್ ಪಾಯಿಂಟ್' ಎಂದು Sahil prasad ಎಂಬ ಟ್ವಿಟ್ಟರ್ ಖಾತೆ ಹೇಳಿದೆ.
ಪವರ್ಫುಲ್ ತಲೈವಿ
''ಹಿಂದಿಯಲ್ಲಿ ರಿಲೀಸ್ ಆದ ಬಯೋಪಿಕ್ಗಳಲ್ಲಿ ಅತ್ಯಂತ ಶಕ್ತಿಯುತವಾದ ಸಿನಿಮಾ ಇದು. ಗಟ್ಟಿಯಾದ ಭಾವನೆ + ಅದ್ಭುತ ನಾಟಕೀಯ ಸನ್ನಿವೇಶಗಳು + ಕಲಾವಿದರಿಂದ ಅತ್ಯುತ್ತಮ ಪ್ರದರ್ಶನ (ಪ್ರಶಸ್ತಿಗೆ ಅರ್ಹವಾದ ಕಂಗನಾ ರಣಾವತ್ ಮತ್ತು ಅರವಿಂದ್ ಸ್ವಾಮಿ ನಟನೆ) ಪ್ರಮುಖ ಅಂಶಗಳು'' ಎಂದು ತರಣ್ ಆದರ್ಶ್ ವಿಮರ್ಶಿಸಿದ್ದಾರೆ. ಒಂದೇ ಒಂದು ಪದದಲ್ಲಿ ಹೇಳುವುದಾದರೆ 'ಪವರ್ಫುಲ್' ಎಂದಿದ್ದಾರೆ.
ಇನ್ನು ಜಯಲಲಿತಾ ಅವರ ಬಯೋಪಿಕ್ ಚಿತ್ರವನ್ನು ಎ ಎಲ್ ವಿಜಯ್ ನಿರ್ದೇಶಿಸಿದ್ದಾರೆ. ವಿಜಯಂದ್ರ ಪ್ರಸಾದ್ ಕಥೆ ಮಾಡಿದ್ದಾರೆ. ವಿಷ್ಣುವರ್ಧನ ಇಂದುರಿ, ಹಿತೇಶ್ ಟಕ್ಕರ್, ತಿರುಮಲ ರೆಡ್ಡಿ ಜಂಟಿಯಾಗಿ ಈ ಚಿತ್ರ ನಿರ್ಮಿಸಿದ್ದು, ಜೀ ಸ್ಟುಡಿಯೋಸ್ ವಿತರಣೆಗೆ ಕೈ ಜೋಡಿಸಿದೆ.


Click it and Unblock the Notifications











