twitter
    For Quick Alerts
    ALLOW NOTIFICATIONS  
    For Daily Alerts

    'ನೀರ್ ದೋಸೆ' ಚಪ್ಪರಿಸಿದ ವಿಮರ್ಶಕರಿಗೆ ಬೇಗ ಜೀರ್ಣ ಆಯ್ತಾ ?

    By Suneetha
    |

    ಭಯಂಕರ ಡೈಲಾಗ್ ಗಳ ಸರಮಾಲೆಯೇ ಇದ್ದ 'ನೀರ್ ದೋಸೆ' ಎಲ್ಲಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಜಗ್ಗೇಶ್ ಅವರ ಡೈಲಾಗ್ ಡೆಲಿವರಿ, ಮುಖಭಾವ, ಹರಿಪ್ರಿಯ ಅವರ ಬೋಲ್ಡ್ ನಟನೆ ನೋಡಿದ ಪ್ರೇಕ್ಷಕರು ಕಣ್-ಬಾಯಿ ಬಿಟ್ಟಿದ್ದಾರೆ.

    ಯಾರನ್ನೇ ಕೇಳಿದರೂ ಸಿನಿಮಾ ಸೂಪರ್ ಅಂತಾನೇ ಎಲ್ಲರ ಬಾಯಲ್ಲೂ ಬರುತ್ತಿದೆ. ನಿನ್ನೆ ಬಂದ್ ಇದ್ದರೂ, 'ನೀರ್ ದೋಸೆ' ಬಿಸಿಬಿಸಿ ಇರುವಾಗಲೇ ಚಪ್ಪರಿಸಿ ತಿಂದರೇ ಮಜಾನೇ ಬೇರೆ ಅಂತ ಹಲವು ಮಂದಿ ಫಸ್ಟ್ ಡೇ ಫಸ್ಟ್ ಶೋ ನೋಡಿ ಆನಂದಿಸಿದ್ದಾರೆ.[ವಿಮರ್ಶೆ : ಬಾಡೂಟದ ಜೊತೆ 'ನೀರ್ ದೋಸೆ' ಸವಿದಂತೆ ಇದೇ ಜಗ್ಗೇಶ.!]

    'ಸಿದ್ಲಿಂಗು' ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಅವರು ನಿರ್ದೇಶನ ಮಾಡಿದ್ದ 'ನೀರ್ ದೋಸೆ' ಸಿನಿಮಾ ನೋಡಿ ಹಲವು ಮಂದಿ ಕಣ್ಣೀರು ಸುರಿಸಿದ್ದಾರಂತೆ. ಭಾವನೆಗಳ ತಾಕಲಾಟದ ಕಥೆಯುಳ್ಳ 'ನೀರ್ ದೋಸೆ' ಪ್ರೇಕ್ಷಕರ ಮನಮುಟ್ಟಿದೆ.

    ನಿನ್ನೆ (ಸೆಪ್ಟೆಂಬರ್ 2) ತೆರೆಕಂಡ 'ನೀರ್ ದೋಸೆ' ಚಿತ್ರಕ್ಕೆ ಬರೀ ಪ್ರೇಕ್ಷಕರು ಮಾತ್ರವಲ್ಲದೇ, ವಿಮರ್ಶಕರು ಕೂಡ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

    ನವರಸ ನಾಯಕ ಜಗ್ಗೇಶ್, ನಟಿ ಹರಿಪ್ರಿಯಾ, ಹಿರಿಯ ನಟ ದತ್ತಣ್ಣ ಮತ್ತು ನಟಿ ಸುಮನಾ ರಂಗನಾಥ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ 'ನೀರ್ ದೋಸೆ' ಚಿತ್ರಕ್ಕೆ ವಿಮರ್ಶಕರು ನೀಡಿದ ಕಾಮೆಂಟ್ ಗಳ ಕಲೆಕ್ಷನ್ ನಿಮಗಾಗಿ, ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ...

    'ನೀರವತೆ ನೀಗಿಸುವ 'ನೀರ್ ದೋಸೆ'- ವಿಜಯ ಕರ್ನಾಟಕ

    'ನೀರವತೆ ನೀಗಿಸುವ 'ನೀರ್ ದೋಸೆ'- ವಿಜಯ ಕರ್ನಾಟಕ

    ಚಿತ್ರವು ಖಡಕ್ ರೊಟ್ಟಿಯಾಗಿ ಅಜೀರ್ಣವಾದರೂ, ಚಿತ್ರ ನೋಡುವಾಗ ನಿರ್ದೇಶಕರು ನೀರ್ ದೋಸೆಗೆ ಕೊಟ್ಟಿರುವ ಟೈಟಲ್ ಟ್ಯಾಗ್ ಲೈನ್ ನೆನಪಿಸಿಕೊಳ್ಳಿ. ಮೌನ, ತಾಳ್ಮೆ, ಸಹನೆ ದೌರ್ಬಲ್ಯವಲ್ಲ. ಅವು ಅಸ್ತ್ರ! ಅದು ಸಿನಿಮಾದಲ್ಲಿ ಮಾತ್ರ ಕಾಣೋಲ್ಲ. ಅವಿವಾಹಿತ ಮಧ್ಯವಯಸ್ಕ ಜಗ್ಗೇಶ್ ಕುಮಾರ್ (ಜಗ್ಗೇಶ್) ಹೆಣ ಸಾಗಿಸುವ ವ್ಯಾನ್ ಡ್ರೈವರ್. ಬ್ರಹ್ಮಚಾರಿಯಾಗೇ ಉಳಿದ ವೃದ್ಧ ದತ್ತಾತ್ರೇಯ (ದತ್ತಣ್ಣ). ತನ್ನ ಸಡಿಲ ಸ್ವಭಾವದಿಂದ ಸೆಕ್ಸ್ ವರ್ಕರ್ ಆದ ಹುಡುಗಿ ಕುಮುದಾ (ಹರಿಪ್ರಿಯಾ). ಮೂಲಾ ನಕ್ಷತ್ರದಲ್ಲಿ ಹುಟ್ಟಿ ಮದುವೆಯಾಗದೆ ಉಳಿದ ಹುಡುಗಿ ಶಾರದಾ ಮಣಿ. ಈ ನಾಲ್ವರ ಬದುಕಿನ ಕತೆಯೇ ಇಡೀ ಸಿನಿಮಾ. -ಪದ್ಮಾ ಶಿವಮೊಗ್ಗ. ರೇಟಿಂಗ್: 2.5/5.[ಭಾರತ್ ಬಂದ್ ಪರಿಣಾಮ : 'ನೀರ್ ದೋಸೆ' ಚಿತ್ರಕ್ಕೆ ಲಾಭ.!]

    'ಸುಖ ಹುಡುಕುತ್ತ ಬದುಕಿನ ಸಾಕ್ಷಾತ್ಕಾರ' -ಪ್ರಜಾವಾಣಿ

    'ಸುಖ ಹುಡುಕುತ್ತ ಬದುಕಿನ ಸಾಕ್ಷಾತ್ಕಾರ' -ಪ್ರಜಾವಾಣಿ

    ದೋಸೆ ಸ್ಪೈಸಿಯಾಗಿದೆ. ದೋಸೆ ಸೆಕ್ಸಿಯಾಗಿದೆ. ಹೀಗೆ ನಾಲ್ಕು ಪದಗಳಲ್ಲಿ ಬಣ್ಣಿಸಿ ಸುಮ್ಮನಾಗಬಹುದಾದ ಸಿನಿಮಾ ‘ನೀರ್ ದೋಸೆ'. ಆದರೆ, ವಿಜಯಪ್ರಸಾದ್‌ ನಿರ್ದೇಶನದ ಈ ಸಿನಿಮಾದಲ್ಲಿ ಮಾತಿನ ನಂತರದ ಮೌನ ಕುತೂಹಲಕರವಾಗಿದೆ. ರತಿವರ್ಚಸ್ಸಿನ ಆಚೆಗೆ ಇಣುಕುವ ಅಂತರಂಗದ ಸೌಂದರ್ಯ ಚೇತೋಹಾರಿಯಾಗಿದೆ. ದೇಹದ ಹಸಿವನ್ನು ತಣಿಸುವ ದೋಸೆ ಮನಸ್ಸಿನ ಹಸಿವನ್ನೂ ನೀಗುವ ಮೂಲಕ ಅಧ್ಯಾತ್ಮದ ಸ್ಪರ್ಶವನ್ನೂ ಪಡೆದಿದೆ. ಹೆಣಗಳನ್ನು ಸಾಗಿಸುವ ವಾಹನದಲ್ಲಿ ಶೃಂಗಾರದ ಕನಸುಗಳು ಚಿಗುರುತ್ತವೆ; ಮಸಣದಲ್ಲಿ ಜೀವನಪ್ರೀತಿ ಪುಟಿಯುತ್ತದೆ. ಹೀಗೆ ಸೂತಕದ ಪರಿಸರದಲ್ಲಿ ಬದುಕಿನ ಸಾಧ್ಯತೆಗಳನ್ನು ಚಿತ್ರಿಸುವ ನಿರ್ದೇಶಕರು, ಸಣ್ಣತನಗಳನ್ನು ಮೀರುವ ಮೂಲಕ ಮನುಷ್ಯ ಬದುಕಿನಲ್ಲಿ ಖುಷಿ ಕಂಡುಕೊಳ್ಳಬಹುದು ಎನ್ನುವುದನ್ನು ಸೂಚಿಸಲು ಪ್ರಯತ್ನಿಸಿದಂತಿದೆ. -ರಘುನಾಥ ಚ.ಹ.[ಟ್ವೀಟ್ಸ್: 'ನೀರ್ ದೋಸೆ' ಹರಿದು-ಜಗಿದು ತಿಂದ ಸಿನಿಪ್ರಿಯರು ಏನಂತಾರೆ.?]

    'ಮಾತಲ್ಲಿ ಮಸಾಲೆ ದೋಸೆ, ಮನಸಿಗೆ ಮೆದು ದೋಸೆ, ಕಣ್ಣಿಗೆ ಬೆಣ್ಣೆ ದೋಸೆ'- ಉದಯವಾಣಿ

    'ಮಾತಲ್ಲಿ ಮಸಾಲೆ ದೋಸೆ, ಮನಸಿಗೆ ಮೆದು ದೋಸೆ, ಕಣ್ಣಿಗೆ ಬೆಣ್ಣೆ ದೋಸೆ'- ಉದಯವಾಣಿ

    ನಾಲ್ವರು ಸಿಂಗಲ್ಸ್ ಗಳ ಕತೆಯನ್ನು ಡಬ್ ಕು ಡಬ್ಬಲ್ ಮೀನಿಂಗ್ ಮಾತುಗಳ ಜೊತೆ ಸೇರಿಸಿ 'ನೀರ್ ದೋಸೆ' ಎರೆದಿದ್ದಾರೆ ವಿಜಯ್ ಪ್ರಸಾದ್. ಕರಾವಳಿಯ ಜಗತ್ಪ್ರಸಿದ್ಧ 'ನೀರ್ ದೋಸೆ'ಯನ್ನು ಕತೆಯೊಳಗೆ, ನಾಲ್ಕೂ ಪಾತ್ರಗಳ ಜೊತೆಗೆ ಬೆಸೆದು, ರಸವತ್ತಾದ ಬ್ರೇಕ್ ಫಾಸ್ಟ್ ಆಗಿಸಿ ಬಡಿಸಿದ್ದಾರೆ. ತುಂಬ ಜಗ್ಗುವಂಥ ಒಂದು ಮಹಾಭಾರತದ ನಾಟಕದ ಫ್ಲ್ಯಾಶ್ ಬ್ಯಾಕ್, ನಿಮ್ಮ ಭಾವುಕತೆಯನ್ನು ಕೆಣಕಿಬಿಡುವಂತ ಅಪ್ಪನೊಬ್ಬನ ಲವ್ ಸ್ಟೋರಿ, ಪುಟ್ಟಪುಟ್ಟದಾಗಿ ಅಕ್ಕ-ತಮ್ಮನ ಬಾಂಧವ್ಯದ ಕತೆ, ಇವಿಷ್ಟು ಬಿಟ್ಟರೆ ಚಿತ್ರಕ್ಕೆ ಕಥೆಯ ಅಂಥ ಹಂಗೇನಿಲ್ಲ. ಕತೆ ತೆರೆದುಕೊಳ್ಳುವುದು, ಮುಕ್ತಾಯವಾಗುವುದು ನಾಲ್ವರ ಜರ್ನಿಯಲ್ಲಿ. ಹಗುರವಾಗಿ ತೇಲುತ್ತಿದೆ ಅನ್ನುವಾಗಲೇ, ಅದು ಭಾರವೂ ಆಗಿ ನಮ್ಮನ್ನು ಜಗ್ಗುತ್ತದಲ್ಲ, ಆ ತರ. ದಬದಬನೆ ಸುರಿವ ಮಲೆನಾಡು ಮಳೆಯಂತೆ ಮಾತು, ಅಲ್ಲಲ್ಲಿ ಕೃತಜ್ಞತೆ, ಅಲ್ಲಲ್ಲಿ ಕಣ್ಣೀರು.-ವಿಕಾಸ್ ನೇಗಿಲೋಣಿ.

    'ಕೇಳಿದ್ದು ನೀರ್ ದೋಸೆ, ಕೊಟ್ಟಿದ್ದು ಮಸಾಲೆ ದೋಸೆ' -ಕನ್ನಡ ಪ್ರಭ

    'ಕೇಳಿದ್ದು ನೀರ್ ದೋಸೆ, ಕೊಟ್ಟಿದ್ದು ಮಸಾಲೆ ದೋಸೆ' -ಕನ್ನಡ ಪ್ರಭ

    ರಂಜನೆ, ಪ್ರಚೋದನೆ, ಬೋಧನೆ. ವಿಜಯ್ ಪ್ರಸಾದ್ ನಿರ್ದೇಶನದ ಬಹುನಿರೀಕ್ಷಿತ 'ನೀರ್ ದೋಸೆ' ಬಗ್ಗೆ ಇಷ್ಟು ಅಂದುಕೊಳ್ಳಬಹುದು. ರಂಜನೆ ಅಂತ ಬಂದ್ರೆ ಅಲ್ಲಿ ಕಚಗುಳಿ ಇಡುವ ಮಾತುಗಳಿವೆ. ಪ್ರಚೋದನೆಗೆ ಹರಿಪ್ರಿಯಾ ಅವರ ಹಾಟ್-ಹಾಟ್ ದೃಶ್ಯಗಳಿವೆ. ಬೋಧನೆ ಅಂತ ಬಂದ್ರೆ ಸಮಾಜದ ವಿವಿಧ ಸ್ತರಗಳಿಂದ ಬಂದ ಅಲ್ಲಿನ ನಾಲ್ಕೂ ಪಾತ್ರಗಳಿಗೂ ಭಾವನೆಗಳಿವೆ. ಏನೇ ಆದ್ರೂ ಪ್ರತಿಯೊಬ್ಬರೂ ಮುಖವಾಡ ಕಳಚಿ ಬದುಕಿದಾಗ ಸಿಗುವ ಸುಖ, ಮುಖವಾಡ ಹಾಕಿಕೊಂಡು ಬದುಕೋದ್ರಲ್ಲಿ ಸಿಗೋದಿಲ್ಲ ಎನ್ನುವ ಫಿಲಾಸಫಿ ಇದೆ. ಆ ಮಟ್ಟಿಗೆ 'ನೀರ್ ದೋಸೆ' ಎನ್ನುವುದು ಬರೀ ಹೋಟೆಲ್ ನಲ್ಲಿ ಸಿಗುವ ಮೆನು ಆಗದೆ, ಮನಸ್ಸುಗಳನ್ನು ಕಟ್ಟುವ ಅಸ್ತ್ರವೂ ಆಗಿದ್ದೇ ಈ ಚಿತ್ರದ ವಿಶೇಷ.-ಸಂಕೇತ್ ಗುರುದತ್.

    'ಹಾಟ್ ಚಟ್ನಿ ಜೊತೆ ಫಿಲಾಸಫಿಕಲ್ 'ನೀರ್ ದೋಸೆ'- ವಿಜಯವಾಣಿ

    'ಹಾಟ್ ಚಟ್ನಿ ಜೊತೆ ಫಿಲಾಸಫಿಕಲ್ 'ನೀರ್ ದೋಸೆ'- ವಿಜಯವಾಣಿ

    ಇಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಇದ್ದಿದ್ದನ್ನು ಇದ್ದ ಹಾಗೆ ಪರದೆಗೆ ರವಾನಿಸಿದ್ದಾರೆ. ಕೆಲವೊಂದು ಕಡೆ ಇದು ಅತಿಯಾಯ್ತು ಎನಿಸುತ್ತದೆ. ಅಲ್ಲಲ್ಲಿ, ನಗು ಅರಳಿಸುತ್ತದೆ. ನಡುನಡುವೆ ಕಣ್ಣು ತೇವ ಮಾಡುತ್ತದೆ. ನಾಲ್ಕು ಪಾತ್ರಗಳಿಗೂ ಗಂಭೀರವಾದ ಹಿನ್ನಲೆ ನೀಡುವ ನಿರ್ದೇಶಕರು ಅನ್ನು ನಿರೂಪಣೆ ಮಾಡುವಾಗ ಮಾತ್ರ ಡಬಲ್ ಮೀನಿಂಗ್ ಸಂಭಾಷಣೆಗೆ ಜೋತು ಬಿದ್ದಿದ್ದಾರೆ. ಪ್ರಥಮಾರ್ಧ ಚೂರು ಸ್ಲೋ ಎನ್ನುವಾಗಲೇ ದ್ವಿತೀಯಾರ್ಧ ಚುರುಕಿನಿಂದ ಸಾಗುತ್ತದೆ. ನಿರ್ದೇಶಕರ ಆಶಯಕ್ಕೆ ತಕ್ಕಂತೆ ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಹಿನ್ನಲೆ ಸಂಗೀತ ನೀಡಿದ್ದಾರೆ. ಜಗ್ಗೇಶ್ ಮತ್ತು ದತ್ತಣ್ಣ ಜೋಡಿಯ ಜುಗಲ್ ಬಂದಿ ರುಚಿಯಾದ 'ನೀರ್ ದೋಸೆ' ಸವಿದಷ್ಟೇ ಖುಷಿ ನೀಡುತ್ತದೆ. ವೇಶ್ಯೆ ಪಾತ್ರದಲ್ಲಿ ಹರಿಪ್ರಿಯಾ ಮೈ ಚಳಿ ಬಿಟ್ಟು ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ವಯಸ್ಸಿಗೆ ತಕ್ಕ ಪಾತ್ರದಲ್ಲಿ ಸುಮನ್ ರಂಗನಾಥ್ ಗಮನ ಸೆಳೆಯುತ್ತಾರೆ.

    English summary
    Kannada movie 'Neer Dose' Critics Review. Kannada Actor Jaggesh, Actreess Haripriya, Actress Suman Ranganath starrer 'Neer Dose' has received mixed response from the critics. Here is the collection of reviews by Top News Papers of Karnataka. The movie is directed by Vijaya Prasad of 'Sidlingu' fame.
    Saturday, September 3, 2016, 11:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X