Soorarai Pottru Review: ಕಮರ್ಶಿಯಲ್ ಕೋನದಲ್ಲಿ ಕನ್ನಡಿಗನ ಸಾಹಸಗಾಥೆ
ವ್ಯಕ್ತಿಯ ಜೀವನ ಆಧರಿಸಿದ ಸಿನಿಮಾಗಳು ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿವೆ. ಬಾಲಿವುಡ್ನಲ್ಲಿಯಂತೂ ಬಯೋಪಿಕ್ಗಳ ಸರಣಿಗಳೇ ನಿರ್ಮಾಣವಾಗುತ್ತಿವೆ. ತಮಿಳಿನ ಸೂರರೈ ಪೊಟ್ರು ಸಹ ವ್ಯಕ್ತಿಯೊಬ್ಬರ ಜೀವನ ಆಧರಿಸಿದ ಸಿನಿಮಾ, ಅವರೇ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್.
ಸಾಧಕರ ಜೀವನ ಸಿನಿಮಾ ಆಗುವುದು ದೊಡ್ಡ ಅಪಾಯ. ಸಿನಿಮಾಗಳು ನಿಜ ಘಟನೆಗಳನ್ನು 'ಕಮರ್ಶಿಯಲ್' ಕತೆಗಳನ್ನಾಗಿ ತಿರುಚಿಬಿಡುತ್ತವೆ. 'ಸೂರರೈ ಪೊಟ್ರು' ಸಿನಿಮಾದಲ್ಲಿಯೂ ಸಹ ಇದೇ ಆಗಿದೆ.
ಏರ್ ಡೆಕ್ಕನ್ ಸಂಸ್ಥಾಪಕ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಆಧರಿಸಿದ ಸಿನಿಮಾ ಆದರೂ ಸಹ ಢಾಳಾಗಿ ಮಸಾಲೆ ಅಂಶಗಳನ್ನು ತುಂಬಿ ಪೂರ್ಣವಾಗಿ ಬಯೋಪಿಕ್ ಅಲ್ಲದ ಇತ್ತ ಪೂರ್ಣ ಕಮರ್ಶಿಯಲ್ ಅಲ್ಲದ ಸ್ಥಿತಿಗೆ ತಂದು ನಿಲ್ಲಿಸಲಾಗಿದೆ.
ಮಸಾಲೆ ಅಂಶಗಳನ್ನು ತುಂಬಲಾಗಿದೆ ಎಂಬ ಮಾತ್ರಕ್ಕೆ 'ಸೂರರೈ ಪೊಟ್ರು' ಮೂರರಲ್ಲಿ ಮತ್ತೊಂದು ಸಿನಿಮಾ ಮಾತ್ರವೇನಾ? ಎಂದರೆ ಖಂಡಿತ ಅಲ್ಲ, ಸೂರರೈ ಪೊಟ್ರು ಸಿನಿಮಾ ಒಳ್ಳೆಯ ಸಿನಿಮಾಗಳ ಬಹುತೇಕ ಗುಣಗಳನ್ನು ಹೊಂದಿದೆ. ಆದರೆ 'ಬಯೋಪಿಕ್' ಎಂದು ಕರೆಸಿಕೊಳ್ಳುವ ಗುಣವನ್ನು ಬಿಟ್ಟು.
ಸಾಮಾನ್ಯ ವ್ಯಕ್ತಿಯ ಸಾಧನೆ 'ಸಿನಿಮೀಯ' ಕೋನದಲ್ಲಿ
ಸಾಮಾನ್ಯ ವ್ಯಕ್ತಿಯೊಬ್ಬ, ಶ್ರೀಮಂತರ ವ್ಯವಹಾರವಾದ ಏರ್ಲೈನ್ಸ್ ಉದ್ಯಮ ಸ್ಥಾಪಿಸುವ ಕತೆಯನ್ನು ಸಿನಿಮಾ ಹೊಂದಿದೆ. ತನ್ನ ಗುರಿ ಸಾಧನೆಯಲ್ಲಿ ನಾಯಕನಿಗೆ ಎದುರಾಗುವ ಸಂಕಷ್ಟಗಳು, ಹತಾಶೆಗಳು, ಬೆಂಬಲ, ಆತ್ಮವಿಶ್ವಾಸ ಎಲ್ಲವನ್ನೂ ಸಿನಿಮೀಯ ಮಾದರಿಯಲ್ಲಿ ಅದ್ಭುತವಾಗಿ ತೋರಿಸಿದ್ದಾರೆ ನಿರ್ದೇಶಕಿ ಸುಧಾ ಕೊಂಗರ.
ಅನುಕೂಲಕ್ಕೆ ತಕ್ಕಂತೆ ಬದಲಾವಣೆ
ಸೂರರೈ ಪೊಟ್ರು ಸಿನಿಮಾವು ತಮಿಳು, ಕನ್ನಡ, ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಆದರೆ ಆಯಾ ಭಾಷೆಗಳಿಗೆ ತಕ್ಕಂತೆ ಸಿನಿಮಾದ ಮುಖ್ಯ ಮಾಹಿತಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಕನ್ನಡದಲ್ಲಿ ನಾಯಕನ ಊರು ಗೊರೂರು (ಕ್ಯಾಪ್ಟನ್ ಗೋಪಿನಾಥ್ ಸ್ವಂತ ಊರು) ತಮಿಳುನಲ್ಲಿ ಮಧುರೈ ಸಮೀಪದ ಒಂದು ಹಳ್ಳಿ ಹೀಗೆ, ಸಿನಿಮಾದ ಅನುಕೂಲಕ್ಕಾಗಿ ಗೋಪಿನಾಥ್ ಅವರ ಕತೆಯನ್ನು 'ಕ್ರಿಯಾಶೀಲ'ವಾಗಿ ತಿರುಚಿದ್ದಾರೆ ನಿರ್ದೇಶಕಿ.
ರಿಲೇಟ್ ಮಾಡಿಕೊಳ್ಳಬಹುದಾದ ಕತೆಯುಳ್ಳ ಸಿನಿಮಾ
ನೋಡುಗರ ದೃಷ್ಟಿಕೋನದಿಂದ ಸೂರರೈ ಪೊಟ್ರು ಉತ್ತಮ ಸಿನಿಮಾ. ಒಂದೊಳ್ಳೆಯ ಸಿನಿಮಾಕ್ಕೆ ಬೇಕಾದ ಎಲ್ಲವೂ ಸಿನಿಮಾದಲ್ಲಿ ಒಪ್ಪ-ಓರಣವಾಗಿ ಇದೆ. ಜೊತೆಗೆ ಬ್ಯುಸಿನೆಸ್ ಅಥವಾ ಏನಾದರೂ ದೊಡ್ಡದು ಮಾಡಬೇಕೆಂದುಕೊಂಡಿರುವ, ಮಾಡಿರುವ, ಮಾಡುತ್ತಿರುವ ಎಲ್ಲರೂ ತಮ್ಮನ್ನು ತಾವು ರಿಲೇಟ್ ಮಾಡಿಕೊಳ್ಳಬಹುದಾದ ಕತೆ ಸಿನಿಮಾದಲ್ಲಿದೆ.
ದೊಡ್ಡ ಪಾತ್ರವರ್ಗವಿದೆ
ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗವಿದೆ, ಎಲ್ಲರ ಪಾತ್ರಕ್ಕೂ ಪಾಧಾನ್ಯತೆ ಇದೆ. ಕನ್ನಡಿಗರಾದ ಅಚ್ಯುತ್ ಕುಮಾರ್, ಪ್ರಕಾಶ್ ಬೆಳವಾಡಿ ಅವರುಗಳು ಪ್ರಮುಖ ಪಾತ್ರದಲ್ಲಿದ್ದಾರೆ. ಸೂರ್ಯಾ ಹಾಗೂ ನಾಯಕಿ ಅಪರ್ಣಾ ಕಿಶೋರ್ ನಟನೆಯ ಅದ್ಭುತವಾಗಿದೆ. ಪರೇಶ್ ರಾವಲ್, ಮೋಹನ್ ಬಾಬು, ಊರ್ವಶಿ ಇನ್ನೂ ಕೆಲವರ ನಟನೆ ನೆನಪಿನಲ್ಲಿ ಉಳಿಯುತ್ತದೆ.
ಮಣಿರತ್ನಂ ರಿಂದ ಸಾಕಷ್ಟು ಕಲಿತಿದ್ದಾರೆ ಸುಧಾ ಕೊಂಗರ್
ನಿರ್ದೇಶಕ ಮಣಿರತ್ನ ಅವರ ಸಹಾಯಕಿ ನಿರ್ದೇಶಕಿ ಆಗಿದ್ದ ಸುಧಾ ಕೊಂಗರ್, ತಮ್ಮ ಗುರುಗಳಿಂದ ಸಾಕಷ್ಟು ಕಲಿತಿರುವುದು ಸಿನಿಮಾದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಸಿನಿಮಾದಲ್ಲಿ ತುಸು ಮಣಿರತ್ನಂ ಮಾದರಿ ಸಿನಿಮಾಗಳನ್ನು ನೆನಪಿಸುತ್ತದೆ. ಆದರೆ ಡೆಕನ್ ಏವಿಯೇಶನ್ ನ ನಿಜ ಕತೆ ಗೊತ್ತಿದ್ದವರಿಗೆ ಸಿನಿಮಾದ ಕತೆ 'ಕೊಂಚ ಅತಿಯಾಯಿತು' ಎಂದು ಎನಿಸದೇ ಇರದು.


Click it and Unblock the Notifications











