ವಿಮರ್ಶೆ: 'ಇಷ್ಟಕಾಮ್ಯ', ಕನ್ನಡ ಮಣ್ಣಿನ ರಮ್ಯ ಪ್ರೇಮಕಾವ್ಯ
ಅಜ್ಜ ಕಟ್ಟಿದ 'ಬೆಳ್ಳಕ್ಕಿ ಆಸ್ಪತ್ರೆ'ಯಲ್ಲಿ ಹಳ್ಳಿಯ ಜನರ ಸೇವೆ ಮಾಡುತ್ತಾ ಹುಟ್ಟಿದ ಊರಲ್ಲೇ ಒಂಟಿಯಾಗಿ ಜೀವನ ಮಾಡುತ್ತಿರುವ ಡಾಕ್ಟರ್ ಆಕರ್ಷ್ (ವಿಜಯ್ ಸೂರ್ಯ) ಗೆ ಅಡುಗೆಯವನಾದ ನಿಂಬೆ (ಚಿಕ್ಕಣ್ಣ)ಯೇ ಬಂಧು-ಬಳಗ ಎಲ್ಲಾ ಆಗಿರ್ತಾನೆ.
ಹಣ-ಆಸ್ತಿ-ಅಂತಸ್ತು-ಐಶ್ವರ್ಯ ಎಲ್ಲಾ ಇದ್ರೂನೂ ಆಕರ್ಷ್ ಮನಸ್ಸಿಗೆ ನೆಮ್ಮದಿ ಅನ್ನೋದು ಇರೋದಿಲ್ಲಾ, ಹಳ್ಳಿಯಲ್ಲಿನ ಬಡವರ ಸೇವೆ ಮಾಡುತ್ತಾ ಅದರಲ್ಲೇ ಸುಖ ಕಾಣುತ್ತಾ ಇರುವ ಡಾಕ್ಟರ್ ಆಕರ್ಷ್ ಗೆ ಒಂದು ಆಕ್ಸಿಡೆಂಟ್ ಮೂಲಕ ಅಚ್ಚರಿ (ಮಯೂರಿ) ಪರಿಚಯ ಆಗುತ್ತಾಳೆ. ಮುಂದೇನಾಗುತ್ತೆ ಅನ್ನೋದನ್ನ ಚಿತ್ರಮಂದಿರದಲ್ಲಿ ನೀವೇ ನೋಡಿ. ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ..[ಹೆಜ್ಜೇನು ದಾಳಿ: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆಸ್ಪತ್ರೆಗೆ ದಾಖಲು]
ಸಾಹಿತಿ ದೊಡ್ಡೇರಿ ವೆಂಕಟಗಿರಿ ರಾವ್ ಅವರ ಕಾದಂಬರಿ ಆಧಾರಿತ 'ಇಷ್ಟಕಾಮ್ಯ' ಚಿತ್ರದ ಮೂಲಕ ಸುಮಾರು ಎರಡು ವರ್ಷಗಳ ಬಳಿಕ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ವಿಭಿನ್ನ ಪ್ರೇಮ ಕಥಾಹಂದರ ಇರುವ ಸಿನಿಮಾವನ್ನು ಹೊತ್ತು ತಂದಿದ್ದಾರೆ.[ಕಬ್ಬನ್ ಪಾರ್ಕ್ ನಲ್ಲಿ ದಿಢೀರ್ ಪ್ರತ್ಯಕ್ಷ ಆದ ನಾಗತಿಹಳ್ಳಿ]
'ಇಷ್ಟಕಾಮ್ಯ' ಕಥೆ
ಶ್ರೀಮಂತ ಮನೆತನದ ಹುಡುಗ ಆದರೂ ಸಿಂಪಲ್ ವ್ಯಕ್ತಿತ್ವ ಹೊಂದಿರುವ ಡಾಕ್ಟರ್ ಆಕರ್ಷ್ ಗೆ ಬಡ ಜನರು ಎಂದರೆ ಪ್ರೀತಿ. ಇಂತಹ ಹುಡುಗನಿಗೆ ಮುದ್ದು-ಮುದ್ದಾದ ಮುಗ್ದ ಬಡ ಹಳ್ಳಿ ಹುಡುಗಿ 'ಅಚ್ಚರಿ' ಆಕಸ್ಮಿಕವಾಗಿ ಸಿಗುತ್ತಾಳೆ.['ಬೆಳದಿಂಗಳ ಬಾಲೆ' ಪ್ರತ್ಯಕ್ಷ; ಮತ್ತೆ ತೆರೆಮೇಲೆ ಸುಮನ್ ನಗರ್ಕರ್]
ಅಪಘಾತದಲ್ಲಿ ಅರಳಿತು ಪ್ರೇಮ
ಡಾಕ್ಟರ್ ಆಕರ್ಷ್ ಕಾರಿಗೆ ಅಡ್ಡ ಬರುವ ಅಚ್ಚರಿಗೆ ತೀವ್ರ ಗಾಯ ಆಗುತ್ತೆ, ಆಕೆ 'ಬೆಳ್ಳಕ್ಕಿ' ಆಸ್ಪತ್ರೆ ಸೇರುತ್ತಾಳೆ. ಅಂತೂ ಅಪಘಾತದ ಮೂಲಕ ಒಂದು ಮುಗ್ದ ಪ್ರೇಮ ಚಿಗುರೊಡೆಯುತ್ತದೆ. ರೋಗಿಯಾಗಿ ಆಸ್ಪತ್ರೆ ಸೇರಿದ ಅಚ್ಚರಿ ಆಕರ್ಷ್ ಹೃದಯ ಗೆದ್ದು ಪ್ರೀತಿಯ ಅಚ್ಚು ಆಗುತ್ತಾಳೆ.
ಹೆಣ್ಣಿನ ಸ್ವಭಾವಕ್ಕೆ ವಿರುದ್ಧವಾದ 'ಅದಿತಿ'
ಮುಗ್ದ ಮನಸ್ಸಿನ 'ಅಚ್ಚರಿ' ತನಗೆ ಪ್ರಾಣ ಕೊಟ್ಟ ದೇವರು ಅಂತ ಆಕರ್ಷ್ ನನ್ನು ಹಾಗೂ ತನ್ನ ಸುತ್ತ-ಮುತ್ತಲಿನ ಜನರನ್ನು ಸ್ವಚ್ಛ ಮನಸ್ಸಿನಿಂದ ಪ್ರೀತಿ ಮಾಡುತ್ತಿದ್ದರೆ, ಇದಕ್ಕೆ ವಿರುದ್ಧ ವ್ಯಕ್ತಿತ್ವ-ಮನೋಭಾವ ಹೊಂದಿರುವ ಶ್ರೀಮಂತ ಮನೆತನದ ಹುಡುಗಿ ಅದಿತಿ(ಕಾವ್ಯ ಶೆಟ್ಟಿ) ಅಂತರಂಗದ ಶುದ್ಧಿಗಿಂತ ಬಹಿರಂಗ ಶುಧ್ದಿಯೇ ಮೇಲು ಅಂತ ಅಹಂಕಾರದಿಂದ ಮೆರೆದಾಡುತ್ತಿರುತ್ತಾಳೆ.
ಮುಂದೇನು?
ಅಹಂಕಾರದ ಮೂಟೆ ಅದಿತಿ (ಕಾವ್ಯ ಶೆಟ್ಟಿ) ತಮ್ಮ ಟೀ ಎಸ್ಟೆಟ್ ನ ಕೆಲಸದಿಂದ ಅಚ್ಚರಿ (ಮಯೂರಿ)ಯನ್ನು ತೆಗೆದು ಹಾಕಿದಳು ಅನ್ನೋ ಕೋಪದಲ್ಲಿ ಇಬ್ಬರ ನಡುವೆ ದ್ವೇಷ ಹುಟ್ಟುತ್ತೆ. ಈ ನಡುವೆ ಆಕರ್ಷ್ ಜೊತೆ ಪ್ರೀತಿ ಮಿತಿ ಮೀರಿ ಅಚ್ಚರಿ ತನ್ನದೇ ಲೋಕದಲ್ಲಿ ಕಳೆದು ಹೋಗಿರುವಾಗ ಆಕೆಗೆ ಒಂದು ಶಾಕ್ ಕಾದಿರುತ್ತದೆ. ತದನಂತರ ಟ್ವಿಸ್ಟ್ ಮೇಲೆ ಟ್ವಿಸ್ಟ್ ಅಷ್ಟಕ್ಕೂ ಮುಂದೇನಾಗುತ್ತೆ? ಅದಿತಿಗೂ ಡಾಕ್ಟರ್ ಆಕರ್ಷ್ ಗೂ ಏನು ಸಂಬಂಧ? ಅಚ್ಚರಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳುತ್ತಾಳಾ? ಅನ್ನೋದನ್ನ ನೀವು ಥಿಯೇಟರ್ ನಲ್ಲಿ ನೋಡಿದರೆ ಚೆಂದ.
ಬೇಸಿಗೆಗೆ ತಂಪಾದ ಸಿಂಚನ
'ಇಷ್ಟಕಾಮ್ಯ' ಪಕ್ಕಾ ಲವ್ ಕಮ್ ರೋಮ್ಯಾಂಟಿಕ್ ಸಿನಿಮಾವಾಗಿದ್ದು, ಮದುವೆ, ಸಂಬಂಧ, ತ್ಯಾಗ ಎಲ್ಲವೂ ಈ ಚಿತ್ರದಲ್ಲಿ ಮಿಳಿತವಾಗಿದೆ. ಈ ಬಿರು ಬೇಸಿಗೆಯಲ್ಲಿ 'ಇಷ್ಟಕಾಮ್ಯ' ಸಿನಿಮಾ ಪ್ರೇಕ್ಷಕರಿಗೆ ತಂಪಾದ ಮಳೆಯಂತಿದ್ದು, ಇಡೀ ಕುಟುಂಬಕ್ಕೆ ಹೇಳಿ ಮಾಡಿಸಿದಂತಿದೆ.
ನಟ ವಿಜಯ ಸೂರ್ಯ ನಟನೆ ಹೇಗಿದೆ?
'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ನಟ ವಿಜಯ್ ಸೂರ್ಯ ಅವರು ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದು, ಆ ಪಾತ್ರಕ್ಕೆ ಇವರು ಹೇಳಿ ಮಾಡಿಸಿದಂತೆ ನಟಿಸಿದ್ದಾರೆ. ಯಾವುದೇ ರೀತಿಯಲ್ಲೂ ಪ್ರೇಕ್ಷಕರಿಗೆ ಅವರ ನಟನೆ ಅತೀ ಎನಿಸದೆ ಕೂಲ್ ಆಗಿ ಸ್ಮಾರ್ಟ್ ಆಗಿ ನಿಭಾಯಿಸಿದ್ದಾರೆ.
ನಟಿ ಮಯೂರಿ
'ಅಶ್ವಿನಿ ನಕ್ಷತ್ರ', 'ಕೃಷ್ಣಲೀಲಾ' ಖ್ಯಾತಿಯ ನಟಿ ಮಯೂರಿ ಅವರು ಫಸ್ಟ್ ಹಾಫ್ ಫುಲ್ ಪ್ರೇಕ್ಷಕರಿಗೆ ವಿಶುವಲ್ ಟ್ರೀಟ್ ನೀಡಿದ್ದಾರೆ. ತಮ್ಮ ಬಬ್ಲಿ ಬಬ್ಲಿ ನಟನೆಯಿಂದ ಎಲ್ಲರ ಮನಸೂರೆಗೊಂಡಿದ್ದು, ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ.
ನಟಿ ಕಾವ್ಯ ಶೆಟ್ಟಿ
ಅಪ್ಪಟ ಕರಾವಳಿ ಬೆಡಗಿ ಕಾವ್ಯ ಶೆಟ್ಟಿ ಅವರ ದರ್ಪ-ಅಹಂಕಾರದ ನಟನೆ ಕಂಡಾಗ ಹೆಣ್ಣು ಮಕ್ಕಳಿಗೆ ಅಹಂಕಾರ ಇರಬೇಕು, ಆದರೆ ಇಷ್ಟಿರಬಾರದು ಎಂದು ಅನಿಸಿದರೂ ತಪ್ಪಿಲ್ಲ. ಒಟ್ನಲ್ಲಿ ಇವರ ನಟನೆಯೂ ಹೆಚ್ಚು ಅತೀ ಎನಿಸದೆ ತುಂಬಾ ನೀಟಾಗಿ ಖಡಕ್ ಜೊತೆಗೆ ನ್ಯಾಚುರಲ್ ಆಗಿ ನಟಿಸಿದ್ದು, ಇವರ ಪ್ಲಸ್ ಪಾಯಿಂಟ್.
ಉಳಿದವರು?
ಉಳಿದಂತೆ ನಟ ಚಿಕ್ಕಣ್ಣ ಅವರು ಎಷ್ಟು ಬೇಕು ಅಷ್ಟೇ ಕಾಮಿಡಿ ಮಾಡಿದ್ದು, ಮಂಡ್ಯ ರಮೇಶ್ ಅವರು ಕೂಡ ಕೊಂಚ ನಗಿಸುತ್ತಾರೆ. ರಂಗಾಯಣ ರಘು ಅವರು ಕಾಮಿಡಿಯ ಜೊತೆ-ಜೊತೆಗೆ ಅಪ್ಪ ಅನ್ನೋ ಪಾತ್ರವನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಸುಮನ್ ನಗರ್ಕರ್ ಮತ್ತು ಪ್ರಕಾಶ್ ಬೆಳವಾಡಿ ಚೆನ್ನಾಗಿ ನಟಿಸಿದ್ದಾರೆ.
ಸಂಗೀತ
ಇಡೀ ಚಿತ್ರದಲ್ಲಿ ಹೈಲೈಟ್ ಆಗೋದು ಚಿತ್ರದ ಹಾಡುಗಳು. ಪ್ರತಿಯೊಂದು ಹಾಡುಗಳು ಬಹಳ ಅರ್ಥಪೂರ್ಣವಾಗಿದ್ದು, ಮತ್ತೆ-ಮತ್ತೆ ಕೇಳಬೇಕೆನಿಸುವ ಸಂಗೀತ ಗುಚ್ಛ ಅಂದರೂ ತಪ್ಪಿಲ್ಲ. ಚಿತ್ರದಲ್ಲಿ ಕುವೆಂಪು ಅವರು ಬರೆದಿರುವ 'ನಾ ನಿನಗೆ ನೀ ನನಗೆ ಜೇನಾಗುವ' ಎಂಬ ಹಾಡಿದ್ದು, ಮನಸ್ಸಿಗೆ ತುಂಬಾನೇ ಕಾಡುವಂತಿದೆ. ಒಟ್ನಲ್ಲಿ ಒಮ್ಮೆ ಹಾಡು ಕೇಳಿದರೆ ಮತ್ತೆ ಕಿವಿಯಲ್ಲಿ ಗುಂಯ್ ಗುಡುವ ಅದೇ 'ಧಂ ಧಂ ಧಂ ಧಮ್ ಧಂ'.
ಛಾಯಾಗ್ರಹಣ
'ಒಲವೇ ಮಂದಾರ' ಖ್ಯಾತಿಯ ಛಾಯಾಗ್ರಾಹಕ ರವಿ ಕುಮಾರ್ ಸನ ಅವರ ಕ್ಯಾಮರಾ ವರ್ಕ್ ಗೆ ಮಾತ್ರ ಯಾವುದೇ ತಕರಾರು ಇಲ್ಲದೆ ಫುಲ್ ಮಾರ್ಕ್ಸ್ ಕೊಡಬಹುದು. ಮಲೆನಾಡು ಪ್ರದೇಶವಾದ ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ ವಿಶೇಷವಾಗಿ ತೀರ್ಥಹಳ್ಳಿಯ ಕುವೆಂಪು ಅವರ ಕವಿಶೈಲ ಸ್ಥಳಗಳು ಇವರ ಕ್ಯಾಮೆರಾ ಕಣ್ಣಲ್ಲಿ ಅದ್ಭುತವಾಗಿ ಮೂಡಿ ಬಂದಿದ್ದು, ಇಡೀ ಚಿತ್ರ ದೃಶ್ಯ-ಕಾವ್ಯಮಯ ಅಂದ್ರೆ ಯಾವುದೇ ತಪ್ಪಿಲ್ಲ.[ರಾಜ್ ಅಭಿಮಾನಿ ಛಾಯಾಗ್ರಾಹಕ ರವಿ]
ಪ್ಲಸ್-ಮೈನಸ್ ಪಾಯಿಂಟ್
ಇಡೀ ಚಿತ್ರದಲ್ಲಿ ಎಲ್ಲಾ ನಟ-ನಟಿಯರು ತಮ್ಮ ತಮ್ಮ ನಟನೆಯಿಂದಲೇ ಪ್ರೇಕ್ಷಕರ ಮನಸೂರೆಗೊಂಡಿದ್ದು, ಹಾಗೂ ಚಿತ್ರದ ಕೊನೆಯವರೆಗೂ ಎಲ್ಲೂ ಬೋರಾಗದಂತೆ ಕಾಪಾಡಿಕೊಂಡು ಬಂದಿದ್ದು ಇಡೀ ಚಿತ್ರದ ಪ್ಲಸ್ ಪಾಯಿಂಟ್. ಚಿತ್ರದ ಫಸ್ಟ್ ಹಾಫ್ ಕೊಂಚ ಎಳೆದಂತಾಗಿತ್ತು, ಇದನ್ನು ಸ್ವಲ್ಪ ವೇಗವಾಗಿ ಕೊಂಡೊಯ್ಯಬಹುದಿತ್ತು. ಅನ್ನೋದು ಪ್ರೇಕ್ಷಕರ ಅಭಿಪ್ರಾಯ.
ಪ್ರೀತಿ-ದ್ವೇಷದ 'ಇಷ್ಟಕಾಮ್ಯ'
ಒಬ್ಬಳದು ಮುಗ್ದವಾದ ಶುದ್ಧ ಮನಸ್ಸಿನ ಪ್ರೀತಿ, ಇನ್ನೊಬ್ಬಳದು ಮನಸ್ಸು ತುಂಬಾ ರಾಡಿ ಎಬ್ಬಿಸಿಕೊಂಡು ಬಹಿರಂಗವಾಗಿ ಬರೀ ದೇಹ ಶುದ್ದ ಮಾಡಿಕೊಳ್ಳುವ ಕ್ಯಾರೆಕ್ಟರ್. ಕಟ್ಟಿಕೊಂಡವಳು ಗಂಡ ಮುತ್ತಿಕ್ಕಿದರು ಕರ್ಚಿಪ್ ನಲ್ಲಿ ಒರೆಸಿಕೊಳ್ಳುವ ಜಾಯಮಾನದವಳಾದರೆ, ಪ್ರೇಮಿಸಿದವಳು ಮನಸ್ಸನ್ನು ಡೆಟಾಲ್ ಹಾಕಿ ಕ್ಲೀನ್ ಮಾಡಿ ಮುಟ್ಟು ಅಂತ್ಹೇಳಿ ಮುಟ್ಟಿಸಿಕೊಳ್ಳುತ್ತಾಳೆ. ಒಟ್ನಲ್ಲಿ ಪರಿಶುಧ್ದ ಪ್ರೇಮಕಾವ್ಯವೇ ಈ 'ಇಷ್ಟಕಾಮ್ಯ'
ಫೈನಲ್ ಸ್ಟೇಟ್ ಮೆಂಟ್
'ಇಷ್ಟಕಾಮ್ಯ' ಸಂಪೂರ್ಣ ದೃಶ್ಯ-ಕಾವ್ಯದ ಜೊತೆಗೆ ಪಕ್ಕಾ ಫ್ಯಾಮಿಲಿ ಮನೋರಂಜನಾತ್ಮಕ ಚಿತ್ರ. ನಾಗತಿಹಳ್ಳಿ ಅವರು ಪರ್ಫೆಕ್ಟ್ ಪೈಸಾ ವಸೂಲ್ ಸಿನಿಮಾವನ್ನು ನೀಡಿದ್ದಾರೆ. ಕುಟುಂಬದ ಜೊತೆ ನೀವೂ ಚಿತ್ರವನ್ನ ನೋಡಿ.


Click it and Unblock the Notifications











