ಪೀಸ್ ಪೀಸ್ ಮಾಡಿದ 'ಮಾಸ್ಟರ್ ಪೀಸ್' ಗೆ ವಿಮರ್ಶಕರು ಜೈ ಅಂದ್ರಾ?
ಸ್ಯಾಂಡಲ್ ವುಡ್ ನ ಅಣ್ತಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಸಿನಿಮಾ 'ಮಾಸ್ಟರ್ ಪೀಸ್' ಗ್ರ್ಯಾಂಡ್ ರಿಲೀಸ್ ಆಗಿ ಇದೀಗ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಶಾನ್ವಿ ಶ್ರೀವಾತ್ಸವ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಮಾಸ್ಟರ್ ಪೀಸ್' ಸಿನಿಮಾಕ್ಕೆ ಸಂಭಾಷಣೆಗಾರ ಮಂಜು ಮಾಂಡವ್ಯ ಅವರು ಆಕ್ಷನ್-ಕಟ್ ಹೇಳಿದ್ದಾರೆ.[ಮಾಸ್ಟರ್ ಪೀಸ್: ಮೊದಲು ದಾರಿ ತಪ್ಪಿದ ಮಗ, ನಂತರ ತಾಯಿಗೆ ತಕ್ಕ ಮಗ]
ದೇಶಭಕ್ತಿ, ಡ್ರಗ್ಸ್ ಮಾಫಿಯಾ, ಡೈಲಾಗ್ ಜೊತೆಗೆ ಸಖತ್ ಫೈಟ್ ಇರೋ ರಾಕಿಂಗ್ ಸ್ಟಾರ್ ಯಶ್ ಅವರ 'ಬಿಲ್ಡಪ್ ಮಾಸ್ಟರ್ ಪೀಸ್' ವಿಮರ್ಶಕರಿಂದ ವಿಭಿನ್ನ ಅಭಿಪ್ರಾಯಗಳನ್ನು ಸಂಪಾದಿಸಿದೆ.
ಒಂದೇ ದಿನದಲ್ಲಿ ಕೋಟಿಗಟ್ಟಲೆ ಗಳಿಕೆ ಮಾಡಿ ಬಾಕ್ಸಾಫೀಸ್ ಕೊಳ್ಳೆ ಹೊಡೆದ 'ಮಾಸ್ಟರ್ ಪೀಸ್' ಬಗ್ಗೆ ನಮ್ಮ ಖ್ಯಾತ ಕನ್ನಡ ದಿನಪತ್ರಿಕೆಯ ವಿಮರ್ಶಕರು ಏನು ಹೇಳಿದ್ದಾರೆ ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ.
ಯುವ ಜನರ 'ಮಾಸ್ಟರ್ ಪೀಸ್' - ವಿಜಯ ಕರ್ನಾಟಕ
ಯುವಕರು ಮನರಂಜನೆ ಜತೆಗೆ ತಮ್ಮ ಆಲೋಚನೆ ಬದಲಾಯಿಸಿಕೊಳ್ಳುವುದಕ್ಕೆ ಸಂದೇಶ ಕೊಟ್ಟಿದ್ದಾರೆ ಯಶ್. ಬರೀ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ದೇಶ ಬದಲಾಗಬೇಕು ಅಂದರೆ ಸಾಲದು. ನಾವು ಬದಲಾಗಬೇಕು ಎನ್ನುವುದಕ್ಕಿಂತ ನಾನು ಬದಲಾಗಬೇಕು ಎನ್ನುವ ಆಲೋಚನೆ ಬರಬೇಕು. ಇಂತಹ ಮಾತುಗಳನ್ನು ಎಲ್ಲೂ ಬೋರಾಗದಂತೆ 'ಮಾಸ್ಟರ್ ಪೀಸ್' ಚಿತ್ರದ ಮೂಲಕ ಹೇಳಿದ್ದಾರೆ ನಿರ್ದೇಶಕರು. ಯಶ್, ಸಿನಿಮಾ ಮಾಧ್ಯಮವನ್ನು, ಯುವಕರ ಮನಸು ಬದಲಾಯಿಸಲು ಅಸ್ತ್ರವಾಗಿ ಬಳಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಚಿತ್ರದಲ್ಲಿ ಅವರದು ಮೊದಲು ನೆಗೆಟಿವ್, ನಂತರ ಪಾಸಿಟಿವ್ ಪಾತ್ರ. ನಿರ್ದೇಶಕರು ಯಶ್ ರ ಇಮೇಜ್ ಎಲ್ಲೂ ಡ್ಯಾಮೇಜ್ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ.- ಎಚ್ ಮಹೇಶ್.
ಮಾಸ್ಟರ್ ದು ಬರೀ ಡೈಲಾಗ್ ಜಾತ್ರೆ - ಕನ್ನಡ ಪ್ರಭ
ಚಿತ್ರದ ಮೊದಲರ್ಧ ಕೇವಲ ಲಾಜಿಕ್ ಇಲ್ಲದ ಮ್ಯಾಜಿಕ್ ಡೈಲಾಗ್ ಗಳಲ್ಲೇ ಸಮಾಪ್ತಿ. ವಿರಾಮದ ನಂತರ ಒಂದಿಷ್ಟು ತಿರುವುಗಳಿದ್ದರೂ ಅಲ್ಲೂ ಯಶ್ ಮಾಯವಾಗಿರುವುದರಿಂದ ಒಂದು ಒಳ್ಳೆಯ ಕಥೆಯೊಂದು ಹಾದಿ ತಪ್ಪುತ್ತದೆ. ಆದರೆ ಹಾಡುಗಳಲ್ಲಿ ವಿ.ಹರಿಕೃಷ್ಣ ಒಂಚೂರು ಹಳೆಯ ಖದರ್ ಚಿತ್ರಕ್ಕೆ ಸಾಥ್ ನೀಡಿದೆ. ನಾಯಕಿ ಸಾನ್ವಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ. ಸುಹಾಸಿನಿಯ ತಾಯಿ ಪ್ರೀತಿ, ಒಂದೇ ದೃಶ್ಯದಲ್ಲಿ ಬಂದು ಹೋಗುವ ದತ್ತಣ್ಣರ ಕಣ್ಣೀರಿನ ಸಂಕಟ ಪ್ರೇಕ್ಷಕನಿಗೆ ತಟ್ಟುತ್ತದೆ. ಚಿಕ್ಕಣ್ಣರ ಹಾಸ್ಯೋತ್ಸವ ಜೋರಾಗಿದೆ. ಮಂಜು ಮಾಂಡವ್ಯ ಅವರ ನಿರ್ದೇಶನ ಯಶ್ ನೆರಳಿನಲ್ಲಿ ಕಾಣೆಯಾಗುತ್ತದೆ. ಎಂದಿನಂತೆ ಯಶ್ ಡಾನ್ಸ್ ಫೈಟ್ ಸೂಪರ್.- ಆರ್ ಕೇಶವಮೂರ್ತಿ.
ಮಸ್ತ್ ಮನರಂಜನೆಯ ಮಾಸ್ ಮಾಸ್ಟರ್ - ವಿಜಯವಾಣಿ
ಪಕ್ಕಾ ಯಶ್ ಅಭಿಮಾನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರು ಮಾಡಿರುವುದರಿಂದ ಇದು ಫ್ಯಾನ್ ಪೀಸ್. ಕಮರ್ಷಿಯಲ್ ಅಂಶಗಳೇ ತುಂಬಿ ತುಳುಕಿರುವುದರಿಂದ ಇದೊಂದು ಮಾಸ್ ಪೀಸ್. ಇದ್ದಷ್ಟು ಹೊತ್ತು ಚಿಕ್ಕಣ್ಣ, ನಾಯಕ ಕೂಡ ನಗಿಸುವ ಪ್ರಯತ್ನ ಮಾಡಿರುವುದರಿಂದ ಕಾಮಿಡಿ ಪೀಸ್. ನಿರ್ದೇಶಕ ಮಂಜು ಮಾಂಡವ್ಯ ಸಂಭಾಷಣೆಗಳ ಮಳೆಯನ್ನೇ ಸುರಿಸಿರುವುದರಿಂದ ಡೈಲಾಗ್ ಪೀಸ್ ಕೂಡ.['ಅಣ್ತಮ್ಮ'ನ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ?]
ಭಯದಿಂದ ಭಕ್ತಿ, ಭಯಭಕ್ತಿಯೇ ದೇಶಭಕ್ತಿ - ಉದಯವಾಣಿ
ಹಾಡು, ನಾಯಕಿ, ತಾಯಿ, ಗೆಳೆಯ, ಎದುರಾಳಿ ಎಲ್ಲವೂ ನಾಯಕ ಕಲ್ಯಾಣಾರ್ಥವಾಗಿಯೇ ನಡೆಯುತ್ತದೆ. ಅಪ್ಪಟ ಕಮರ್ಷಿಯಲ್ ಚಿತ್ರವೊಂದು ಹೇಗಿರಬೇಕು ಅಂತ ಕೇಳಿದವರಿಗೆ, 'ಮಾಸ್ಟರ್ ಪೀಸ್' ಚಿತ್ರವನ್ನು ಖಂಡಿತಾ ತೋರಿಸಬಹುದು. ಅಂದಹಾಗೆ ಕಲಾವಿದನೊಬ್ಬ ಸೃಷ್ಟಿಸಿದ ಅದ್ಭುತ ಕಲಾಕೃತಿಗೆ 'ಮಾಸ್ಟರ್ ಪೀಸ್' ಅನ್ನುತ್ತಾರೆಯೇ ಹೊರತು, ವ್ಯಕ್ತಿಗೆ ಆ ಪದ ಬಳಸುವುದಿಲ್ಲ. ಅಂಥದ್ದನ್ನು ಸೃಷ್ಟಿಸಿದವನನ್ನು ಮಾಸ್ಟರ್ ಅನ್ನುತ್ತಾರೆ. ಎಲ್ಲಾ ಮಾಸ್ಟರ್ ಗಳೂ ಮಾಸ್ಟರ್ ಪೀಸ್ ಸೃಷ್ಟಿ ಮಾಡುವುದಿಲ್ಲ. ಎಲ್ಲಾ ಮಾಸ್ಟರ್ ಪೀಸ್ ಗಳನ್ನೂ ಮಾಸ್ಟರ್ ಗಳೇ ಸೃಷ್ಟಿಸಬೇಕು ಅಂತೇನೂ ಇಲ್ಲ. ನಿರ್ದೇಶಕ ಮಂಜು ಮಾಂಡವ್ಯ ಮಾತು ಖರ್ಚು ಮಾಡಿದ್ದಾರೆ. ನಿರ್ಮಾಪಕ ವಿಜಯ್ ಕಿರಂದೂರು ದುಡ್ಡು ಖರ್ಚು ಮಾಡಿದ್ದಾರೆ. ಆ ಭಾರವನ್ನು ಯಶ್ ಸಮರ್ಥವಾಗಿ ಹೊತ್ತು ಸಾಗಿದ್ದಾರೆ. - ಜೋಗಿ
ಗಟ್ಟಿಯಲ್ಲ ಪುಡಿ ಪುಡಿ - ಪ್ರಜಾವಾಣಿ
ನಟನೆ ಡಾನ್ಸ್ ಮತ್ತು ಹೊಡೆದಾಟದ ದೃಶ್ಯಗಳಲ್ಲಿ ಯಶ್ ಇಷ್ಟವಾಗುತ್ತಾರೆ. ಚಿಕ್ಕಣ್ಣ ನಾಯಕನ ಬಾಲ, ನಾಯಕನ ಅಣತಿಯಂತೆ ಆಡುವ ಈ ಪಾತ್ರಕ್ಕೆ ಸ್ವಂತಿಕೆ ಇಲ್ಲದಿದ್ದರೂ ನಗಿಸುವ ತಮ್ಮ ಸ್ವಂತ ಗುಣದಿಂದ ಚಿಕ್ಕಣ್ಣ ಇಷ್ಟವಾಗುತ್ತಾರೆ. ನಾಯಕಿ ಶಾನ್ವಿ ಮುದ್ದುಮುದ್ದಾಗಿ ಕಣ್ಣಲ್ಲಿ ನಿಲ್ಲುತ್ತಾರೆ. ದತ್ತಣ್ಣ ಒಂದೇ ದೃಶ್ಯದಲ್ಲಿ ಬಂದು ಹೋದರೂ ನೆನಪಿನಲ್ಲುಳಿಯುತ್ತಾರೆ. ವಿ.ಹರಿಕೃಷ್ಣ ಸಂಗೀತ ಕಿವಿಗಪ್ಪಳಿಸಿದರೂ ನಿಧಾನಕ್ಕೆ ಒಳಗಿಳಿಯುವ ಗುಣ ಪಡೆದುಕೊಂಡಿಲ್ಲ. ಛಾಯಾಗ್ರಾಹಣ (ಎಸ್ ವೈದಿ) ಮತ್ತು ಸಂಕಲನ (ಕೆಎಂ ಪ್ರಕಾಶ್) ಬಗ್ಗೆ ವಿಶೇಷ ತಕರಾರೇನೂ ಇಲ್ಲ. - ಗಣೇಶ ವೈದ್ಯ.


Click it and Unblock the Notifications











