ವಿಮರ್ಶೆ : ವಿದ್ಯಾರ್ಥಿಗಳಿಗಾಗಿ ಹೇಳಿ ಮಾಡಿಸಿರುವ 'ವಾಸ್ಕೋಡಿಗಾಮ'
ಇತಿಹಾಸದಲ್ಲಿ ನಾವು ನೀವು ಓದಿರುವ ವಾಸ್ಕೋ-ಡ-ಗಾಮ ಭಾರತಕ್ಕೆ ಹೊಸ ದಾರಿ ಕಂಡು ಹಿಡಿದವನು. ಆದ್ರೆ, ಈಗ ನೀವು ಕೇಳುತ್ತಿರುವ 'ರೀಲ್' ವಾಸ್ಕೋಡಿಗಾಮ ಶಿಕ್ಷಣ ವ್ಯವಸ್ಥೆಗೆ ಹೊಸ ದಾರಿ ಕಂಡು ಹಿಡಿಯುವವನು.
ಈಗಿನ ಶಿಕ್ಷಣ ವ್ಯವಸ್ಥೆಯನ್ನು ವಿಡಂಬನೆ ಮಾಡುತ್ತಾ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರತರಬೇಕಾಗಿರುವ ಶಿಕ್ಷಣ ಪದ್ಧತಿ ಹೇಗಿರಬೇಕು ಅಂತ 'ವಾಸ್ಕೋಡಿಗಾಮ' ಭೋದಿಸುವ ಕಥೆಯೇ ಈ ಚಿತ್ರದ ಹೂರಣ.
ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ತಯಾರಾಗಿರುವ ಈ ಸಿನಿಮಾದಲ್ಲಿ ಮನರಂಜನೆ ಜೊತೆಗೆ ಉತ್ತಮ ಸಂದೇಶ ಕೂಡ ಇದೆ. ಕೆಲವು ಕಡೆ ವಾಸ್ತವಕ್ಕೆ ತೀರ ದೂರ ಅಂತ ಭಾವಿಸಿದರೂ 'ವಾಸ್ಕೋಡಿಗಾಮ' ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗುತ್ತಾನೆ.
'ವಾಸ್ಕೋಡಿಗಾಮ' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....
ಚಿತ್ರ - ವಾಸ್ಕೋಡಿಗಾಮ
ನಿರ್ಮಾಣ - ಅಶ್ವಿನ್ ವಿಜಯ್ ಕುಮಾರ್
ಕಥೆ-ಚಿತ್ರಕಥೆ-ನಿರ್ದೇಶನ - ಮಧುಚಂದ್ರ
ಸಂಗೀತ - ಪೂರ್ಣಚಂದ್ರ ತೇಜಸ್ವಿ
ಛಾಯಾಗ್ರಹಣ - ಕರ್ಮ್ ಚಾವ್ಲಾ
ಸಂಕಲನ - ಶ್ರೀಕಾಂತ್
ತಾರಾಗಣ - ಕಿಶೋರ್, ಪಾರ್ವತಿ ನಾಯರ್, ಅಶ್ವಿನ್ ವಿಜಯ್ ಕುಮಾರ್, ಸುಚೇಂದ್ರ ಪ್ರಸಾದ್ ಮತ್ತು ಇತರರು
ಬಿಡುಗಡೆ - 23 ಅಕ್ಟೋಬರ್ 2015
ವಾಸ್ಕೋಡಿಗಾಮ ಯಾರು?
'ಜ್ಞಾನ ವಿಕಾಸ್ ಕಾಲೇಜ್'ನಲ್ಲಿ ನಡೆಯುವ ಕಥೆ 'ವಾಸ್ಕೋಡಿಗಾಮ'. ಕಾಲೇಜ್ ಲೈಫ್ ನಲ್ಲಿ ಅನೇಕ ಸಂಕಷ್ಟಗಳನ್ನ ಎದುರಿಸುವ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಲೆಕ್ಚರರ್ ವಾಸು ಡಿ ಗಾಮನಹಳ್ಳಿ ಅಲಿಯಾಸ್ 'ವಾಸ್ಕೋಡಿಗಾಮ' (ಕಿಶೋರ್).
'ವಾಸ್ಕೋಡಿಗಾಮ' ಮಾಡುವುದೇನು?
ನಿರ್ಧಿಷ್ಟ ಟೆಕ್ಸ್ಟ್ ಬುಕ್ಸ್ ಮತ್ತು ಒಂದು ಎಕ್ಸಾಂ ನಿಂದ ಒಬ್ಬರ ಬುದ್ಧಿವಂತಿಕೆಯನ್ನು ಅಳಿಯುವುದಕ್ಕೆ ಅಸಾಧ್ಯ ಅನ್ನುವ ತತ್ವ ನಂಬಿರುವ 'ವಾಸ್ಕೋಡಿಗಾಮ' (ಕಿಶೋರ್) ಕನ್ನಡ ಲೆಕ್ಚರರ್ ಆಗಿ ಶಿಕ್ಷಣ ವ್ಯವಸ್ಥೆಯನ್ನ ಬದಲಿಸುವುದಕ್ಕೆ ಯಾವೆಲ್ಲಾ ಮಾರ್ಗ ಕಂಡುಕೊಳ್ಳುತ್ತಾನೆ ಅನ್ನೋದೇ ಚಿತ್ರದ ಕಥಾಹಂದರ.
ಕಿಶೋರ್ ನಟನೆ ಹೇಗಿದೆ?
ಇಡೀ ಚಿತ್ರದ ಹೈಲೈಟ್ 'ವಾಸ್ಕೋಡಿಗಾಮ' ಅಲಿಯಾಸ್ ಕಿಶೋರ್. ಕನ್ನಡ ಲೆಕ್ಚರರ್ ಆಗಿ ಕಿಶೋರ್ ನಟನೆ ಸೂಪರ್. ನಿಜ ಜೀವನದಲ್ಲೂ ಕಿಶೋರ್ ಲೆಕ್ಚರರ್ ಆಗಿದ್ದರಿಂದಲೋ ಏನೋ, ಅವರ ನಟನೆ ನೈಜವಾಗಿದೆ. ತರಹೇವಾರಿ ಗೆಟಪ್ ಗಳಲ್ಲಿ ಮಿಂಚಿರುವ ಕಿಶೋರ್ ಕಾಮಿಡಿ ಟೈಮಿಂಗ್ ಕೂಡ ಚೆನ್ನಾಗಿದೆ.
ಪಾರ್ವತಿ ನಾಯರ್ ಆಕ್ಟಿಂಗ್ ಓಕೆನಾ?
ಇಂಗ್ಲೀಷ್ ಲೆಕ್ಚರರ್ ಆಗಿ ಕಾಣಿಸಿಕೊಂಡಿರುವ ಪಾರ್ವತಿ ನಾಯರ್ ನಟನೆ ಇಷ್ಟವಾಗುತ್ತೆ. ಸುಚೇಂದ್ರ ಪ್ರಸಾದ್ ನಟನೆ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ. ನಿರ್ಮಾಪಕ ಅಶ್ವಿನ್ ವಿಜಯ್ ಕುಮಾರ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿ ಎಲ್ಲರ ಗಮನ ಸೆಳೆಯುತ್ತಾರೆ.
ಸಿನಿಮಾದಲ್ಲಿ ಮೈನಸ್ ಏನು?
ಮೊದಲಾರ್ಧ ಲವಲವಿಕೆಯಿಂದ ಸಾಗುವ 'ವಾಸ್ಕೋಡಿಗಾಮ' ಸೆಕೆಂಡ್ ಹಾಫ್ ನಲ್ಲಿ ಕೊಂಚ ಕುಂಟುತ್ತಾನೆ. ಕೆಲವು ಕಡೆ 'ವಾಸ್ಕೋಡಿಗಾಮ' ಕೈಗೊಳ್ಳುವ ನಿರ್ಧಾರಗಳು ಅತಿರೇಕ ಅಂತ ಭಾಸವಾಗುತ್ತೆ. ಪರೀಕ್ಷೆ ಹೊತ್ತಲ್ಲಿ ಪಿಕ್ ನಿಕ್ ನಂತಹ ಸನ್ನಿವೇಶಗಳು ವಾಸ್ತವಕ್ಕೆ ತೀರಾ ದೂರ.
ಕಾಮಿಡಿ ಕಚಗುಳಿ ಜಾಸ್ತಿ
ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ಕಾಮಿಡಿ ಕಿಲಾಡಿಗಳನ್ನ ಬಳಸಿಕೊಳ್ಳದೇ, ಇರುವ ತಾರಾಗಣದಲ್ಲೇ ಕಾಮಿಡಿ ಗುಳಿಗೆ ನೀಡಿದ್ದಾರೆ ನಿರ್ದೇಶಕ ಮಧುಚಂದ್ರ. ಇದುವರೆಗೂ ಸೀರಿಯಸ್ ಪಾತ್ರಗಳಲ್ಲಿ ಮಿಂಚಿದ್ದ ಕಿಶೋರ್, ಈ ಸಿನಿಮಾದಲ್ಲಿ ಎಲ್ಲರನ್ನ ನಗೆಗಡಲಲ್ಲಿ ತೇಲಿಸುತ್ತಾರೆ.
ನಿರ್ದೇಶಕರ ಆಶಯ ಚೆನ್ನಾಗಿದೆ.!
ಅವರವರ ಭವಿಷ್ಯ, ಅವರವರ ಆಯ್ಕೆ. ತಮ್ಮ ಪ್ರತಿಭೆ ಹಾಗು ಇಷ್ಟಾನುಸಾರ ವಿದ್ಯಾರ್ಥಿಗಳಿಗೆ ಏನ್ ಆಗ್ಬೇಕು ಅಂತ ಆಸೆ ಇರುತ್ತೋ, ಅದನ್ನೇ ಮಾಡಬೇಕು. ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹೇರಬಾರದು ಅನ್ನೋದು 'ವಾಸ್ಕೋಡಿಗಾಮ' ಚಿತ್ರದ ಒಟ್ಟಾರೆ ಆಶಯ. ಇದನ್ನ ಎಲ್ಲಾ ಕಾಲೇಜು ವಿದ್ಯಾರ್ಥಿಗಳು ಮನಸಾರೆ ಒಪ್ಪುವುದರಲ್ಲಿ ಸಂಶಯವೇ ಇಲ್ಲ.
ಪ್ಲಸ್ ಪಾಯಿಂಟ್ ಮ್ಯೂಸಿಕ್.!
ಪೂರ್ಣಚಂದ್ರ ತೇಜಸ್ವಿ ನೀಡಿರುವ ಮ್ಯೂಸಿಕ್ 'ವಾಸ್ಕೋಡಿಗಾಮ' ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್. ಚಿತ್ರಕಥೆಗೆ ತಕ್ಕ ಹಾಗೆ ಸಂಗೀತ ನಿರ್ದೇಶನ ಮಾಡಲಾಗಿದೆ. ಬ್ಯಾಕ್ ಗ್ರೌಂಡ್ ಸ್ಕೋರ್ ಕೂಡ ಚೆನ್ನಾಗಿದೆ.
ಫೈನಲ್ ಸ್ಟೇಟ್ಮೆಂಟ್
ಒಳ್ಳೆಯ ಸಂದೇಶದ ಜೊತೆಗೆ ಸಖತ್ ಕಾಮಿಡಿ ಇರುವ 'ವಾಸ್ಕೋಡಿಗಾಮ' ಚಿತ್ರ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತವರ ಪೋಷಕರಿಗೆ ಹೇಳಿ ಮಾಡಿಸಿದಂತಿದೆ. ಅತಿಯಾದ ನಿರೀಕ್ಷೆ ಮಾಡದೆ, ತೆರೆದ ಮನಸ್ಸಿನಿಂದ ದಸರಾ ರಜೆಯಲ್ಲಿ ಮಜಾ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರು ಆರಾಮಾಗಿ ಒಮ್ಮೆ 'ವಾಸ್ಕೋಡಿಗಾಮ' ಚಿತ್ರ ನೋಡಬಹುದು.


Click it and Unblock the Notifications











