ನಿಷ್ಕಲ್ಮಶ ಪ್ರೀತಿಯ 'ಊಟಿ'ಗೆ ವಿಮರ್ಶಕರು ಮನಸೋತ್ರಾ?
ಪ್ರೀತಿ-ಪ್ರೇಮಕ್ಕೋಸ್ಕರ ಹೊಡೆದಾಟ-ಬಡಿದಾಟ, ಪ್ರಾಣತ್ಯಾಗ ಮಾಡೋದು ಇದೆಲ್ಲಾ ಈಗಿನ ಚಿತ್ರಗಳ ಸ್ಟೈಲ್ ಹಾಗೂ ಇತ್ತೀಚಿನ ಹೊಸ ಟ್ರೆಂಡ್. ಆದರೆ ಪ್ರೀತಿಯನ್ನು ತುಂಬಾ ನೈಜತೆಗೆ ಹತ್ತಿರವಾಗಿ ತಂದು ತೋರಿಸಿದ ಚಿತ್ರಗಳಾದ 'ಬೆಳದಿಂಗಳ ಬಾಲೆ', 'ಮೈ ಆಟೋಗ್ರಾಫ್' ನಂತಹ ಅಪರೂಪದ ಚಿತ್ರಗಳು ಇವೆ.
ಇದೀಗ ಅದೇ ಸಾಲಿಗೆ ಸೇರ್ಪಡೆಯಾಗುವ ಮತ್ತೊಂದು ಹೊಸ ಸಿನಿಮಾ 'ಊಟಿ'. ಅಂದು ಕಾವೇರಿ ನದಿ ನೀರಿನ ಕಿಚ್ಚಿಗೆ ಹೊತ್ತಿ ಉರಿದಿದ್ದು, ಬರೀ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಡಿಭಾಗಗಳು ಮಾತ್ರವಲ್ಲದೇ, ಗಡಿಭಾಗದಲ್ಲಿ ಅರಳಿದ್ದ ಅನ್ಯಭಾಷಿಕ ಯುವಕ-ಯುವತಿಯರ ನಡುವಿನ ಪ್ರೀತಿ ಕೂಡ ಸಿಕ್ಕಿ ಪರದಾಡಿತ್ತು.
ಆ ನೈಜ ಘಟನೆಯನ್ನು ಇಟ್ಟುಕೊಂಡು ನಿರ್ದೇಶಕ ಮಹೇಶ ಅವರು 'ಊಟಿ' ಎಂಬ ಸಿನಿಮಾ ಮಾಡಿದ್ದಾರೆ. 'ಲಾಸ್ಟ್ ಬಸ್' ಖ್ಯಾತಿಯ ನಟ ಅವಿನಾಶ್, ನಟ ನಿಖಿಲ್ ಮತ್ತು 'ಬೆತ್ತನಗೆರೆ' ಖ್ಯಾತಿಯ ನಟಿ ನೈನಾ ಅವರು ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.
ನೈಜ ಘಟನೆಯಾಧರಿತ ಚಿತ್ರಕ್ಕೆ ನಮ್ಮ ಕನ್ನಡದ ಖ್ಯಾತ ವಿಮರ್ಶಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿಮರ್ಶಕರ, ವಿಮರ್ಶೆಯ ಕಲೆಕ್ಷನ್ಸ್ ನೋಡಿ ಕೆಳಗಿನ ಸ್ಲೈಡುಗಳಲ್ಲಿ...
'ಅಬ್ಬರದ ನಡುವೆ ತಂಪಾಗಿ ಹರಿವ ಝರಿ'- ವಿಜಯ ಕರ್ನಾಟಕ
"ಈ ಚಿತ್ರದಲ್ಲಿ ಹುಡುಕಾಟವಿದೆ, ಟ್ರಾವೆಲ್ ಇದೆ, ಅಚಲವಾದ ಪ್ರೀತಿಯೂ ಇದೆ. ಅಬ್ಬರದ ಚಿತ್ರಗಳ ನಡುವೆ ತಣ್ಣಗೆ ಹರಿವ ಝರಿಯಂತೆ ಪ್ರೇಕ್ಷಕನಿಗೆ ಹಿತಾನುಭವ ನೀಡುತ್ತದೆ. ಡಬಲ್ ಮೀನಿಂಗ್ ಡೈಲಾಗ್, ಐಟಂ ಡಾನ್ಸ್, ಫೈಟ್ ಗಳಿಲ್ಲದ ಸಿನಿಮಾ ಇದು. ಚಿತ್ರದ ಮೊದಲರ್ಧ ಇಬ್ಬರ ನಡುವಿನ ಪ್ರೇಮವನ್ನು ತೋರಿಸಲಾಗಿದೆ. ದ್ವಿತಿಯಾರ್ಧದಲ್ಲಿ ನಾಯಕಿಯನ್ನು ಹುಡುಕುವ ನಾಯಕನ ಪಯಣ ಇದ್ದು, ಪ್ರತೀ ಹೆಜ್ಜೆಗೂ ಕುತೂಹಲ ಉಳಿಸಿಕೊಂಡಿದೆ. ಇಷ್ಟಲ್ಲದೆ, ಕತೆಯ ಎಳೆಯೊಂದಿಗೆ ಸಾಮಾಜಿಕ ಕಳಕಳಿಯನ್ನೂ ಬೆಸೆಯಲಾಗಿದೆ. ಕೊನೆಗೆ ಆ ಹುಡುಗಿ ಸಿಗುತ್ತಾಳಾ? ಇಲ್ಲವಾ? ಎನ್ನುವುದನ್ನು ಚಿತ್ರದಲ್ಲಿ ನೋಡಿ". -ಪದ್ಮಾ ಶಿವಮೊಗ್ಗ.
'ಪ್ರೇಮಿಯ ಹುಡುಕಾಟ' - ಪ್ರಜಾವಾಣಿ
"ಕುಮಾರ್ ಊಟಿಗೆ ಹೊರಟಿದ್ದು ತನ್ನ ಪ್ರೇಯಸಿಯನ್ನು ಹುಡುಕಿಕೊಂಡು. ಹನ್ನೆರಡು ವರ್ಷಗಳ ಹಿಂದೆ ಊಟಿಯಲ್ಲಿದ್ದಾಗ ಪಕ್ಕದ ಮನೆಯಲ್ಲೇ ಇದ್ದ ಮಲೆಯಾಳಿ ಹುಡುಗಿ ಜೆನ್ನಿಫರ್ ಜೊತೆ ಕುಮಾರ್ಗೆ ಪ್ರೀತಿಯಾಗಿರುತ್ತದೆ. ಜೀವನದಲ್ಲಿ ಏನಾದರೂ ಸಾಧನೆ ಮಾಡು ಎಂದು ಆತನನ್ನು ಜೆನ್ನಿಫರ್ ಪ್ರೋತ್ಸಾಹಿಸುತ್ತಾಳೆ. ಇದೇ ಸಂದರ್ಭದಲ್ಲಿ ಕಾವೇರಿ ಗಲಾಟೆ ತೀವ್ರವಾಗಿ ಊಟಿಯಲ್ಲಿದ್ದ ಕನ್ನಡಿಗರು ಕರ್ನಾಟಕಕ್ಕೆ ಬಂದುಬಿಡುತ್ತಾರೆ. ಜೆನ್ನಿಫರ್ಗೆ ಕೊನೆಯ ಮಾತೂ ಹೇಳಲಾಗದೇ ಕುಮಾರ್ ಅಲ್ಲಿಂದ ಹೊರಡಬೇಕಾಗುತ್ತದೆ. ಕುಮಾರ್ಗೆ ಆತನ ಮನದರಸಿ ಸಿಗುತ್ತಾಳಾ ಎನ್ನುವುದು ಕಥೆಯಲ್ಲಿನ ಕೌತುಕದ ಅಂಶ".
'ಚದುರಿದ ಪ್ರೇಮಕ್ಕೆ ಚಂದದ ಚೌಕಟ್ಟು' - ಉದಯವಾಣಿ
'ಕಾವೇರಿ ಗಲಾಟೆ ಜೋರಾಗುತ್ತಿದೆ. ಊಟಿಯ ಎಸ್ಟೆಟ್ ನಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕ ಹಾಗೂ ತಮಿಳುನಾಡಿನ ಕೆಲಸಗಾರರಲ್ಲಿ ಭಯ ಶುರುವಾಗುತ್ತದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಕೈ ಮೀರುತ್ತಿದೆ. ಜೀವ ಉಳಿದರೆ ಸಾಕು ಎಂದು ರಾತ್ರೋರಾತ್ರಿ ಸಾಕಷ್ಟು ಕುಟುಂಬಗಳು ಊರು ಬಿಡುತ್ತವೆ. ಹೀಗೆ ಊರು ಬಿಡುವ ಅನಿವಾರ್ಯತೆಯಲ್ಲಿ ನಿಷ್ಕಲ್ಮಶ ಪ್ರೀತಿಯೂ ದೂರವಾಗುತ್ತದೆ. ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳೋದು ಹೇಗೆ ಅಂತ ಆ ಮುಗ್ದ ಪ್ರೇಮಿಗಳು ಯೋಚಿಸುವಷ್ಟರಲ್ಲಿ ಕುಟುಂಬಗಳು ಬೇರೆಯಾಗಿ ಬಿಡುತ್ತವೆ. ಮುಂದೇನು? ಪ್ರೀತಿ ಕಳೆದುಹೋಗುತ್ತದೆ, ಕನಸು ಕಮರುತ್ತಿದೆ. ಅಸಹಾಯಕ ಸ್ಥಿತಿ. ಹಾಗಾದರೆ ಆ ನಿಷ್ಕಲ್ಮಶ ಪ್ರೀತಿ ನಿಷ್ಕಾರಣವಾಗಿ ಕೊನೆಯಾಗುತ್ತದಾ? ಇಂತಹ ಕುತೂಹಲವಿದ್ದರೆ ನೀವು 'ಊಟಿ' ಚಿತ್ರ ನೋಡಿ'.- ರವಿಪ್ರಕಾಶ್ ರೈ.
'ಊಟಿಯಲ್ಲಿ ಪ್ರೇಕ್ಷಕನ ನೆಮ್ಮದಿ ಲೂಟಿ'- ಕನ್ನಡ ಪ್ರಭ
'ಕಾದಂಬರಿಯನ್ನು ಚಿತ್ರ ಮಾಡಲು ನಿರ್ದೇಶಕ ಮಹೇಶ್ ಕುಮಾರ್ ಹರಸಾಹಸ ಪಟ್ಟಿದ್ದಾರೆ. ಇಡೀ ಘಟನೆ ಊಟಿ ಸುತ್ತಮುತ್ತಲ ಭಾಗದಲ್ಲಿಯೇ ನಡೆದಿದ್ದು ಎನ್ನುವ ಗುಂಗಿನಲ್ಲಿ ಅವರು 'ಊಟಿ' ಸುತ್ತಲು ಹೆಚ್ಚು ಶ್ರಮ ಹಾಕಿದ್ದಾರೆ. ಇದು ಚಿತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತೋರಿಸಲು ಅಡ್ಡಬಂದಿದೆ. ಸರಳವಾದ ಪ್ರೇಮ ಕಥೆಗೆ ಹೆಚ್ಚಿನ ತಿರುವುಗಳೇ ಇಲ್ಲ. ಹಾಡುಗಳಲ್ಲೂ ಅಷ್ಟೇನು ಆಕರ್ಷಣೆ ಇಲ್ಲ. ಛಾಯಾಗ್ರಹಣ ಒಂದಷ್ಟು ಮುದ ನೀಡುತ್ತದೆ.- ದೇಶಾದ್ರಿ ಹೊಸ್ಮನೆ.


Click it and Unblock the Notifications











