ಬ್ರೇಕಿಂಗ್ ನ್ಯೂಸ್ : ಮತ್ತೆ ಎಡವಿದ ನಾಗತಿಹಳ್ಳಿ ಮೇಷ್ಟ್ರು
ನೂರು ಜನ್ಮಕೂ' ಚಿತ್ರದ ಸೋಲು ನಾಗ್ತಿಹಳ್ಳಿ ಮೇಷ್ಟ್ರಿಗೆ ಪಾಠ ಕಲಿಸಿದಂತಿಲ್ಲ. ಅದಕ್ಕೆ ಸಾಕ್ಷಿ ಶುಕ್ರವಾರ ಬಿಡುಗಡೆಯಾಗಿರುವ 'ಬ್ರೇಕಿಂಗ್ ನ್ಯೂಸ್'. ವಾಸ್ತವದ ಘಟನೆಗಳನ್ನಿಟ್ಟುಕೊಂಡು ವಿಡಂಬನೆ ಮಾಡಲು ಹೋಗಿ ಎಡವಿ ಬಿದ್ದಿದ್ದಾರೆ ನಾಗ್ತಿ.
ಮೊದಲಿಗೆ ಕಥೆಯಲ್ಲಿ ಹಿಡಿತವಿಲ್ಲ. ಎಗ್ಗು-ಸಿಗ್ಗಿಲ್ಲದೇ ಸಾಗುವ ಚಿತ್ರಕಥೆಗೆ ಆಕ್ಷನ್-ಕಟ್ ಹೇಳಿ ರೀಲು ಸುತ್ತಿದ್ದಾರೆ. ಪ್ರತಿದಿನ ಟಿವಿ ಚಾನಲ್ಲುಗಳಲ್ಲಿ ನೋಡಿದ್ದನ್ನೇ ಮತ್ತೊಮ್ಮೆ ತೋರಿಸಿ (ಪಾತ್ರವರ್ಗ ಬೇರೆ!) ರೇಜಿಗೆ ಹುಟ್ಟಿಸುತ್ತಾರೆ.
ಮಾಧ್ಯಮದ ಸುತ್ತ ಹೆಣೆದಿರುವ ಕಥೆ. ಇದೇ ಮೊದಲ ಬಾರಿ ಸ್ಯಾಂಡಲ್ವುಡ್ನಲ್ಲಿ ಬರ್ತಿರೋದು ಎಂದೆಲ್ಲಾ ಪ್ರೆಸ್ಮೀಟ್ನಲ್ಲಿ ಹೇಳಿದ್ದರು ನಾಗ್ತಿ. ಆದರೆ ಅವರು ಹೇಳಿದ್ದಕ್ಕೂ, ಮಾಡಿರುವುದಕ್ಕೂ ಸಂಬಂಧವೇ ಇಲ್ಲ. ಅಷ್ಟಕ್ಕೂ ಮಾಧ್ಯಮವೆಂದರೆ ಏನು?
ಅದರ ಒಳ ಮತ್ತು ಹೊರಗಿನ ಪ್ರಪಂಚವನ್ನು ಮೇಷ್ಟ್ರು ಸರಿಯಾಗಿ ತಿಳಿಸುಕೊಳ್ಳದ ಪರಿಣಾಮ ಇಡೀ ಸಿನಿಮಾ ಪೇಲವವಾಗಿ ಕಾಣುತ್ತದೆ. ಕೊನೆಗೆ ಏನು ಹೇಳಲು ಹೊರಟ್ಟಿದ್ದೇನೆ ಎಂಬುದರ ಬಗ್ಗೆ ಅವರೇ ಗೊಂದಲಕ್ಕೀಡಾಗಿ ಅವಸರದ ಅಡುಗೆ ಮಾಡಿ ಬಡಿಸಿದ್ದಾರೆ.
ಆದರೆ ಕಲಾವಿದರು ಕೊಟ್ಟ ಪಾತ್ರಕ್ಕೆ ತಕ್ಕ ನ್ಯಾಯ ಸಲ್ಲಿಸಿದ್ದಾರೆ. ಅಜಯ್ರಾವ್, ರಾಧಿಕಾ ಪಂಡಿತ್ ನಟನೆಗೂ ಸೈ, ಕುಣಿಯುವುದಕ್ಕೂ ಜೈ ಎಂದು ಲೀಲಾಜಾಲವಾಗಿ ನಟಿಸಿದ್ದಾರೆ. ರಂಗಾಯಣ ರಘು, ಸ್ವಯಂವರ ಚಂದ್ರು ನಟನೆಯನ್ನೇ ಕಾಮಿಡಿ ಎಂದುಕೊಳ್ಳಬೇಕು.
ಸ್ಟೀಫನ್ ಪ್ರಯೋಗ್ ಸಂಗೀತದಲ್ಲಿ ಒಂದು ಕೇಳಲು ಹಿತ. ಸಂಭಾಷಣೆ, ಕ್ಯಾಮೆರಾ ಕೆಲಸದ ಬಗ್ಗೆ ಏನೂ ಹೇಳದಿರುವುದೇ ಒಳಿತು. ನೀವು ಟಿವಿ ಚಾನೆಲ್ಗಳನ್ನು ನೋಡದಿದ್ದರೆ, ನಾಗ್ತಿಯವರ ಬ್ರೇಕಿಂಗ್ ನ್ಯೂಸ್ ನೋಡಲು ಅಡ್ಡಿಯಿಲ್ಲ.


Click it and Unblock the Notifications











