ಚಿತ್ರ ವಿಮರ್ಶೆ : ಚೆಲುವಯ್ಯ ಚೆಲುವೋ 'ಅಪ್ಪಯ್ಯ'
ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರು ಈ ಬಾರಿ ಅಪ್ಪಟ ಪ್ರೇಮಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಪ್ರೇಮಕಥೆಯ ಜೊತೆಗೆ ಮಾಸ್ ಪ್ರಿಯರಿಗೆ ಇಷ್ಟವಾಗುವ ಅಂಶಗಳು ಚಿತ್ರದಲ್ಲಿವೆ. ಉತ್ತರ ಕರ್ನಾಟಕದಲ್ಲಿ ನಡೆದ ನೈಜಕಥೆಗೆ ಎಸ್ ನಾರಾಯಣ ತಮ್ಮದೇ ಆದಂತಹ ಸಿನಿಮೀಯ ಸ್ಪರ್ಶ ನೀಡಿದ್ದಾರೆ.
ನವಿರಾದ ಪ್ರೇಮಕಥೆ ಹೇಳುವಾಗ ಎಲ್ಲೋ ಒಂದು ಕಡೆ 'ಚೆಲುವಿನ ಚಿತ್ತಾರ' ನೆನಪಾಗುತ್ತದೆ. ಅನಾಥ ಅಪ್ಪಯ್ಯನನ್ನು (ಶ್ರೀನಗರಕಿಟ್ಟಿ) ಗೊರವಯ್ಯ (ಸುರೇಶ್ಚಂದ್ರ) ಸಾಕುತ್ತಾನೆ. ಸಾರಾಯಿ ಬಾಟಲಿಗಳ ನಡುವೆ ಬೆಳೆಯುವ ಅಪ್ಪಯ್ಯನಿಗೆ ಗೊರವಯ್ಯ ಅಂದ್ರೆ ತುಂಬ ಇಷ್ಟ.
ಅಕ್ಕಪಕ್ಕದೂರಿನ ದ್ವೇಷದ ದಳ್ಳುರಿಯಲ್ಲಿ ಕಥೆ ಸಾಗುತ್ತದೆ. ಗೊರವಯ್ಯನ ವಿರುದ್ಧ ತೊಡೆತಟ್ಟುವ ವಿರೋಧಿ ಗುಂಪಿನ ನಾಯಕನ ಮಗಳನ್ನೇ ಅಪ್ಪಯ್ಯ ಪ್ರೇಮಿಸುತ್ತಾನೆ. ಈ ದ್ವೇಷದ ಕಿಡಿಯಲ್ಲಿ ಇವರಿಬ್ಬರ ಪ್ರೀತಿ ಅರಳುತ್ತದೋ ಮುದುಡುತ್ತದೋ ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು.ಮಾಸ್ ಪಾತ್ರದಲ್ಲಿ ಶ್ರೀನಗರಕಿಟ್ಟಿ ಮಿಂಚಿದ್ದಾರೆ. ಚಿತ್ರದ ನಾಯಕಿ ಭಾಮಾ ಸಹ ಅಷ್ಟೇ ಬೊಂಬಾಟ್ ಅಭಿನಯ ನೀಡಿದ್ದಾರೆ. ಗೊರವಯ್ಯನಾಗಿ ಸುರೇಶ್ಚಂದ್ರ ಅವರ ಪಾತ್ರ ಗಮನಾರ್ಹ. ಇದೆಲ್ಲಕ್ಕೂ ಕಳಶವಿಟ್ಟಂತೆ ಜಗದೀಶ್ ವಾಲಿ ಅವರ ಛಾಯಾಗ್ರಹಣವಿದೆ.
ಈ ಬಾರಿಯೂ ನಾರಾಯಣ್ ಅವರು ಕತೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಂಗೀತದಲ್ಲಿ ಮಿಂಚಿದ್ದಾರೆ. ಪೋಷಕ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಆದರೆ ಮಚ್ಚಿನ ಅಬ್ಬರ ಇನ್ನು ಸ್ವಲ್ಪ ಕಡಿಮೆಯಾಗಿದ್ದರೆ ಚಿತ್ರ ಇನ್ನಷ್ಟು ಸೊಗಸಾಗಿರುತ್ತಿತ್ತು.
ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಚಿತ್ರ ಎಲ್ಲೂ ಬೋರು ಹೊಡೆಸುವುದಿಲ್ಲ. ಉತ್ತರ ಕನ್ನಡ ಭಾಷೆಯಲ್ಲಿ ಕಿಟ್ಟಿ ಗಮನಸೆಳೆಯುತ್ತಾರೆ. ಚಿತ್ರದಲ್ಲಿ ಕಾಮಿಡಿ ಅಷ್ಟಾಗಿ ಇಲ್ಲ ಅನ್ನಿಸಿದರೂ ಸ್ವತಃ ಎಸ್ ನಾರಾಯಣ್ ಅಭಿನಯಿಸಿದ್ದು ಕಚಗುಳಿ ಇಡುತ್ತಾರೆ. ಹಿರಿಯೂರಿನ ದೊಡ್ಡದಾದ ಬಯಲೇ ಇಲ್ಲಿನ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತದೆ. ಅದೂ ಒಂದು ಪಾತ್ರದಂತೆ ಭಾಸವಾಗುತ್ತದೆ.
ಚಿತ್ರ: ಅಪ್ಪಯ್ಯ
ನಿರ್ಮಾಣ: ಶ್ರೀಮತಿ ಭಾಗ್ಯವತಿ ಕಂಬೈನ್ಸ್
ನಿರ್ದೇಶನ: ಎಸ್ ನಾರಾಯಣ್
ಛಾಯಾಗ್ರಹಣ: ಜಗದೀಶ್ ವಾಲಿ
ಪಾತ್ರವರ್ಗ: ಶ್ರೀನಗರ ಕಿಟ್ಟಿ, ಭಾಮಾ, ಸುರೇಶ್ಚಂದ್ರ


Click it and Unblock the Notifications












