Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರ ವಿಮರ್ಶೆ: ಮನಮಿಡಿಯುವ ಮದ್ರಾಸ್ ಕೆಫೆ
ಬಾಲಿವುಡ್ ನಟ ಜಾನ್ ಅಹ್ರಾಂ ಹಾಗೂ ನರ್ಗೀಸ್ ಫಕ್ರಿ ಅಭಿನಯದ 'ಮದ್ರಾಸ್ ಕೆಫೆ' ಚಿತ್ರ ಮಿಸ್ ಮಾಡದೆ ನೋಡಿ ಯಾರಿಗೆ ಗೊತ್ತು ಯಾವಾಗ ಚಿತ್ರ ಪ್ರದರ್ಶನಕ್ಕೆ ಯಾರು ಅಡ್ಡಿ ಮಾಡುತ್ತಾರೋ ಏನೋ? ಮಾಮೂಲಿ ಪ್ರೇಮಕಥೆ, ಮಸಾಲೆ, ರೋಮಾನ್ಸ್ ಚಿತ್ರಗಳ ನಡುವೆ ಈ ರೀತಿ ಪ್ರಯತ್ನಗಳನ್ನು ಮೆಚ್ಚದಿದ್ದರೆ ನೀವು ಸಿನಿ ರಸಿಕರೇ ಅಲ್ಲ.
ಮದ್ರಾಸ್ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನಂತರ ಚೆನ್ನೈನಲ್ಲಿ ಚಿತ್ರ ಬಿಡುಗಡೆ ಕಂಡಿಲ್ಲ. ಬೆಂಗಳೂರಿನಲ್ಲೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಮುಂಬೈನಲ್ಲಿ ಚಿತ್ರ ಬಿಡುಗಡೆ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೂ ಅಲ್ಲಿ ಚಿತ್ರ ಬಿಡುಗಡೆ ಕಂಡಿದೆ.
ಚಿತ್ರದಲ್ಲಿ ತಮಿಳರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದ ತಮಿಳು ಸಂಘಟನೆಗಳು, ಚಿತ್ರ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು ಒಂದು ಕಡೆಯಾದರೆ, ಚಿತ್ರದ ಪ್ರಿವ್ಯೂ ನೋಡಿದ ಬಾಲಿವುಡ್ ಮಂದಿ ಬಹುಪರಾಕ್ ಎಂದಿದ್ದರು.
ಶೂಜಿತ್ ಸರ್ಕಾರ್ ಅವರ ಮದ್ರಾಸ್ ಕೆಫೆ ಚಿತ್ರದಲ್ಲಿ ಎಲ್ಲವೂ ಇದೆ ನೋವು, ನಲಿವು, ಹತಾಶೆ, ಸಂಚು, ದ್ರೋಹ, ದೇಶ, ಭಾಷೆ, ಗಡಿ, ಹೀರೋಯಿಸಂ ಜತೆಗೆ ಚಿತ್ರಕ್ಕೆ ಕಥೆ, ನಟನೆ, ನಿರ್ದೇಶನ ಪೂರಕವಾಗಿದೆ. ಶ್ರೀಲಂಕಾದ ನಾಗರಿಕ ಸಮರ, ರಾಜಕೀಯ ಸ್ಥಿತ್ಯಂತರ, 80 ಹಾಗೂ 90 ರ ದಶಕದಲ್ಲಿ ಶ್ರೀಲಂಕಾ ತಮಿಳರ ಅಮಾನವೀಯ ಹತ್ಯೆ ಎಲ್ಲವೂ ಸೂಕ್ತವಾಗಿ ಚಿತ್ರಿತವಾಗಿದೆ ಚಿತ್ರದ ಬಗ್ಗೆ ಇನ್ನಷ್ಟು ಸುದ್ದಿ, ವಿಮರ್ಶೆ ಇಲ್ಲಿದೆ ತಪ್ಪದೇ ಓದಿ...
ಚಿತ್ರದ ಕಥೆ ಏನು?
ಭಾರತದ RAW ಅಧಿಕಾರಿಯಾಗಿದ್ದ ವಿಕ್ರಮ್ ಸಿಂಗ್(ಜಾನ್ ಅಬ್ರಹಾಂ) ಗುರುತು ಹಿಡಿಯಲಾಗದಷ್ಟು ಸ್ಥಿತಿಯಲ್ಲಿ ಮದ್ಯವ್ಯಸನಿಯಂತೆ ಕಾಣಿಸಿಕೊಳ್ಳುವ ದೃಶ್ಯದ ನಂತರ ತನ್ನ ಹಳೆ ಕಥೆ ಎಳೆ ಎಳೆಯಾಗಿ ಬಿಚ್ಚಿಡುತ್ತಾನೆ. ಶ್ರೀಲಂಕಾದಲ್ಲಿ ಶಾಂತಿ ಮಾತುಕತೆ ಮುರಿದು ಬಿದ್ದ ಮೇಲೆ ಗುಪ್ತಚರ ಇಲಾಖೆ ಅಣತಿಯಂತೆ RAW ಅಧಿಕಾರಿಯಾಗಿ ನಿರ್ಧರಿತ ಯೋಜನೆ ಹಾಕಿಕೊಂಡು ಶ್ರೀಲಂಕಾಗೆ ಹೋಗುತ್ತಾನೆ.
ಬಂಡಾಯಗಾರರನ್ನು ಹತ್ತಿಕ್ಕಲು ಹೋದ ನಾಯಕನಿಗೆ ಅಲ್ಲಿ ಬೇರೆಯದೇ ಪ್ರಪಂಚ ಕಾಣುತ್ತದೆ. ಸಮಸ್ಯೆ ಸುಲಭಕ್ಕೆ ಪರಿಹಾರವಾಗುವ ಲಕ್ಷಣ ಕಾಣುವುದಿಲ್ಲ. ಉಭಯ ದೇಶಗಳ ಗೊಂದಲ ಪರಿಸ್ಥಿತಿಯಲ್ಲಿ ನಾಯಕ ರೆಬೆಲ್ ಗುಂಪಿಗೆ ಸಿಕ್ಕಿ ಬೀಳುತ್ತಾನೆ.
ಸದಾ ಶಾಂತಿ ಬಯಸುವ ಸಾಮಾನ್ಯ ಜನಕ್ಕೆ ಹೇಗೆ ಬಂಡಾಯ ಮಾರಕವಾಗಿದೆ. ಶ್ರೀಲಂಕಾ ಯುದ್ಧದ ಕಹಿ ಸತ್ಯ ಗಳೇನು? ತಮಿಳರ ಹತ್ಯೆಗೆ ಕಾರಣವೇನು? ಭಾರತ ಕೈಗೊಂಡ ನಿರ್ಧಾರ ಹೇಗಿತ್ತು? ಎಲ್ಲವೂ ತೆರೆಯ ಮೇಲೆ ರೋಚಕವಾಗಿ ಬಂದಿದೆ.
ನಟನೆ
ಜಾನ್ ಅಬ್ರಹಾಂ ಇದುವರೆವಿಗೂ ನಟಿಸಿದ ಅತ್ಯುತ್ತಮ ಚಿತ್ರ ಇದೇ ಎನ್ನಬಹುದು. ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ ನರ್ಗೀಸ್ ಫಕ್ರಿ ಉದ್ದುದ್ದಾ ಹಿಂದಿ ಸಂಭಾಷಣೆ ಕಷ್ಟದಿಂದ ಬಚಾವಾಗಿದ್ದು, ಯುದ್ಧ ಪತ್ರಕರ್ತೆಯಾಗಿ ಉತ್ತಮ ಅಭಿನಯ ನೀಡಿದ್ದಾರೆ. ಸಿದ್ದಾರ್ಥ್ ಬಸು, ಕನ್ನಡಿಗ ಪ್ರಕಾಶ್ ಬೆಳವಾಡಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರಾಶಿ ಖನ್ನಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ.
ಫಲಿತಾಂಶ
ಇಡೀ ಚಿತ್ರ ಪ್ರೇಕ್ಷಕರನ್ನು ಅಲುಗಾಡದಂತೆ ಕೂರಿಸುತ್ತದೆ. ನೈಜ ಬದುಕಿನ ಚಿತ್ರಣ ನೀಡುವ ಇಂಥ ಚಿತ್ರಗಳ ಪ್ರಯತ್ನಕ್ಕೆ ಶಭಾಷ್ ಹೇಳಲೇ ಬೇಕಿದೆ. ಚಿತ್ರದ ಯಶಸ್ಸು ಗಳಿಸುವುದು ಗ್ಯಾರಂಟಿ. ನಟನೆ ಜತೆಗೆ ಕಮಲ್ ಜೀತ್ ನೇಗಿ ಛಾಯಾಗ್ರಾಹಣ, ಚಂದ್ರಶೇಖರ್ ಪ್ರಜಾಪತಿ ಅವರ ಸಂಕಲನ ಚಿತ್ರವನ್ನು ಕಾಯ್ದುಕೊಂಡಿದೆ. ಇಲ್ಲದಿದ್ದರೆ ಚಿತ್ರ ನೀರಸವಾಗುವ ಎಲ್ಲಾ ಸಾಧ್ಯತೆ ಯಿತ್ತು. ಶೂರ್ಜಿತ್ ಸರ್ಕಾರ್ ನಿರ್ದೇಶನಕ್ಕೂ ವಿಕಿ ಡೊನರ್ ನಂತರ ಉತ್ತಮ ಚಿತ್ರಕ್ಕೆ ಹಣ ಹಾಕಿರುವ ಸಹ ನಿರ್ಮಾಪಕ ಜಾನ್ ಗೂ ಅಭಿನಂದನೆ ಸಲ್ಲಿಸಲೇ ಬೇಕು.
ಶೀರ್ಷಿಕೆ ವಿವಾದ
2006ರಲ್ಲಿ ಚಿತ್ರದ ಕಥೆಯನ್ನು ಜಾನ್ ಗೆ ಸಿರ್ಕಾರ್ ಹೇಳಿದ್ದರು. ಅದರೆ, 2013ರಲ್ಲಿ ಅದು ಚಿತ್ರವಾಗಿ ತೆರೆ ಕಂಡಿದೆ. ಈ ಮೊದಲು ಶ್ರೀಲಂಕಾದ ನಗರ ಜಾಫ್ನಾ ಹೆಸರನ್ನೇ ಚಿತ್ರಕ್ಕೆ ಇಡಲಾಗಿತ್ತು.
ಅದರೆ, ನಂತರ ಮದ್ರಾಸ್ ಕೆಫೆ ಎಂದು ಬದಲಾಯಿಸಲಾಯಿತು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಸಂಚನ್ನು ಕೆಫೆಯೊಂದರಲ್ಲಿ ರೂಪಿಸಿದ್ದು ಇದಕ್ಕೆ ಕಾರಣ. ಆದರೆ, ಆ ಕೆಫೆ ಎಲ್ಲಿದೆ ಎಂಬುದರ ಬಗ್ಗೆ ಚಿತ್ರದಲ್ಲಿ ಎಲ್ಲೂ ಪ್ರಸ್ತಾಪಿಸಿಲ್ಲ.ಜೀ ನ್ಯೂಸ್ ವಿಮರ್ಶೆ
ಅಪರ್ಣ ಮುಡಿ: ಒಳ್ಳೆ ರಾಜಕೀಯ ಥ್ರಿಲ್ಲರ್ ಚಿತ್ರ, ಹಾಲಿವುಡ್ ನ ಬ್ಲಡ್ ಡೈಮಂಡ್ ನ ರೀತಿಯ ದೃಶ್ಯಗಳು, ಪಾತ್ರಕ್ಕೆ ತಕ್ಕ ನಟರ ಆಯ್ಕೆ ವಿಶೇಷವಾಗಿ ಬಾಲ ಪಾತ್ರಧಾರಿ ಪ್ರಕಾಶ್ ಬೆಳವಾಡಿ, ಜೂಹಿ ಚತುರ್ವೇದಿ ಡೈಲಾಗ್ಸ್ , ಸೂಕ್ತವಾದ ಹಿನ್ನೆಲೆ ಸಂಗೀತ, ಕೆಲವೊಮ್ಮೆ ಅನಗತ್ಯ ಎನಿಸಿದರೂ ಹಿತವಾದ ಹಾಡು ಚಿತ್ರವನ್ನು ಗೆಲ್ಲಿಸಲಿದೆ. ಕೆಲ ಸೀನ್ ಗಳನ್ನು ಕತ್ತರಿಸಿದರೆ ಚಿತ್ರ ಇನ್ನಷ್ಟು ಟ್ರಿಮ್ ಆಗಿ ಉತ್ತಮವಾಗಿ ಕಾಣುತ್ತದೆ.
ಫಸ್ಟ್ ಪೋಸ್ಟ್ ವಿಮರ್ಶೆ
ಅಕ್ಷಯ ಮಿಶ್ರಾ: ಬಾಲಿವುಡ್ ಸಿದ್ದಸೂತ್ರಗಳನ್ನು ಧಿಕ್ಕರಿಸಿ ನಿಲ್ಲುವ ಇಂಥ ಚಿತ್ರಗಳಿಗೆ ಪ್ರೋತ್ಸಾಹ ನೀಡಲೇಬೇಕು. ರಾಜಕೀಯ, ಯುದ್ಧ, ಮಾನವೀಯತೆ, ಯುದ್ಧ, ನೋವು ಹಿಂಸೆ ಎಲ್ಲವೂ ಸಹ್ಯವಾಗಿ ಒಂದು ಪ್ಯಾಕೇಜ್ ನಲ್ಲಿ ಇಲ್ಲಿ ಕಾಣಬಹುದು. ಉತ್ತಮ ನಟನೆ, ಚಿತ್ರಕಥೆ, ಬೋರ್ ಹೊಡೆಸದ ಡೈಲಾಗ್ಸ್ ಗಾಗಿ ಚಿತ್ರವನ್ನು ನೋಡಿ
ರೀಡಿಫ್ ವಿಮರ್ಶೆ
ಸುಕನ್ಯಾ ವರ್ಮ: ಚಿತ್ರದಲ್ಲಿ ಕೆಲವು ತಪ್ಪುಗಳನ್ನು ತೆಗೆದಿಟ್ಟರೆ ಇದು ಉತ್ತಮ ಪ್ರಯತ್ನ, ಚಿತ್ರ ಜತೆ ನಿಮಗೆ ನೈಜ ಬದುಕಿನ ಪ್ರಯಾಣದ ಅನುಭವ ಸಿಗಲಿದೆ. ಐದಕ್ಕೆ ಮೂರುವರೆ ಸ್ಟಾರ್ ಕೊಡಲು ಅಡ್ಡಿಯಿಲ್ಲ. ನರ್ಗೀಸ್ ಡೈಲಾಗ್ ಡಿಲೆವರಿ, ಕೆಲವು ಅನಗತ್ಯ ಸೀನ್ಸ್, ಹಾಡು, ಮಾಹಿತಿದಾರನ ದೃಶ್ಯ ಕಟ್ ಮಾಡಿದರೆ ಚಿತ್ರ ಬೊಂಬಾಟ್