ವಿಮರ್ಶೆ: ಶಿಕ್ಷಣ ವ್ಯವಸ್ಥೆಯ ಕನ್ನಡಿ ಈ 'ಅಸತೋಮ ಸದ್ಗಮಯ'
''ಸಂಬಂಧಗಳ ಮೌಲ್ಯವನ್ನ ಎತ್ತಿಹಿಡಿದಿರುವ 'ಅಸತೋಮ ಸದ್ಗಮಯ' ಸಂದೇಶದ ಜೊತೆ ಜೊತೆಗೆ ರಂಜಿಸುವ ಸಿನಿಮಾ. ಶಿಕ್ಷಣ ಅವಶ್ಯಕ. ಆದ್ರೆ, ಆ ಶಿಕ್ಷಣ ಮಕ್ಕಳಿಗೆ ಶಿಕ್ಷೆಯಾಗಬಾರದು ಎಂದು ಕ್ರಾಂತಿಗೆ ನಾಂದಿ ಹಾಡಿದೆ''. ಪೂರ್ತಿ ವಿಮರ್ಶೆ ಮುಂದೆ ಓದಿ....
ಚಿತ್ರ: ಅಸತೋಮ ಸದ್ಗಮಯ
ನಿರ್ದೇಶಕ: ರಾಜೇಶ್ ವೇಣೂರು
ನಿರ್ಮಾಣ: ಅಶ್ವಿನ್ ಜೆ ಪಿರೇರಾ
ತಾರಾಬಳಗ: ರಾಧಿಕಾ ಚೇತನ್, ಲಾಸ್ಯ ನಾಗ್, ಕಿರಣ್ ರಾಜ್, ಯೋಗಿ ದ್ವಾರಕೀಶ್, ಚಿತ್ರಾಲಿ ಮತ್ತು ಮತ್ತಿರರು
ಬಿಡುಗಡೆ: ಜುಲೈ 6, 2018
ಕಥಾಹಂದರ
ಚಿಕ್ಕ ವಯಸ್ಸಿನಲ್ಲಿ ಅನಾಥಾಶ್ರಮದ ಪಾಲಾಗುವ ಹೆಣ್ಣು ಮಗು. ಆ ಮಗುವನ್ನು ವಿದೇಶಿ ದಂಪತಿ ದತ್ತು ಪಡೆದು ಹೊರದೇಶಕ್ಕೆ ಹೋಗ್ತಾರೆ. ಆ ಹುಡುಗಿ ಬೆಳೆದು ದೊಡ್ಡವಳಾಗಿ ತನ್ನ ಮೂಲವನ್ನ ಹುಡುಕಿಕೊಂಡು ಭಾರತಕ್ಕೆ ವಾಪಸ್ ಬರ್ತಾಳೆ. ಮತ್ತೊಂದೆಡೆ ''ಇಲ್ಲಿದ್ರೆ ಏನೂ ಮಾಡಲು ಆಗಲ್ಲ, ಯುಎಸ್ ಗೆ ಹೋಗಿ ಲೈಫ್ ಲೀಡ್ ಮಾಡೋಣ'' ಅಂತ ಯುವ ಜೋಡಿಯೊಂದು ಮನೆಬಿಟ್ಟು ಬರ್ತಾರೆ. ಅಚಾನಕ್ ಆಗಿ ಫಿನ್ ಲ್ಯಾಂಡ್ ಯುವತಿ ಮತ್ತು ಯುವ ಜೋಡಿ ಒಟ್ಟಿಗೆ ಸೇರ್ತಾರೆ. ನಂತರ ಈ ಮೂವರ ಜರ್ನಿ ಇಡೀ ಸಿನಿಮಾವನ್ನ ಕರೆದುಕೊಂಡು ಹೋಗುತ್ತೆ. ಈ ಮೂವರು ಕಥೆ ಮುಂದೇನಾಗುತ್ತೆ.? ಅವರವರ ಉದ್ದೇಶ ಈಡೇರುತ್ತಾ ಎಂಬುದು ಕುತೂಹಲ.
ಸಸ್ಪೆನ್ಸ್-ರಂಜನೆ-ಸಂದೇಶ
ಇಂದಿನ ಯುವ ಜನಾಂಗ ಯಾವ ಕಡೆ ಸಾಗಿದೆ ಎಂಬುದನ್ನ ಲಾಸ್ಯ ಮತ್ತು ಕಿರಣ್ ಪಾತ್ರಗಳನ್ನ ಸೃಷ್ಟಿಸಿ ಚೆನ್ನಾಗಿ ತೋರಿಸಲಾಗಿದೆ. ನಾವು ಎಷ್ಟೇ ಬುದ್ದಿವಂತರಾದರೂ, ಎಷ್ಟೇ ಶ್ರೀಮಂತರಾದರೂ ಸಂಬಂಧಗಳಿಗೆ ಬೆಲೆ ಎಂಬುದನ್ನ ರಾಧಿಕಾ ಚೇತನ್ ಅವರ ಪಾತ್ರ ನಿರೂಪಿಸುತ್ತೆ. ಇದರ ಜೊತೆಗೆ ನಮ್ಮ ಸಂಸ್ಕ್ರತಿ, ನಮ್ಮ ದೇಶ, ನಮ್ಮ ನಾಡು ಎಂಬ ದೇಸಿ ತತ್ವವೂ ಚಿತ್ರದಲ್ಲಿ ಕಾಣಬಹುದು. ಇದೆಲ್ಲರ ಜೊತೆಗೆ ಪ್ರೇಕ್ಷಕರನ್ನ ರಂಜಿಸುವ ಪ್ರಯತ್ನ ಇದಾಗಿದೆ.
ಕೊನೆಯಲ್ಲಿ ನೀಡುವ ಸಂದೇಶವೇ ಚಿತ್ರದ ಯಶಸ್ಸು
ಸಿನಿಮಾದಲ್ಲಿ ಹಲವು ವಿಷ್ಯಗಳನ್ನ ಪ್ರಸ್ತಾಪಿಸಿದರೂ, ಅಂತಿಮವಾಗಿ ಗಮನ ಸೆಳೆಯುವುದು ಶಿಕ್ಷಣ. ಮಕ್ಕಳಿಗೆ ಶಿಕ್ಷಣ ಅಗತ್ಯ. ಆದ್ರೆ ಅದು ಜೀವನ ರೂಪಿಸಿಕೊಳ್ಳಲು ಬೇಕಾಗಿರುವ ಶಿಕ್ಷಣವೇ ಹೊರತು, ಮಾರ್ಕ್ಸ್, ಹೋಮ್ ವರ್ಕ್, Rank, ಟಾಪರ್ ಎಂಬ ಮಾನಸಿಕ ಒತ್ತಡವಲ್ಲ ಎಂದು ವಾದಿಸಲಾಗಿದೆ. ಇದರ ಜೊತೆಗೆ ಶಿಕ್ಷಣ ಎಂಬುದು ಉದ್ಯಮವಾಗಿದೆ, ಸರ್ಕಾರಿ ಶಾಲೆಗಳನ್ನ ಮುಚ್ಚಿಸಿ, ಖಾಸಗಿ ಶಾಲೆಗಳ ಮೂಲಕ ಲಾಭ ಮಾಡುತ್ತಿರುವ ದಂಧೆ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಇದು ನೋಡುಗರನ್ನ ಆಲೋಚಿಸುವಷ್ಟು ಪರಿಣಾಮ ಬೀರುತ್ತೆ.
ಅಭಿನಯದಲ್ಲಿ ಎಲ್ಲರೂ ಚೆಂದ
ಫಿನ್ ಲ್ಯಾಂಡ್ ಯುವತಿಯೇ ಎನ್ನುವಷ್ಟರ ಮಟ್ಟಿಗೆ ರಾಧಿಕಾ ಚೇತನ್ ನೈಜ ಅಭಿನಯ ನೀಡಿದ್ದಾರೆ. ಚಿತ್ರದಲ್ಲಿ ನಾಯಕ ಎನಿಸಿಕೊಳ್ಳುವ ಕಿರಣ್ ಜಾದೂಗಾರನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಲಾಸ್ಯ ನಾಗ್ ಪಾತ್ರ ಚಿತ್ರಕ್ಕೆ ಗ್ಲಾಮರ್ ಹೆಚ್ಚಿಸಿದ್ದಾರೆ. ಖಳನಾಯಕನಾಗಿ ದೀಪಕ್ ಶೆಟ್ಟಿ ಅವರನ್ನ ಇನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಿತ್ತು. ಇನ್ನುಳಿದಂತೆ ಚಿತ್ರಾಲಿ, ಯೋಗಿ ದ್ವಾರಕೀಶ್ ಪಾತ್ರಗಳು ಚಿತ್ರಕ್ಕೆ ಸಾಥ್ ನೀಡಿದೆ.
ಟೆಕ್ನಿಕಲಿ ಸಿನಿಮಾ
ಮೊದಲ ಸಲ ನಿರ್ದೇಶನ ಮಾಡಿರುವ ರಾಜೇಶ್ ವೇಣೂರು ಅವರ ಪರಿಕಲ್ಪನೆ ಚೆನ್ನಾಗಿದೆ. ಅದುವೇ ಚಿತ್ರಕ್ಕೆ ಪ್ಲಸ್ ಪಾಯಿಂಟ್, ಆದ್ರೆ, ಚಿತ್ರಕಥೆ ಸ್ವಲ್ಪ ನಿಧಾನವೆನಿಸುತ್ತೆ. ವಹಾಬ್ ಸಲೀಂ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಕಿಶೋರ್ ಕುಮಾರ್ ಕ್ಯಾಮೆರಾ ವರ್ಕ್ ಹಾಗೂ ರವಿಚಂದ್ರನ್ ಚಿತ್ರಕ್ಕೆ ಸಾಥ್ ನೀಡಿದೆ.
ಕೊನೆಯದಾಗಿ....
'ಅಸತೋಮ ಸದ್ಗಮಯ' ಚಿತ್ರವನ್ನ ಅತಿಯಾದ ನಿರೀಕ್ಷೆಗಳಿಲ್ಲದೇ, ಆರಾಮಾಗಿ ನೋಡಬಹುದು. ತುಂಬಾ ಸರಳವಾಗಿ, ಏನು ಹೇಳಬೇಕು ಎಂದುಕೊಂಡಿದ್ದರೋ ಅದನ್ನ ಉತ್ತಮವಾಗಿ ತೋರಿಸಿದ್ದಾರೆ.


Click it and Unblock the Notifications











