ಟ್ವಿಟ್ಟರ್ ವಿಮರ್ಶೆ: ಅಣ್ಣಾವ್ರನ್ನು ನೆನಪಿಸುವ ಶಿವಣ್ಣನ 'ಬಂಗಾರ s/o ಬಂಗಾರದ ಮನುಷ್ಯ'
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ, ಯೋಗಿ ಜಿ ರಾಜ್ ನಿರ್ದೇಶನದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರ ಇಂದು ರಾಜ್ಯಾದ್ಯಂತ ತೆರೆಕಂಡಿದೆ. 'ಶ್ರೀಕಂಠ' ಚಿತ್ರದ ನಂತರ ಶಿವಣ್ಣ ಮತ್ತೊಮ್ಮೆ ಜನ ಸಾಮಾನ್ಯರಿಗಾಗಿ ಸಿಡಿದೇಳುವ ಜನರ ಪ್ರತಿನಿಧಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಬಿಡುಗಡೆ ಪ್ರಯುಕ್ತ ದೊಡ್ಮನೆ ಭಕ್ತರು ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿ ಡಾ.ರಾಜ್ ಮತ್ತು ಶಿವರಾಜ್ ಕುಮಾರ್ ಇಬ್ಬರನ್ನು ಒಳಗೊಂಡ ಬರೋಬ್ಬರಿ 35 ಅಡಿ ಎತ್ತರದ ಕಟೌಟ್ ನಿಲ್ಲಿಸಿ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ'ನನ್ನು ಸ್ವಾಗತಿಸಿದ್ದಾರೆ. ಹ್ಯಾಟ್ರಿಕ್ ಹೀರೋಗೆ ವಿದ್ಯಾ ಪ್ರದೀಪ್ ನಾಯಕಿಯಾಗಿ ನಟಿಸಿದ್ದು, ಬಹುದೊಡ್ಡ ತಾರಾಬಳಗ ಇರುವ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಟ್ವಿಟರ್ ನಲ್ಲಿ ಏನು ಹೇಳಿದರು ನೋಡೋಣ ಬನ್ನಿ...
ಅಣ್ಣಾವ್ರ ಅಭಿಮಾನಿಗಳಿಗೆ ಹಬ್ಬ
" 'ಒಂದಾನೊಂದು ಊರಿನಲ್ಲಿ' ಹಾಡು ಸಂಯೋಜನೆ ಭಾವಪೂರ್ಣವಾಗಿದೆ. ಚಿತ್ರದ ಪ್ರತಿಯೊಂದು ದೃಶ್ಯಗಳು ಅದ್ಭುತವಾಗಿದ್ದು, ಅಣ್ಣಾವ್ರ ಅಭಿಮಾನಿಗಳಿಗೆ ಔತಣವಿದ್ದಂತೆ" - ಬೆಂಗಳೂರು ಟೈಮ್ಸ್
ಚಿತ್ರ ಫಸ್ಟ್ ಹಾಫ್ ಹೇಗಿದೆ?
"ಫಸ್ಟ್ ಹಾಫ್ ಸಖತ್ ಮನರಂಜನೆ ಮತ್ತು ಅಚ್ಚುಕಟ್ಟಾಗಿದೆ. ಶಿವಣ್ಣ ಹೊಸ ಅವತಾರದಲ್ಲಿ ಸೂಪರ್ ಆಗಿ ಮಿಂಚಿದ್ದಾರೆ" - ನಮ್ ಸಿನಿಮಾ.ಕಾಂ
ಅದ್ಭುತ ದೃಶ್ಯಗಳು
" ವಿ.ಹರಿಕೃಷ್ಣ ಸಂಗೀತ ಸಂಯೊಜನೆ ಅತ್ಯದ್ಭುತ. ಶಿವಣ್ಣ ನವರ ಕ್ಲಾಸ್ ರೋಲ್ ಸೂಪರ್. ಫಸ್ಟ್ ಹಾಫ್ ಮನರಂಜನೆ. ಮಧ್ಯಾಂತರ ನಂತರದ ದೃಶ್ಯಗಳು ಹೆಚ್ಚು ಆಕರ್ಷಕವಾಗಿವೆ. ಸಂಭಾಷಣೆಯನ್ನು ಮಿಸ್ ಮಾಡದೇ ಕೇಳಿಸಿಕೊಳ್ಳಬೇಕು ಎನಿಸುತ್ತದೆ. ಛಾಯಾಗ್ರಹಣ ಅಸಾಧರಣವಾಗಿದೆ" -ಸಿನಿಲೋಕ
ಇಂಟರ್ವಲ್ ವರೆಗೆ...
" 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದಲ್ಲಿ ಇಂಟರ್ವಲ್ ವರೆಗೆ ಪ್ರಮುಖ ಪಾತ್ರವನ್ನು ಡಾ.ರಾಜ್ ಕುಮಾರ್ ಅವರೇ ನಿರ್ವಹಿಸಿದ್ದಾರೆ ಎಂಬ ಅನುಭವವಾಗುತ್ತದೆ" - ಎಸ್.ಶ್ಯಾಮ್ ಪ್ರಸಾದ್
ಸಂಭಾಷಣೆ ಹೇಗಿದೆ...
"ಸಂಭಾಷಣೆ ಎಲ್ಲರನ್ನೂ ಕಿವಿಗೊಟ್ಟು ಕೇಳುವಂತಿದೆ. ಚಿತ್ರದ ನಿರೂಪಣೆ ಮತ್ತು ವೇಗ ತುಂಬಾ ಚೆನ್ನಾಗಿದೆ" -ಪ್ರಿಯಾಂಕ
ಸ್ಯಾಂಡಲ್ ವುಡ್ ಗೆ ಹಿಂದಿರುಗಿದ ಅಣ್ಣಾವ್ರು
" 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಕೇವಲ ಒಂದು ಸಿನಿಮಾ ಆಗಿರದೆ ಪ್ರತಿಯೊಬ್ಬ ರೈತರ ಭಾವನೆ ಆಗಿದ್ದು ಪ್ರತಿಯೊಂದು ದೃಶ್ಯವು ರೋಮಾಂಚನಕಾರಿಯಾಗಿದೆ. ಶಿವಣ್ಣನ ನಟನೆ ಮೈಂಡ್ಬ್ಲೋಯಿಂಗ್. 'ಆಸ್ತಿ ಗಳಿಕೆಯೇ ಜೀವನವಲ್ಲ. ಜನರ ಹೃದಯಗೆಲ್ಲುವುದೇ ಜೀವನ' ಡೈಲಾಗ್ ಅತ್ಯದ್ಭುತ" -ಪ್ರವೀಣ್
ಬ್ರಿಲಿಯಂಟ್ ಸಿನಿಮಾ
"ರೈತ ದೇಶದ ಬೆನ್ನೆಲುಬು ಎಂಬುದನ್ನು ಹೇಳಿರುವ ಬ್ರಿಲಿಯಂಟ್ ಸಿನಿಮಾ. ಯೋಗಿ ಜಿ ರಾಜ್ ನಿರ್ದೇಶನ ಸೂಪರ್ ಆಗಿದೆ. ಎಲ್ಲರೂ ನೋಡಲೇಬೇಕಾದ ಚಿತ್ರ. ರೇಟಿಂಗ್ 4/5" -ಸಿನಿಲೋಕ


Click it and Unblock the Notifications











