'ಅಕ್ಷತೆ'ಯಲ್ಲಿ 'ದಕ್ಷತೆ' ಇಲ್ಲ ಎಂದ ಕನ್ನಡ ಸಿನಿ ವಿಮರ್ಶಕರು.!
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಬಾಲಿ' ಬಿರುಗಾಳಿ ಎಲ್ಲೆಡೆ ಜೋರಾಗಿದ್ದರೂ, ಸ್ಯಾಂಡಲ್ ವುಡ್ ನಲ್ಲಿ 'ಅಕ್ಷತೆ' ಎಂಬ ಚಿತ್ರವನ್ನ ಬಿಡುಗಡೆ ಮಾಡುವ ಗಟ್ಟಿ ಮನಸ್ಸು ಮಾಡಿದವರು ನಿರ್ದೇಶಕ ರಾಜು ದೇವಸಂದ್ರ.
ಪ್ರಾಮಾಣಿಕ ಜಿಲ್ಲಾಧಿಕಾರಿಯೊಬ್ಬರ ನಿಗೂಢ ದುರಂತದ ಕಥೆ ಈ ಸಿನಿಮಾ ಅಂತ ಹೇಳಲಾಗಿದ್ದರಿಂದ 'ಅಕ್ಷತೆ' ಕುತೂಹಲ ಕೆರಳಿಸಿತು. ಆದ್ರೆ, ಸಿನಿಮಾ ನೋಡಿ ಬಂದವರಿಗೆ ಖುಷಿ ಆದ ಹಾಗಿಲ್ಲ.
'ಅಕ್ಷತೆ' ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿರುವವರೇ ಹೆಚ್ಚು. ಬೇಕಾದ್ರೆ, ಕನ್ನಡದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಅಕ್ಷತೆ' ಚಿತ್ರ ಕುರಿತ ವಿಮರ್ಶೆಯನ್ನ ನೀವೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ.....
ಪ್ರೇಮದ ಅಕ್ಷತೆಯಲ್ಲಿ ಮಾಯವಾದ ದಕ್ಷತೆ - ಉದಯವಾಣಿ
ಪ್ರಾಮಾಣಿಕ ಜಿಲ್ಲಾಧಿಕಾರಿಯೊಬ್ಬರ ನಿಗೂಢ ದುರಂತ...- ಇದನ್ನಷ್ಟೇ ಓದಿಕೊಂಡು ಚಿತ್ರದಲ್ಲಿ ಇನ್ನೇನೋ ಇರಬಹುದು ಎಂಬ ಕುತೂಹಲದಿಂದ ಒಳ ಹೊಕ್ಕರೆ, ಅಲ್ಲಿ ಯಾರ ಪ್ರಾಮಾಣಿಕತೆಯೂ ಕಾಣಸಿಗಲ್ಲ, ಎಂಥಾ ನಿಗೂಢತೆಯೂ ಕಂಡುಬರಲ್ಲ! ಅಸಲಿಗೆ ಅಲ್ಲಿ ಏನೇನು ಆಗಿ ಹೋಗುತ್ತೆ ಅಂತ ಎರಡು ಗಂಟೆ ಕಾದು ಕುಳಿತ ಪ್ರೇಕ್ಷಕ ಅಕ್ಷರಶಃ ಕಂಗಾಲು! ಇದು ಸಾವನ್ನಪ್ಪಿದ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಕುರಿತ ಸಿನಿಮಾನಾ? ಈ ಪ್ರಶ್ನೆಗೆ ಉತ್ತರಿಸೋದು ಕಷ್ಟ. ಯಾಕೆಂದರೆ, 'ಅಕ್ಷತೆ'ಯಲ್ಲಿ ಅಂತಹ ಯಾವುದೇ ಎಳೆ ಇಲ್ಲ - ವಿಜಯ್ ಭರಮಸಾಗರ
ಅಕ್ಷತೆಯಲ್ಲಿಲ್ಲ ಗಟ್ಟಿ ಕಾಳು - ವಿಜಯ ಕರ್ನಾಟಕ
ನಿರ್ದೇಶಕ ರಾಜು ದೇವಸಂದ್ರ ಮಾಮೂಲಿ ಕ್ರೈಂ ಸ್ಟೋರಿಯ ಚಿತ್ರಕ್ಕೆ ಅಕ್ಷತೆ ಅಂತ ಏಕೆ ಹೆಸರಿಟ್ಟರು ತಿಳಿಯುವುದಿಲ್ಲ. ಚಿತ್ರದಲ್ಲಿ ಭ್ರಷ್ಟ ಪೋಲಿಸ್, ಇವರನ್ನು ಕೈಗೊಂಬೆಯಂತೆ ಕುಣಿಸುವ ಗಣಿ ದೊರೆ, ರಾಜಕಾರಣಿಗಳಿಂದ ಪ್ರಾಮಾಣಿಕ ಪೋಲಿಸ್ ಎದುರಿಸುವ ಪರಿಸ್ಥಿತಿ ತೋರಿಸಲಾಗಿದೆ. ಮೊದಲರ್ಧವನ್ನು ಎರಡು ಡ್ಯುಯೆಟ್ಗಳಿಗೆ, ಒಂದಿಷ್ಟು ಕಾಮಿಡಿ ಹೆಸರಿನ ಚೇಷ್ಟೆಗಳಿಗೆ ಬಳಸಿ ವ್ಯರ್ಥ ಮಾಡಲಾಗಿದೆ - ಪದ್ಮಾ ಶಿವಮೊಗ್ಗ
ದ್ವಿತೀಯಾರ್ಧದಲ್ಲಿ ಕಥೆ ಪ್ರಾರಂಭ - ವಿಜಯ ಕರ್ನಾಟಕ
ನಿಜವಾದ ಕತೆ ಪ್ರಾರಂಭ ಆಗುವುದೇ ದ್ವಿತೀಯಾರ್ಧದಿಂದ. ಮದುವೆ ಸಂಭ್ರಮದಲ್ಲಿದ್ದ ಅಧಿಕಾರಿ ನಾಪತ್ತೆಯಾದಾಗ ಪ್ರೇಕ್ಷಕನ ಕುತೂಹಲ ಕೆರಳುತ್ತದೆ. ಆದರೆ, ನಂತರ ಇದರ ಹಿಂದೆ ಸ್ವಾರಸ್ಯಕರವಾಗಿರುವುದೇನೂ ಇಲ್ಲದೆ ನಿರಾಶೆಯಾಗುತ್ತದೆ. ಎರಡು ಡ್ಯುಯೆಟ್, ಒಂದು ಐಟಂ ಸಾಂಗ್, ಎರಡು ಫೈಟ್, ಅಮ್ಮ ಮಗನ ಸೆಂಟಿಮೆಂಟ್ ಇರುವ ಚಿತ್ರ ಇದು - ಪದ್ಮಾ ಶಿವಮೊಗ್ಗ
ಚೆಲ್ಲಾ ಪಿಲ್ಲಿ 'ಅಕ್ಷತೆ' - ಪ್ರಜಾವಾಣಿ
ಬಡತನದಲ್ಲಿ ಬೆಳೆಯುವ ಬಾಲಕ ಅರ್ಜುನ್ ಜಿಲ್ಲಾಧಿಕಾರಿಯಾಗಿ ನೇಮಕಗೊಂಡು, ಆ ಅಧಿಕಾರವನ್ನು ಜನರ ಒಳಿತಿಗಾಗಿ ಬಳಸಿಕೊಳ್ಳುವ ಕಥೆ ಇದು. ಆತನ ಸರಳತೆ, ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಅದೇ ಆತನ ಪ್ರಾಣಕ್ಕೆ ಎರವಾಗುತ್ತದೆ. ಆ ಬಳಿಕ ತನಿಖೆ ನಡೆಯುತ್ತಿದೆ; ಅದನ್ನು ತಡೆಯಲು ಮೇಲಧಿಕಾರಿಗಳು ಪ್ರಯತ್ನಿಸುತ್ತಾರೆ; ಹಾಗಿದ್ದರೂ ಪಟ್ಟು ಬಿಡದೇ ಇನ್ಸ್ಪೆಕ್ಟರ್ ಅಭಿ ತನ್ನ ಗುರಿ ತಲುಪುತ್ತಾನೆ... ಇತ್ಯಾದಿ ಇತ್ಯಾದಿ. ಮೇಲ್ನೋಟಕ್ಕೆ ಇದೊಂದು ಒಳ್ಳೆಯ ಸಂದೇಶ ರವಾನಿಸುವ ಸಿನಿಮಾ ಎನ್ನುವಂತೆ ಕಾಣುತ್ತದೆ; ಆದರೆ ಕೊನೆಕೊನೆಗೆ ಏನೂ ನೆನಪಿನಲ್ಲಿ ಉಳಿಯುವುದಿಲ್ಲ - ಆನಂದತೀರ್ಥ ಪ್ಯಾಟಿ


Click it and Unblock the Notifications











