ಚಿತ್ರ ವಿಮರ್ಶೆ : ಕಲ್ಯಾಣ ನಂಜುಂಡಿ 'ಗೆ', ಕಿರಿಕಿರಿ ಪ್ರೇಕ್ಷಕರಿ 'ಗೆ'
ಈ ಸಿನಿಮಾದ ಹೆಸರು 'ನಂಜುಂಡಿ ಕಲ್ಯಾಣ'ವಾದರು ಇದು ನಂಜುಂಡಿ 'ಗೆ' ಕಲ್ಯಾಣ. ವಿದೇಶದಲ್ಲಿ ಇರುವ ಮಗನೊಬ್ಬ ತನ್ನ ತಾಯಿಯ ಗರ್ವಭಂಗ ಮಾಡಿ ತಾನು ಪ್ರೀತಿಸಿದ ಹುಡುಗಿಯನ್ನು ಕೈ ಹಿಡಿಯುವ ಕಥೆಯೇ ನಂಜುಂಡಿ ಕಲ್ಯಾಣ'. ಅಮ್ಮನ ಸೊಕ್ಕು ಮುರಿಯಲು ಮಗ 'ಗೆ' ಅವತಾರ ತಾಳುತ್ತಾನೆ. ಅಮ್ಮ ಮಗನ ನಡುವಿನ ಈ ಕಥೆಯನ್ನು ಇಡೀ ಸಿನಿಮಾದಲ್ಲಿ ಹಾಸ್ಯಮಯವಾಗಿ ಹೇಳಲಾಗಿದೆ.
ಚಿತ್ರ : ನಂಜುಂಡಿ ಕಲ್ಯಾಣ
ನಿರ್ಮಾಣ: ಶಿವಣ್ಣ ದಾಸನಪುರ
ಕಥೆ, ಚಿತ್ರಕಥೆ, ನಿರ್ದೇಶನ: ರಾಜೇಂದ್ರ ಕಾರಂತ್
ಸಂಕಲನ: ಕೆ.ಎಂ.ಪ್ರಕಾಶ್
ಸಂಗೀತ: ಅನೂಪ್ ಸೀಳಿನ್
ಅಭಿನಯ: ತನುಷ್ ಶಿವಪ್ಪ, ಶ್ರಾವ್ಯ ರಾವ್, ಕುರಿ ಪ್ರತಾಪ್, ಪದ್ಮಜಾ ರಾವ್ ಇತರರು
ಬಿಡುಗಡೆಯ ದಿನಾಂಕ : ಎಪ್ರಿಲ್ 6
ಸಿನಿಮಾ ಹೇಗಿದೆ..?
'ನಂಜುಂಡಿ ಕಲ್ಯಾಣ' ಒಂದು ಪಕ್ಕಾ ಕಾಮಿಡಿ ಸಿನಿಮಾ. ಅದಕ್ಕೆ ಚಿತ್ರತಂಡ ಈ ಸಿನಿಮಾ ನೋಡಿ ನಗದಿದ್ದವರಿಗೆ 1 ಲಕ್ಷ ಹಣ ನೀಡುತ್ತೇವೆ ಎಂದು ಘೋಷಣೆ ಮಾಡಿತ್ತು. ಆದರೆ 'ನಂಜುಂಡಿ ಕಲ್ಯಾಣ' ಚಿತ್ರ ಎಲ್ಲ ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿ ಆಗದಿರಬಹುದು. ಯಾಕಾಂದ್ರೆ, ಇಲ್ಲಿ ನಗಿಸುವ ದೃಷ್ಟಿಯಿಂದ ಡಬಲ್ ಮಿನಿಂಗ್ ಡೈಲಾಗ್ ಬರುತ್ತದೆ. ಆ ಡೈಲಾಗ್ ಗಳು ಅಷ್ಟೊಂದು ಇಷ್ಟ ಆಗಲ್ಲ. ಇನ್ನೊಂದು ಕಡೆ ಸಿನಿಮಾ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುತ್ತದೆ. ಮೊದಲಾರ್ಧ ಮತ್ತು ದ್ವಿತೀಯಾರ್ಥ ಎರಡಲ್ಲಿಯೂ ದೊಡ್ಡ ತಿರುವುಗಳು ಇಲ್ಲ. ಚಿತ್ರಮಂದಿರದಲ್ಲಿ ಕುಳಿತು ನೋಡುವ ಪ್ರೇಕ್ಷಕರಿಗೆ ಸಿನಿಮಾ ಎಲ್ಲಿಯೂ ಥ್ರಿಲ್ ನೀಡಲ್ಲ. ಮುಖ್ಯವಾಗಿ ಕೊನೆಯ ದೃಶ್ಯವನ್ನು ಹೊರತು ಪಡಿಸಿ ಇಡೀ ಸಿನಿಮಾದಲ್ಲಿ ನೋಡುಗರಿಗೆ ಹತ್ತಿರ ಆಗುವುದಿಲ್ಲ.
ಅಮ್ಮನ ಗರ್ವಭಂಗದ ಕಥೆ
ವಿದೇಶದಲ್ಲಿ ಇರುವ ನಾಯಕ ನಂಜುಂಡಿ (ತನುಷ್ ಶಿವಣ್ಣ)ಗೆ ಮದುವೆ ಮಾಡಬೇಕು ಎಂದು ಅವನ ತಾಯಿ ಹುಡುಗಿ ನೋಡುತ್ತಿರುತ್ತಾರೆ. ಹಠಮಾರಿ, ಸೊಕ್ಕಿನ ಅಮ್ಮನಿಗೆ ದುಡ್ಡಿನ ಮದ ಇರುತ್ತದೆ. ಮಗನಿಗೆ ಬಂದ ಸಣ್ಣ ಪುಟ್ಟ ಸಂಬಂಧಗಳನ್ನು ಅವಮಾನ ಮಾಡಿ ಕಳುಹಿಸುತ್ತಿರುತ್ತಾಳೆ. ಆದರೆ ನಂಜುಡಿಗೆ ತನ್ನ ತಂದೆಯ ತಂಗಿಯ ಮಗಳಾದ ವಿಂದ್ಯಾ (ಶ್ರಾವ್ಯ) ಮೇಲೆ ಪ್ರೀತಿ. ಹೇಗಾದರೂ ಮಾಡಿ ಅಮ್ಮನ ಕೊಬ್ಬು ಇಳಿಸಿ, ತಾನು ಪ್ರೀತಿಸಿದ ವಿಂದ್ಯಾ ಜೊತೆಗೆ ಮದುವೆ ಆಗಬೇಕು ಎಂದು ಮಗ ನಂಜುಡಿ ಮನೆಗೆ ಬರುತ್ತಾನೆ. ವಿದೇಶದಿಂದ ಬರುವಾಗ ತನ್ನ ಸ್ನೇಹಿತ ಮಾಲು (ಕುರಿ ಪ್ರತಾಪ್) ಜೊತೆ 'ಗೆ' ಮದುವೆ ಆಗಿದ್ದೇನೆ ಎಂದು 'ಗೆ' ವೇಷ ಹಾಕಿಸಿ ತನ್ನ ಮನೆಗೆ ಕರೆದುಕೊಂಡು ಬರುತ್ತಾನೆ. ಮುಂದೆ 'ಗೆ' ಮದುವೆಯ ನಾಟಕವಾಡಿ ಹೇಗೆ ನಂಜುಡಿ ತನ್ನ ಅಮ್ಮನ ಗರ್ವಭಂಗ ಮಾಡುತ್ತಾನೆ, ಎನ್ನುವುದು ಸಿನಿಮಾದ ಕಥೆ.
ನಟನೆ
ನಟನೆಗೆ ಬಂದರೆ ನಂಜುಂಡಿ ಪಾತ್ರದಲ್ಲಿ ನಟಿಸಿರುವ ತರುಣ್ ಶಿವಣ್ಣ ಆಕ್ಷನ್ ಸೀನ್ ಗಳನ್ನು ಚೆನ್ನಾಗಿ ಮಾಡಿದ್ದಾರೆ. ಆದರೆ ನಟನೆಯಲ್ಲಿ ಅವರು ಇನ್ನೂ ಪಳಗಬೇಕು ಎಂಬುದು ಅನೇಕ ದೃಶ್ಯದಲ್ಲಿ ಕಾಣಿಸುತ್ತದೆ. ಮೌನ ಗೌರಿ ಆಗಿ ಶ್ರಾವ್ಯ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ಶ್ರಾವ್ಯ ಮಾತನಾಡುವುದು ಕಡಿಮೆ, ಕ್ಲೈಮ್ಯಾಕ್ಸ್ ದೃಶ್ಯ ಬಿಟ್ಟರೆ ಶ್ರಾವ್ಯ ತನ್ನ ನಟನೆಯನ್ನು ಸಾಬೀತು ಮಾಡುವುದಕ್ಕೆ ಹೆಚ್ಚು ಅವಕಾಶ ಇಲ್ಲಿ ಸಿಕ್ಕಿಲ್ಲ. ಕುರಿ ಪ್ರತಾಪ್ ಸಿನಿಮಾ'ಗೆ' ಪ್ಲಸ್ ಕೂಡ ಹೌದು, ಮೈನಸ್ ಕೂಡ ಹೌದು. ಕಾರಣ ಕುರಿ ಇಲ್ಲಿ 'ಗೆ' ಪಾತ್ರ ಮಾಡಿದ್ದಾರೆ. ಅವರ ಕಾಮಿಡಿ ಇಷ್ಟ ಪಡುವವರಿಗೆ ಕೆಲವು ದೃಶ್ಯ ನಗಿಸುತ್ತದೆ. ಆದರೆ ಕುರಿ ಪ್ರತಾಪ್ ಬಾಯಲ್ಲಿ ಪದೇ ಪದೇ ಡಬಲ್ ಮಿನಿಂಗ್ ಡೈಲಾಗ್ ಗಳು ಬರುತ್ತದೆ. ಉಳಿದಂತೆ, ಪದ್ಮಜಾ ರಾವ್, ರಾಜೇಂದ್ರ ಕಾರಂತ್ ಸೇರಿದಂತೆ ಎಲ್ಲ ಪಾತ್ರಗಳು ತೆರೆ ಮೇಲೆ ಅಚ್ಚುಕಟ್ಟಾಗಿ ಪ್ರದರ್ಶನವಾಗಿದೆ.
ನಿರ್ದೇಶನ
ರಾಜೇಂದ್ರ ಕಾರಂತ್ ತಮ್ಮ ಅನುಭವದ ಮೂಲಕ ಈ ಸಿನಿಮಾದಲ್ಲಿ ಜಾದು ಸೃಷ್ಟಿ ಮಾಡುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಅವರು ನಿರೀಕ್ಷೆ ಮಟ್ಟ ತಲುಪಿಲ್ಲ. ಸರಳ ಕಥೆ ಇಟ್ಟುಕೊಂಡು ಅದಕ್ಕೆ ಹಾಸ್ಯ ಬೆರೆಸಿದ್ದಾರೆ. ಆದರೆ ಆ ಹಾಸ್ಯ ಸಿನಿಮಾ ನೋಡುವ ಪ್ರೇಕ್ಷಕರಿಗೆ ಅನೇಕ ಬಾರಿ ಬೋರ್ ಎನಿಸುತ್ತದೆ. ಚಿತ್ರಮಂದಿರದಿಂದ ಹೊರ ಬಂದ ಮೇಲೆ ಅನಿಸುವ ಒಂದೇ ಮಾತು ರಾಜೇಂದ್ರ ಕಾರಂತ್ ಇನ್ನೂ ಒಳ್ಳೆಯ ಪ್ರಯತ್ನ ಮಾಡಬಹುದಿತ್ತು ಅಂತ.
ಸಂಗೀತ, ಕ್ಯಾಮರಾ
ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಮೂರು ಹಾಡುಗಳಿವೆ. ಆದರೆ ಅವು ಪದೇ ಪದೇ ಕೇಳುವ ಹಾಗೇನೂ ಇಲ್ಲ. ಇಡೀ ಸಿನಿಮಾದಲ್ಲಿ ಕ್ಯಾಮರಾ ವರ್ಕ್ ಮತ್ತು ಎಡಿಟಿಂಗ್ ತುಂಬ ಚೆನ್ನಾಗಿ ಆಗಿದೆ. ಮೇಕಿಂಗ್ ನಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ.
ನಗಲು ನೋಡಿ
'ನಂಜುಂಡಿ ಕಲ್ಯಾಣ' ಸಿನಿಮಾದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಇದೊಂದು ಕಾಮಿಡಿ ಸಿನಿಮಾ. ಸಿನಿಮಾ ನೋಡೊಕ್ಕೆ ಚಿತ್ರಮಂದಿರಕ್ಕೆ ಹೋಗುವ ಮುನ್ನ ಅತಿ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ. ಮನರಂಜನೆಗಾಗಿ ಸಿನಿಮಾ ನೋಡುವ ಮಂದಿ ಈ ಸಿನಿಮಾ ನೋಡಬಹುದು.


Click it and Unblock the Notifications











