ಡೈನಾಮಿಕ್ ಅಪ್ಪ-ಮಗನ 'ಅರ್ಜುನ' ಬಗ್ಗೆ ವಿಮರ್ಶಕರು ಏನಂತಾರೆ?
ಡೈನಾಮಿಕ್ ಸ್ಟಾರ್ ದೇವರಾಜ್ ಮತ್ತು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮೊದಲ ಬಾರಿಗೆ ಒಂದಾಗಿ ನಟಿಸಿರುವ ಸಿನಿಮಾ 'ಅರ್ಜುನ' ಈ ವಾರ ಅದ್ದೂರಿಯಾಗಿ ಬಿಡುಗಡೆ ಆಗಿದೆ.
ಪ್ರಜ್ವಲ್ ದೇವರಾಜ್ ವೃತ್ತಿಜೀವನದಲ್ಲೇ ವಿಭಿನ್ನವಾಗಿರುವ ಕ್ರೈಂ ಥ್ರಿಲ್ಲರ್ ಸಿನಿಮಾ 'ಅರ್ಜುನ'. ಹಲವು ವಿಶೇಷತೆಗಳ ಆಗರವಾಗಿರುವ 'ಅರ್ಜುನ' ಚಿತ್ರಕ್ಕೆ ಪ್ರೇಕ್ಷಕರಂತೂ ಜೈಕಾರ ಹಾಕಿದ್ದಾರೆ. ವಿಮರ್ಶಕರು ಮಾತ್ರ 'ಅರ್ಜುನ' ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. [ವಿಮರ್ಶೆ: ಸಸ್ಪೆನ್ಸ್, ಥ್ರಿಲ್ಲರ್, ಟ್ವಿಸ್ಟ್...ಯಾವುದೂ ಇಲ್ಲದ 'ಅರ್ಜುನ']
ಪಿ.ಸಿ.ಶೇಖರ್ ನಿರ್ದೇಶನದ, ಪ್ರಜ್ವಲ್ ದೇವರಾಜ್, ದೇವರಾಜ್, ಭಾಮಾ ನಟಿಸಿರುವ 'ಅರ್ಜುನ' ಚಿತ್ರದ ಬಗ್ಗೆ ಕನ್ನಡದ ಜನಪ್ರಿಯ ದಿನಪತ್ರಿಕೆಗಳು ನೀಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....
ದುರ್ಬಲ ಸವ್ಯಸಾಚಿ : ಪ್ರಜಾವಾಣಿ
'ತಪ್ಪು ಮಾಡಿದರೆ ಶಿಕ್ಷೆ ಕೊಡಬೇಕು' ಎನ್ನುವ ನೀತಿ ಅರ್ಜುನನದ್ದು (ಪ್ರಜ್ವಲ್). ‘ನ್ಯಾಯ ಇದ್ದರೆ ಮನುಷ್ಯನಾಗಿರಬೇಕು, ಅನ್ಯಾಯ ಆದಾಗ ರಾಕ್ಷಸನಾಗಬೇಕು' ಎನ್ನುವ ಧೋರಣೆ ಪೊಲೀಸ್ ಅಧಿಕಾರಿ ವರ್ಮನದ್ದು (ದೇವರಾಜ್). ಇಬ್ಬರ ದಾರಿ ಬೇರೆಯಾದರೂ ದುಷ್ಟ ಸಂಹಾರವೇ ಗುರಿ. ಕಲೆಕ್ಟರ್ ಮತ್ತು ಕಾರ್ಪೊರೇಟರ್ ನ ಭ್ರಷ್ಟಾಚಾರವನ್ನು ಲೋಕಾಯುಕ್ತ ಸಂಸ್ಥೆಗೆ ಮುಟ್ಟಿಸುವ ಅರ್ಜುನ, ತನ್ನ ಹೋರಾಟದಲ್ಲಿ ಹೆಂಡತಿಯನ್ನೇ ಕಳೆದುಕೊಳ್ಳುತ್ತಾನೆ. ಮುಂದಿನದ್ದು ಸೇಡಿನ ಆಟ. ಎಲ್ಲರಿಗೂ ಸಾವು ಸಂಕಟವಾದರೆ ಅರ್ಜುನನಿಗೆ ಸಾವು ಸಂಭ್ರಮ. ಈ ಸೇಡಿನ ಆಟಕ್ಕೆ ಕೌತುಕದ ಲೇಪ ನೀಡಿದ್ದಾರೆ ನಿರ್ದೇಶಕ ಪಿ.ಸಿ. ಶೇಖರ್. - ಡಿ.ಎಂ.ಕುರ್ಕೆ ಪ್ರಶಾಂತ
ಈ ಅಪ್ಪಟ ಥ್ರಿಲ್ಲರ್ ಸಿನಿಮಾ ನಿಮ್ಮನ್ನು ರಂಜಿಸುತ್ತದೆ - ಉದಯವಾಣಿ
'ಕೊಲೆ ಮಾಡಿದ್ದು ಯಾರು?' - ಹೀಗೊಂದು ಡೈಲಾಗ್ ಮೂಲಕ ಸಿನಿಮಾ ಶುರುವಾಗುತ್ತೆ. ಅಲ್ಲಿಂದ ಚಿತ್ರದಲ್ಲಿ ನಡೆಯೋ ಕೊಲೆಗಳು ಮತ್ತು ಆ ಕೊಲೆಗಾರನ ಹುಡುಕಾಟದಲ್ಲಿ ಕುತೂಹಲ ಕೆರಳಿಸುತ್ತಲೇ 'ಅರ್ಜುನ'ನ ಮರ್ಡರ್ ಜರ್ನಿ ಸಾಗುತ್ತೆ. ಕನ್ನಡದಲ್ಲಿ ಇಂತಹ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳಿಗೇನೂ ಬರವಿಲ್ಲ. ಆದರೆ, ಆ ಸಾಲಿನಲ್ಲಿ 'ಅರ್ಜುನ' ಕೊಂಚ ಭಿನ್ನವಾಗಿ ನಿಲ್ಲುತ್ತಾನೆ. - ವಿಜಯ್ ಭರಮಸಾಗರ
ಪ್ರೇಕ್ಷಕನ ಮನಸ್ಸು ಸೆರೆಹಿಡಿದ ಅರ್ಜುನ - ವಿಜಯ ಕರ್ನಾಟಕ
ಕಳೆದ ಒಂದು ತಿಂಗಳಿನಿಂದ ಕನ್ನಡ ಪ್ರೇಕ್ಷಕನಿಗೆ ಸರ್ಪೈಸ್ ಕೊಡುವಂತೆ ವಿಭಿನ್ನ ಸಿನಿಮಾಗಳು ತೆರೆಗೆ ಬರುತ್ತಿವೆ. ಅವುಗಳ ಸಾಲಿಗೆ ಈಗ ಇನ್ನೊಂದು ಚಿತ್ರ ಸೇರ್ಪಡೆಯಾಗಿದೆ. ಅದು ಪಿ.ಸಿ. ಶೇಖರ್ ನಿರ್ದೇಶನದ 'ಅರ್ಜುನ' ಚಿತ್ರ. ಕನ್ನಡಕ್ಕೆ ಸ್ವಲ್ಪ ಹೊಸದು ಎಂದೇ ಹೇಳಬಹುದಾದ ಶೈಲಿಯ ಚಿತ್ರ. ಪ್ರಜ್ವಲ್ ಮತ್ತು ದೇವರಾಜ್ ಅಭಿನಯದ ಚಿತ್ರ ಉದ್ದಕ್ಕೂ ಹೊಸ ಅನುಭವ ನೀಡುತ್ತದೆ. ಸಸ್ಪೆನ್ಸ್ ರಿವೀಲ್ ಮಾಡುತ್ತಲೇ ಹೊಸ ಸಸ್ಪೆನ್ಸ್ ಕ್ರಿಯೇಟ್ ಮಾಡಿ ಕುತೂಹಲ ಮೂಡಿಸುವ ನಿರ್ದೇಶಕ ಪಿ.ಸಿ. ಶೇಖರ್ ಮೇಕಿಂಗ್ ನಲ್ಲಿ ಸ್ಪೆಷಲ್ ಎನ್ನಿಸಿಕೊಳ್ಳುತ್ತಾರೆ.
ಸರಳ ವ್ಯೂಹ ಸಸ್ಪೆನ್ಸ್ ಮೋಹ! - ವಿಜಯವಾಣಿ
ಶುರುವಿನಲ್ಲಿಯೇ ಒಂದು ಕೊಲೆ, ನಂತರ ರಹಸ್ಯಗಳ ಸರಮಾಲೆ, ಆಮೇಲೊಂದು ಕುತೂಹಲದ ಹಿನ್ನೆಲೆ, ಕೊನೆಯಲ್ಲಿ ಸುಖಾಂತ್ಯದ ಅಲೆ! ನಿರ್ದೇಶಕ ಪಿ.ಸಿ. ಶೇಖರ್ ತೆರೆಗೆ ತಂದಿರುವ ‘ಅರ್ಜುನ' ಚಿತ್ರದ ಹೈಲೈಟ್ಗಳಿವು. ಕಥೆ ಹೊಸದೆನಿಸಿದರೂ ಅದರ ಸೂತ್ರ ಹಳತು. ಯಾವುದೇ ಅಬ್ಬರ, ಗೊಂದಲವಿಲ್ಲದೆ, ಸಿಂಪಲ್ ಎನಿಸಿದರೂ ಸುಂದರವಾಗಿ ನಿರೂಪಿಸಿದ್ದಾರೆ ನಿರ್ದೇಶಕರು. ಇಲ್ಲಿ ಭ್ರಷ್ಟ ರಾಜಕಾರಣಿಗಳು ಹೆಣೆದಿರುವ ವ್ಯೂಹವಿದೆ. ಅದಕ್ಕೆ ಭ್ರಷ್ಟ ಪೊಲೀಸ್ ಅಧಿಕಾರಿಗಳ ಬೆಂಬಲವಿದೆ. ಅಂಥ ವ್ಯೂಹವನ್ನು ನಾಯಕ ಹೇಗೆ ಭೇದಿಸುತ್ತಾನೆ ಎಂಬುದೇ ಕಥೆಯ ಸ್ವಾರಸ್ಯ. ಅಲ್ಲಲ್ಲಿ ನುಸುಳುವ ಡಬಲ್ ಮೀನಿಂಗ್ ಸಂಭಾಷಣೆಗಳು ಶಿಳ್ಳೆ ಗಿಟ್ಟಿಸಿದರೂ ‘ಅರ್ಜುನ'ನ ವ್ಯಕ್ತಿತ್ವಕ್ಕೆ ಅವೇ ಮಾರಕ. ನಾಯಕಿ ಭಾಮಾಗೆ ಅವಕಾಶ ಕಮ್ಮಿ. ಆದರೂ ಇರುವಷ್ಟು ಹೊತ್ತು ಅವರೇ ಪರದೆ ಆವರಿಸಿಕೊಂಡಿದ್ದಾರೆ. ನಾಯಕನಿಗೆ ಸಮನಾಗಿ ಮಿಂಚಿದ್ದಾರೆ ದೇವರಾಜ್.


Click it and Unblock the Notifications











