Kurukshetra Movie Review : ಮಹಾ ಕಾವ್ಯದ ಮಹಾ 'ದರ್ಶನ'
ದುರ್ಯೋಧನ ಮತ್ತು ಭೀಮನ ನಡುವಿನ ಗದಾ ಯುದ್ಧದಿಂದ ಶುರುವಾಗುವ 'ಕುರುಕ್ಷೇತ್ರ' ಸಿನಿಮಾ, ಕೊನೆಗೆ ಅದೇ ಗದಾ ಯುದ್ಧ ಮೂಲಕ ಅಂತ್ಯ ಆಗುತ್ತದೆ. ಮಹಾಭಾರತ ಎಂಬ ಮಹಾ ಕಾವ್ಯವನ್ನು ಅಷ್ಟೇ ಚೆನ್ನಾಗಿ ತೆರೆ ಮೇಲೆ ತರುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. 'ಕುರುಕ್ಷೇತ್ರ' ಕದನ ಬಲು ಸೊಗಸಾಗಿದೆ. ಪೌರಾಣಿಕ ಪ್ರೇಮಿಗಳಿಗೆ ಸಿನಿಮಾ ಖುಷಿ ನೀಡುತ್ತದೆ.
'ಮಹಾಭಾರತ'ದ ಪ್ರಮುಖ ಸಂದರ್ಭಗಳು
ದುರ್ಯೋಧನ ಮತ್ತು ಭೀಮನ ಗದಾ ಯುದ್ಧ, ಶಕುನಿಯ ಆಗಮನ, ಪಗಡೆ ಆಟ, ವಸ್ತ್ರಾಪಹರಣ, ಕುರುಕ್ಷೇತ್ರ ಯುದ್ಧ, ಕೊನೆಗೆ ಅಭಿಮನ್ಯು, ಕರ್ಣ, ದುರ್ಯೋಧನನ ಮರಣ. 'ಮಹಾಭಾರತ'ದ ಈ ಇಷ್ಟು ಸಂದರ್ಭಗಳು 'ಕುರುಕ್ಷೇತ್ರ' ಚಿತ್ರದ ಪ್ರಮುಖ ಭಾಗಗಳಾಗಿವೆ. ಕುರುಕ್ಷೇತ್ರ ಯುದ್ಧ, ಅದರ ಹಿಂದಿನ ಭಾಗ ಮತ್ತು ಮುಂದಿನ ಭಾಗ ಹೀಗೆ ಮೂರು ಎಪಿಸೋಡ್ ಗಳು ಚಿತ್ರದಲ್ಲಿದೆ.
ದರ್ಶನ್ ಕೆರಿಯರ್ ನ ಬೆಸ್ಟ್ ಪಾತ್ರ
ದರ್ಶನ್ ಬರೀ ಹಿರೋಯಿಸಂ ಪಾತ್ರಗಳನ್ನೇ ಮಾಡುತ್ತಾ, ಒಂದೇ ರೀತಿಯ ರೋಲ್ ಗಳಿಗೆ ಅಂಟಿಕೊಂಡಿದ್ದಾರೆ ಎನ್ನುವ ಆರೋಪ ಇದೆ. ಆದರೆ, ಅಂತಹ ಎಲ್ಲ ಮಾತುಗಳಿಗೆ ದರ್ಶನ್ ತಮ್ಮ ನಟನೆಯ ಮೂಲಕ ಉತ್ತರ ನೀಡಿದ್ದಾರೆ. ದುರ್ಯೋಧನ ಪಾತ್ರ ದರ್ಶನ್ ಕೆರಿಯರ್ ನ ಬೆಸ್ಟ್ ಪಾತ್ರಗಳಲ್ಲಿ ಒಂದಾಗಿದೆ. ತೆರೆ ಮೇಲೆ ದುರ್ಯೋಧನನಾಗಿ ದರ್ಶನ್ ಅವರಿಸಿಕೊಂಡಿರುವ ರೀತಿ ಅದ್ಭುತ. ಸಿನಿಮಾ ಶುರು ಆದಾಗಿನಿಂದ ಮುಗಿಯುವ ವರೆಗೆ ದುರ್ಯೋಧನ ಆರ್ಭಟ ಬಲು ಜೋರಾಗಿದೆ
ನಟನೆ ಸಿನಿಮಾದ ಘನತೆ ಹೆಚ್ಚು ಮಾಡಿದೆ
ಪೌರಾಣಿಕ ಸಿನಿಮಾದ ಮಹಾ ಪಾತ್ರಗಳನ್ನು ನಿರ್ವಹಿಸಲು ಒಂದು ಶಕ್ತಿ ಬೇಕು. ಸಿನಿಮಾದ ಬಹುಪಾಲು ಎಲ್ಲ ಕಲಾವಿದರು ತಮ್ಮ ಪಾತ್ರಗಳನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ವಿಶೇಷವಾಗಿ, ಕರ್ಣ ಅರ್ಜುನ್ ಸರ್ಜಾ, ಶಕುನಿ ರವಿಶಂಕರ್, ಬೀಷ್ಮ ಅಂಬರೀಶ್, ಕೃಷ್ಣ ರವಿಚಂದ್ರನ್ ಪಾತ್ರಗಳು ಸಿನಿಮಾ ನೋಡುಗರಿಗೆ ಬಹಳ ಇಷ್ಟ ಆಗುತ್ತದೆ.
ಮಂಕಾದ ಪಾಂಡವರು, ಮೋಡಿ ಮಾಡುವ ಕೌರವರು
ಮಹಾಭಾರತವನ್ನು ಹಲವು ಬಗೆಯಲ್ಲಿ ಹೇಳಬಹುದು. ಅದೇ ರೀತಿ ಈ ಕುರುಕ್ಷೇತ್ರವನ್ನು ದುರ್ಯೋಧನನ ದೃಷ್ಟಿಯಲ್ಲಿ ಹೇಳಲಾಗಿದೆ. ಹಾಗಾಗಿ ಇಲ್ಲಿ ಪಾಂಡವರು ಮಂಕಾಗಿದ್ದಾರೆ. ಅವಕಾಶ ಇದ್ದರೂ ಅರ್ಜುನ ಪಾತ್ರ ಮಾಡಿರುವ ಸೋನು ಸೂದ್ ಅದನ್ನು ಬಳಸಿಕೊಂಡಿಲ್ಲ. ಪಾಂಡವರ ಪಾಳಯದಲ್ಲಿ ಮಿಂಚಿದ್ದು ಅಭಿಮನ್ಯು ಪಾತ್ರ ಮಾಡಿರುವ ನಿಖಿಲ್. ದ್ರೌಪತಿ ಬಿಟ್ಟರೆ ಬೇರೆ ನಟಿಯರಿಗೆ ಇಲ್ಲಿ ಹೆಚ್ಚು ಕೆಲಸ ಇಲ್ಲ.
ಕನ್ನಡದ ಮಟ್ಟಿಗೆ ದೊಡ್ಡ ಪ್ರಯತ್ನ
ಮಹಾಭಾರತದ ಕಥೆ ಎಲ್ಲರಿಗೂ ತಿಳಿದಿದೆ. ಆದರೂ ಅದನ್ನು ಮತ್ತೆ ಮತ್ತೆ ನೋಡಿದರು ಬೇಸರ ಆಗುವುದಿಲ್ಲ. ಹೀಗಿರುವಾಗ, ಈ ಮಹಾ ಕಾವ್ಯವನ್ನು ಅದೆಷ್ಟು ಚೆನ್ನಾಗಿ ತೋರಿಸುತ್ತೇನೆ ಎನ್ನುವುದು ಬಹಳ ಮುಖ್ಯ. ಆ ವಿಚಾರದಲ್ಲಿ ನಿರ್ದೇಶಕ ನಾಗಣ್ಣ ಹಾಗೂ ನಿರ್ಮಾಪಕ ಮುನಿರತ್ನ ಇಬ್ಬರೂ ಗೆದ್ದಿದ್ದಾರೆ. ಅದ್ದೂರಿ ಸೆಟ್ ಗಳು, ಶ್ರೀಮಂತಿಕೆ ಚಿತ್ರದ ಸೌಂದರ್ಯ ಹೆಚ್ಚಿಸಿದೆ. ಪಾಂಡವ ಮತ್ತು ಕೌರವ ಸಾಮ್ರಾಜ್ಯವನ್ನು ತೆರೆ ಮೇಲೆ ನೋಡಲು ಸೊಗಸಾಗಿದೆ.
3D ಗಿಂತ 2Dನೇ ಚೆಂದ
ಸಿನಿಮಾ ಚೆನ್ನಾಗಿದೆ. ಆದರೆ, 3D ಗಿಂತ 2Dಯಲ್ಲಿಯೇ ಸಿನಿಮಾ ಇನ್ನಷ್ಟು ಆಪ್ತ ಆಗುತ್ತಿತ್ತೇನೋ. ಕೆಲವೊಂದು ಎಫೆಕ್ಟ್ ಗಳು 3D ಅನುಭವ ನೀಡುವುದಿಲ್ಲ. ಆದರೆ, ಕನ್ನಡದ ಮಟ್ಟಿಗೆ ಇದೊಂದು ದೊಡ್ಡ ಪ್ರಯತ್ನ. ನಿಖಿಲ್ ಕುಮಾರ್ ಹಾಡು ಅನಗತ್ಯ ಅನಿಸುತ್ತದೆ. ಕೆಲವು ಸಂಭಾಷಣೆಗಳಲ್ಲಿ, ಕೆಲವು ಕಲಾವಿದರ ಉಚ್ಚಾರಣೆ ತಪ್ಪಾಗಿದೆ. ಇದೆಲ್ಲವು ಸಿನಿಮಾಗೆ ಮೈನಸ್ ಆಗಿವೆ.
ಈ ಕಾಲದ ಪೌರಾಣಿಕ ಸಿನಿಮಾ
ಕನ್ನಡದಲ್ಲಿ ಪೌರಾಣಿಕ ಸಿನಿಮಾ ಬಂದು ಎಷ್ಟೋ ಕಾಲ ಆಗಿದೆ. ಹಾಗಾಗಿ, ಒಂದು ಒಳ್ಳೆಯ ಅನುಭವ, ಸಿನಿಮಾ ನೋಡಿದ ಮೇಲೆ ಆಗುತ್ತದೆ. ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ಇದ್ದರೂ, ಯಾವುದು ಹೆಚ್ಚು ಕಿರಿಕಿರಿ ಎನಿಸುವುದಿಲ್ಲ. ಚಿತ್ರಮಂದಿರದ ಒಳಗೆ ದರ್ಶನ್ ಅಭಿಮಾನಿಯಾಗಿ ಹೋದರೂ, ಪೌರಣಿಕ ಚಿತ್ರದ ಪ್ರೇಮಿಯಾಗಿ ಹೋದರೂ, ಅಥವಾ ಸಾಮಾನ್ಯ ಪ್ರೇಕ್ಷಕನಾಗಿ ಹೋದರೂ ಸಿನಿಮಾ ಎಲ್ಲರನ್ನು ರಂಜಿಸುತ್ತದೆ.


Click it and Unblock the Notifications











