ಚಿತ್ರ ವಿಮರ್ಶೆ: ಆನೆ ಪಟಾಕಿ ಠುಸ್ ಪಟಾಕಿ
ಚಿತ್ರಕ್ಕೆ ನೀಡಿದ ವಿಭಿನ್ನ ಪ್ರಚಾರವೇನೋ ಭರ್ಜರಿಯಾಗಿತ್ತು. ಆದರೆ 'ಆನೆ ಪಟಾಕಿ' ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿದೆ. ಹೆಸರಿಗೆ ತಕ್ಕಂತೆ ಚಿತ್ರ ಸದ್ದು ಮಾಡದೆ ಠುಸ್ ಎಂಬಂತಿದೆ. ಸಿನಿಮಾ ನೋಡಿದ ಅನುಭವಕ್ಕಿಂತಲೂ ಹಾಸ್ಯೋತ್ಸವ ನೋಡಿದಂತಾಗುತ್ತದೆ ಪ್ರೇಕ್ಷಕನ ಪರಿಸ್ಥಿತಿ. ಅಷ್ಟರ ಮಟ್ಟಿಗೆ ನಿರ್ದೇಶಕ ಶೇಖರ್ ಬಂಡಿಯಪ್ಪ ಗೆದ್ದಿದ್ದಾರೆ.
ಸೃಜನ್ ಲೋಕೇಶ್ ಅವರು ಮಾತಿನಲ್ಲಿ ಲಕ್ಷ್ಮಿ ಪಟಾಕಿ. ಆದರೆ ಅಭಿನಯಲ್ಲಿ ಚಿನಕುರುಳಿ. ಚಿತ್ರದಲ್ಲಿ ಡಬ್ಬಲ್, ತ್ರಿಬ್ಬಲ್ ಮೀನಿಂಗ್ ಡೈಲಾಗ್ ಗಳಿಗೆ ಬರವಿಲ್ಲದಂತೆ ನೋಡಿಕೊಂಡಿದ್ದಾರೆ ಸಂಭಾಷಣೆಯನ್ನೂ ಹೆಣೆದಿರುವ ನಿರ್ದೇಶಕರು. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ ಎಂಬುದು ನಿಮ್ಮ ಗಮನಕ್ಕಿರಲಿ.
ಇನ್ನು ಚಿತ್ರದ ನಾಯಕಿ ಪಾರ್ವತಿ ನಿರ್ಬನ್ ಅವರದು ನಿರ್ಭಾವುಕ ಅಭಿನಯ. ಚೆಲ್ಲುಚೆಲ್ಲಾಗಿ ನಗುವುದು ಬಿಟ್ಟರೆ ಅಭಿನಯ ಅಷ್ಟಕ್ಕಷ್ಟೆ. ಇರುವುದರಲ್ಲಿ ಒಂಚೂರು ಕಣ್ಣಿಗೆ ಹಿತವಾಗಿರುವುದು ಜೆ.ಎಸ್.ವಾಲಿ ಅವರ ಛಾಯಾಗ್ರಹಣ.ಇನ್ನು ಕಥೆ ವಿಚಾರಕ್ಕೆ ಬರುವುದಾರೆ ಇದೊಂದು ಹಳ್ಳಿಹೈದನ ಚಿತ್ರ. ಮಂಡ್ಯದ ಬೆಸಗರಹಳ್ಳಿ ಹೈದ ಬೈರೇಗೌಡ ಹೀರೋ ಆಗಬೇಕು ಎಂದು ಬೆಂಗಳೂರಿಗೆ ಬರುತ್ತಾನೆ. ಆದರೆ ದಾರಿತಪ್ಪಿದ ಹೈದ ನಿರ್ಮಾಪಕರೊಬ್ಬರ ಮದುವೆ ಆನಿವರ್ಸರಿಗೆ ಹೋಗುತ್ತಾನೆ. ಅಲ್ಲಿ ಏನೆಲ್ಲಾ ಎಡವಟ್ಟುಗಳನ್ನು ಮಾಡುತ್ತಾನೆ ಎಂಬುದೇ ಚಿತ್ರದ ಕಥಾಹಂದರ.
ಕಥೆ ಅಲ್ಲಿಯೇ ಗಿರಕಿಹೊಡೆಯುತ್ತದೆ. ಪ್ರೇಕ್ಷಕರು ಚಡಪಡಿಸುವಂತಾಗುತ್ತದೆ. ನಿರ್ಮಾಪಕರ ಮನೆಯಿಂದ ಕಥೆಯನ್ನು ಒಂಚೂರು ಹೊರಗೆ ಎಳೆತರಲು ನಿರ್ದೇಶಕರು ಪ್ರಯತ್ನಪಟ್ಟಿದ್ದರೆ ಪ್ರೇಕ್ಷಕರ ಪಾಡು ಪರದಾಟವಾಗುತ್ತಿರಲಿಲ್ಲ.
ಚಿತ್ರದಲ್ಲಿ ಗಮನಸೆಳೆಯುವ ಅಂಶಗಳೆಂದರೆ ರಷ್ಯನ್ ನೃತ್ಯಗಾರ್ತಿಯ ಬ್ಯಾಲೆ. ಧರ್ಮವಿಶ್ ಅವರ ಸಂಗೀತ. ಅವರ ಸಂಗೀತದಲ್ಲಿ ಮೂಡಿಬಂದಿರುವ ಟೈಟಲ್ ಸಾಂಗ್ ಹಾಗೂ ಎಂಟನೆ ತರಗತಿ ಹಾಡುಗಳು ಇಷ್ಟವಾಗುತ್ತವೆ. ಕ್ಲೈಮ್ಯಾಕ್ಸ್ ಸನ್ನಿವೇಶದ ಚಿತ್ರೀಕರಣವೂ ಗಮನಸೆಳೆಯುತ್ತದೆ.
ಉಳಿದಂತೆ ರಂಗಾಯಣ ರಘು, ಸಾಧುಕೋಕಿಲ ಅವರು ನಗಿಲು ಪ್ರಯತ್ನಿಸಿದ್ದಾರೆ. ಮಿಮಿಕ್ರಿ ದಯಾನಂದ್, ಭಾಸ್ಕರ್, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಲು ಶ್ರಮಿಸಿದ್ದಾರೆ. ಚಿತ್ರವನ್ನು ಒಮ್ಮೆ ನೋಡಲೇಬೇಕು ಅನ್ನಿಸಿದರೆ ಧಾರಾಳವಾಗಿ ನೋಡಬಹುದು.
ಚಿತ್ರ: ಆನೆಪಟಾಕಿ (ಯು/ಎ ಸರ್ಟಿಫಿಕೇಟ್)
ನಿರ್ಮಾಪಕ: ಸುರೇಶ್ ಬಾಬು ಎಲ್ ಪಿ
ನಿರ್ದೇಶಕ: ಶೇಖರ್ ಬಂಡಿಯಪ್ಪ
ಛಾಯಾಗ್ರಹಣ: ಜೆ.ಎಸ್.ವಾಲಿ
ಸಂಗೀತ: ಧರ್ಮವಿಶ್
ಪಾತ್ರವರ್ಗ: ಸೃಜನ್ ಲೋಕೇಶ್, ಪಾರ್ವತಿ ನಿರ್ಬನ್, ಭಾಸ್ಕರ್, ರಂಗಾಯಣ ರಘು, ಸಾಧುಕೋಕಿಲ, ಜೈಜಗದೀಶ್, ವಿಜಯಲಕ್ಷ್ಮಿಸಿಂಗ್ ಮುಂತಾದವರು.


Click it and Unblock the Notifications












