ಅನಂತ್ ನಾಗ್ ಜೊತೆ ಕಳೆದು ಹೋದ ವಿಮರ್ಶಕರು
ತಂದೆ-ಮಗನ ಬಾಂಧವ್ಯ ಇರುವ ಅಪರೂಪದ ಸಿನಿಮಾ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ನವ ನಿರ್ದೇಶಕ ಹೇಮಂತ್ ಅವರ ಚೊಚ್ಚಲ ಪ್ರಯತ್ನಕ್ಕೆ ಎಲ್ಲಾ ಕಡೆಯಿಂದ ಉತ್ತಮ ರೆಸ್ಪಾನ್ಸ್ ಬರುತ್ತಿದೆ.
'ಉಳಿದವರು ಕಂಡಂತೆ' ಖ್ಯಾತಿಯ ನಟ ರಕ್ಷಿತ್ ಶೆಟ್ಟಿ, 'ಲುಸಿಯಾ' ಬೆಡಗಿ ಶ್ರುತಿ ಹರಿಹರನ್ ಹಾಗೂ ಎವರ್ ಗ್ರೀನ್ ನಟ ಅನಂತ್ ನಾಗ್ ಮುಖ್ಯ ಭೂಮಿಕೆಯಲ್ಲಿ ಮಿಂಚಿರುವ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ನಿನ್ನೆ (ಜೂನ್ 3) ಇಡೀ ಕರ್ನಾಟಕದಾದ್ಯಂತ ಗ್ರ್ಯಾಂಡ್ ಆಗಿ ತೆರೆಕಂಡಿದೆ.['ಗೋಧಿ ಬಣ್ಣ' ವಿಮರ್ಶೆ: ಅಪ್ಪ-ಮಗನ ಅ'ಸಾಧಾರಣ' ಭಾವ-ಬಂಧ]
ಮರೆವಿನ ಖಾಯಿಲೆ ಇರುವ ತಂದೆ ಕಳೆದು ಹೋದಾಗ ಮಗ ತನ್ನ ತಂದೆಯನ್ನು ಹುಡುಕುತ್ತಾ ಕೊನೆಗೆ ತಾನೇ ಕಳೆದು ಹೋಗುವ ಕಥೆಯನ್ನು ನಿರ್ದೇಶಕ ಹೇಮಂತ್ ರಾವ್ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.['ಗೋಧಿ ಬಣ್ಣ' ಚಿತ್ರವನ್ನು ತಂದೆಗೆ ಅರ್ಪಿಸಿದ ರಕ್ಷಿತ್ ಶೆಟ್ಟಿ]
ಚೊಚ್ಚಲ ನಿರ್ದೇಶಕರ ವಿಭಿನ್ನ ಪ್ರಯತ್ನಕ್ಕೆ ನಮ್ಮ ಕನ್ನಡದ ಖ್ಯಾತ ವಿಮರ್ಶಕರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಮರ್ಶಕರ ವಿಮರ್ಶೆಯ ಕಲೆಕ್ಷನ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ.....
'ವ್ಯವಕಲನದ ನೆಪದಲ್ಲಿ ಸಂಕಲನ' - ಪ್ರಜಾವಾಣಿ
ಅಲ್ಜಮೈರ್ ಕಾಯಿಲೆಯಿಂದಾಗಿ ಮರೆಗುಳಿಯಾದ ಹಿರಿಯ ನಾಗರಿಕರೊಬ್ಬರು ನಾಪತ್ತೆಯಾಗುವುದು ಚಿತ್ರಕಥೆಯ ಕೇಂದ್ರಬಿಂದು. ಕಳೆದುಹೋಗುವ ಅಥವಾ ಕಳೆದುಕೊಳ್ಳುವ ಕಥೆಯನ್ನು ನಿರೂಪಿಸುವಲ್ಲಿ ನಿರ್ದೇಶಕರು ಕೆಲವು ಕುತೂಹಲಕಾರಿ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಕೆಲಸದ ಒತ್ತಡ ಮತ್ತು ಮಹತ್ವಾಕಾಂಕ್ಷೆಯಲ್ಲಿ ಅಪ್ಪನನ್ನು ನಿರ್ಲಕ್ಷಿಸುವ ಮಗ ಒಂದೆಡೆಯಿದ್ದರೆ, ಮನುಷ್ಯ ಸಂಬಂಧಗಳ ಬಗ್ಗೆ ಅಪಾರ ಆಸ್ಥೆಯಿರುವ ವೈದ್ಯೆಯಿದ್ದಾಳೆ. ಸಮಯಕ್ಕೆ ತಕ್ಕಂತೆ ಮಾನವೀಯತೆಯನ್ನೂ ಕ್ರೌರ್ಯವನ್ನೂ ಅಭಿವ್ಯಕ್ತಿಸುವ ಮಧ್ಯಮವರ್ಗದ ಗೃಹಸ್ಥನಿದ್ದಾನೆ. ಒಳಿತು - ಕೆಡುಕಿನ ನಡುವೆ ಜೀಕುವ ಭೂಗತಲೋಕದ ವ್ಯಕ್ತಿಗಳಿದ್ದಾರೆ. ಈ ಎಲ್ಲ ಪಾತ್ರಗಳನ್ನು ನಿರ್ದೇಶಕರು ಸಶಕ್ತವಾಗಿ ಚಿತ್ರಿಸಿರುವುದು ಸಿನಿಮಾದ ಅಗ್ಗಳಿಕೆ. ರಘುನಾಥ ಚ.ಹ.
'ಮನುಷ್ಯ ಸಂಬಂಧಗಳಿಗೆ ಹೊಸ ವ್ಯಾಖ್ಯಾನ' - ವಿಜಯ ಕರ್ನಾಟಕ
ತಾಯಿ ಮತ್ತು ಮಗಳ ಕರಳುಬಳ್ಳಿಯ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆ. ತಂದೆ-ಮಗನ ಬಾಂಧವ್ಯದ ಕುರಿತಾದ ಚಿತ್ರಗಳು ತೆರೆಕಂಡಿದ್ದು ತೀರಾ ಅಪರೂಪ. ಈವರೆಗೂ ಬಂದಿರುವ ಇಂಥ ಬೆರಳೆಣಿಕೆಯ ಚಿತ್ರಗಳು ಕೌಟುಂಬಿಕ ಚೌಕಟ್ಟಿನಲ್ಲೇ ಗಿರಕಿ ಹೊಡೆದಿವೆ. ಇವೆಲ್ಲ ಚಿತ್ರಗಳಿಗಿಂತ ವಿಭಿನ್ನವಾಗಿ ಮೂಡಿ ಬಂದಿದೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರ. ಈ ಸಿನಿಮಾ ಕೂಡ ಮೇಲ್ನೋಟಕ್ಕೆ ತಂದೆ-ಮಗನ ಕತೆ ಅನಿಸಿದರೂ, ಮನುಷ್ಯ ಸಂಬಂಧಗಳನ್ನು ನಾಜೂಕಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಹೇಮಂತ್ ರಾವ್. ಅದನ್ನು ಕಮರ್ಷಿಯಲ್ ನೆಲೆಯಲ್ಲೇ ಹುಡುಕ ಹೊರಟಿದ್ದರಿಂದ, ಇಡೀ ಸಿನಿಮಾ ಹೊಸ ರೀತಿ ತೆರೆದುಕೊಂಡಿದೆ. - ಶರಣು ಹುಲ್ಲೂರು.
'ಅಲೆ ಮೂಡದ ತೀರದಲ್ಲಿ ಅಳಿಸಿ ಹೋದ ಹೆಜ್ಜೆ ಜಾಡು'-ಉದಯವಾಣಿ
ನೂರಾರು ಪ್ರಶ್ನೆಗಳನ್ನು 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ನಮ್ಮ ಮುಂದೆ ಹರವಿ ಮೌನವಾಗುತ್ತದೆ. ಆ ಮೌನದಲ್ಲಿ ನಾವು ಎಷ್ಟೆಲ್ಲವನ್ನು ಕೇಳಿಸಿಕೊಳ್ಳುತ್ತೇವೆ. ನಮ್ಮ ಆತ್ಮೀಯರೊಬ್ಬರು ಕಳೆದು ಹೋಗಲಿ, ಅವರನ್ನು ಹುಡುಕುತ್ತಾ ಹುಡುಕುತ್ತಾ ಬಾಲ್ಯದ ಬೆರಗಿನ ನಾವು, ಸಹವಾಸದಲ್ಲಿ ಸಂಭ್ರಮಿಸುತ್ತಿದ್ದ ನಾವು, ಒಡನಾಟದಲ್ಲಿ ಒದಗಿಬರುತ್ತಿದ್ದ ನಾವು ಮತ್ತೆ ನಮಗೆ ಸಿಕ್ಕಲಿ ಅಂತ ಅನ್ನಿಸಿಬಿಡುತ್ತದೆ. ಒಂದು ಸಿನಿಮಾ ನಮ್ಮ ತಲ್ಲಣಗಳೆಲ್ಲವನ್ನು ನಮ್ಮ ಮುಂದೆ ಹರಿವಾಣದಲ್ಲಿ ಹರವಿ ತಂದಿಟ್ಟು ನಿನ್ನ ಬದುಕು ಇಷ್ಟೇ ಅಂತ ತೋರಿಸಿಕೊಡುತ್ತದೆ. - ಜೋಗಿ.
'ಸಾಧಾರಣ ಕತೆಯ ಅಸಾಧಾರಣ ಮೈಕಟ್ಟು'- ಕನ್ನಡಪ್ರಭ
ಎ ಫೀಲ್ ದಟ್ ನೆವರ್ ಎಂಡ್ ..ಸಿನಿಮಾ ಮುಗಿದ ಮೇಲೂ ನೋಡುಗನ ಅನುಭವಕ್ಕೆ ಬರುವ ಮಾತಿದು. ಉಸಿರು ನಿಂತ ಮೇಲೂ ಕಾಡುತ್ತಲೇ ಅಪ್ಪಿಕೊಳ್ಳುವ ಶಕ್ತಿ ಮತ್ತು ಜೀವಂತಿಕೆ ಭಾವನೆಗಳಿರುತ್ತವೆ. ಇಂತಹ ಭಾವನೆಗಳು, ಸಂಬಂಧಗಳು, ಕಳೆದುಕೊಂಡವರು, ಪಡೆದುಕೊಂಡವರು ಹಾಗೂ ಹುಡುಕಾಟವನ್ನು ಕೇಂದ್ರವಾಗಿಟ್ಟುಕೊಂಡು ಒಂದು ಸರಳ, ಸಾಮಾನ್ಯ ಕತೆಯನ್ನು ಅಷ್ಟೇ ಸಹಜವಾಗಿ ಹೇಳುತ್ತದೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು'. ಮಾತುಗಳೇ ಇಲ್ಲದೆ ಮೌನದ ಸ್ಪರ್ಶದಲ್ಲಿ ಮೂಡುವ ಚಿತ್ರದ ಕೊನೆಯ ದೃಶ್ಯ ಮುಗಿಯುವ ಹೊತ್ತಿಗೆ ನೀವು ನಿಮ್ಮ ತಂದೆಯ ಮುಖ ನೋಡುವುದಕ್ಕೆ ಹಾತೊರೆಯುತ್ತೀರಿ. ಅಷ್ಟರಮಟ್ಟಿಗೆ ಈ ಸಿನಿಮಾ ಕಾಡುತ್ತದೆ. -ಆರ್ ಕೇಶವಮೂರ್ತಿ.
'A Movie To Remember' - Bangalore Mirror
It is the story of a father-son relationship. It is also the story of criminals getting lost, both in deeds and in life. It is a thriller in that sense. It is also a love story that you learn from. The film's characters are so dense and the simple incidents so detailed that you will be compelled to watch it again. It is unbelievable how the film has panned out, making it a must-watch. - Shyam Prasad S.


Click it and Unblock the Notifications











