'ಜಿಗರ್ ಥಂಡ' ವಿಮರ್ಶೆ: ಆರ್ಮುಗಂಗೇ 'ಆಪ್' ಇಟ್ಟ ರಾಹುಲ್
ಒಂದೊಳ್ಳೆ ಸಿನಿಮಾ ಮಾಡಿ ಎಲ್ಲರಿಂದ ಶಹಭಾಷ್ ಗಿರಿ ಗಿಟ್ಟಿಸಿಕೊಂಡು ದೊಡ್ಡ ಡೈರೆಕ್ಟರ್ ಆಗಬೇಕೆಂದು ಒಬ್ಬ ಬಿಸಿ ರಕ್ತದ ಯುವಕ ಕನಸು ಕಟ್ಟಿಕೊಂಡಿರುತ್ತಾನೆ. ಇನ್ನೊಬ್ಬ ಸಿಕ್ಕ-ಸಿಕ್ಕವರನ್ನು ಕೊಚ್ಚಿ ಕೊಲೆ ಮಾಡುತ್ತಾ ರಕ್ತ ಬಸಿದು ಜನರ ಭಯವನ್ನೇ ತನ್ನ ಬಂಡವಾಳವಾಗಿರಿಸಿಕೊಂಡಿರುತ್ತಾನೆ.
ಸಿನಿಮಾ ಮಾಡಬೇಕೆಂದು ಕನಸು ಹೊತ್ತು ನಿರ್ಮಾಪಕರನ್ನು ಭೇಟಿಯಾದಾಗ, ಅವರುಗಳು ಕೆಲವು ಸಿಡಿ ಕೊಟ್ಟು, ಸಿನಿಮಾ ನೋಡಿ ಲಾಂಗ್-ಮಚ್ಚು ಸಿನಿಮಾ ಇದ್ರೆ ಮಾಡಯ್ಯ ಅಂತಾರೆ. ಆವಾಗ್ಲೆ ಇವರಿಬ್ಬರು ಒಬ್ಬರಿಗೊಬ್ಬರು ಹತ್ತಿರವಾಗುತ್ತಾರೆ. ಕೊಲೆಯನ್ನೇ ತನ್ನ ವೃತ್ತಿಯಾಗಿರಿಸಿಕೊಂಡಿರುವ ಗ್ಯಾಂಗ್ ಸ್ಟರ್ ಮೇಲೆ ಸಿನಿಮಾ ಮಾಡಲು ಹೊರಡುತ್ತಾನೆ ಬಿಸಿ ರಕ್ತದ ಯುವಕ. ಮುಂದೇನಾಗುತ್ತೆ? ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಸ್ಲೈಡ್ಸ್ ಕ್ಲಿಕ್ಕಿಸಿ...
'ಜಿಗರ್ ಥಂಡ' ಕಥೆ ಏನು?
ಸಮಾಜಕ್ಕೆ ಸಂದೇಶ ನೀಡುವಂತಹ ಸಿನಿಮಾಗಳನ್ನು ಮಾಡಬೇಕೆಂಬ ಕನಸು ಕಟ್ಟಿಕೊಂಡಿರುವ ರಾಹುಲ್ (ರಾಹುಲ್) ನಿರ್ಮಾಪಕರನ್ನು ಭೇಟಿ ಮಾಡಿದಾಗ ಅವರು ಅವನಿಗೆ ಲಾಂಗ್-ಮಚ್ಚು ಹಿಡಿದಿರುವ ಗ್ಯಾಂಗ್ ಸ್ಟರ್ ಸಿನಿಮಾ ಮಾಡಿ ಅಂತ ಉಪದೇಶ ನೀಡುತ್ತಾರೆ. ಅದಕ್ಕೆ ರಾಹುಲ್ ಒಬ್ಬ ರಿಯಲ್ ರೌಡಿ ಶೀಟರ್ ಅನ್ನೇ ಇಟ್ಟುಕೊಂಡು ಸಿನಿಮಾ ಮಾಡಲು ರುದ್ರಾಪುರದ 'ಆರ್ಮುಗಂ' ಕೋಟೆಗೆ ಕಾಲಿಡುತ್ತಾನೆ.['ಜಿಗರ್ ಥಂಡ' ರಿಯಲ್ ಹೀರೋ ಆರ್ಮುಗಂ ರವಿಶಂಕರ್ ಸಂದರ್ಶನ]
ಸಿನಿಮಾ ಮಾಡಲು ಒಪ್ತನಾ 'ಆರ್ಮುಗಂ'
ತನ್ನ ಬಗ್ಗೆ ಆರ್ಟಿಕಲ್ ಬರೆದ ಜರ್ನಲಿಸ್ಟ್ ಅನ್ನೇ ಪೆಟ್ರೋಲ್ ಸುರಿದು ಕೊಲ್ಲುವ ಆರ್ಮುಗಂ ಇನ್ನು ಅವನ ಬಗ್ಗೆ ಸಿನಿಮಾ ಮಾಡ್ತಾರೆ ಅಂದ್ರೆ ಬಿಡ್ತಾನ. ಆ ಭಯ ಇಟ್ಟುಕೊಂಡು ರಾಹುಲ್ ರುದ್ರಾಪುರದ ಊರ ಜನರ ಹತ್ತಿರ ಆರ್ಮುಗಂ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡುತ್ತಾನೆ. ಇದು ಹೇಗೋ ಆರ್ಮುಗಂಗೆ ಗೊತ್ತಾಗಿ ರಾಹುಲ್ ಗೆ ಹಿಗ್ಗಾಮುಗ್ಗ ಹೊಡೆಯುತ್ತಾನೆ. ಆವಾಗ 'ಕರಿಯ' 'ಓಂ' ಸ್ಟೈಲ್ ನಲ್ಲಿ ಸಿನಿಮಾ ಮಾಡ್ತೀವಿ ಎಂದಾಗ ಆರ್ಮುಗಂ ಸಂತಸದಿಂದ ಒಪ್ಪಿಕೊಳ್ತಾನೆ. ಮುಂದೇನಾಗುತ್ತೆ?, ಆರ್ಮುಗಂ ಜೀವನದ ಕಥೆ ಸಿನಿಮಾ ಆಗುತ್ತಾ? ಆರ್ಮುಗಂ ಪಾತ್ರ ಮಾಡೋ ನಾಯಕ ಯಾರು ಅನ್ನೋ ಎಲ್ಲಾ ಪ್ರಶ್ನೆಗಳಿಗೆ ಥಿಯೇಟರ್ ನಲ್ಲಿ ಉತ್ತರ ಹುಡುಕಿ.
ರಾಹುಲ್ ನಟನೆ ಹೇಗೆ?
ಚಿತ್ರದ ಈ ಪಾತ್ರಕ್ಕೆ ರಾಹುಲ್ ಅವರು ಸರಿಯಾಗಿ ಸೂಟ್ ಆಗಿದ್ದು, ಅವರಿಗೆ ಈ ಸಿನಿಮಾ ಖಂಡಿತ ಒಂದೊಳ್ಳೆ ಬ್ರೇಕ್ ನೀಡುವ ಎಲ್ಲಾ ಲಕ್ಷಣ ಕಾಣುತ್ತಿದೆ. ತಮ್ಮ ಪಾತ್ರವನ್ನು ತುಂಬಾ ಚೆನ್ನಾಗಿ ನಿರೂಪಣೆ ಮಾಡುವಲ್ಲಿ ರಾಹುಲ್ ಯಶಸ್ವಿಯಾಗಿದ್ದಾರೆ.
ರವಿಶಂಕರ್ ಅಭಿನಯ?
ರುದ್ರಾಪುರದ 'ಆರ್ಮುಗಂ' ಪಾತ್ರ ವಹಿಸಿದ್ದ ನಟ ರವಿಶಂಕರ್ ಅವರು ತಮ್ಮ ಅಭಿನಯದ ಮೂಲಕ ಚಿಂದಿ ಉಡಾಯಿಸಿದ್ದಾರೆ. ಈ ಚಿತ್ರದ ಮೂಲಕ ತಾವೊಬ್ಬ ಸಕಲಕಲಾವಲ್ಲಭ ಅನ್ನೋ ಮಾತನ್ನು ನಿಜವಾಗಿಸಿದ್ದಾರೆ. ಕೆಂಚು ಗಡ್ಡ-ಮೀಸೆ ಬಿಟ್ಟು ಲುಂಗಿ ಎತ್ತಿ ಕಟ್ಟಿರುವ ರವಿಶಂಕರ್ ಅವರು ಪಕ್ಕಾ ಲೋಕಲ್ ಗ್ಯಾಂಗ್ ಸ್ಟರ್ ಆಗಿ ಪ್ರೇಕ್ಷಕರಿಂದ ಶಿಳ್ಳೆ ಹೊಡೆಸಿಕೊಳ್ಳುತ್ತಾರೆ.
ಚಿಕ್ಕಣ್ಣ/ಸಾಧು ನಟನೆ?
ರಾಹುಲ್ ಗೆಳೆಯನ ಪಾತ್ರ ವಹಿಸಿದ್ದ ಚಿಕ್ಕಣ್ಣ ಅವರು ಮತ್ತೆ ತೆರೆಯ ಮೇಲೆ ರಾಜ್ಯಭಾರ ಮಾಡಿದ್ದಾರೆ. ಪ್ರತಿಯೊಂದು ಸನ್ನಿವೇಶಕ್ಕೂ ಚಿಕ್ಕಣ್ಣನ ಪಂಚ್ ಡೈಲಾಗ್ ಪ್ರೇಕ್ಷಕರ ಮನದಲ್ಲಿ ಕಚಗುಳಿ ಇಡುವಂತಿತ್ತು. ಸಾಧು ಕೋಕಿಲಾ ಅವರು ನಟನೆ ಕಲಿಸುವ ಮಾಸ್ಟರ್ ಪಾತ್ರ ವಹಿಸಿದ್ದು, ತಮ್ಮ ನಟನೆಯ ಮೂಲಕ ಪ್ರೇಕ್ಷಕರಿಗೆ ನಕ್ಕು-ನಕ್ಕು ಸುಸ್ತು ಹೊಡಿಯುವಂತೆ ಮಾಡಿದ್ದಾರೆ.
ಇನ್ನುಳಿದವರು?
ನಟಿ ಸಂಯುಕ್ತಾ ಹೊರನಾಡ್ ಅವರು ಇಡೀ ಸಿನಿಮಾದಲ್ಲಿ ಸ್ವಲ್ಪ ಹೊತ್ತು ಇದ್ದರೂ ಕೂಡ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸಲ್ಲಿ ಉಳಿದು ಬಿಡುತ್ತಾರೆ. ವೀಣಾ ಸುಂದರ್ ಅವರಂತೂ ಈ ಚಿತ್ರದಲ್ಲಿ ತಮ್ಮ ಇಮೇಜ್ ಅನ್ನೇ ಬದ್ಲಾಯಿಸಿದ್ದಾರೆ. ಮಾತ್ರವಲ್ಲದೇ ಆರ್ಮುಗಂ ಅವರ ಜೊತೆ ರೌಡಿ ಶೀಟರ್ ಗಳಾಗಿ ಅಭಿನಯಿಸಿದ್ದ ಸಹ ಕಲಾವಿದರು ತಮಗೆ ಕೊಟ್ಟ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿ ಪ್ರೇಕ್ಷಕರ ಮನಸ್ಸಿಗೆ ಮುದ ನೀಡುತ್ತಾರೆ.
ಸಂಗೀತ
ಅಬ್ಬರದ ಸಂಗೀತಗಳಿಲ್ಲದೆ, ಎಷ್ಟು ಬೇಕೋ ಅಷ್ಟೇ ಹಾಡುಗಳು ಈ ಚಿತ್ರದಲ್ಲಿದ್ದಿದ್ದು ವಿಶೇಷ. ಇಡೀ ಚಿತ್ರದಲ್ಲಿ ಎಲ್ಲೂ ಕೂಡ ಅಲ್ಲಲ್ಲಿ ಬೇಕಂತಲೇ ಹಾಡುಗಳನ್ನು ತುರುಕಿದಂತೆ ಕಂಡು ಬರಲಿಲ್ಲ. ವಿಶೇಷವಾಗಿ ರವಿಶಂಕರ್ ಅವರ ಹಾಡಿರುವ 'ಕೈ ಎತ್ತಿ ತಟ್ಟಿದ ಅಂದ್ರೆ' ಎಂಬ ಹಾಡಿನಲ್ಲಿ ಆರ್ಮುಗಂ ರವಿಶಂಕರ್ ಅವರ ಇಡೀ ಪರಿಚಯವನ್ನು ಮಾಡಿದ್ದು ಸೊಗಸಾಗಿತ್ತು.
ಪ್ಲಸ್-ಮೈನಸ್
ಚಿತ್ರದ ಮೇಕಿಂಗ್ ಅದ್ಭುತವಾಗಿ ಮೂಡಿಬಂದಿರೋದು ಚಿತ್ರದ ಪ್ಲಸ್ ಪಾಯಿಂಟ್. ಇಡೀ ಚಿತ್ರದಲ್ಲಿ ಪ್ರೇಕ್ಷಕರಿಗೆ ಎಲ್ಲೂ ಬೋರಾಗದಂತೆ ಕಾಪಾಡಿಕೊಂಡು ಬಂದಿದ್ದಾರೆ. ತಮಿಳು 'ಜಿಗರ್ ಥಂಡ' ರೀಮೇಕ್ ಆಗಿರೋದ್ರಿಂದ ಫ್ರೇಂ ಟು ಫ್ರೇಂ ಕಾಪಿ ಮಾಡಿದ್ದಾರೆ ಅನ್ನೋದು ಚಿತ್ರದ ಮೈನಸ್ ಪಾಯಿಂಟ್. ಒಟ್ನಲ್ಲಿ ಬಹಳ ವೇಗವಾಗಿ ಸಿನಿಮಾ ಸಾಗುತ್ತದೆ. ಮನರಂಜನೆಗೆ ಏನೂ ಕಮ್ಮಿ ಇಲ್ಲ.
ಅಂತಿಮ ಮಾತು
ಶಿವಗಣೇಶ್ ರವರ ಜಿಗರ್ ಥಂಡ ಚಿತ್ರದಲ್ಲಿ, ರವಿಶಂಕರ್ ಅವರು ವಿಧ-ವಿಧವಾದ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಫ್ಯಾಮಿಲಿ ಸಮೇತ ಕುಳಿತು ನೋಡಬಹುದಾದ ಸಿನಿಮಾ ಜಿಗರ್ ಥಂಡ. ಎರಡೂವರೆ ಗಂಟೆ ಉತ್ತಮ ಮನರಂಜನೆ ದೊರೆಯುತ್ತದೆ ಅನ್ನೋದು ಪಕ್ಕಾ. ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಚಿತ್ರಮಂದಿರದಲ್ಲಿ ಕುಳಿತ ತಕ್ಷಣ ಚಿತ್ರ ಆರಂಭವಾಗುವ ಮುನ್ನ ಕಿಚ್ಚ ಸುದೀಪ್ ಅವರು ನಿಮಗೆ ಸ್ವಾಗತ ಕೋರುತ್ತಾರೆ. ಒಂದು ವಿಭಿನ್ನ ಸಿನಿಮಾ ನೋಡಲು ಈ ವೀಕೆಂಡ್ ನಲ್ಲಿ ತಯಾರಾಗಿ.


Click it and Unblock the Notifications











