Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರ ವಿಮರ್ಶೆ: 'ಅಂಬರೀಶ' ಅಭಿಮಾನಿಗಳಿಗೆ ವಿಶೇಷ
ಬರೋಬ್ಬರಿ ಒಂದು ವರ್ಷದ ಬಳಿಕ ಅಭಿಮಾನಿಗಳ ಮುಂದೆ ದರ್ಶನ್ ಬಂದಿದ್ದಾರೆ. ಇಲ್ಲಿ ಚಿತ್ರದ ಶೀರ್ಷಿಕೆಯೇ ಪ್ರಮುಖ ಆಕರ್ಷಣೆ. 'ಅಂಬರೀಶ' ಎಂದರೆ ಯಾರು? ರೆಬಲ್ ಸ್ಟಾರ್ ಇರಬಹುದೇ? ಚಿತ್ರದಲ್ಲಿ ಅಂಬರೀಶ್ ಅವರೂ ಇರುವ ಕಾರಣ ಅವರ ಪಾತ್ರ ಏನಿರಬಹುದು ಎಂಬ ಕುತೂಹಲ ಸಹಜ.
ಈ ಕುತೂಹಲವನ್ನು ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕರಾದ ಕೆ ಮಹೇಶ್ ಸುಖಧರೆ ಅವರು ಬಹಳ ಹೊತ್ತು ಹಿಡಿದಿಡುವಲ್ಲಿ ಸಂಪೂರ್ಣ ಯಶಸ್ಸು ಸಾಧಿಸಿದ್ದಾರೆ. ಆದರೆ ಚಿತ್ರದಲ್ಲಿ ಅನಾವಶ್ಯಕ ಸಾಹಸ ದೃಶ್ಯಗಳನ್ನು ತುರುಕುವ ಮೂಲಕ ಕಥೆ ಚೂಯಿಂಗ್ ಗಮ್ ನಂತೆ ಭಾಸವಾಗುತ್ತದೆ.
ಚಿತ್ರದ ಮೊದಲರ್ಧ ಪ್ಯಾಸೆಂಜರ್ ರೈಲಿನಂತೆ ಓಡಿದರೆ, ದ್ವಿತೀಯಾರ್ಧ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಂತೆ ಸಾಗುತ್ತದೆ. ನಡುನಡುವೆ ಬರುವ ಹೊಡಿಬಡಿ ದೃಶ್ಯಗಳು ಚಿತ್ರದ ವೇಗಕ್ಕೆ ಬ್ರೇಕ್ ಹಾಕುತ್ತವೆ. ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಸಂಭಾಷಣೆ (ಚಿಂತನ್) ಹಾಗೂ ಅಂಬರೀಶ್ ಅವರ ಕೆಂಪೇಗೌಡ ಪಾತ್ರ.
ಅಂಬರೀಶ್ ಅವರು ನಾಡಪ್ರಭು ಕೆಂಪೇಗೌಡರಾಗಿ ಕಣ್ಮನ ಸೆಳೆಯುತ್ತಾರೆ. ಕೆಂಪೇಗೌಡರೇ ಸ್ವತಃ ಅಂಬಿಗೆ (ದರ್ಶನ್) ತಮ್ಮ ಕತ್ತಿಯನ್ನು ಕೊಡುವುದು, ಅದರಿಂದ ಅವರು ದುಷ್ಟರನ್ನು ಸಂಹರಿಸುವುದು ಎಲ್ಲವೂ ಅತಿಶಯೋಕ್ತಿ ಅನ್ನಿಸಿದರೂ ಅದಕ್ಕೆ ಒಂದು ತಾರ್ಕಿಕ ಆಯಾಮವನ್ನು ನೀಡುವಲ್ಲಿ ನಿರ್ದೇಶಕರು ಎಡವುತ್ತಾರೆ.
ಅಂಬರೀಶ್ ಅವರ ಪಾತ್ರ, ದರ್ಶನ್ ಅವರ ಹಿನ್ನೆಲೆ ಗೊತ್ತಾಗುತ್ತಿದ್ದಂತೆ ಮುಂದಿನ ಕಥೆ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಉಳಿಯುವುದಿಲ್ಲ. ಚಿತ್ರದ ಮೇಕಿಂಗ್ ನಲ್ಲಿ ನಿರ್ಮಾಪಕರು ರಾಜಿಯಾಗಿಲ್ಲದಿರುವುದು ಇನ್ನೊಂದು ಗಮನಾರ್ಹ ಸಂಗತಿ. ಸಾಹಸ ಸನ್ನಿವೇಶಗಳು ಸಾಕಷ್ಟು ಸಮಯವನ್ನು ಕಬಳಿಸುತ್ತವೆ. ರವಿವರ್ಮಾ ಅವರ ಸಾಹಸ ಸಂಯೋಜನೆಯಲ್ಲಿ ಯಾವುದೇ ವಿಶೇಷತೆ ಇಲ್ಲ.
ಅಂಬಿಯಾಗಿ, ಕೆಂಪೇಗೌಡನಾಗಿ ದರ್ಶನ್ ಅವರದು ಎರಡು ಶೇಡ್ ಗಳುಳ್ಳ ಪಾತ್ರ. ಅಂಬಿ ಸೌಮ್ಯ ಸ್ವಭಾವದ ಕೂಲಿಯಾಗಿ ಕಾಣಿಸಿದರೆ, ಕೆಂಪೇಗೌಡನಾಗಿ ಕತ್ತಿ ಹಿಡಿದು ದುಷ್ಟರನ್ನು ಸದೆಬಡಿಯುತ್ತಾನೆ. "ನಾನು ಕರಣಿ ಹಿಡಿದರೆ ಬುನಾದಿ, ಕತ್ತಿ ಹಿಡಿದರೆ ಸಮಾಧಿ" ಎಂಬ ಡೈಲಾಗ್ ಕೊನೆಯತನಕ ರಿಪೀಟ್ ಆಗುತ್ತಿರುತ್ತದೆ.
"ಈ ಕ್ಲಾಶ್ ಹತ್ರ ಇಟ್ಟುಕೊಂಡ್ರೆ ಸ್ಮಾಶ್" ಎನ್ನುತ್ತಾರೆ ಪ್ರಿಯಾಮಣಿ. "ಭೂಮಿ ಮನುಷ್ಯನ ಸ್ವತ್ತು ಅಲ್ಲ, ಮನುಷ್ಯ ಭೂಮಿಯ ಸ್ವತ್ತು", "ಮನುಷ್ಯ ದುಡ್ಡನ್ನು ಸಂಪಾದನೆ ಮಾಡಬೇಕೆ ಹೊರತು, ದುಡ್ಡಿಂದ ಮನುಷ್ಯನನ್ನು ಸಂಪಾದಿಸಬಾರದು", ಹಿಸ್ಟರಿ ಕ್ರಿಯೇಟ್ ಮಾಡೋದಲ್ಲ ರಿಪೀಟ್ ಆಗೋದು". ಈ ರೀತಿಯ ಸಾಕಷ್ಟು ಡೈಲಾಗ್ ಗಳು ಗಮನಸೆಳೆಯುತ್ತವೆ.
ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಹೆಚ್ಚಾಗಿ ಮಿಂಚಿರುವುದು ಮಾತ್ರ ಪ್ರಿಯಾಮಣಿ. ಸ್ಮಿತಾ ಪಾತ್ರದಲ್ಲಿ ಪ್ರಿಯಾಮಣಿ ಅವರು ದರ್ಪದ ಹೆಣ್ಣಾಗಿ ಗಮನಾರ್ಹ ಅಭಿನಯ ನೀಡಿದ್ದಾರೆ. ಪ್ರಿಯಾಮಣಿ ಪಾತ್ರದ ಮುಂದೆ ರಚಿತಾ ರಾಮ್ ಅವರ ಹಳ್ಳಿ ಹುಡುಗಿ ಪಾತ್ರ (ಕರುಣಾ) ಸೊರಗಿದೆ ಎಂದೇ ಹೇಳಬೇಕು.
ಇನ್ನು ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಹೇಳಿಕೊಳ್ಳುವಂತಹ ವಿಶೇಷವೇನು ಇಲ್ಲ. ಸತ್ಯ ಅವರ ಛಾಯಾಗ್ರಹಣ ಓಕೆ. ಸಾಧು ಕೋಕಿಲ, ಬುಲೆಟ್ ಪ್ರಕಾಶ್ ಅವರ ಕಾಮಿಡಿ ಹೊಟ್ಟೆ ಹುಣ್ಣಾಗುವಷ್ಟು ಅಲ್ಲದಿದ್ದರೂ ಲೈಟಾಗಿ ಕಚಗುಳಿಯನ್ನಂತೂ ಇಡುತ್ತದೆ.
ಸುಖಧರೆ ಅವರು ಒಂದಷ್ಟು ಧಾರ್ಮಿಕ, ಇನ್ನೊಂದಿಷ್ಟು ಐತಿಹಾಸಿಕ ಜೊತೆಗೆ ಸಾಮಾಜಿಕ ಹಾಗೂ ರಾಜಕೀಯ ಅಂಶಗಳನ್ನಿಟ್ಟುಕೊಂಡು ಸಿಹಿಕಹಿ ಚಿತ್ರವನ್ನು ಕೊಟ್ಟಿದ್ದಾರೆ. ಅಭಿಮಾನಿಗಳು ಕಹಿ ಮರೆತರೆ ಸಿಹಿಯನ್ನು ಸವಿಯಬಹುದು.